ಬಸವಳಿದ ಕರ್ನಾಟಕ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ- ಪರಮೇಶ್ವರ್ ಪ್ರತಿಷ್ಠೆ ಕದನ!
Recommended Video
ಇಡೀ ರಾಜ್ಯ ರಾಜಕಾರಣದ ಒಂದು ಬಿಂದು ಬೆಂಗಳೂರಿಗೆ ಎಪ್ಪತ್ತು ಕಿ.ಮೀ. ದೂರದ ತುಮಕೂರಿನಲ್ಲಿ ಕಳೆದ ಕೆಲ ವರ್ಷದಿಂದಲೇ ಸಕ್ರಿಯವಾಗಿದೆ. ಅದಕ್ಕೆ ಕಾರಣ ಆಗಿರುವವರು ಡಾ.ಜಿ.ಪರಮೇಶ್ವರ್. ಅವರ ರಾಜಕಾರಣದ ವೈಖರಿ ಅಷ್ಟೇನೂ ಆಕರ್ಷಕವಲ್ಲ. ಆದರೆ ಈಗಿನ ಸ್ಥಿತಿಯಲ್ಲಿ ಕಾಂಗ್ರೆಸ್ ಪಾಲಿಗೆ ದಲಿತ ಸಮುದಾಯದ ಅಗ್ರ ನಾಯಕ ಪರಮೇಶ್ವರ್ ಮಾತ್ರ.
ಕೆ.ಎಚ್.ಮುನಿಯಪ್ಪ ಹಾಗೂ ಮಲ್ಲಿಕಾರ್ಜುನ ಖರ್ಗೆ ಇಬ್ಬರ ಪಾಲಿಗೂ ಈ ಬಾರಿಯ ಲೋಕಸಭಾ ಚುನಾವಣೆ ಸೊಲುಣಿಸಿದ ಮೇಲೆ ಪರಮೇಶ್ವರ್ ಮತ್ತಷ್ಟು ಪ್ರಾಮುಖ್ಯ ಪಡೆದಿದ್ದಾರೆ. ಈ ಅಂಶ ಯಾವತ್ತಿಗೂ ಸಿದ್ದರಾಮಯ್ಯ ಪಾಲಿಗೆ ಸಮಸ್ಯೆಯೇ ಎಂಬುದರಲ್ಲಿ ಮತ್ತೊಂದು ಪ್ರಶ್ನೆಯಿಲ್ಲ.
ಹಾಗೆ ನೋಡಿದರೆ ಸಿದ್ದರಾಮಯ್ಯ ಅವರಿಗೂ ಮುಂಚೆಯೇ ಮುಖ್ಯಮಂತ್ರಿ ಗಾದಿ ಮೇಲೆ ಕೂರುವಂಥ ಅವಕಾಶ ಇದ್ದದ್ದು ಪರಮೇಶ್ವರ್ ಗೆ. ಕಾಂಗ್ರೆಸ್ ಪ್ರಚಾರಕ್ಕೆ ರಾಜ್ಯವನ್ನೆಲ್ಲ ಸುತ್ತಾಡಿ ಬಂದು, ತಮ್ಮದೇ ಕೋಟೆ ಕೊರಟಗೆರೆಯಲ್ಲಿ ಸೋತ ಅವರು, ವಿಲವಿಲ ಅಂದುಬಿಟ್ಟರು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸಂಪುಟದ ಒಳಗೆ ಬರಲು ಪರಂ ಪಟ್ಟ ಪಾಡು ಅಷ್ಟಿಷ್ಟಲ್ಲ.

ಜೆಡಿಎಸ್, ದೇವೇಗೌಡರು ಪ್ರಬಲ ಅಸ್ತ್ರ
ಒಮ್ಮೆ ಮುಖ್ಯಮಂತ್ರಿ ಗಾದಿಗೆ ಏರಿದರೂ ಸಾಕು. ಸಾಧಾರಣ ಮಟ್ಟದ ಬುದ್ಧಿವಂತಿಕೆ- ತಂತ್ರಗಾರಿಕೆ ಇರುವ ವ್ಯಕ್ತಿ ಕೂಡ ಪ್ರಬಲರಾಗುತ್ತಾರೆ. ಇನ್ನು ಸಿದ್ದರಾಮಯ್ಯ ಅವರಂಥ ಮಾಸ್ಟರ್ ಸ್ಟ್ರಾಟೆಜಿಸ್ಟ್ ಗೆ ಚುಕ್ಕಾಣಿ ಸಿಕ್ಕರೆ ಕೇಳಬೇಕಾ? ಕರ್ನಾಟಕದ ಯಾವ ಮೂಲೆಯಿಂದ ಎಲ್ಲಿಗೆ ಹೋದರೂ ತಮ್ಮ ಪರವಾಗಿ ಧ್ವನಿ ಎತ್ತಲು ಸೇನೆ ಸಿದ್ಧ ಮಾಡಿಟ್ಟುಕೊಂಡಿದ್ದಾರೆ ಸಿದ್ದು. ಜತೆಗೆ ತಮ್ಮ ಯೋಜನೆಗಳ ಮೂಲಕ ದಲಿತ ಪರ ನಾಯಕ ಎಂಬ ಇಮೇಜ್ ಬರುವಂತೆ ನೋಡಿಕೊಂಡಿದ್ದಾರೆ. ಆಂಜನೇಯ ಹಾಗೂ ಮಹದೇವಪ್ಪ ಅವರಂಥ ನಾಯಕರನ್ನು ಪಕ್ಕದಲ್ಲಿ ಇರಿಸಿಕೊಂಡು, ಅವರಿಂದ ಆ ಕೆಲಸವನ್ನು ಯಶಸ್ವಿಯಾಗಿ ಮಾಡಿದರೆ, ರಾಜ್ಯ ಕಾಂಗ್ರೆಸ್ ನಲ್ಲಿ ಪರಮೇಶ್ವರ್ ಏಕಾಂಗಿ ಆಗುವಂತೆ ನೋಡಿಕೊಂಡರು. 'ದಲಿತ ಮುಖ್ಯಮಂತ್ರಿ' ಎಂಬ ಧ್ವನಿ ಎಬ್ಬಿಸಿದಾಗೆಲ್ಲ ಅದನ್ನು ಬಹಳ ನಾಜೂಕಾಗಿ ತಣ್ಣಗೆ ಮಾಡಿದ್ದು ಸಹ ಇದೇ ಸಿದ್ದರಾಮಯ್ಯ. ಆಗ ಸಿದ್ದು ವಿರುದ್ಧ ಪರಂಗೆ ಕಂಡ ಪ್ರಬಲ ಅಸ್ತ್ರ ಅಂದರೆ ಅದು ಜೆಡಿಎಸ್ ಹಾಗೂ ದೇವೇಗೌಡರು.

ಸಂಪುಟದಲ್ಲಿ ಸೇರದಿರುವಂತೆ ನೋಡಿಕೊಂಡರು
ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಸಿದ್ದು- ಪರಂ ಹಾವು ಏಣಿ ಆಟ ಶುರುವಾಯಿತು. ಸಿದ್ದರಾಮಯ್ಯ ಬೆಂಬಲಿಗರು ಸಂಪುಟದೊಳಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಆಡಳಿತ ನಡೆಸುವುದಕ್ಕೆ ಸಮಸ್ಯೆ ಆಗಬಹುದು ಎಂದು ಹೈ ಕಮಾಂಡ್ ಗೆ ತಿದಿಯೊತ್ತಿದ ಪರಮೇಶ್ವರ್ ಮೊದಲ ಗೆಲುವು ಕಂಡು ನಕ್ಕರು. ದೇವೇಗೌಡರು- ಕುಮಾರಸ್ವಾಮಿ ಅವರಿಗೆ ಸಿದ್ದರಾಮಯ್ಯ ವಿರುದ್ಧ ಇರುವ ಸಿಟ್ಟನ್ನೇ ಬಳಸಿಕೊಂಡು, ಪದೇಪದೇ ಹೈಕಮಾಂಡ್ ಗೆ ದೂರು ಹೋಗುವಂತೆ ನೋಡಿಕೊಂಡರು. ದೇವೇಗೌಡರು ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಾಡಲು ತಮ್ಮ ಆಪ್ತ ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪುವಂತೆ ಮಾಡಲು ಆಲೋಚಿಸಲಿಲ್ಲ. ಸಿದ್ದರಾಮಯ್ಯ ಆಪ್ತ ಕೆ.ಎನ್.ರಾಜಣ್ಣ ಮೈತ್ರಿ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ್ದರಿಂದಲೇ ದೇವೇಗೌಡರು ಸೋಲಬೇಕಾಯಿತು ಎಂದು ಸಾಬೀತು ಮಾಡಲು ವೇದಿಕೆ ಸಿದ್ಧಪಡಿಸಿದರು. ಒಂದು ಕಡೆ ರೋಷನ್ ಬೇಗ್, ಮತ್ತೊಂದು ಕಡೆ ರಾಮಲಿಂಗಾ ರೆಡ್ಡಿ ಅವರು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುವಾಗ 'ದಲಿತ ವಿರೋಧಿ' ಸಿದ್ದು ಎಂಬ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ ಪರಮೇಶ್ವರ್.

ಈಗ ಬಲೆ ಹೆಣೆಯುವುದು ಪರಮೇಶ್ವರ್ ಸರದಿ
ಹೇಗೆ ಪರಮೇಶ್ವರ್ ರನ್ನು ಡಮ್ಮಿ ಮಾಡಲು ಸಿದ್ದರಾಮಯ್ಯ ಬಲೆ ಹೆಣೆದರೋ ಈಗ ಅದೇ ಕೆಲಸವನ್ನು ಪರಮೇಶ್ವರ್ ಮಾಡುತ್ತಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ತಮ್ಮ ವಿರುದ್ಧ ಭುಸುಗುಡುತ್ತಿರುವ ಕೆ.ಎನ್.ರಾಜಣ್ಣ ಅವರನ್ನು ಹಗರಣದಲ್ಲಿ ಸಿಲುಕಿಸಲು ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಿದೆ. ಇದರಿಂದ ಸಿಟ್ಟಿಗೆದ್ದಿರುವ ಅವರು, ಬಹಿರಂಗವಾಗಿಯೇ ಬಿಜೆಪಿ ನಾಯಕರ ಜತೆ ಕಾಣಿಸಿಕೊಂಡಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಿಜೆಪಿಯ ಜಿ.ಎಸ್.ಬಸವರಾಜು, ಸಹಾಯ ಮಾಡಿದ ರಾಜಣ್ಣ ಅವರಿಗೆ ಧನ್ಯವಾದಗಳು ಎಂದಿದ್ದಾರೆ. ಇದರಿಂದ ಸಿದ್ದು ಆಪ್ತರಿಗೆ ಈಗಿನ ಮೈತ್ರಿ ಸರಕಾರ ಇರುವುದು ಬೇಕಿಲ್ಲ. ತಮ್ಮ ಬೆಂಬಲಿಗರ ಪಡೆಯನ್ನು ಮುಂದೆ ಬಿಟ್ಟು, ಸರಕಾರದ ನೆಮ್ಮದಿಯನ್ನು ಹಾಳು ಮಾಡುತ್ತಿರುವ ಸಿದ್ದು, ಒಂದು ಕಡೆ ಮಗುವನ್ನೂ ಚಿವುಟಿ, ಮತ್ತೊಂದು ಕಡೆ ತೊಟ್ಟಿಲು ತೂಗುವ ಕೆಲಸ ಮಾಡುತ್ತಿದ್ದಾರೆ ಎಂದು ಹೈಕಮಾಂಡ್ ಗೆ ದೂರು ಹೋಗುವಂತೆ ನೋಡಿಕೊಳ್ಳಲಾಗಿದೆ.

ಕರ್ನಾಟಕದಿಂದ ಸಿದ್ದರಾಮಯ್ಯರನ್ನು ಹೊರಹಾಕಲು ತಯಾರಿ
ಆ ಕಾರಣಕ್ಕೆ ಸಿದ್ದರಾಮಯ್ಯ ಅವರಿಗೆ ಕೇಂದ್ರ ಮಟ್ಟದಲ್ಲಿ ಒಂದು ಹುದ್ದೆ ನೀಡಿ, ಯಾವುದಾದರೂ ರಾಜ್ಯದ ಉಸ್ತುವಾರಿ ಮಾಡಿ, ಸಾಗಿಹಾಕುವ ಲೆಕ್ಕಾಚಾರ ನಡೆದಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಇರುವುದೇ ಮೂರು ಮತ್ತೊಂದು ರಾಜ್ಯದಲ್ಲಿ. ಇನ್ನು ಸಿದ್ದರಾಮಯ್ಯ ಅವರ ಶೈಲಿ ರಾಜಕಾರಣ ಎಲ್ಲೆಡೆಗೂ ಸರಿಹೊಂದಲ್ಲ. ಭಾಷೆ ಸಮಸ್ಯೆ ಬೇರೆ. ಇವೆಲ್ಲದರ ಜತೆಗೆ ಇಂಥದ್ದನ್ನೆಲ್ಲ ಒಪ್ಪುವ ಜಾಯಮಾನ ಸಿದ್ದರಾಮಯ್ಯ ಅವರದಲ್ಲ ಎಂಬುದು ಗೊತ್ತಿದ್ದೂ ಹೀಗೆ ಮಾಡಲಾಗುತ್ತಿದೆ. ಒಂದು ಸಲ ರಾಜ್ಯ ರಾಜಕಾರಣದಿಂದ ಸಿದ್ದರಾಮಯ್ಯ ಹೊರ ಹೋದರೆ ಅಸಮಾಧಾನ ತಣ್ಣಗೆ ಆಗುತ್ತದೆ. ಭಿನ್ನಮತೀಯ ನಾಯಕರನ್ನು ಹತೋಟಿಗೆ ತೆಗೆದುಕೊಳ್ಳಬಹುದು. ಜೆಡಿಎಸ್ ಹಾಗೂ ಕಾಂಗ್ರೆಸ್ ಹೊಂದಾಣಿಕೆಗೆ ಅಡ್ಡ ಆಗಿರುವವರೇ ಸಿದ್ದು ಮತ್ತು ಅವರ ಬೆಂಬಲಿಗರು. ಆದ್ದರಿಂದ ಸರಕಾರವೂ ಸುಭದ್ರವಾಗಿ ಇರುತ್ತದೆ ಎಂದು ಕಾಂಗ್ರೆಸ್ ಹೈ ಕಮಾಂಡ್ ನ ಮುಂದೆ ಸೂತ್ರ ಇಡಲಾಗಿದೆ. ಅದೇನಾಗುತ್ತದೋ? ಕಾದು ನೋಡುಬೇಕು.












Click it and Unblock the Notifications