ನೀರಿನ ಅಭಾವ: ಬೆಂಗಳೂರಿಗರು ಎಚ್ಚೆತ್ತುಕೊಳ್ಳುವುದು ಯಾವಾಗ?
ಬೆಂಗಳೂರಿನಲ್ಲಿ ನೀರಿನ ಕ್ಷಾಮ ಎದುರಾಗಲಿದೆ. 2030ರ ವೇಳೆಗೆ ನೀರಿಗಾಗಿ ಹಾಹಾಕಾರ ಏಳಲಿದೆ. ನೀರಿನ ಗಂಭೀರ ಕೊರತೆ ಎದುರಿಸುತ್ತಿರುವ ನಗರಗಳ ಪೈಕಿ ಒಂದು ಕಾಲದ ಗಾರ್ಡನ್ ಸಿಟಿ ಬೆಂಗಳೂರು ಸೇರಿದೆ ಎಂದು ಬಿಬಿಸಿ ಸುದ್ದಿ ವಾಹಿನಿ ನೀಡಿರುವ ವರದಿ ಈಗಾಗಲೇ ಅನೇಕ ಮಂದಿ ಕಣ್ಣಿಗೆ ಬಿದ್ದಿರುತ್ತದೆ. ಆದರೆ, ಪರಿಸ್ಥಿತಿಯ ಬಿಸಿ ಬೆಂಗಳೂರಿಗರಿಗಂತೂ ತಕ್ಷಣಕ್ಕೆ ತಟ್ಟುವುದಿಲ್ಲ. ಏಕೆಂದರೆ ಇಲ್ಲಿನ ಹವೆ ಹಾಗೆ ಮಾಡಿಬಿಟ್ಟಿದೆ.
ಮಂಡ್ಯ, ಮದ್ದೂರಿನಲ್ಲಿ ಕಾವೇರಿಗಾಗಿ ಪ್ರತಿಭಟನೆ ನಡೆಯುವಾಗ ನಾಳೆ ಕಚೇರಿ, ಶಾಲೆ, ಕಾಲೇಜಿಗೆ ರಜೆ ಸಿಗುತ್ತದೆಯೇ? ಮಾಲ್, ಸಿನಿಮಾ ಹಾಲ್ ತೆರೆದಿರುತ್ತದೆಯೆ? ಎಂಬ ಪ್ರಶ್ನೆಯೆ ಅಧಿಕವಾಗಿ ಕೇಳಿ ಬರುತ್ತದೆ.
ಹೇಳಿ ಕೇಳಿ ಕಾಸ್ಮೋಪಾಲಿಟನ್ ಸಿಟಿ ಬೆಂಗಳೂರಿನಲ್ಲಿ ಕನ್ನಡಿಗರಿರಲಿ, ಅನ್ಯಭಾಷಿಗ ವಲಸೆ ಬಂದಿರುವ ಸೋದರ ಸೋದರಿಯರಿರಲಿ ಕುಡಿಯುವ ನೀರಿಗೆ ಯಾವುದೇ ವ್ಯತ್ಯಾಸವಿಲ್ಲ.
ನಿದ್ದೆಯಿಂದ ಎಚ್ಚೆತ್ತುಕೊಳ್ಳದ ನಗರವಾಸಿಗಳು ಕಾವೇರಿ ವಿವಾದದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ತಮ್ಮ ಮನೆಯ ನಲ್ಲಿಯಲ್ಲಿ ನೀರು ಬರದಿದ್ದರೆ ಮಾತ್ರ ನೀರಿನ ಬರದ ಅರಿವಾಗುತ್ತದೆ. ಪರಿಸ್ಥಿತಿ ಹೀಗಿದೆ. ನಗರಕ್ಕೆ ಕಾವೇರಿ ಎಲ್ಲಿದಂದ ಬರುತ್ತಾಳೆ, ಕಾವೇರಿ ವಿವಾದ, ಕುಡಿಯುವ ನೀರಿನ ಬಗ್ಗೆ ಬೆಂಗಳೂರು ಜನತೆಯಲ್ಲಿ ನಿರ್ಲಕ್ಷ್ಯ, ಪರ್ಯಾಯ ನೀರು ಬಳಕೆ, ಹೋರಾಟದ ಅಗತ್ಯದ ಬಗ್ಗೆ ಮುಂದೆ ...

ಸಂಕಷ್ಟದ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳಲ್ಲ
ನಮ್ಮ ಜೀವಜಲ ಎಲ್ಲಿಂದ ಬರುತ್ತಿದೆ. ಏಕೆ ಮುಖ್ಯ ಎಂಬುದಾಗಲಿ ತಿಳಿದುಕೊಳ್ಳುವ ವ್ಯವಧಾನ, ಅವಶ್ಯಕತೆ ಯಾರಿಗೂ ಇಲ್ಲ. ದುಡ್ಡು ಕೊಟ್ಟರೆ ಬಿಸ್ಲೇರಿ, ಫುಡ್ ಮಾಲ್ ಗಳಲ್ಲಿ ಅಕ್ಕಿ, ಗೋಧಿ, ಸಕ್ಕರೆ ಸಿಗುವಾಗ ರೈತರು ಅವರ ಸಂಕಷ್ಟದ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳಬೇಕು ಎನ್ನುವ ಮನೋಭಾವ ಬಹುತೇಕ ನಗರವಾಸಿಗಳಲ್ಲಿ ಇದೆ.
ಕೆರೆಗಳನ್ನು ಬರಿದು ಮಾಡಿ, ಗಗನಚುಂಬಿ ಅಪಾರ್ಟ್ಮೆಂಟ್ ನಿರ್ಮಿಸಲಾಗುತ್ತಿದೆ. ಕಟ್ಟಡ ಕುಸಿದಾಗ, ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಾಗ ಮಾತ್ರ ನೀರಿನ ಬಗ್ಗೆ ಯೋಚನೆ, ಆತಂಕ ಬರುತ್ತದೆ.

ಮಂಡ್ಯಕ್ಕಿಂತ ಹೆಚ್ಚು ನೀರು ಬೆಂಗಳೂರಿಗೆ ಬೇಕು
ಬೆಂಗಳೂರು ಜಲ ಮಂಡಳಿ(BWSSB) ಪ್ರತಿನಿತ್ಯ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ತೊರೆಕಾಡನಹಳ್ಳಿಯಿಂದ ಒಟ್ಟು ನಾಲ್ಕು ಹಂತಗಳಲ್ಲಿ ಸುಮಾರು 900 ಮಿಲಿಯನ್ ಲೀ ನೀರು ಹರಿಸಲಾಗುತ್ತಿದೆ. ಮಂಡ್ಯಕ್ಕಿಂತ ಹೆಚ್ಚು ಬೆಂಗಳೂರಿಗರೆ ಕಾವೇರಿ ನೀರು ಕುಡಿಯುತ್ತಿದ್ದಾರೆ. ಬೆಂಗಳೂರಿನ 1 ಕೋಟಿ 90 ಲಕ್ಷ ಮಂದಿಗೆ ವರ್ಷಕ್ಕೆ 19 ಟಿಎಂಸಿ ನೀರು ಬೇಕಾಗುತ್ತದೆ. ಕೆಆರ್ ಎಸ್ ನ 26 ಟಿಎಂಸಿಯಲ್ಲಿ ಎಲ್ಲಿಗೆ ಅಂತಾ ನೀರು ಹರಿಸುವುದು? ಈಗ ಬೆಂಗಳೂರಿಗೆ ಬರುತ್ತಿರುವ ನೀರು ನಿಂತರೆ ಪರಿಸ್ಥಿತಿ ಹದಗೆಡಲಿದೆ. ಏಕೆಂದರೆ ನಗರದಲ್ಲಿ ಕೆರೆಗಳನ್ನು ನುಂಗಿ ಹಾಕಲಾಗಿದೆ.

ನೀರು ಪೂರೈಕೆ ವ್ಯತ್ಯಯ
ರಾಜಾಜಿನಗರ ಸೇರಿದಂತೆ ಸುಮಾರು 26 ಲಕ್ಷ ಬೆಂಗಳೂರಿಗರು ಕುಡಿಯುವ ನೀರಿಲ್ಲದೆ ಮಾರ್ಚ್ ತಿಂಗಳಿನಿಂದ ಪರದಾಡಿದ್ದಾರೆ. ಕಾವೇರಿ ನೀರು ಸರಬರಾಜು ಯೋಜನೆ(CWSS) 4ನೇ ಹಂತ ಎರಡನೇ ಘಟ್ಟ ಕಾಮಗಾರಿ ಕುಂಟುತ್ತಾ ಸಾಗಿದೆ. ಹಾರೋಹಳ್ಳಿ, ತಾತಗುಣಿ ಹಾಗೂ ತಿಪ್ಪಗೊಂಡನಹಳ್ಳಿ ಪಂಪ್ ಸ್ಟೇಷನ್ ಆಗಾಗ ಕೆಟ್ಟು ಹೋಗುತ್ತದೆ. ಜಲಮಂಡಳಿ ಭರವಸೆಯಿಂದ ಜನರು ರೋಸಿ ಹೋಗಿದ್ದಾರೆ.
7 ಲಕ್ಷ ಮನೆಗಳಿಗೆ ಕಾವೇರಿ ನದಿ ಪೂರೈಕೆಯಾಗುತ್ತಿದೆ.ಆದರೆ, ಶೇ 42 ಪ್ರಮಾಣದಲ್ಲಿ ಕಾವೇರಿ ನೀರಿನ ಸೋರಿಕೆಯಾಗುತ್ತಿದೆ.

ವ್ಯವಸ್ಥೆಯ ಲೋಪ, ಸರ್ಕಾರದ ನಿರ್ಲಕ್ಷ್ಯ
ಜಪಾನ್ ದೇಶದ ನೆರವಿನ ಸುಮಾರು 3383.70 ಕೋಟಿ ವೆಚ್ಚದ 4ನೇ ಹಂತ ಎರಡನೇ ಘಟ್ಟ ಕಾಮಗಾರಿ ಯೋಜನೆಗೆ ಸುಮಾರು 172 ಕಿ.ಮೀ ಪೈಪ್ ಲೇನ್ ಹಾಕಲಾಗಿದೆ. ಸದಾ ದುರಸ್ಥಿಯಲ್ಲೇ ಇರುವ ಈ ಕಾಮಗಾರಿ 2005ರಲ್ಲಿ ಆರಂಭವಾಗಿದ್ದು ಇನ್ನೂ ಹನಿ ನೀರು ಒದಗಿಸಿಲ್ಲ
ಡಿವಿ ಸದಾನಂದ ಗೌಡ ಅವರು ಸಿಎಂ ಆಗಿದ್ದಾಗ ಬೆಂಗಳೂರಿನ ನೀರಿನ ಬವಣೆ ತಪ್ಪಿಸಲು 100 ಕೋಟಿ ಮೀಸಲಿಟ್ಟಿದ್ದರು. ನಂತರ ಬಂದ ಸರ್ಕಾರಗಳು ಕಾವೇರಿ ನೀರು ಉಳಿಸಿಕೊಳ್ಳಲು ಯತ್ನಿಸಿದರೂ ಬೆಂಗಳೂರಿಗರ ನೀರಿನ ದಾಹ ಹೆಚ್ಚಾಗಿದ್ದು ಪೂರೈಕೆಯಲ್ಲಿ ವ್ಯತ್ಯಯ ಕಾಣಬಹುದು.

ನೀರು ಪೂರೈಕೆ ಪರ್ಯಾಯ ಮಾರ್ಗ
ಹೊಸ ಬಡಾವಣೆಗಳಲ್ಲಿ ಬೋರ್ ವೆಲ್ ಕೊರೆಯುವುದು, ಹಳೆ ಬೋರ್ ವೆಲ್ ದುರಸ್ತಿ, ಟ್ಯಾಂಕರ್ ಮೂಲಕ ನೀರು ಪೂರೈಕೆ ಪರ್ಯಾಯ ಮಾರ್ಗ ಕಂಡು ಕೊಳ್ಳಲಾಗಿದೆ. ಕಾವೇರಿ ನೀರನ್ನು ನಂಬಿಕೊಂಡರೆ ಆಗುವುದಿಲ್ಲ ಎಂಬುದು ಜನತೆಗೆ ಮನದಟ್ಟಾಗಿದೆ. ಆದರೆ, ಟ್ಯಾಂಕರಿನ ಬೆಲೆ 300 ರು. ನಿಂದ 600 ರು. 1,000 ರು ಗೂ ಏರಿಕೆಯಾದ ಉದಾಹರಣೆಗಳಿದೆ. ಇದಲ್ಲದೆ, ಅಂತರ್ಜಲ ಕಾಯುವಿಕೆ, ಮಳೆಕೊಯ್ಲು ಮುಂತಾದ ನೀರು ಪುನರ್ ಬಳಕೆ ಮಾಡುವ ವಿಧಾನಗಳನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ನೀರು ಮಾತ್ರ ಪೋಲಾಗುವುದು ತಪ್ಪುತ್ತಿಲ್ಲ.












Click it and Unblock the Notifications