Get Updates
Get notified of breaking news, exclusive insights, and must-see stories!

ಡಾ. ರಾಧಾಕೃಷ್ಣನ್ ಕೊನೆವರೆಗೂ ಮೈಸೂರನ್ನು ಮರೆತಿರಲಿಲ್ಲ!

ಮೈಸೂರು; ಸೆಪ್ಟೆಂಬರ್ 05; ಮೈಸೂರಿನಲ್ಲಿ ಸಾಗರದಂತಹ ಶಿಷ್ಯವೃಂದವನ್ನು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಹೊಂದಿದ್ದರು ಎಂದರೆ ಈಗಿನ ತಲೆಮಾರಿನವರಿಗೆ ಅಚ್ಚರಿಯಾಗಬಹುದು. ಆದರೆ ಇದು ಸತ್ಯ. ಅವರನ್ನು ಮೈಸೂರು ಮಹಾರಾಜ ಕಾಲೇಜಿನಿಂದ ಅರ್ಥಾತ್ ಮೈಸೂರಿನಿಂದ ಬೀಳ್ಕೊಟ್ಟು ಸರಿಯಾಗಿ ನೂರು ವರ್ಷವಾಗಿದೆ.

ಡಾ. ರಾಧಾಕೃಷ್ಣನ್ ಸ್ವಾತಂತ್ರ್ಯ ಪೂರ್ವದಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದರು ಎಂಬುದೇ ನಾವೆಲ್ಲರೂ ಹೆಮ್ಮೆ ಪಡಬೇಕಾದ ವಿಚಾರವಾಗಿದೆ. ಅವತ್ತಿನಿಂದ ಇವತ್ತಿನ ತನಕ ಮಹಾರಾಜ ಕಾಲೇಜಿಗೆ ತನ್ನದೇ ಆದ ಖ್ಯಾತಿಯಿದೆ. ಇಂತಹ ಕಾಲೇಜಿನಲ್ಲಿ ಶಿಕ್ಷಕರಾಗಿದ್ದ ಅವರು ಅಪಾರ ಪ್ರಮಾಣದ ಶಿಷ್ಯವೃಂದ ಹೊಂದಿದ್ದರು. ಇದಕ್ಕೆ ಅವರಲ್ಲಿದ್ದ ಮಹಾನ್ ಪ್ರತಿಭೆ, ಪಾಂಡಿತ್ಯ, ವಿನಯ, ವಿದ್ವತ್ತು, ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆ, ಸಹೃದಯತೆ ಕಾರಣವಾಗಿತ್ತು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ರಾಧಾಕೃಷ್ಣನ್ ಅವತ್ತಿನ ದಿನಗಳಲ್ಲಿ ಒಬ್ಬ ಶಿಕ್ಷಕರಷ್ಟೆ. ಆದರೆ ಅವರಲ್ಲಿದ್ದ ಶಿಕ್ಷಕ ಗುಣ ಮಾತ್ರ ಅವರಿಗೆ ಅರಿವಿಲ್ಲದಂತೆ ಬೃಹತ್ ಶಿಷ್ಯ ವರ್ಗವನ್ನು ಸೃಷ್ಠಿ ಮಾಡಿತ್ತು. ಸದಾ ಅವರ ಸುತ್ತಲೂ ಶಿಷ್ಯವೃಂದ ನೆರೆಯುತ್ತಿತ್ತು. ಜತೆಗೆ ಅವರು ತಮ್ಮ ಸಹದ್ಯೋಗಿಗಳೊಂದಿಗೂ ಅಷ್ಟೇ ಪ್ರೀತಿಯಿಂದ ನಡೆದುಕೊಳ್ಳುತ್ತಿದ್ದರು. ಬಹುಶಃ ಅವತ್ತು ಯಾರು ಕೂಡ ಇವರು ಮುಂದೊಂದು ದಿನ ರಾಷ್ಟ್ರಪತಿಗಳಾಗುತ್ತಾರೆಂದು ನಂಬಿರಲಿಲ್ಲ. ಆದರೆ ಅವರಲ್ಲಿದ್ದ ವಿದ್ವತ್ ಮಾತ್ರ ಮುಂದೆ ಮಹಾನ್ ಹುದ್ದೆಯೊಂದನ್ನು ಅಲಂಕರಿಸುತ್ತಾರೆಂಬುದನ್ನು ಸಾರಿ ಹೇಳುತ್ತಿತ್ತು.

ಮೈಸೂರಿನಿಂದ ತೆರಳುವುದು ಅವರಿಗೆ ಸುಲಭವಾಗಿರಲಿಲ್ಲ

ಮೈಸೂರಿನಿಂದ ತೆರಳುವುದು ಅವರಿಗೆ ಸುಲಭವಾಗಿರಲಿಲ್ಲ

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಧಾಕೃಷ್ಣನ್ ಅವರನ್ನು ಇದ್ದಕ್ಕಿದ್ದಂತೆಯೇ 1921ರಲ್ಲಿ ಕೋಲ್ಕತ್ತಾ ವಿಶ್ವವಿದ್ಯಾನಿಲಯದ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿ ಬರುವಂತೆ ನೇಮಕಾತಿ ಪತ್ರ ವನ್ನು ಕಳುಹಿಸಲಾಗಿತ್ತು. ಅವರಿಗೆ ಅಲ್ಲಿಗೆ ಹೋಗುವುದು ಅನಿವಾರ್ಯವಾಗಿತ್ತು. ಆದರೆ ಮೈಸೂರಿನಿಂದ ತೆರಳುವುದು ಅವರಿಗೆ ಸುಲಭವಾಗಿರಲಿಲ್ಲ. ಮನಸ್ಸು ಭಾರವಾಗಿತ್ತು. ಅದಕ್ಕಿಂತ ಹೆಚ್ಚಾಗಿ ಅವರ ಶಿಷ್ಯಕೋಟಿಗೆ ಎಲ್ಲಿಲ್ಲದ ನೋವು. ಆತ್ಮೀಯ ಗುರುವೊಬ್ಬರು ತಮ್ಮಿಂದ ದೂರವಾಗುತ್ತಾರಲ್ಲ ಎಂಬ ಭಾವ ಕಾಡಿತ್ತು. ಎಲ್ಲರದೂ ಭಾರವಾದ ಮನಸ್ಸೇ.

ಅದು ಮಹಾಗುರುವನ್ನು ಬೀಳ್ಕೊಡುವ ಸಮಯ

ಅದು ಮಹಾಗುರುವನ್ನು ಬೀಳ್ಕೊಡುವ ಸಮಯ

ರಾಧಾಕರಷ್ಣನ್ ಮೈಸೂರಿನಿಂದ ಹೊರಡುವ ವಿಷಯ ಶಿಷ್ಯವೃಂದಕ್ಕೆ ಕಾಡ್ಗಿಚ್ಚಿನಂತೆ ಹರಡಿತ್ತು. ಹೀಗಾಗಿ ಎಲ್ಲ ಕಡೆಯಿಂದಲೂ ಶಿಷ್ಯರು ಸಾಗರದಂತೆ ಹರಿದು ಬಂದಿದ್ದರು. ಅದನ್ನು ನೋಡಿದ ಅವರ ಕಣ್ಣು ತೇವವಾಗಿತ್ತು. ತಾನು ಗಳಿಸಿದ ಶಿಷ್ಯರ ಪ್ರೀತಿಯನ್ನು ಕಣ್ತುಂಬಿಸಿಕೊಂಡರು.

ಅವತ್ತಿನ ಕಾಲದಲ್ಲಿ ಇವತ್ತಿನಂತೆ ಯಾವುದೇ ವೈಭವೀಕರಣವಿರಲಿಲ್ಲ. ಬರೀ ಪ್ರೀತಿ ಮತ್ತು ಗುರುಭಕ್ತಿ ಅಷ್ಟೇ. ಅದು ಮೈಸೂರಿನಿಂದ ಒಬ್ಬ ಪರಮ ವಿದ್ವತ್ ಹೊಂದಿದ ಮಹಾಗುರುವನ್ನು ಬೀಳ್ಕೊಡುವ ಸಮಯ. ಅವರು ವಾಸ್ತವ್ಯ ಹೂಡಿದ್ದ ಮೈಸೂರು ನಗರದ ಲಕ್ಷ್ಮಿಪುರಂನ ಮನೆ ಬಳಿಯ ಶಿಷ್ಯ ಸಮೂಹವೇ ನೆರೆದಿತ್ತು.

ಶಿಷ್ಯರು ತಮ್ಮ ಗುರುಭಕ್ತಿ ಸಲ್ಲಿಸಿದ್ದರು

ಶಿಷ್ಯರು ತಮ್ಮ ಗುರುಭಕ್ತಿ ಸಲ್ಲಿಸಿದ್ದರು

ಸಾಂಪ್ರದಾಯಿಕವಾಗಿ ಅಂದಿನ ಟಾಂಗಾ ಗಾಡಿಯನ್ನು ಅಲಂಕರಿಸಿ ಅದರಲ್ಲಿ ಅವರನ್ನು ಕೂರಿಸಿ ಮೆರವಣಿಗೆಯಲ್ಲಿಯೇ ಸಾಗುವ ತೀರ್ಮಾನ ಮಾಡಿದರು. ಆದರೆ ಕೊನೆಗಳಿಗೆಯಲ್ಲಿ ಶಿಷ್ಯರು ತನ್ನ ಗುರುವಿಗಾಗಿ ಗುರುಭಕ್ತಿಯನ್ನು ಸಲ್ಲಿಸಲು ನಿರ್ಧರಿಸಿ ಕುದುರೆಯ ಬದಲಿಗೆ ತಾವೇ ಹೆಗಲು ಕೊಟ್ಟು ಲಕ್ಷ್ಮೀಪುರಂನಲ್ಲಿದ್ದ ಅವರ ಮನೆಯಿಂದ ರೈಲ್ವೆ ನಿಲ್ದಾಣದವರೆವಿಗೂ ಟಾಂಗಾ ಗಾಡಿಯನ್ನು ಎಳೆಯುತ್ತಲೇ ಸಾಗಿದರು. ದಾರಿಯುದ್ದಕ್ಕೂ ಜೈಕಾರದ ಸುರಿಮಳೆ ಸುರಿದಿತ್ತು.

ರಸ್ತೆಯುದ್ದಕ್ಕೂ ಮೆರವಣಿಗೆಗೆ ಶಿಷ್ಯವೃಂದ ಸೇರುತ್ತಲೇ ಹೋಯಿತು. ಸಾಗರದಂತೆ ಹರಿದು ಬರುತ್ತಿರುವ ಶಿಷ್ಯರನ್ನು ನೋಡಿದ ಅವರು ಒಂದು ಕ್ಷಣ ಅವರನ್ನೇ ಮರೆತಿದ್ದರು. ಮೆರವಣಿಗೆ ಸಾಗುತ್ತಿದ್ದಂತೆಯೇ ಒಂದಷ್ಟು ಶಿಷ್ಯರು ಮೊದಲೇ ರೈಲ್ವೆ ನಿಲ್ದಾಣಕ್ಕೆ ತೆರಳಿ ಅವರು ಪ್ರಯಾಣ ಮಾಡಲು ನಿಗದಿಯಾಗಿದ್ದ ರೈಲಿನ ಬೋಗಿಯನ್ನು ಅಂದವಾಗಿ ಸಿಂಗರಿಸಿದ್ದರು. ಇತ್ತ ಮೆರವಣಿಗೆಯಲ್ಲಿ ಕರೆತಂದ ಶಿಕ್ಷಕರು ಅವರನ್ನು ರೈಲಿನಲ್ಲಿ ಕುಳ್ಳಿರಿಸಿ ಜೈಕಾರ ಹಾಕುತ್ತಲೇ ಇದ್ದರು. ಅವರು ಪ್ರೀತಿಯಿಂದ ಶಿಷ್ಯರತ್ತ ಕೈಬೀಸುತ್ತಿದ್ದರು. ರೈಲು ನಿಧಾನವಾಗಿ ಚಲಿಸಲಾರಂಭಿಸಿತು ದೂರ, ದೂರ.

ನೆನಪಾಗಿ ಉಳಿದ ಬೀಳ್ಕೊಡುಗೆಯ ಕ್ಷಣಗಳು

ನೆನಪಾಗಿ ಉಳಿದ ಬೀಳ್ಕೊಡುಗೆಯ ಕ್ಷಣಗಳು

ಇದಾದ ಬಳಿಕ ಕೋಲ್ಕತ್ತಾ ಸೇರಿದ ಅವರು ಬಳಿಕ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಸಿಕೊಂಡು ಸ್ವಾತಂತ್ರ್ಯ ನಂತರ ಉಪರಾಷ್ಟ್ರಪತಿ, ರಾಷ್ಟ್ರಪತಿ ಹುದ್ದೆಗೇರಿದರು. ಆದರೆ ಅವರು ಕೊನೆಯವರೆಗೂ ಮೈಸೂರಿನಲ್ಲಿ ತಮ್ಮ ಶಿಷ್ಯರು ಬೀಳ್ಕೊಟ್ಟ ಬೀಳ್ಕೊಡುಗೆಯ ಆ ಕ್ಷಣಗಳನ್ನು ಮರೆತೇ ಇರಲಿಲ್ಲವಂತೆ. ಸಮಯ ಸಿಕ್ಕಾಗಲೆಲ್ಲ ಆ ಭವ್ಯ ಕ್ಷಣಗಳನ್ನು ನೆನೆದು ಭಾವುಕರಾಗುತ್ತಿದ್ದಂತೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+