ಹೈದರಾಬಾದಿನಲ್ಲಿ ಕಮರಿಹೋದ ಮತ್ತೊಬ್ಬ ನಿರ್ಭಯಾ! ಮುಂದಿನ ಬೇಟೆ ಯಾರು..?
ತನ್ನ ಗಾಡಿ ಪಂಕ್ಚರ್ ಆಗಿದ್ದು ಆ ಯುವತಿ ಪಾಲಿಗೆ ತೀರಾ ಸಹಜ ವಿಷಯ. ಅಪರಿಚಿತರು ಸಹಾಯಕ್ಕೆ ಬಂದಿದ್ದರಲ್ಲೂ ಆಕೆಗೆ ಕಾಣಿಸಿದ್ದು ನೆರವಿನ ಮನೋಭಾವ ಮಾತ್ರ... ಈ ಎಲ್ಲ ನಾಟಕಗಳ ಹಿಂದೆಯೂ ಮೃಗೀಯ ಕ್ರೌರ್ಯವೊಂದಿದೆ ಎಂಬ ಯೋಚನೆಯನ್ನೂ ಮಾಡದ ಮುಗ್ಧ ಮನಸ್ಸು ಆಕೆಯದು! ತನ್ನ ಗಾಡಿ ಪಂಕ್ಚರ್ ಆಗಿದ್ದೂ ಮುಂದೆ ನಡೆಯಬಹುದಾದ ಕುಕೃತ್ಯದ ಸೂಚನೆ ಎಂಬ ಅರಿವು ಆಕೆಗೆ ಮೊದಲೇ ಇದ್ದಿದ್ದರೆ ಅವಳು ಪಾರಾಗುವ ದಾರಿಯನ್ನಾದರೂ ಹುಡುಕುವ ಪ್ರಯತ್ನ ಮಾಡುತ್ತಿದ್ದಳೇನೋ! ಆದರೆ ಈ ಸಮಾಜ ಇಷ್ಟೆಲ್ಲ ಕ್ರೂರವಾಗಿದೆ ಎಂದು ಆಕೆ ಊಹಿಸಿಯೂ ಇರಲಿಲ್ಲ!
ಎಷ್ಟೇ ಧೈರ್ಯವಂತರಾಗಿರಲಿ ಅಂಥ ಘಟನೆಗಳು ನಡೆದಾಗ ಮನಸ್ಸು ಅಧೀರವಾಗಿಬಿಡುತ್ತದೆ. ಪಕ್ಕದ ಮನೆಯವರೆಗೂ ಬಂದ ಅತ್ಯಾಚಾರಿ ನಮ್ಮನೆ ಬಾಗಿಲಿಗೂ ಬರದೆ ಇರುತ್ತಾನಾ ಅನ್ನೋ ಯೋಚನೆ ಬಂದಾಗ ಅರಿವಿಲ್ಲದೆ ಕೈಕಾಲುಗಳಲ್ಲಿ ನಡುಕ ಹುಟ್ಟುತ್ತದೆ.
ಪ್ರಿಯಾಂಕಾ ರೆಡ್ಡಿ ಅತ್ಯಾಚಾರ, ಹತ್ಯೆ: ಆ ಕರಾಳ ರಾತ್ರಿ ನಡೆದಿದ್ದೇನು?
ಬೋಲ್ಡ್, ಡೋಂಟ್ ಕೇರ್ ಮನಸ್ಥಿತಿ, ಧೈರ್ಯ.. ಏನೇ ಇದ್ದರೂ ಆ ಕ್ಷಣದಲ್ಲಿ ಉಳಿಯೋದು ಹೆಣ್ಣು ಅನ್ನೋ ವಾಸ್ತವ ಮಾತ್ರ! ಹೆಣ್ಣು ಅನ್ನೋದೇ ತನ್ನ ದೌರ್ಬಲ್ಯವೂ ಆಗಿಬಿಟ್ಟಿದೆಯಾ ಅನ್ನಿಸಿದಾಗ ತಾನು ತೀರಾ ಅಸಹಾಯಕ ಅನ್ನಿಸಿ ಆಕೆ ಕುಸಿದುಬಿಡುತ್ತಾಳೆ. ನಿನ್ನೆ ನಿರ್ಭಯಾಳನ್ನು ಹಾಗೆ ಅಮಾನವೀಯವಾಗಿ ಕೊಂದವರು, ಇಂದು ಈಕೆಯನ್ನೂ ಕೊಂದಿದ್ದಾಗಿದೆ. ನಾಳೆಯ ಬೇಟೆ ಯಾರು....? ಎದುರಿದ್ದ ಕನ್ನಡಿಯೊಳಗಿನ ಬಿಂಬ ನಡುಗುತ್ತೆ.
2012 ರ ಡಿಸೆಂಬರ್ ನಲ್ಲಿ ನಿರ್ಭಯಾ ಪ್ರಕರಣ ನಡೆದಾಗ ಭಾರತ 'ರೇಪ್ ಕ್ಯಾಪಿಟಲ್' ಎಂದು ಕರೆಸಿಕೊಳ್ಳುವಂತಾಯ್ತು. ಐದಾರು ಜನ ಮಾಡಿದ ಹೇಯ ಕೃತ್ಯಕ್ಕೆ ಇಡೀ ಪುರುಷ ಸಮಾಜವೇ ತಲೆ ತಗ್ಗಿಸುವಂತಾಯ್ತು. ಈಗ ಹೈದರಾಬಾದಿನ ಯುವತಿ ಪ್ರಕರಣದಲ್ಲೂ ಆಗಿದ್ದು ಅದೇ. ನಂಬಿಕೆ ಎಂಬ ಪದದ ಮೇಲೇ ಅಸಹ್ಯ ಹುಟ್ಟುವಂತಾದರೆ ಬದುಕೊದು ಹೇಗೆ?
ಘಟನೆ ನಡೆದ ಮೇಲೆ ಅಪರಾಧಿಗಳ ಮತ ಯಾವುದು ಎಂಬುದನ್ನೆಲ್ಲ ಪತ್ತೆ ಹಚ್ಚಿ ಅದಕ್ಕೂ ಕೋಮು ಬಣ್ಣ ಲೇಪಿಸುವ ಯತ್ನ ನಡೆಯುತ್ತಿದೆ. ಮಾಡಿದ್ದೇ ನೀಚಕೃತ್ಯವಾಗಿರುವಾಗ ಯಾವ ಮತದವರು ಮಾಡಿದರೇನು? ಅಪರಾಧಿಯ ಧರ್ಮದ ಆಧಾರದ ಮೇಲೆ ಶಿಕ್ಷೆಯಲ್ಲಿ 'ಕನ್ಸೆಶನ್' ಹುಡುಕುವ ಮನೋಭಾವ ಇರುವವರೆಗೂ ಇಂಥ ಹೇಯಕೃತ್ಯಗಳು ನಿಲ್ಲುವುದು ಹೇಗೆ?
ಪಶುವೈದ್ಯೆ ಅತ್ಯಾಚಾರ: ಸಚಿವರ ಆಘಾತಕಾರಿ ಹೇಳಿಕೆ, ಪೊಲೀಸರ ವಿರುದ್ಧ ಕುಟುಂಬದ ಆರೋಪ
ಆರೋಪಿಗಳು ಪತ್ತೆಯಾದ ಮೇಲೂ, ಅಪರಾಧ ಸಾಬೀತಾದ ಮೇಲೂ ತಕ್ಷಣವೇ ಶಿಕ್ಷಿಸುವಷ್ಟು ತ್ವರಿತ ಕಾನೂನು ಪ್ರಕ್ರಿಯೆ ನಮ್ಮಲ್ಲಿಲ್ಲದಿರುವುದೂ ಇಂಥ ಅಪರಾಧಗಳ ಹೆಚ್ಚಳಕ್ಕೆ ಒಂದು ಕಾರಣವಾಗಿದೆ. ಅತ್ಯಾಚಾರಿಗೆ ಅತ್ಯುಗ್ರ ಶಿಕ್ಷೆ ನೀಡುವಂಥ ಕಾನೂನು ನಮ್ಮಲ್ಲಿಲ್ಲ. ಶಿಕ್ಷೆಯ ಭಯವಾದರೂ ಇದ್ದರೆ ಇಂಥ ಪ್ರಕರಣಗಳು ಒಂದು ಮಟ್ಟಕ್ಕೆ ನಿಯಂತ್ರಣಕ್ಕೆ ಬರಬಹುದೇನೋ!
ಇಂಥ ಘಟನೆಗಳು ನಡೆದಾಗಲೆಲ್ಲ ಅತ್ಯಾಚಾರಿಗಳಿಗೆ ಅತ್ಯುಗ್ರ ಶಿಕ್ಷೆ ನೀಡಬೇಕೆಂಬ ಧ್ವನಿ ಮೊಳಗುತ್ತೆ. ಒಂದೆರಡು ದಿನವಷ್ಟೆ, ಮರೆತುಹೋಗುತ್ತದೆ. ಅದನ್ನು ಮತ್ತೆ ನೆನಪಿಸುವುದಕ್ಕೆ ಮತ್ತೊಬ್ಬ ನಿರ್ಭಯಾ ಬಲಿಯಾಗಬೇಕು! ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಜಾರಿಯಾಗಬೇಕೆಂಬುದನ್ನು ನೆನಪಿಸುವುದಕ್ಕೆ ಹೈದರಾಬಾದಿನಲ್ಲೊಬ್ಬಳು ನಿರ್ಭಯಾ ಬಲಿಯಾಗಿದ್ದಾಳೆ. ಈಗಲಾದರೂ ಕಾನೂನು ಎಚ್ಚೇಳುತ್ತದೆಯೋ, ಅಥವಾ ಮತ್ತೆಷ್ಟೋ ಬಲಿಗಳಿಗಾಗಿ ಕಾಯಬೇಕೋ?!