ಸುಪ್ರೀಂಕೋರ್ಟ್ನಲ್ಲಿ ಸದ್ದು ಮಾಡಿದ್ದ ಮೇರಿ ರಾಯ್ ಪ್ರಕರಣ: ಒಂದು ನೆನಪು
ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಮತ್ತು ಶಿಕ್ಷಣ ತಜ್ಞೆ ಮೇರಿ ರಾಯ್ ನಿನ್ನೆ ಗುರುವಾರ ಕೇರಳದ ಕೊಟ್ಟಾಯಂನಲ್ಲಿ ನಿಧನರಾದರು. 89 ವರ್ಷದ ಮೇರಿ ರಾಯ್ ಬೂಕರ್ ಪ್ರಶಸ್ತಿ ವಿಜೇತ ಬರಹಗಾರ್ತಿ ಅರುಂಧತಿ ರಾಯ್ ಅವರ ತಾಯಿ. ಆದರೆ, ಅರುಂಧತಿ ರಾಯ್ ತಾಯಿ ಎನ್ನುವುದಕ್ಕಿಂತ ಮೇರಿ ರಾಯ್ ತಮ್ಮ ಹೋರಾಟಗಳ ಮೂಲಕ ಹೆಚ್ಚು ಜನಪ್ರಿಯರಾದವರು.
ಮೇರಿ ರಾಯ್ ಎಂದರೆ ಸುಪ್ರೀಂಕೋರ್ಟ್ನಲ್ಲಿ ಎಂಬತ್ತರ ದಶಕದಲ್ಲಿ ನಡೆದ ಆಸ್ತಿ ವ್ಯಾಜ್ಯ ಪ್ರಕರಣ ನೆನಪಿಗೆ ಬರುತ್ತದೆ. ಇವರು ನಡೆಸಿದ ಸುದೀರ್ಘ ಕಾನೂನಾತ್ಮಕ ಹೋರಾಟದ ಫಲವಾಗಿ ಕೇರಳದ ಸಿರಿಯನ್ ಕ್ರಿಸ್ಚಿಯನ್ ಕುಟುಂಬದ ಹೆಣ್ಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಪಾಲು ಸಿಗಲು ಕಾರಣವಾಯಿತು.
Radia Audio tapes: ಸುಪ್ರೀಂಕೋರ್ಟಲ್ಲಿ ರತನ್ ಟಾಟಾ ಅರ್ಜಿ ವಿಚಾರಣೆ
ಸುಪ್ರೀಂಕೋರ್ಟ್ನಲ್ಲಿ ಅದು ಮೇರಿ ರಾಯ್ ಕೇಸ್ ಎಂದೇ ಖ್ಯಾತವಾಗಿದೆ. ಸ್ವತಃ ತಮ್ಮ ಸಹೋದರನ ವಿರುದ್ಧವೇ ಮೇರಿ ರಾಯ್ ನ್ಯಾಯಾಲಯದಲ್ಲಿ ಹೋರಾಡಿ ಆಸ್ತಿ ಹಕ್ಕು ಪಡೆದರು. ಅದು ಅವರ ಇಡೀ ಸಮುದಾಯದ ಹೆಣ್ಮಕ್ಕಳಿಗೂ ಹಕ್ಕು ಸಿಗುವಂತೆ ಮಾಡಿತು.
1983ರಲ್ಲಿ ಆರಂಭವಾದ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ 1986ರಲ್ಲಿ ಐತಿಹಾಸಿಕ ತೀರ್ಪು ನೀಡಿತು. ಏನಿದು ಈ ಪ್ರಕರಣ? ಸುಪ್ರೀಂ ಕೋರ್ಟ್ ತನ್ನ ಪರ ತೀರ್ಪು ಕೊಟ್ಟ ಬಳಿಕವೂ ಮೇರಿ ರಾಯ್ ತಮ್ಮ ಪಾಲಿನ ಆಸ್ತಿ ಪಡೆಯಲು ಬಹಳ ವರ್ಷದವರೆಗೆ ಯಾಕೆ ಕಾಯಬೇಕಾಯಿತು?
ಏನಿದು ವ್ಯಾಜ್ಯ?
ಮೇರಿ ರಾಯ್ ತಮ್ಮ ಪತಿಗೆ ವಿಚ್ಛೇದನ ನೀಡಿ ಇಬ್ಬರ ಮಕ್ಕಳೊಂದಿಗೆ ಊಟಿಯಲ್ಲಿರುವ ಅಪ್ಪನ ಮನೆಗೆ ಬಂದಿದ್ದರು. ಅಗ ಇವರ ಸಹೋದರ ಜಾರ್ಜ್ ಐಸಾಕ್ ಇವರನ್ನು ಮನೆಯಿಂದ ಹೊರಹೋಗುವಂತೆ ಹೇಳುತ್ತಾರೆ.
ಇದರ ವಿರುದ್ಧ ಮೇರಿ ರಾಯ್ ಕೋರ್ಟ್ ಮೆಟ್ಟಿಲೇರುತ್ತಾರೆ. ತಮ್ಮ ಸಹೋದರ ವಿರುದ್ಧ ದಾವೆ ಹೂಡುತ್ತಾರೆ. ವಕೀಲರಾದ ಇಂದಿರಾ ಜೈಸಿಂಗ್ ಮತ್ತು ಕಾಮಿನಿ ಜೈಸ್ವಾಲ್ ಅವರು ಮೇರಿ ರಾಯ್ ಪರ ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸುತ್ತಾರೆ.
ಬ್ರಾಹ್ಮಣೇತರ ಅರ್ಚಕರ ನೇಮಕ: ತಮಿಳುನಾಡಿಗೆ ಸುಪ್ರೀಂ ನೋಟಿಸ್
ಉತ್ತರಾಧಿಕಾರ ಕಾಯ್ದೆ ಸಮಸ್ಯೆ
ಮೇರಿ ರಾಯ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ಗೆ ಪ್ರಮುಖ ಪ್ರಶ್ನೆಯಾಗಿದ್ದು ಉತ್ತರಾಧಿಕಾರ ಕಾಯ್ದೆ ವಿಚಾರ. ಬ್ರಿಟಿಷರ ಕಾಲದಲ್ಲಿ ಟ್ರಾವಂಕೋರ್(ತಿರುವಾಂಕೂರು) ರಾಜ್ಯವಾಗಿದ್ದ ಪ್ರದೇಶಗಳಲ್ಲಿ ಉತ್ತರಾಧಿಕಾರಕ್ಕೆ ಎರಡು ಕಾಯ್ದೆಗಳು ಜಾರಿಯಲ್ಲಿದ್ದವು. 1917ರ ಟ್ರಾವಂಕೋರ್ ಕ್ರಿಸ್ಚಿಯನ್ ಸಕ್ಸಶನ್ ಆ್ಯಕ್ಟ್ ಮತ್ತು 1925ರ ಇಂಡಿಯನ್ ಸಕ್ಸಶನ್ ಆ್ಯಕ್ ಪೈಕಿ ಈ ಪ್ರಕರಣದಲ್ಲಿ ಯಾವುದನ್ನು ಅನ್ವಯ ಮಾಡಬೇಕು ಎಂಬುದು ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರಶ್ನೆಯಾಯಿತು.
ಟ್ರಾವಂಕೋರ್ ಕಾಯ್ದೆ ಏನು ಹೇಳುತ್ತೆ?
ಟ್ರಾವಂಕೋರ್ ಕ್ರೈಸ್ತ ಉತ್ತರಾಧಿಕಾರ ಕಾಯ್ದೆಯಲ್ಲಿ ಸಿರಿಯನ್ ಕ್ರೈಸ್ತ ಸಮುದಾಯದ ಮಹಿಳೆಯರಿಗೆ ತವರು ಮನೆಯಲ್ಲಿ ಆಸ್ತಿ ಪಡೆಯುವ ಹಕ್ಕು ಇರುವುದಿಲ್ಲ.
"ಅಪ್ಪ ಉಯಿಲು ಬರೆಯದೇ ಸಾವನ್ನಪ್ಪಿದ ಪಕ್ಷದಲ್ಲಿ ಅವರ ಆಸ್ತಿಯಲ್ಲಿ ಮಗನಿಗೆ ಸರಿಸಮ ಹಕ್ಕು ಮಗಳಿಗೆ ಇರುವುದಿಲ್ಲ. ಮಗನಿಗೆ ಬಂದ ಆಸ್ತಿಯ ಮೌಲ್ಯದ ನಾಲ್ಕನೇ ಒಂದು ಭಾಗ ಅಥವಾ 5 ಸಾವಿರ ರೂ, ಇವರೆಡರಲ್ಲಿ ಯಾವುದು ಕಡಿಮೆಯೋ ಅದನ್ನು ಮಗಳಿಗೆ ಕೊಡಬೇಕು" ಎಂದು ಟ್ರಾವಂಕೋರ್ ಕ್ರಿಸ್ಚಿಯನ್ ಸಕ್ಸಶನ್ ಕಾಯ್ದೆಯಲ್ಲಿ ಹೇಳಲಾಗಿದೆ.
ಹಾಗೆಯೇ, ಕಾಯ್ದೆ ಪ್ರಕಾರ, ಮಗಳಿಗೆ ಸ್ತ್ರೀಧನ (ಉಡುಗೊರೆ) ಕೊಟ್ಟಿದ್ದರೆ ಅಥವಾ ಕೊಡುತ್ತೇವೆಂದು ಭರವಸೆ ನೀಡಿದ್ದರೆ ಆಸ್ತಿಯಲ್ಲಿ ಆ ಸಣ್ಣ ಪಾಲೂ ಕೂಡ ಸಿಗುವುದಿಲ್ಲ.
ಆರ್ಟಿಕಲ್ 14ಕ್ಕೆ ವಿರುದ್ದ
ಟ್ರಾವಂಕೋರ್ ಉತ್ತರಾಧಿಕಾರಿ ಕಾಯ್ದೆಯು ಲಿಂಗ ತಾರತಮ್ಯ ಮಾಡುತ್ತದೆ. ಇದು ಸಂವಿಧಾನದ ಆರ್ಟಿಕಲ್ 14 ಮತ್ತು 15ರ ಉಲ್ಲಂಘನೆಯಾಗಿದೆ ಎಂದು ಮೇರಿ ರಾಯ್ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಹಾಕಿದರು. ಹಾಗೆಯೇ, ಆಸ್ತಿ ಹಕ್ಕು ವಿಚಾರದಲ್ಲಿ ತಾರತಮ್ಯ ಮಾಡದ 1925ರ ಭಾರತೀಯ ಉತ್ತರಾಧಿಕಾರ ಕಾಯ್ದೆಗೂ ಇದು ವಿರುದ್ಧವಾಗಿದೆ ಎಂದು ರಾಯ್ ವಾದಿಸಿದರು.
ಸುಪ್ರೀಂ ತೀರ್ಪು ಏನಿತ್ತು?
ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಾಗ ಸುಪ್ರೀಂಕೋರ್ಟ್ ನ್ಯಾಯಪೀಠದ ಮುಂದೆ ಪ್ರಶ್ನೆ ಇದ್ದದ್ದು 1925ರ ಕಾಯ್ದೆಯನ್ನು ಅನ್ವಯ ಮಾಡುವುದೋ ಅಥವಾ 1917ರ ಕ್ರೈಸ್ತರ ಕಾಯ್ದೆಯನ್ನು ಅನ್ವಯ ಮಾಡಬೇಕೋ ಎಂಬುದು. ಆಗಿನ ಮುಖ್ಯನ್ಯಾಯಮೂರ್ತಿ ಪಿಎನ್ ಭಗವತಿ ಮತ್ತು ನ್ಯಾ. ಆರ್ ಎಸ್ ಪಾಠಕ್ ಅವರು ನ್ಯಾಯಪೀಠದಲ್ಲಿದ್ದರು. "ಪೋಷಕರು ಉಯಿಲು ಬರೆದಿಟ್ಟು ಸತ್ತಿಲ್ಲವಾದ್ದರಿಂದ 1925ರ ಭಾರತೀಯ ಉತ್ತರಾಧಿಕಾರಿ ಕಾಯ್ದೆ ಅಡಿಯಲ್ಲಿ ಆಸ್ತಿ ಹಕ್ಕು ನಿರ್ಧಾರ ಆಗುತ್ತದೆ" ಎಂದು ನ್ಯಾಯಪೀಠ ತೀರ್ಪು ಕೊಟ್ಟಿತ್ತು.
ಅಷ್ಟೇ ಅಲ್ಲ, ಇದು ಹಿಂದಿನ ಟ್ರಾವಂಕೋರ್ ಸಂಸ್ಥಾನದ ವ್ಯಾಪ್ತಿಗೆ ಬರುವ ಪ್ರದೇಶಗಳ ಭಾರತೀಯ ಕ್ರೈಸ್ತ ಸಮುದಾಯದವರೆಲ್ಲರಿಗೂ ಅನ್ವಯ ಆಗುತ್ತದೆ ಎಂದೂ ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ ತಿಳಿಸಿದರು.
ಇದರೊಂದಿಗೆ, ಸಿರಿಯನ್ ಕ್ರೈಸ್ತ ಸಮುದಾಯದ ಹೆಣ್ಮಕ್ಕಳ ಆಸ್ತಿ ಹಕ್ಕುಗಳಿಗೆ ಇದ್ದ ನಿರ್ಬಂಧಕ್ಕೆ ಮುಕ್ತಿ ಸಿಕ್ಕಿತು. ಊಟಿ ಈಗ ತಮಿಳುನಾಡಿನಲ್ಲಿದ್ದರೂ ಆಗ ಟ್ರಾವಂಕೋರ್ ಸಂಸ್ಥಾನದ ಭಾಗವಾಗಿತ್ತು. ಸಿರಿಯನ್ ಕ್ರೈಸ್ತರು ಕೇರಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ತೀರ್ಪಿನ ನಂತರದ ಸ್ಥಿತಿ
ಸುಪ್ರೀಂ ಕೋರ್ಟ್ ತನ್ನ ಪರವಾಗಿ ತೀರ್ಪು ನೀಡಿದರೂ ಮೇರಿ ರಾಯ್ ಅವರಿಗೆ ಅಪ್ಪನ ಆಸ್ತಿಯಲ್ಲಿ ಪಾಲು ಪಡೆಯಲು ಬಹಳ ವರ್ಷ ಕಾಯಬೇಕಾಯಿತು. ಆಸ್ತಿ ಮಾಲೀಕ ಸಾವನ್ನಪ್ಪಿದ ಬಳಿಕ ಅವರ ಪತ್ನಿ ಬದುಕಿದ್ದರೆ ಇಡೀ ಆಸ್ತಿ ಹಕ್ಕು ಅವರಿಗೆ ಹೋಗುತ್ತದೆ. ಇಲ್ಲಿ ಮೇರಿ ರಾಯ್ ಅಪ್ಪ ಸಾವನ್ನಪ್ಪಿದ ಬಳಿಕ ಅಮ್ಮನಿಗೆ ಆಸ್ತಿ ಹಕ್ಕು ಹೋಗುತ್ತದೆ. ಅಮ್ಮ ಬದುಕಿರುವವರೆಗೂ ಆಸ್ತಿ ಪಡೆಯಲು ಆಗುವುದಿಲ್ಲ.
ತಾಯಿ ನಿಧನದ ಬಳಿಕ ಮೇರಿ ರಾಯ್ ಕೊಟ್ಟಾಯಂ ಕೋರ್ಟ್ನಲ್ಲಿ ಅರ್ಜಿ ಹಾಕಿದರು. 2009ರಲ್ಲಿ ಮೇರಿ ರಾಯ್ಗೆ ಆಸ್ತಿಯಲ್ಲಿ ಪಾಲು ಕೊಡುವಂತೆ ಕೋರ್ಟ್ ಆದೇಶ ಹೊರಡಿಸಿತು. ಹೆಚ್ಚೂಕಡಿಮೆ 25 ವರ್ಷಗಳ ನಂತರ ಮೇರಿ ರಾಯ್ ತಮ್ಮ ಪಾಲಿನ ಆಸ್ತಿ ಪಡೆದುಕೊಳ್ಳಲು ಸಫಲರಾದರು.
(ಒನ್ಇಂಡಿಯಾ ಸುದ್ದಿ)