9/11 ಕಹಿ ಸ್ಮರಣೆ: ಅಲ್ಖೈದಾ ಮುಖ್ಯಸ್ಥ ಜವಾಹಿರಿ ಮತ್ತೆ ಪ್ರತ್ಯಕ್ಷ
ನವದೆಹಲಿ, ಸೆಪ್ಟೆಂಬರ್ 12: ಜಗತ್ತಿನ ಮೋಸ್ಟ್ ವಾಟೆಂಡ್ ಭಯೋತ್ಪಾದಕರ ಪೈಕಿ ಒಬ್ಬನಾದ ಈಜಿಪ್ಟ್ ಮೂಲದ ಅಲ್ಖೈದಾ ಮುಖಂಡ ಅಲ್-ಜವಾಹಿರಿ ಮೃತಪಟ್ಟಿದ್ದಾನೆ ಎಂಬ ಸುದ್ದಿ ಹಬ್ಬಿತ್ತು. 9/11 ಭಯೋತ್ಪಾದನಾ ದಾಳಿಯ ಕಹಿ ಸ್ಮರಣೆಯ ಸಂದರ್ಭದಲ್ಲಿ ಜವಾಹಿರಿ ಪ್ರತ್ಯಕ್ಷವಾಗಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾನೆ.
ಅಲ್ಖೈದಾದ ಅಧಿಕೃತ ಮಾಧ್ಯಮ ಅಸ್ ಸಹಾಬ್ ಮೂಲಕ 60 ನಿಮಿಷಗಳ ಸಾಕ್ಷ್ಯಚಿತ್ರ ಮಾದರಿ ವಿಡಿಯೋ ಬಿಡುಗಡೆ ಮಾಡಲಾಗಿದೆ. ಈ ವಿಡಿಯೋದಲ್ಲಿ ಜವಾಹಿರಿ ಮಾತನಾಡಿ, ಜೆರುಸಲೇಂ ಅನ್ನು ಮುಕ್ತಗೊಳಿಸುವುದು ನಮ್ಮ ಉದ್ದೇಶ ಎಂದಿದ್ದಾರೆ. 'Jerusalem will not be Judaised' ಎಂಬ ಶೀರ್ಷಿಕೆಯಡಿಯಲ್ಲಿ ಟೆಲಿಗ್ರಾಂ ಚಾನೆಲ್ ಮೂಲಕ ಈ ವಿಡಿಯೋ ಪ್ರಸಾರ ಮಾಡಲಾಗಿದೆ.
ಜಗತ್ತಿನ ಅತ್ಯುಗ್ರ ಒಸಾಮಾ ಬಿನ್ ಲಾಡೆನ್ ನಂತರ ಉಗ್ರ ಸಂಘಟನೆಯ ನೇತೃತ್ವ ವಹಿಸಿಕೊಂಡಿದ್ದ ಜವಾಹಿರಿ ನವೆಂಬರ್ 2020ರ ನಂತರ ಕಾಣಿಸಿಕೊಂಡಿರಲಿಲ್ಲ. ಅನಾರೋಗ್ಯದಿಂದ ಜವಾಹಿರಿ ಮೃತಪಟ್ಟಿದಾನೆ ಎಂದು ಭಾವಿಸಲಾಗಿತ್ತು. ಆದರೆ, ಇತ್ತೀಚೆಗೆ ಬಿಡುಗಡೆಯಾದ ವಿಡಿಯೋದಲ್ಲಿ ಆರೋಗ್ಯದಿಂದಿರುವ ಜವಾಹಿರಿ, ಜೆರುಸಲೇಂ ವಶಕ್ಕಾಗಿ ಹೋರಾಟ ತೀವ್ರಗೊಳಿಸುವ ಬಗ್ಗೆ ಮಾತನಾಡಿದ್ದಾನೆ. ಸೆ.11ರಂದು ಅನೇಕ ಪ್ರೋಮೊಗಳ ಮೂಲಕ ಈ ಸಾಕ್ಷ್ಯಚಿತ್ರ ವಿಡಿಯೋ ಬಗ್ಗೆ ಪ್ರಚಾರ ನೀಡಲಾಗಿತ್ತು.

852 ಪುಟಗಳ ಪುಸ್ತಕವನ್ನು ಲೋಕಾರ್ಪಣೆ
ಇದಲ್ಲದೆ, ಟೆಲಿಗ್ರಾಂ ಚಾನೆಲ್ ನಲ್ಲಿ ಜವಾಹಿರಿ ಬರೆದಿರುವ 852 ಪುಟಗಳ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಗಿದೆ. ಏಪ್ರಿಲ್ 2021ರಲ್ಲಿ ಪುಸ್ತಕ ಬರೆದು ಮುಗಿಸಿದ್ದ ಜವಾಹಿರಿ ಸೆ. 11ರಂದು ಬಿಡುಗಡೆ ಮಾಡಲು ಇಚ್ಛಿಸಿದ್ದ ಎಂದು ತಿಳಿದು ಬಂದಿದೆ. 2011ರಲ್ಲಿ ಪಾಕಿಸ್ತಾನದಲ್ಲಿ ನಡೆದ ಯುಎಸ್ ಡ್ರೋನ್ ದಾಳಿಯಲ್ಲಿ ಮೃತಪಟ್ಟ ಜಿಹಾದಿ ಇಲ್ಯಾಸ್ ಕಾಶ್ಮೀರಿ ಬಗ್ಗೆ ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಜಿಹಾದಿಗಳ ಬಗ್ಗೆ ಉಲ್ಲೇಖ
ಅಫ್ಘಾನಿಸ್ತಾನದಲ್ಲಿ 2019ರಲ್ಲಿ ಮೃತಪಟ್ಟ ಭಾರತ ಉಪ ಖಂಡದ ಅಲ್ ಖೈದಾ ಮುಖ್ಯಸ್ಥ ಮೌಲಾನಾ ಅಸೀಂ ಉಮರ್ ಬಗ್ಗೆ ಕೂಡಾ ಹೇಳಲಾಗಿದೆ. ಆದರೆ, ಅಚ್ಚರಿಯೆಂಬಂತೆ ಈ ವಿಡಿಯೋದಲ್ಲಿ ಎಲ್ಲೂ ಕೂಡಾ ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡಿದ್ದರ ಬಗ್ಗೆ ಉಲ್ಲೇಖವಿಲ್ಲ. ತಾಲಿಬಾನಿ ಆಡಳಿತ ಆರಂಭವಾಗುತ್ತಿದ್ದಂತೆ ಉಗ್ರ ಸಂಘಟನೆಗಳ ಒಕ್ಕೂಟ ಏರ್ಪಡುವ ಬಗ್ಗೆ ಬಂದಿರುವ ವರದಿ ಬಗ್ಗೆ ಕೂಡಾ ಮಾತಾಡಿಲ್ಲ. ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ಕಾಲ ಬಳಲಿ ,ಬೆಂಡಾಗಿ ಅಮೆರಿಕ ತನ್ನ ದೇಶಕ್ಕೆ ಮರಳಿದೆ ಎಂದಷ್ಟೇ ಜವಾಹಿರಿ ಹೇಳಿದ್ದಾನೆ. ಜವಾಹಿರಿಯ ಈ ವಿಡಿಯೋದಲ್ಲಿ ಆಣೇಕ ಜಿಹಾದಿಗಳನ್ನು ತೋರಿಸಲಾಗಿದೆ. ಅಮೆರಿಕ ತನ್ನ ಪ್ರಾಬಲ್ಯ ಕಳೆದುಕೊಂಡಿದೆ ಎಂಬುದು ಹೆಚ್ಚಾಗಿ ಹೇಳಲಾಗಿದೆ.

ಭಾರತಕ್ಕೆ 2014ರಲ್ಲಿ ಎಚ್ಚರಿಕೆ
ಭಾರತಕ್ಕೆ 2014ರಲ್ಲಿ ಎಚ್ಚರಿಕೆ ಗಂಟೆ : ನರೇಂದ್ರ ಮೋದಿ ಸರ್ಕಾರ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಭಾರತದಲ್ಲಿ ಅಲ್ ಖೈದಾ ಸಂಘಟನೆ ತನ್ನ ಚಟುವಟಿಕೆಗಳನ್ನು ಸಕ್ರಿಯಗೊಳಿಸಲು ಇದೇ ಜವಾಹಿರಿ ಕರೆ ನೀಡಿದ್ದ. ಉಪಖಂಡಕ್ಕೆ ಸೇರಿರುವ ಬರ್ಮಾ, ಬಾಂಗ್ಲಾದೇಶ ಸೇರಿದಂತೆ ಬ್ರಿಟಿಷರು ಗುರುತಿಸಿರುವ ಎಲ್ಲಾ ಗಡಿಭಾಗಗಳನ್ನು ತುಂಡರಿಸುವಂತೆ ಕರೆ ನೀಡಲಾಗಿತ್ತು.
ಭಾರತದಲ್ಲಿ ಮೊದಲಿಗೆ ಗುಜರಾತ್, ಉತ್ತರಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ದಾಳಿಗೆ ಅಲ್-ಖೈದಾ ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಹೈ ಅಲರ್ಟ್ ಘೋಷಿಸಲಾಗಿತ್ತು.
|
ಸರ್ಜನ್ ಆಗಿದ್ದ ಜವಾಹಿರಿ
ಅಮೆರಿಕದ ಜೋಡಿಕಟ್ಟಡಗಳನ್ನು ಉರುಳಿಸಿ ಸಾವಿರಾರು ಜನರ ಸಾವಿಗೆ ಕಾರಣವಾಗಿದ್ದ 9/11 ದಾಳಿಯ "ಮಾಸ್ಟರ್ ಮೈಂಡ್" ಈ ಜವಾಹಿರಿ ಎನ್ನಲಾಗಿದೆ. ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿ ಭಾಗದಲ್ಲಿ ಅಡಗಿಕೊಂಡಿದ್ದ ಈತ ನಂತರ ಐಎಸ್ಐ ನೆರವಿನಿಂದ ಕರಾಚಿಯಲ್ಲಿ ನೆಲೆಸಿದ್ದ ಎಂಬ ಮಾಹಿತಿಯಿದೆ. ಜವಾಹಿರಿ ತಲೆಗೆ 25 ಮಿಲಿಯನ್ ಯುಎಸ್ ಡಾಲರ್ ಬೆಲೆ ಕಟ್ಟಲಾಗಿದೆ.
1985ರಲ್ಲಿ ಸರ್ಜನ್ ಆಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದ ಈಜಿಪ್ಟ್ ಮೂಲದ ಜವಾಹಿರಿ ನಂತರ ಜೆಡ್ಡಾದಲ್ಲಿ ಬಿನ್ ಲಾಡೆನ್ ಭೇಟಿ ನಂತರ ಆತನ ಆಪ್ತ ವೈದ್ಯ, ಸಲಹೆಗಾರನಾಗಿ ಬೆಳೆದ. ಪಾಕಿಸ್ತಾನದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಪರವಾಗಿ ಕೂಡಾ ವೈದ್ಯನಾಗಿ ಸೇವೆ ಸಲ್ಲಿಸಿದ್ದ ಜವಾಹಿರಿ ಮುಂದೆ ಉಗ್ರ ಸಂಘಟನೆಯ ಮುಖಂಡನಾಗಿ ಬದಲಾಗಿ ಹೋದ. ಜೂನ್ 16, 2011ರಂದು ಅಧಿಕೃತವಾಗಿ ಅಲ್ ಖೈದಾ ಸಂಘಟನೆ ಬಾಸ್ ಆಗಿ ಬಿಟ್ಟ.












Click it and Unblock the Notifications