Get Updates
Get notified of breaking news, exclusive insights, and must-see stories!

ಅಂದು ಮನಸಾರೆ ಕಣ್ಣೀರು, ಇಂದು ಕನಸಿಗೆ ತಣ್ಣೀರು; ಇವರಾ 'ಮಹಾ' ಶಾಸಕರು!?

ಮುಂಬೈ, ಜುಲೈ 04: ಇದು ಕಲಿಗಾಲ ಸ್ವಾಮಿ. ಇಲ್ಲಿ ಯಾವಾಗ, ಯಾರು, ಯಾರ ಪರವಾಗಿ ತಿರುಗಿಕೊಳ್ಳುತ್ತಾರೆ ಎಂದು ಹೇಳುವುದಕ್ಕೆ ಬರುವುದಿಲ್ಲ. ಇಂಥದೊಂದು ಮಾತಿಗೆ ಮಹಾರಾಷ್ಟ್ರದ ರಾಜಕಾರಣ ಹೇಳಿ ಮಾಡಿಸಿದಂತಿದೆ. ನಿನ್ನೆಯವರೆಗೂ ಅವರ ಬಳಿಯಿದ್ದ ಶಾಸಕರು ಇಂದು ದಿಢೀರನೇ ಇವರ ಪರವಾಗಿ ಹೊರಳಿದ್ದಾರೆ.

ಒಂದು ವಾರದ ಹಿಂದೆಯಷ್ಟೇ ಶಿವಸೇನೆಯ ಅಲ್ಲೊಬ್ಬ ಶಾಸಕರು ಉದ್ಧವ್ ಠಾಕ್ರೆ ಪರವಾಗಿ ಕೂಗು ಹಾಕುತ್ತಿದ್ದರು. ನಡುರಸ್ತೆಯಲ್ಲಿ ನಿಂತು ಅಯ್ಯೋ ನಮ್ಮ ಉದ್ಧವ್ ಠಾಕ್ರೆ ಸಾಹೇಬರನ್ನು ಬೆಂಬಲಿಸಿಯಪ್ಪಾ ಎಂದು ಗಳಗಳನೇ ಕಣ್ಣೀರು ಹಾಕುತ್ತಿದ್ದರು. ಅದೇ ಶಾಸಕರು ಈಗ ವರಸೆ ಬದಲಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಸೋಮವಾರ ನಡೆದ ವಿಶ್ವಾಸಮತಯಾಚನೆಯ ದಿನವೇ ತಮ್ಮ ವಿಶ್ವಾಸವನ್ನು ಬದಲಿಸಿಕೊಂಡಿದ್ದಾರೆ. ಅಂದು ಉದ್ಧವ್ ಪರ ಉದ್ದುದ್ದಾ ಭಾಷಣ ಮಾಡುತ್ತಿದ್ದ ಶಾಸಕರು ಇಂದು ಶಿಂಧೆ ಎದುರು ಶರಣು ಶರಣಾರ್ಥಿ ಎಂದಿದ್ದಾರೆ. ಮಹಾರಾಷ್ಟ್ರ ರಾಜಕಾರಣಕ್ಕೆ ಸಂಬಂಧಿಸಿದ ಈ ವರದಿಯ ಹೀರೋ ಮತ್ಯಾರೂ ಅಲ್ಲ ಅದೇ ಶಿವಸೇನೆಯ ಶಾಸಕ ಸಂತೋಷ್ ಬಂಗಾರ್.

ಗಳಗಳನೇ ಕಣ್ಣೀರು ಹಾಕಿದ್ದ ಶಾಸಕ ಸಂತೋಷ್ ಬಂಗಾರ್

ಮಹಾರಾಷ್ಟ್ರದ ಶಿವಸೇನೆಯಲ್ಲಿ ಕಾದಾಟ ಶುರುವಾಗಿ ಇಂದಿಗೆ ಸರಿಯಾಗಿ 10 ದಿನಗಳೇ ಕಳೆದಿವೆ. ಇದರ ಮಧ್ಯೆ ಒಂದು ವಾರದ ಹಿಂದೆ ತಮ್ಮ ಕ್ಷೇತ್ರದಲ್ಲಿ ನಿಂತು ಬಹಿರಂಗ ಭಾಷಣ ಮಾಡಿದ್ದ ಶಾಸಕ ಸಂತೋಷ್ ಬಂಗಾರ್ ಗಳಗಳನೇ ಕಣ್ಣೀರು ಹಾಕಿದ್ದರು. ಏಕನಾಥ್ ಶಿಂಧೆಯವರೇ ಬಂಡಾಯವನ್ನು ಬಿಟ್ಟು ಬನ್ನಿ, ನೀವು ಉದ್ಧವ್ ಠಾಕ್ರೆ ಪರವಾಗಿ ನಿಂತುಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದರು. ಇನ್ನೊಂದು ಹೆಜ್ಜೆ ಮುಂದೆ ಹೋಗಿ ಉದ್ಧವ್ ಠಾಕ್ರೆಯವರೇ ನಾವು ನಿಮ್ಮೊಂದಿಗೆ ಸದಾ ಇರುತ್ತೇವೆ," ಎಂದು ಘೋಷಣೆಗಳನ್ನು ಬಹಿರಂಗವಾಗಿ ಕೂಗಿದ್ದರು.

ರಾತ್ರೋರಾತ್ರಿ ಬಣ ಬದಲಿಸಿದ ಶಾಸಕ ಹೊಡೆದ ಉಲ್ಟಾ

ರಾತ್ರೋರಾತ್ರಿ ಬಣ ಬದಲಿಸಿದ ಶಾಸಕ ಹೊಡೆದ ಉಲ್ಟಾ

ಮುಖ್ಯಮಂತ್ರಿ ಏಕನಾಥ್ ಶಿಂಧೆ ಸರ್ಕಾರವು ವಿಶ್ವಾಸಮತ ಸಾಬೀತುಪಡಿಸುವುದಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿದ್ದವು. ಭಾನುವಾರ ರಾತ್ರಿ ಮುಂಬೈನಲ್ಲಿ ಇರುವ ಖಾಸಗಿ ಹೋಟೆಲ್ ಶಿವಸೇನೆ ಬಂಡಾಯ ಶಾಸಕರ ಸಭೆಗೆ ಸಾಕ್ಷಿ ಆಗಿದ್ದು, ಆ ಸಭೆಯಲ್ಲಿ ಸಂತೋಷ್ ಬಂಗಾರ್ ಕಾಣಿಸಿಕೊಂಡರು. ರಾಜಕೀಯದ ಸಮುದ್ರದಲ್ಲಿ ರಾತ್ರೋರಾತ್ರಿ ಹಡಗು ಬದಲಿಸಿದ ಸಂತೋಷ್ ಬಂಗಾರ್, ಏಕನಾಥ್ ಶಿಂಧೆ ಎದುರು ಶರಣು ಶರಣಾರ್ಥಿ ಎಂದರು.

ಮಾಜಿ ಸಿಎಂ ಉದ್ಧವ್ ಠಾಕ್ರೆ ಬಳಿ ಉಳಿದಿರುವ ಶಾಸಕರೆಷ್ಟು?

ಮಾಜಿ ಸಿಎಂ ಉದ್ಧವ್ ಠಾಕ್ರೆ ಬಳಿ ಉಳಿದಿರುವ ಶಾಸಕರೆಷ್ಟು?

ಮಹಾರಾಷ್ಟ್ರ ರಾಜಕಾರಣದಲ್ಲಿ ಕತ್ತಲು ಕಳೆದು ಬೆಳಕು ಮೂಡುವುದರಲ್ಲೇ ಚಿತ್ರಣವೇ ಬದಲಾಗಿ ಹೋಯಿತು. 10 ದಿನಗಳ ರಾಜಕೀಯ ಬಿಕ್ಕಟ್ಟು ನೂತನ ಸರ್ಕಾರದ ಅಸ್ತಿತ್ವದೊಂದಿಗೆ ಅಂತ್ಯವಾಯಿತು. ಆರಂಭದಲ್ಲಿ 11 ಶಾಸಕರನ್ನು ಕರೆದುಕೊಂಡು ಹೋಗಿದ್ದ ಬಂಡಾಯ ನಾಯಕ ಏಕನಾಥ್ ಶಿಂಧೆ ಬರೋಬ್ಬರಿ 40 ಶಾಸಕರ ಬೆಂಬಲವನ್ನು ಕಟ್ಟಿಕೊಂಡು ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದೂ ಆಯಿತು. ನಿನ್ನೆಯವರೆಗೂ 39 ಶಾಸಕರಿದ್ದ ಏಕನಾಥ್ ಶಿಂಧೆ ಬಣಕ್ಕೆ ಇದೇ ಸಂತೋಷ್ ಬಂಗಾರ್ ಕೂಡ ಸೇರಿಕೊಂಡರು. ಈ ಕಡೆ ಎಲ್ಲ ಶಾಸಕರು ನಮ್ಮವರೇ ಎಂದುಕೊಂಡಿದ್ದ ಉದ್ಧವ್ ಠಾಕ್ರೆ ಬಣದಲ್ಲಿ 15 ಶಾಸಕರು ಮಾತ್ರ ಉಳಿದುಕೊಂಡರು.

ಶಿಂಧೆ ಸರ್ಕಾರಕ್ಕೆ ಕೊನೆಗೂ ಸಿಕ್ಕಿತು ಸಂಪೂರ್ಣ ಬಹುಮತ

ಶಿಂಧೆ ಸರ್ಕಾರಕ್ಕೆ ಕೊನೆಗೂ ಸಿಕ್ಕಿತು ಸಂಪೂರ್ಣ ಬಹುಮತ

ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿರುವ ಏಕನಾಥ್ ಶಿಂಧೆ ಸರ್ಕಾರವು ವಿಶ್ವಾಸಮತಯಾಚನೆಯಲ್ಲೂ ಪಾಸ್ ಆಗಿದೆ. ಸೋಮವಾರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ವಿಶ್ವಾಸಮತಯಾಚನೆ ಪ್ರಕ್ರಿಯೆ ಆರಂಭಿಸಲಾಯಿತು. ತಲೆ ಎಣಿಕೆ ಮೂಲಕ ವಿಶ್ವಾಸಮತಯಾಚನೆ ಪ್ರಕ್ರಿಯೆ ನಡೆಸಲಾಯಿತು. 23 ನಿಮಿಷಗಳಲ್ಲಿ ಶಿವಸೇನೆ ಮತ್ತು ಬಿಜೆಪಿ ನೇತೃತ್ವದ ಸರ್ಕಾರವು 164 ಮತಗಳ ಬೆಂಬಲದೊಂದಿಗೆ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿ ಆಯಿತು.

ಭಾನುವಾರ ಸ್ಪೀಕರ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಶಿವಸೇನೆ ಮತ್ತು ಬಿಜೆಪಿ ಮೈತ್ರಿಕೂಟವು ಸೋಮವಾರ ನಿರೀಕ್ಷೆಯಂತೆ ವಿಶ್ವಾಸಮತಯಾಚನೆಯಲ್ಲೂ ಗೆಲುವು ಸಾಧಿಸಿತು. 287 ಸದಸ್ಯರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪರವಾಗಿ 164 ಮತಗಳು ಬಿದ್ದಿದೆ. ಇನ್ನೊಂದು ಕಡೆ ಕಾಂಗ್ರೆಸ್, ರಾಷ್ಟ್ರೀಯವಾದಿ ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ಬಣದ ಶಾಸಕರು ಸೇರಿ ಒಟ್ಟು 99 ಮತಗಳು ಠಾಕ್ರೆ ಬಣಕ್ಕೆ ಸಿಕ್ಕಿದೆ. ಇದರ ಹೊರತಾಗಿ 21 ಶಾಸಕರು ಸೋಮವಾರದ ಕಲಾಪಕ್ಕೆ ಗೈರು ಹಾಜರಾಗಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+