2017 ವರ್ಷದ ಹಿನ್ನೋಟ: ಸುಪ್ರೀಂ ಕೋರ್ಟ್ ನಲ್ಲಿ ಚರ್ಚೆಯಾದ 7 ಪ್ರಕರಣ
ನೋಡು ನೋಡುತ್ತಿದ್ದಂತೆಯೇ ಒಂದು ವರ್ಷ ಮುಗಿದುಹೋಗುತ್ತಿದೆ ಇನ್ನೇನು ಹೊಸ ವರ್ಷ ಅಡಿಯಿಡುತ್ತಿದೆ. ಹೊಸತನ್ನು ಬರಮಾಡಿಕೊಳ್ಳುವ ಜೊತೆಯಲ್ಲೇ, ಹಳತನ್ನು ಮೆಲುಕು ಹಾಕುವುದಕ್ಕೆ ಇದು ಸಕಾಲ.
2017 ರ ಆರಂಭದಿಂದ ಇಲ್ಲಿಯವರೆಗೆ ಅತೀ ಹೆಚ್ಚು ಸುದ್ದಿಯಲ್ಲಿದ್ದ ಸುಪ್ರೀಂ ಕೋರ್ಟ್ ನ ತೀರ್ಪುಗಳು ಮತ್ತು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೊಳಪಟ್ಟ 7 ಮಹತ್ವದ ಪ್ರಕರಣಗಳ ಪಟ್ಟಿ ಇಲ್ಲಿದೆ. ವರ್ಷಾಂತ್ಯದ ಹೊತ್ತಲ್ಲಿ ಅವುಗಳತ್ತ ಇದೊಂದು ಇಣುಕುನೋಟ.
ದೇಶದ ಜನರು ಶಾಸಕಾಂಗ, ಕಾರ್ಯಾಂಗದ ಮೇಲೆ ವಿಶ್ವಾಸ ಕಳೆದುಕೊಂಡರೂ, ನ್ಯಾಯಾಂಗದ ಮೇಲೆ ಮಾತ್ರ ಭರವಸೆ ಕುಂದಿಲ್ಲ. ಹಲವು ಸನ್ನಿವೇಶಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ ಗಮನಾರ್ಹ ತೀರ್ಪುಗಳ ದೇಶದ ಘನತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿವೆ.
ಈ ವರ್ಷದ ಅತ್ಯಂತ ಪ್ರಮುಖ ತೀರ್ಪುಗಳಲ್ಲೊಂದಾದ ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಗಲ್ಲುಶಿಕ್ಷೆ ಪ್ರಕಟಿಸಿದ ಸುಪ್ರೀಂ ಕೋರ್ಟ್ ನಿರ್ಧಾರವಂತೂ ನ್ಯಾಯಾಂಗದ ಮೇಲಿನ ಗೌರವವನ್ನು ಇಮ್ಮಡಿಗೊಳಿಸಿದೆ.

ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು
2012 ಡಿ.16 ರಂದು ತರಾಜಧಾನಿ ದೆಹಲಿಯಲ್ಲಿ ನಡೆದ ಅತ್ಯಂತ ಹೇಯ ಅತ್ಯಾಚಾರ ಪ್ರಕರಣದ ತೀರ್ಪು ಮೇ.5 ರಂದು ಹೊರಬಿದ್ದಿತ್ತು. ನಿರ್ಭಯಾ ಪ್ರಕರಣದ ಆರು ಆರೋಪಿಗಳಲ್ಲಿ ನಾಲ್ವರಿಗೆ ಗಲ್ಲು ಶಿಕ್ಷೆಯನ್ನು ನೀಡುವ ಮೂಲಕ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತು. ದೆಹಲಿಯಲ್ಲಿ ಅರೆವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಕಾರಣಕ್ಕೆ, ಆರೋಪಿಗಳು ಮಾಡಿದ ಅಪರಾಧ ಅಕ್ಷಮ್ಯ ಮತ್ತು ಬರ್ಬರ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಸಮಾಜದ ಸ್ವಾಸ್ಥ್ಯವನ್ನು ಕದಡಿದ ಕಾರಣಕ್ಕೆ ಅವರಿಗೆ ಗಲ್ಲು ಶಕ್ಷೆಯಾಗಿತ್ತು.

ತ್ರಿವಳಿ ತಲಾಖ್ ಅಸಾಂವಿಧಾನಿಕ
2017 ರಲ್ಲಿ ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ತೀರ್ಪುಗಳಲ್ಲೊಂದು, ತ್ರಿವಳಿ ತಲಾಖ್ ಕುರಿತಾದ್ದು. ಆಗಸ್ಟ್ ನಲ್ಲಿ ನ್ಯಾಯಾಲಯ ತ್ರಿವಳಿ ತಲಾಖ್ ಅನ್ನು ಅಸಾಂವಿಧಾನಿಕ ಎಂದು ಘೋಷಿಸಿ, ತೀರ್ಪು ನೀಡಿತ್ತು. ಯಾವ ಲಿಖಿತ ದಾಖಲೆಯೂ ಇಲ್ಲದೆ, ಮುಖತಃ ಭೇಟಿಯಾಗಿದೆ ಮೇಲ್, ವಾಟ್ಸ್ ಆಪ್ ಮೂಲಕ ಅಥವಾ ಫೋನಿನಲ್ಲಿ ನೀಡುವ ತ್ರಿವಳಿ ತಲಾಖ್ ಮುಸ್ಲಿಂ ಮಹಿಳೆಯರ ಮೂಲಭೂತ ಹಕ್ಕನ್ನು ಉಲ್ಲಘಿಸುತ್ತದೆ. ಆದ್ದರಿಂದ ಈ ವಿಚಿತ್ರ ಪದ್ಧತಿ ನಿಲ್ಲಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.

ಖಾಸಗೀತನ ಮೂಲಭೂತ ಹಕ್ಕು
ಕಳೆದ ಆಗಸ್ಟ್ ನಲ್ಲಿ ಸುಪ್ರೀಂ ಕೋರ್ಟ್ ನೀಡಿದ ಮತ್ತೊಂದು ಮಹತ್ವದ ತೀರ್ಪು ಎಂದರೆ 'ಖಾಸಗೀತನದ ಹಕ್ಕಿನ' ಕುರಿತಾಗಿದ್ದು. ಆಧಾರ್ ಕಾರ್ಡ್ ಮಾಡಿಸುವುದಕ್ಕಾಗಿ ನೀಡುವ ಬೆರಳಚ್ಚು ಮತ್ತು ಕಣ್ಣಿನ ರೆಟಿನಾ ಗುರುತುಗಳಿಂದಾಗಿ ವ್ಯಕ್ತಿಯ ವೈಯಕ್ತಿಕ ಮಾಹಿತಿ ಸೋರಿಕೆಯಾಗುವ ಸಂಭವವಿದೆ ಎಂಬ ಕೂಗು ಎದ್ದಿತ್ತು. ಇದರಿಂದ ಖಾಸಗೀತನದ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂಬುದು ಆರೋಪವಾಗಿತ್ತು. ಆದರೆ ಈ ಖಾಸಗೀತನದ ಹಕ್ಕು, ಸಂವಿಧಾನದ ಮೂಲಭೂತ ಹಕ್ಕುಗಳ ಗಾದಿಯಲ್ಲಿ ಸೇರಿದೆಯೋ ಇಲ್ಲವೋ ಎಂಬುದು ಪ್ರಶ್ನೆಯಾಗಿತ್ತು. ಆದರೆ ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸಂವಿಧಾನದ 21 ನೇ ವಿಧಿಯಲ್ಲಿ ಖಾಸಗೀತನವನ್ನೂ ಮೂಲಭೂತ ಹಕ್ಕು ಎನ್ನಲಾಗಿದೆ ಎಂಬ ಮಹತ್ವದ ತೀರ್ಪು ನೀಡಿತ್ತು. ಇದರಿಂದಾಗಿ ಆಧಾರ್ ಮಾನ್ಯತೆಯೇ ರದ್ದಾಗುವ ಸಾಧ್ಯತೆಯೂ ಎದ್ದಿದ್ದು, ಆಧಾರ್ ಕಡ್ಡಾಯ ನೀತಿ ಈಗಲೂ ತೂಗುಯ್ಯಾಲೆಯಲ್ಲಿ ತೂಗಾಡುತ್ತಿರುವುದಕ್ಕೆ ಇದು ಮುಖ್ಯ ಕಾರಣ.

ಮದುವೆಯಾದೊಡನೆ ಪತಿಯ ಧರ್ಮಕ್ಕೆ ಸೇರಲೇಬೇಕೆಂದಿಲ್ಲ
ಮದುವೆಯಾಗುತ್ತಿದ್ದಂತೆಯೇ ಪತ್ನಿಯು ತನ್ನ ಪತಿಯ ಮತಕ್ಕೆ ಮತಾಂತರವಾಗಬೇಕೆಂದಿಲ್ಲ. ಮದುವೆಯಾದರೆ ಸಹಜವಾಗಿಯೇ ಪತಿಯ ಮತವೇ ಮತ್ನಿಯ ಮತವಾಗಿ ಬದಲಾಗಬೇಕೆಂದಿಲ್ಲ ಎಂದು ಡಿಸೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಮತಾಂತರ ತಡೆಯಲ್ಲಿ ಅತೀ ಮಹತ್ವದ ಪಾತ್ರ ವಹಿಸಲಿದೆ.

ಕಂಬಳಕ್ಕೆ ಬೆಂಬಲ
ತಮಿಳುನಾಡಿನ ಅಪಾಯಕಾರಿ ಕ್ರೀಡೆ ಜಲ್ಲಿಕಟ್ಟುವನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ ಕಳೆದ ವರ್ಷ ಆದೇಶ ಹೊರಡಿಸಿತ್ತು. ಈ ಸಂಬಂಧ ಕರ್ನಾಟಕದ ಜಾನಪದ ಕ್ರೀಡೆಗಳಲ್ಲೊಂದಾದ ಕಂಬಳಕ್ಕೂ ನಿಷೇಧದ ಶಾಪ ತಟ್ಟಿತ್ತು. ಆದರೆ ರಾಜ್ಯ ಸರ್ಕಾರ ಕಂಬಳಕ್ಕೆ ಅವಕಾಶ ನೀಡುವಂತೆ ಹೊರಡಿಸಿದ್ದ ಸುಗ್ರೀವಾಜ್ಞೆಗೆ ತಡೆ ನೀಡಲು ನಿರಾಕರಿಸುವ ಮೂಲಕ ಸುಪ್ರೀಂ ಕೋರ್ಟ್ ಪರೋಕ್ಷವಾಗಿ ಕಂಬಳಕ್ಕೆ ಬೆಂಬಲ ನೀಡಿತ್ತು.

ಕಾವೇರಿ ಜಲ ನಿರ್ವಹಣಾ ಮಂಡಳಿ
ಹಲವು ವರ್ಷಗಳಿಂದ ಇತ್ಯರ್ಥವಾಗದೆ ಉಳಿದಿರುವ ತಮಿಳು ನಾಡು ಮತ್ತು ಕರ್ನಾಟಕದ ನಡುವಿನ ಕಾವೇರಿ ನದಿ ನೀರಿನ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ 'ನ್ಯಾಯಾಧಿಕರಣ' ರಚಿಸುವಂತೆ ಸುಪ್ರಿಂ ಕೋರ್ಟ್ ಆದೇಶ ನೀಡಿದ್ದು ಈ ವರ್ಷ ಸಿಕ್ಕಾಬಟ್ಟೆ ಸುಜದ್ದಿಯಾಗಿತ್ತು. ನ್ಯಾಯಾಧಿಕರಣ ರಚನೆಯಿಂದ ಕರ್ನಾಟಕಕ್ಕೆ ಮತ್ತಷ್ಟು ನಷ್ಟವೇ ಆಗಲಿರುವ ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ ಇದಕ್ಕೆ ವಿರೋಧ ವ್ಯಕ್ತವಾಗಿದೆ.

ಸಿನೆಮಾ ಹಾಲ್ ಗಳಲ್ಲಿ ರಾಷ್ಟ್ರಗೀತೆ
ಸಿನೆಮಾ ಹಾಲ್ ಗಳಲ್ಲಿ ರಾಷ್ಟ್ರಗೀತೆಯನ್ನು ಹಾಕುವುದನ್ನು ಕಳೆದ ವರ್ಷವೇ ಸುಪ್ರೀಂ ಕೋರ್ಟ್ ಕಡ್ಡಾಯಗೊಳಿಸಿತ್ತು. ಆದರೆ ಸಿನೆಮಾ ಹಾಲ್ ಗಳಲ್ಲಿ ರಾಷ್ಟ್ರಗೀತೆಗೆ ಎದ್ದುನಿಲ್ಲಬೇಕೇ ಬೇಡವೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ತೀರ್ಮಾನವನ್ನು ಹೇಳಿದ ಸುಪ್ರೀಂ ಕೋರ್ಟ್, 'ಸಿನೆಮಾ ಹಾಲ್ ಗಳಲ್ಲಿ ರಾಷ್ಟ್ರಗೀತೆ ಬಂದಾಗ ಎದ್ದು ನಿಲ್ಲದವನು ದೇಶಭಕ್ತನಲ್ಲ' ಎಂಬುದರಲ್ಲಿ ಅರ್ಥವಿಲ್ಲ. ಸಿನೆಮಾ ಹಾಲ್ ಗಳಲ್ಲಿ ಎದ್ದು ನಿಂತರೆ ಮಾತ್ರ ದೇಶಭಕ್ತಿಯಲ್ಲ ಎಂದಿತ್ತು. ಸಿನೆಮಾ ಹಾಲ್ ಗಳಲ್ಲಿ ರಾಷ್ಟ್ರಗೀತೆ ಬಂದಾಗ ಎದ್ದುನಿಲ್ಲುವುದು ಕಡ್ಡಾಯವೇ ಅಲ್ಲವೆ ಎಂಬುದನ್ನು ಕೇಂದ್ರ ಸರ್ಕಾರವೇ ನಿರ್ಧರಿಸಬೇಕು ಎಂದು, ಬಾಲ್ ಅನ್ನು ಕೇಂದ್ರ ಸರ್ಕಾರದ ಅಂಗಳಕ್ಕೆ ನೂಕಿತ್ತು.












Click it and Unblock the Notifications