ಕಾಶ್ಮೀರಿ ಸಂಗೀತ ಬೆಳಗಿಸಿದ ಸಂತೂರ್ ವಾದಕ ಶಿವಕುಮಾರ್ ಶರ್ಮಾ ಪರಿಚಯ
ವಿಶ್ವಖ್ಯಾತ ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ ನಮ್ಮನ್ನಗಲಿದ್ದಾರೆ. ಆದರೆ, ಶಾಸ್ತ್ರೀಯ ಸಂಗೀತಪ್ರೇಮಿಗಳ ಪಾಲಿಗೆ ಅವರು ಎಂದೆಂದಿಗೂ ಜೀವಂತವಾಗಿಯೇ ಇರುತ್ತಾರೆ. ಭಾರತದ ಶಾಸ್ತ್ರೀಯ ಸಂಗೀತದ ದಂತಕಥೆಗಳಲ್ಲಿ ಪಂಡಿತ್ ಶಿವಕುಮಾರ್ ಶರ್ಮಾ ಒಬ್ಬರು.
ಖ್ಯಾತ ಸಂತೂರ್ ವಾದಕ, ಪದ್ಮ ವಿಭೂಷಣ ಪಂಡಿತ್ ಶಿವಕುಮಾರ್ ಶರ್ಮಾ (84) ಮುಂಬೈನಲ್ಲಿ ಮಂಗಳವಾರ ವಿಧಿವಶರಾದರು. ಕಿಡ್ನಿ ಸಮಸ್ಯೆಯ ಕಾರಣ ಕಳೆದ ಆರು ತಿಂಗಳಿನಿಂದ ಅವರು ಡಯಾಲಿಸಿಸ್ ಪಡೆಯುತ್ತಿದ್ದರು. ಇಂದು ಸಾವನ್ನಪ್ಪಿದ್ದಾರೆ.
ಪಂಡಿತ್ ಶಿವಕುಮಾರ್ ಶರ್ಮಾ ಹತ್ತಾರು ಆಲ್ಬಂಗಳನ್ನು ಬಿಡುಗಡೆ ಮಾಡಿದ್ದಾರೆ. ಸಿನಿಮಾಗಳಿಗೆ ಹಿನ್ನಲೆ ಸಂಗೀತವನ್ನೂ ಕೊಟ್ಟಿದ್ಧಾರೆ. ಮಂತ್ರಮುಗ್ಧಗೊಳಿಸುವ ಅವರ ಸಂಗೀತದ ನಿನಾದಕ್ಕೆ ತಲೆದೂಗದವರೇ ಇಲ್ಲ. ಈ ಮಹನೀಯರ ಜೀವನಯಾನದ ಒಂದು ನೋಟ ಇಲ್ಲಿದೆ:

ಅಪ್ಪಟ ಕಾಶ್ಮೀರಿ ಪ್ರತಿಭೆ
ಶಿವಕುಮಾರ್ ಶರ್ಮಾ ಹುಟ್ಟಿದ್ದು 1938 ಜನವರಿ 13ರಂದು ಜಮ್ಮು ನಗರದಲ್ಲಿ. ಇವರ ತಂದೆ ಉಮಾದತ್ ಶರ್ಮಾ ಗಾಯಕರಾಗಿದ್ದವರು. ಶರ್ಮಾ ಮಾತೃಭಾಷೆ ಕಾಶ್ಮೀರದ ಸ್ಥಳೀಯ ಡೋಗ್ರಿ. ಸಂಗೀತಗಾರರ ಕುಟುಂಬದಲ್ಲೇ ಜನಿಸಿದ ಶಿವಕುಮಾರ್ ಶರ್ಮಾಗೆ ಚಿಕ್ಕ ವಯಸ್ಸಿನಿಂದಲೇ ಸಹಜವಾಗಿ ಸಂಗೀತದ ತರಬೇತಿ, ಗಂಧ ಗಾಳಿ ಸಿಕ್ಕಿತ್ತು. ಐದನೇ ವಯಸ್ಸಿನಲ್ಲಿ ತಬಲಾ ಕಲಿಯಲು ಆರಂಭಿಸಿದರು. 13ನೇ ವಯಸ್ಸಿಗೆ ಸಂತೂರ್ ವಾದನ ಶುರು ಮಾಡಿದರು.

ಸಂತೂರ್ ಕೂಡ ಕಾಶ್ಮೀರದ್ದೇ ವಾದನ
ಶಿವಕುಮಾರ್ ಶರ್ಮಾ ನುಡಿಸುತ್ತಿದ್ದ ಸಂತೂರ್ ವಾದನ ಪಕ್ಕಾ ಕಾಶ್ಮೀರದ್ದೇ. ಇದಕ್ಕೆ ಶತ-ತಂತ್ರಿ ವೀಣಾ ಎಂದೂ ಕರೆಯಲಾಗುತ್ತದೆ. 72 ತಂತಿಗಳನ್ನು ಹೊಂದಿರುವ ಸಂತೂರ್ ವಾದನದಿಂದ ಹೊರಹೊಮ್ಮುವ ಸಂಗೀತ ಮನಸನ್ನು ಆಹ್ಲಾದಗೊಳಿಸುತ್ತದೆ. ಮೂಲತಃ ಇದು ಕಾಶ್ಮೀರದಲ್ಲೇ ಜನ್ಮತಳೆದ ಜಾನಪದ ವಾದ್ಯವಾಗಿದೆ.

ಜಾನಪದಿಂದ ಶಾಸ್ತ್ರೀಯ ಸ್ಥಾನಕ್ಕೆ
ಜಾನಪದ ವಾದನವಾಗಿದ್ದ ಸಂತೂರ್ ಶಾಸ್ತ್ರೀಯ ಸಂಗೀತದ ಮಟ್ಟಕ್ಕೆ ಬೆಳೆಯಲು ಪಂಡಿತ್ ಶಿವಕುಮಾರ್ ಶರ್ಮಾ ಅವರ ಅವಿರತ ಪ್ರಯತ್ನ ಪ್ರಮುಖ ಕಾರಣವಾಗಿತ್ತು. ಈ ಕಾರ್ಯದಲ್ಲಿ ತಂದೆ ಉಮಾಪಂಡಿತ್ ಶರ್ಮಾ ಸಲಹೆಗಳೂ ಉಪಯುಕ್ತವೆನಿಸಿದವು. ಸಂತೂರ್ ಸಂಗೀತದಲ್ಲಿ ಹಲವು ನಾದಗಳ ಸಾಧ್ಯಾಸಾಧ್ಯತೆಗಳನ್ನು ತಮ್ಮ ತಂದೆಯ ನೆರವಿನಿಂದ ಪಂಡಿತ್ ಶಿವಕುಮಾರ್ ಶರ್ಮಾ ಕಂಡುಕೊಂಡರು. ಹಾಗೆಯೇ, ಸಂತೂರ್ ವಾದ್ಯದಲ್ಲಿ ಸೂಕ್ತವಾದ ಒಂದಷ್ಟು ಮಾರ್ಪಾಡುಗಳನ್ನು ಮಾಡಿದರು. ಅದನ್ನು ನುಡಿಸುವ ಶೈಲಿಯಲ್ಲೂ ಬದಲಾವಣೆ ಮಾಡಿದರು. ಇದರಿಂದ ಶಾಸ್ತ್ರೀಯ ಸಂಗೀತ ವಾದ್ಯಗಳ ರೀತಿ ಸಂತೂರ್ ಅನ್ನೂ ನುಡಿಸಲು ಸಾಧ್ಯವಾಗಿಸಿತು.

ದಿಗ್ಗಜರ ಜೊತೆ ಶರ್ಮಾ ಜುಗಲ್ಬಂದಿ
ಪಂಡಿತ್ ಶಿವಕುಮಾರ್ ಶರ್ಮಾ ಬಹಳಷ್ಟು ಸೋಲೋ ಆಲ್ಬಂಗಳನ್ನು ಕೊಟ್ಟಿದ್ದಾರೆ. ಒಬ್ಬರೇ ಕಛೇರಿ ಕೊಟ್ಟಿದ್ದಾರೆ. ಜೊತೆಗೆ ಕೊಳಲು ವಾದಕ ಹರಿಪ್ರಸಾದ್ ಚೌರಾಸಿಯಾ ಜೊತೆ ಬಹಳ ಕಾರ್ಯಕ್ರಮಗಳನ್ನು ನೀಡಿದ್ಧಾರೆ. ತಬಲಾ ದಂತಕಥೆ ಝಾಕೀರ್ ಹುಸೇನ್ ಜೊತೆಗೆ ಇವರ ಜುಗಲ್ಬಂದಿ ಬಹಳ ನಡೆದಿದೆ.

ಮಗ ರಾಹುಲ್ ಜೊತೆಗೆ
ಪಂಡಿತ್ ಶಿವಕುಮಾರ್ ಶರ್ಮಾ ಮಗ ಪಂಡಿತ್ ರಾಹುಲ್ ಶರ್ಮಾ ಕೂಡ ಸಂತೂರ್ ವಾದನವನ್ನು ಅಪ್ಪಿದ್ಧಾರೆ. ಚಿಕ್ಕಂದಿನಲ್ಲೇ ತಮ್ಮ ಮಗನ ಪ್ರತಿಭೆಯನ್ನು ಗಮನಿಸಿ ಶಿಷ್ಯನಾಗಿ ಸ್ವೀಕರಿಸಿ ಎಲ್ಲಾ ಸಂಗೀತದ ಪಟ್ಟುಗಳನ್ನು ಕರಗತ ಮಾಡಿಸಿದ್ದಾರೆ. ಮುಂದೆ ಅಪ್ಪ-ಮಗ ಒಟ್ಟಿಗೆ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಸಿನಿಮಾಗೆ ಸಂಗೀತ ರಚನೆ
ಪಂಡಿತ್ ಶಿವಕುಮಾರ್ ಶರ್ಮಾ ಕೆಲ ಹಿಂದಿ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಡರ್, ಸಿಲ್ಸಿಲಾ, ಲಮ್ಹೆ ಮೊದಲಾದ ಸಿನಿಮಾಗಳ ಹಾಡಿಗೆ ಸಂಗೀತ ರಚನೆ ಮಾಡಿದ್ಧಾರೆ. ಗಿಟಾರ್ ವಾದಕ ಬ್ರಿಜ್ ಭೂಷಣ್ ಕಾಬ್ರ, ಕೊಳಲು ವಾದಕ ಹರಿಪ್ರಸಾದ್ ಚೌರಾಸಿಯಾ ಜೊತೆ ಸೇರಿ ಪಂಡಿತ್ ಶಿವಕುಮಾರ್ ಶರ್ಮಾ 1967ರಲ್ಲಿ 'ಕಾಲ್ ಆಫ್ ದ ವ್ಯಾಲಿ' ಆಲ್ಬಂ ಮಾಡಿದ್ದರು. ಇದು ಈಗಲೂ ಅತ್ಯಂತ ಜನಪ್ರಿಯ ಸಂಗೀತ ಆಲ್ಬಂ ಆಗಿ ಉಳಿದಿದೆ.

ಪ್ರಶಸ್ತಿ ಗೌರವ ಹಲವು:
ಪಂಡಿತ್ ಶಿವಕುಮಾರ್ ಶರ್ಮಾಗೆ 1986ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದೆ. 1991ರಲ್ಲಿ ಪದ್ಮಶ್ರೀ, 2001ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳು ಸಿಕ್ಕಿವೆ. 1985ರಲ್ಲಿ ಇವರಿಗೆ ಅಮೆರಿಕದ ಬಾಲ್ಟಿಮೋರ್ ನಗರದ ಗೌರವ ಪೌರತ್ವ ಕೂಡ ಸಿಕ್ಕಿತ್ತು.
ಇವರ 'ಕಾಲ್ ಆಫ್ ದ ವ್ಯಾಲಿ' (Call of the Valley) ಆಲ್ಬಂ, 'ಸಿಲ್ಸಿಲಾ' 'ಫಾಸಲೆ', 'ಚಾಂದಿನಿ' ಸಿನಿಮಾಗಳ ಸಂಗೀತಕ್ಕಾಗಿ ವಿವಿಧ ಪ್ರಶಸ್ತಿ ಗೌರವಗಳು ಲಭಿಸಿವೆ. 2015ರಲ್ಲಿ ಇವರಿಗೆ ಪಂಡಿತ್ ಚತುರ್ ಲಾಲ್ ಪ್ರಶಸ್ತಿ ಕೂಡ ಸಿಕ್ಕಿದೆ.
(ಒನ್ಇಂಡಿಯಾ ಸುದ್ದಿ)
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications