ಯುಪಿಯಲ್ಲಿ ಬಿಜೆಪಿ ಗೆಲುವಿಗೆ 'ಮೋದಿ ಮ್ಯಾಜಿಕ್' ಸಹಾಯ!
ಲಕ್ನೋ, ಮಾರ್ಚ್ 14: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತದಾರರಿಗೆ ಅಭಿವೃದ್ಧಿ ಮತ್ತು ಸರ್ಕಾರದ ಕಾರ್ಯವೈಖರಿಯೇ ಪ್ರಮುಖ ಆದ್ಯತೆಗಳಾಗಿದೆ. ರಾಮಮಂದಿರ ಮತ್ತು ಹಿಂದುತ್ವ ಮತದಾರರಿಗೆ ಮತ ಚಲಾವಣೆ ಮಾಡುವಾಗ ಪ್ರಮುಖ ವಿಚಾರವಾಗಲಿಲ್ಲ ಎಂದು ಚುನಾವಣೋತ್ತರ ಸಮೀಕ್ಷೆಯು ಎತ್ತಿ ತೋರಿಸಿದೆ.
ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಮೇಲಿನ ತೃಪ್ತಿಯು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ಮೇಲಿನ ತೃಪ್ತಿಗಿಂತ ಮೂರು ಪಟ್ಟು ಹೆಚ್ಚಾಗಿದೆ ಎಂದು ಅಧ್ಯಯನವು ಹೇಳಿದೆ. ಮೋದಿಯ ಮ್ಯಾಜಿಕ್ ಉತ್ತರ ಪ್ರದೇಶದಲ್ಲಿ ಸತತ ಎರಡನೇ ಅವಧಿಗೆ ಬಿಜೆಪಿ ಅಧಿಕಾರಕ್ಕೆ ಮರಳಲು ಸಹಾಯ ಮಾಡಿದೆ ಎಂದು ಸಮೀಕ್ಷೆಯು ಸೂಚಿಸುತ್ತದೆ.
ಜಾತಿ ಮತ್ತು ಧಾರ್ಮಿಕ ಪರಿಗಣನೆಗಳನ್ನು ಲೆಕ್ಕಿಸದೆ ಕಲ್ಯಾಣ ಯೋಜನೆಗಳಾದ ಕಿಸಾನ್ ಸಮ್ಮಾನ್ ನಿಧಿ, ಉಜ್ವಲ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳನ್ನು ಲೋಕನೀತಿ-ಸಿಎಸ್ಡಿಎಸ್ ಚುನಾವಣಾ ಸಮೀಕ್ಷೆಯು ಉಲ್ಲೇಖ ಮಾಡಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿಯು ಭರ್ಜರಿ ಗೆಲುವನ್ನು ದಾಖಲಿಸಿ ಮತ್ತೆ ಸರ್ಕಾರವನ್ನು ರಚನೆ ಮಾಡಿದೆ. ರಾಜ್ಯದ 75 ಜಿಲ್ಲೆಗಳ 403 ಕ್ಷೇತ್ರಗಳಲ್ಲಿ ಸರ್ಕಾರ ರಚಿಸುವುದಕ್ಕೆ ಕನಿಷ್ಠ 202 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು. ಆದರೆ ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ 255 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ.

ರೈತರು, ಬ್ರಾಹ್ಮಣರಲ್ಲಿ ಹೆಚ್ಚಿನ ಬೆಂಬಲ!
ಸಮಗ್ರ ದತ್ತಾಂಶ ಸಂಗ್ರಹಣೆಯಲ್ಲಿ ಹೊರಹೊಮ್ಮಿದ ಮತ್ತೊಂದು ಪ್ರಮುಖ ಅಂಶವೆಂದರೆ, ಬಿಜೆಪಿಗೆ ರೈತರು, ಬ್ರಾಹ್ಮಣರಲ್ಲಿ ಹೆಚ್ಚಿನ ಬೆಂಬಲ ಸಿಕ್ಕಿದೆ ಎಂಬುವುದು ಆಗಿದೆ. ಮಾಯಾವತಿಯ ಪ್ರಮುಖ ಮತಬ್ಯಾಂಕ್ ಆದ ಜಾತವರು ಕೂಡಾ ಬಿಜೆಪಿಯತ್ತ ಒಲವು ತೋರಿದ್ದಾರೆ. ಪರಿಶಿಷ್ಟ ಜಾತಿಗಳಲ್ಲಿ ತನ್ನ ಪ್ರಭಾವವನ್ನು ಬಿಜೆಪಿ ಹೆಚ್ಚಿಸಿದೆ ಎಂದು ಸಮೀಕ್ಷೆ ಹೇಳಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಯುಪಿಯಲ್ಲಿ ಸತತ ಎರಡನೇ ಬಾರಿಗೆ ಮರು ಆಯ್ಕೆಯಾಗುವ ಮೂಲಕ ಬಿಜೆಪಿ ನೇತೃತ್ವದ ಒಕ್ಕೂಟವು ಮೂರು ದಶಕಗಳ ಹಳೆಯ ದಾಖಲೆಯನ್ನು ಮುರಿದಿದೆ. ಗಾತ್ರ ಮತ್ತು ಭೌಗೋಳಿಕ ವ್ಯಾಪ್ತಿಗೆ ಸಂಬಂಧಿಸಿದಂತೆ ಸಮೀಕ್ಷೆಯು ಎಷ್ಟು ವಿಶ್ವಾಸಾರ್ಹವಾಗಿದೆ ಎಂಬುದರ ಕುರಿತು, ಮಾತನಾಡಿದ ಅಧ್ಯಯನ ಕೇಂದ್ರದ ಲೋಕನೀತಿ ಕಾರ್ಯಕ್ರಮದ ಪ್ರಾಧ್ಯಾಪಕ ಮತ್ತು ಸಹ-ನಿರ್ದೇಶಕ ಸಂಜಯ್ ಕುಮಾರ್, ಇದು ಸಮಗ್ರ ಮಾದರಿಯಾಗಿದೆ, ಯಾವುದೇ ಸಮೀಕ್ಷೆಗೆ ಪ್ರಮುಖ ಅಂಶವಾಗಿದೆ ಎಂದು ಪಿಟಿಐಗೆ ತಿಳಿಸಿದರು. ಬಿಜೆಪಿ ಬ್ರಾಹ್ಮಣರ ಶೇಕಡಾ 89 ರಷ್ಟು ಮತಗಳನ್ನು ಪಡೆದಿದೆ ಎಂದು ಸಮೀಕ್ಷೆ ಸೂಚಿಸುತ್ತದೆ, ಇದು 2017 ಕ್ಕೆ ಹೋಲಿಸಿದರೆ ಶೇಕಡಾ 6 ರಷ್ಟು ಹೆಚ್ಚಾಗಿದೆ.

ರಾಮಮಂದಿರದ ಬಗ್ಗೆ ಶೇ.2ರಷ್ಟು ಮಂದಿಯಿಂದ ಮಾತ್ರ ಪ್ರತಿಕ್ರಿಯೆ!
ಸಮೀಕ್ಷೆಗೆ ಪ್ರತಿಕ್ರಿಯೆ ನೀಡಿದ ಶೇಕಡ 38ರಷ್ಟು ಮಂದಿ ಅಭಿವೃದ್ಧಿಯು ತಮ್ಮ ಆದ್ಯತೆಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಹೇಳಿದರು. 12 ಪ್ರತಿಶತದಷ್ಟು ಜನರು ಸರ್ಕಾರವನ್ನು ಬದಲಾಯಿಸುವುದು ಅಥವಾ ತೆಗೆದುಹಾಕುವುದು ಅವರಿಗೆ ಮತ ನೀಡುವ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. 10 ಪ್ರತಿಶತದಷ್ಟು ಜನರು ಸರ್ಕಾರದ ಕಾರ್ಯಚಟುವಟಿಕೆಯ ಹಿನ್ನೆಲೆ ಮತ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಅಚ್ಚರಿಯೆಂದರೆ ರಾಮಮಂದಿರ ಮತ್ತು ಹಿಂದುತ್ವದ ವಿಷಯದಲ್ಲಿ ಪ್ರತಿಕ್ರಿಯಿಸಿದವರಲ್ಲಿ ಕೇವಲ 2 ಪ್ರತಿಶತದಷ್ಟು ಜನರು ಮಾತ್ರ. ಪ್ರಚಾರದ ವೇಳೆಯೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಮಾತನಾಡಲಾಗಿದ್ದರೂ, ಅಯೋಧ್ಯೆಯಲ್ಲಿಯೂ ರಾಮಮಂದಿರ ಪ್ರಬಲ ವಿಚಾರವಾಗಲಿಲ್ಲ ಎಂದು ಸಮೀಕ್ಷೆಯು ಹೇಳಿದೆ. ಅಲ್ಲಿ ಸ್ಪರ್ಧಿಸುತ್ತಿರುವ ಪಕ್ಷಗಳು ಅಭಿವೃದ್ಧಿಯ ವಿಷಯವನ್ನು ಹೆಚ್ಚು ಪ್ರಮುಖವಾಗಿ ಪ್ರಸ್ತಾಪ ಮಾಡಿದೆ ಎಂದು ವರದಿಯು ಉಲ್ಲೇಖ ಮಾಡಿದೆ. ಇನ್ನು ಬಿಜೆಪಿ ನಾಯಕರು ಉಕ್ರೇನ್ನಿಂದ ಭಾರತೀಯ ವಿದ್ಯಾರ್ಥಿಗಳನ್ನು ವಾಪಾಸ್ ಕರೆತರುವ ಮೂಲಕ ಚುನಾವಣೆಯ ಲಾಭಗಿಟ್ಟಿಸಿಕೊಂಡಿದ್ದಾರೆ ಎಂಬುವುದು ಕೂಡಾ ಸಮೀಕ್ಷೆಯ ಭಾಗವಾಗಿದೆ.

2017-2022ರ ನಡುವಿನ ಚುನಾವಣೆ ಹೋಲಿಕೆ
ಉತ್ತರ ಪ್ರದೇಶ ಸರ್ಕಾರದಲ್ಲಿ ಜನರ ತೃಪ್ತಿಯ ವಿಚಾರದಲ್ಲಿ ಹೇಳುವುದಾದರೆ, 2017 ಕ್ಕೆ ಹೋಲಿಸಿದರೆ 2022 ರಲ್ಲಿ ಶೇಕಡಾ 7 ರಷ್ಟು ಜನರು ಅಧಿಕವಾಗಿದ್ದಾರೆ. ಕಳೆದ ಚುನಾವಣೆಗಿಂತ ಈ ಚುನಾವಣೆಯಲ್ಲಿ ಹೆಚ್ಚಿನ ಶೇಕಡಾ 7 ರಷ್ಟು ಮಂದಿ ಯುಪಿ ಸರ್ಕಾರದಿಂದ ತೃಪ್ತಿ ಹೊಂದಿದ್ದೇವೆ ಎಂದಿದ್ದಾರೆ. ಇದೇ ಅವಧಿಯಲ್ಲಿ ಕೇಂದ್ರ ಸರ್ಕಾರದ ಮೇಲಿನ ತೃಪ್ತಿಯು ಶೇಕಡಾ 24 ರಷ್ಟು ಹೆಚ್ಚಳವಾಗಿದೆ. ಹಿಂದೂ ಪ್ರತ್ಯೇಕವಾಗಿ ಪ್ರಕಟಿಸಿದ ಅಧ್ಯಯನವು ಕೇಂದ್ರ ಮತ್ತು ರಾಜ್ಯ ಸರ್ಕಾರವು ಪ್ರಾರಂಭಿಸಿರುವ ಕಲ್ಯಾಣ ಯೋಜನೆಗಳ ಫಲಾನುಭವಿಗಳ ಹೊಸ ಗುಂಪಿನ ಉಲ್ಲೇಖ ಮಾಡಿದೆ.

ಯಾತಕ್ಕಾಗಿ ಬಿಜೆಪಿಗೆ ಬೆಂಬಲ?
ಉತ್ತರ ಪ್ರದೇಶದ ಐದು ಕುಟುಂಬಗಳಲ್ಲಿ ಸುಮಾರು ನಾಲ್ಕು ಜನರು ಉಚಿತ ಪಡಿತರ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ ಎಂಬ ಅಂಶವು ಕೂಡಾ ಉಲ್ಲೇಖಿತವಾಗಿದೆ. ಚುನಾವಣೆಯ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಜನರೊಂದಿಗೆ ಮಾತುಕತೆ ನಡೆಸಿದಾಗ, ವಿರೋಧ ಪಕ್ಷಗಳ ನಿಷ್ಠೆ ಹೊಂದಿರುವ ಕುಟುಂಬದ ಮಹಿಳೆಯರು ಕೂಡ ಸಂಕಷ್ಟದ ಸಮಯದಲ್ಲಿ ಕಲ್ಯಾಣ ಯೋಜನೆ ಹಿನ್ನೆಲೆ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂದು ತಿಳಿದುಬಂದಿದೆ. ಪಿಎಂ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರು "ಪಕ್ಕಾ ಮಕಾನ್" (ಮನೆ) ಫಲಾನುಭವಿಗಳ ಸಂಖ್ಯೆ, ಕೊರೊನಾವೈರಸ್ ಸಾಂಕ್ರಾಮಿಕ ಸಮಯದಲ್ಲಿ ಉಚಿತ ಪಡಿತರ ಮತ್ತು ಕೇಂದ್ರ ಸರ್ಕಾರದ 5 ಲಕ್ಷ ಆರೋಗ್ಯ ವಿಮಾ ಯೋಜನೆಯಿಂದ ಜನರು ಪಡೆದ ಪ್ರಯೋಜನಗಳನ್ನು ಸಮೀಕ್ಷೆಯಲ್ಲಿ ಉಲ್ಲೇಖ ಮಾಡಲಾಗಿದೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications