ಪ್ರಮೋದ್ ಮಧ್ವರಾಜ್ ಬಿಜೆಪಿಗೆ: ಶೋಭಾ ಕರಂದ್ಲಾಜೆ ಎಲ್ಲಿಗೆ? ಉಡುಪಿ ರಾಜಕೀಯ ಕುತೂಹಲ!

ಮುಖ್ಯಮಂತ್ರಿಯಾಗಿದ್ದ ವೇಳೆ ಉಡುಪಿ ಜಿಲ್ಲಾಡಳಿತ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯನವರು ಆಗಮಿಸಿದ್ದರು. ಆಗಲೇ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ತೊರೆಯುವ ಮಾತು ಚಾಲ್ತಿಯಲ್ಲಿತ್ತು. ಮಾಧ್ಯಮದವರ ಮುಂದೆನೇ ಮಧ್ವರಾಜ್ ಸಮ್ಮುಖದಲ್ಲೇ ಅವರು ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರು.

ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಸೇರ್ಪಡೆಗೊಳ್ಳುವುದು ಅಧಿಕೃತ ಎನ್ನುವುದಷ್ಟೇ ಬಾಕಿ ಉಳಿದಿದ್ದದ್ದು. ಆದರೆ, ಅದು ಅಧಿಕೃತವಾಗಲು ವಿಳಂಬವಾಗಿದ್ದದ್ದು ಜಿಲ್ಲಾ ಬಿಜೆಪಿಯಲ್ಲಿನ ಕೆಲವು ಮುಖಂಡರ ವಿರೋಧದಿಂದ. ಕೊನೆಗೂ, ಮಹೂರ್ತ ಕೂಡಿ ಬಂತು, ಸಿಎಂ ಸಮ್ಮುಖದಲ್ಲಿ ಪ್ರಮೋದ್ ಮಧ್ವರಾಜ್ ಕೇಸರಿ ಶಾಲನ್ನು ಹಾಕಿಕೊಂಡಿದ್ದಾರೆ.

ಉಡುಪಿ ಜಿಲ್ಲೆಯ ತುಳು ಭಾಷೆ ಹೆಚ್ಚಾಗಿ ಬಳಸುವ ಉಡುಪಿ ನಗರ, ಕಾಪು ಮತ್ತು ಕಾರ್ಕಳ ವಿಧಾನಸಭಾ ವ್ಯಾಪ್ತಿಯಲ್ಲಿ ಪ್ರಮೋದ್ ಮಧ್ವರಾಜ್ ಒಬ್ಬ ಪ್ರಭಾವೀ ಮತ್ತು ವರ್ಚಸ್ವೀ ನಾಯಕ. ಅದಕ್ಕಿಂತ ಹೆಚ್ಚಾಗಿ, ಜನರ ಜೊತೆ ಬೆರೆಯುವ ನಾಯಕ ಎಂದೇ ಹೆಸರಾದವರು.

ಆಗರ್ಭ ಶ್ರೀಮಂತ ಕುಟುಂಬದಿಂದ ಬಂದಿರುವ ಪ್ರಮೋದ್ ಮಧ್ವರಾಜ್ ಅವರ ಬಿಜೆಪಿ ಸೇರ್ಪಡೆಗೆ ಹಾಲಿ ಶಾಸಕ ರಘುಪತಿ ಭಟ್ ವಿರೋಧ ವ್ಯಕ್ತ ಪಡಿಸಿದ್ದದ್ದು ಗೌಪ್ಯವಾಗೇನೂ ಉಳಿದಿಲ್ಲ. ಆದಾಗ್ಯೂ, ಪ್ರಮೋದ್ ಬಿಜೆಪಿಗೆ ಸೇರ್ಪಡೆಗೊಂಡರು ಎಂದರೆ ಅದರ ಹಿಂದೆ ಉಡುಪಿಯ ರಾಜಕೀಯ ಲೆಕ್ಕಾಚಾರ ಬೇರೇನೇ ಇದೆ ಎನ್ನುವುದನ್ನು ಅರಿತುಕೊಳ್ಳಲು ಪಾಂಡಿತ್ಯ ಏನೂ ಬೇಕಾಗಿಲ್ಲ.

 ಉಡುಪಿಯ 5 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಶಾಸಕರು

ಉಡುಪಿಯ 5 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಶಾಸಕರು

ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾ ಕಡೆನೂ ಬಿಜೆಪಿಯ ಶಾಸಕರಿದ್ದಾರೆ. ಇದಲ್ಲದೇ, ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಎರಡನೇ ಪಂಕ್ತಿಯ ಟಿಕೆಟ್ ಆಕಾಂಕ್ಷಿಗಳ ಬಹುದೊಡ್ಡ ದಂಡೇ ಇದೆ. ಕಾರಣ, ಹೇಳಿ ಕೇಳಿ ಈ ಜಿಲ್ಲೆ ಕೇಸರಿ ಬೆಲ್ಟ್ ಎನ್ನುವುದು. ಇಲ್ಲಿ ವೈಯಕ್ತಿಕ ವರ್ಚಸ್ಸು ಎನ್ನುವುದಕ್ಕಿಂತ ಹೆಚ್ಚಾಗಿ, ಬಿಜೆಪಿಯ ಚಿಹ್ನೆ ಮತ್ತು ಮೋದಿ ಹೆಸರಿನ ಶ್ರೀರಕ್ಷೆ. ಹಾಗಾದರೆ, ರಾಜಕೀಯದಲ್ಲಿ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಪ್ರಮೋದ್ ಮಧ್ವರಾಜ್ ಯಾವ ಲೆಕ್ಕಾಚಾರದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು ಎನ್ನುವ ಪ್ರಶ್ನೆ ಜಿಲ್ಲೆಯ ಜನರಲ್ಲಿ ಕಾಡದೇ ಇರದು.

 ಬಿಜೆಪಿ ಟಿಕೆಟಿಗಾಗಿ ಸಿಕ್ಕಾಪಟ್ಟೆ ಪ್ರಯತ್ನ

ಬಿಜೆಪಿ ಟಿಕೆಟಿಗಾಗಿ ಸಿಕ್ಕಾಪಟ್ಟೆ ಪ್ರಯತ್ನ

ಪ್ರಮೋದ್ ಮಧ್ವರಾಜ್ ಕಳೆದ ಐದು ವರ್ಷದಲ್ಲಿ ರಾಜ್ಯದ ಮೂರೂ ಪ್ರಮುಖ ಪಕ್ಷಗಳ ಶಾಲನ್ನು ಹಾಕಿಕೊಂಡಿದ್ದಾಗಿದೆ. ಕಾಂಗ್ರೆಸ್, ಜೆಡಿಎಸ್ ನಂತರ ಈಗ ಬಿಜೆಪಿ. ಸೀಟು ಹೊಂದಾಣಿಕೆಯ ಭಾಗವಾಗಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಮಧ್ವರಾಜ್ ಕಣದಲ್ಲಿದ್ದರು ಮತ್ತು ಹೀನಾಯವಾಗಿ ಸೋತಿದ್ದರು. ಒಲ್ಲದ ಮನಸ್ಸಿನಿಂದಲೇ ಕಣದಲ್ಲಿದ್ದ ಪ್ರಮೋದ್, ಬಿಜೆಪಿ ಟಿಕೆಟಿಗಾಗಿ ಸಿಕ್ಕಾಪಟ್ಟೆ ಪ್ರಯತ್ನವನ್ನು ನಡೆಸಿದ್ದರು.

 ಉಡುಪಿಯಲ್ಲಿ ಯಾವುದೇ ಸೀಟು ಖಾಲಿಯಿಲ್ಲ

ಉಡುಪಿಯಲ್ಲಿ ಯಾವುದೇ ಸೀಟು ಖಾಲಿಯಿಲ್ಲ

ಬಿಜೆಪಿಗೆ ಸೇರ್ಪಡೆಗೊಳ್ಳುವ ವೇಳೆ ಮಧ್ವರಾಜ್ ಹೇಳಿದ್ದು,"ಉಡುಪಿಯಲ್ಲಿ ಯಾವುದೇ ಸೀಟು ಖಾಲಿಯಿಲ್ಲ ಎನ್ನುವುದು ಗೊತ್ತಿದೆ. 130 ಕೋಟಿ ಜನಸಂಖ್ಯೆಯ ನಮ್ಮ ಭಾರತ ದೇಶದಲ್ಲಿ ನರೇಂದ್ರ ಮೋದಿಯವರ ಕೈಯನ್ನು ಬಲ ಪಡಿಸಬೇಕಾಗಿದೆ. ಯಾವುದೇ ಆಕಾಂಕ್ಷೆಯಿಲ್ಲದೇ ನಾನು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ"ಎಂದು ಹೇಳಿದ್ದರು. ಹಾಗಾದರೆ, ಪ್ರಮೋದ್ ಮಧ್ವರಾಜ್ ಅವರ ಕಣ್ಣು ಮುಂದಿನ ಲೋಕಸಭಾ ಚುನಾವಣೆಯ ಮೇಲೆನಾ? ಹಾಗಿದ್ದರೆ ಹಾಲಿ ಸಂಸದೆ ಶೋಭಾ ಕರಂದ್ಲಾಜೆ?

 ಶೋಭಾ ಕರಂದ್ಲಾಜೆ ರಾಜ್ಯ ರಾಜಕಾರಣಕ್ಕೆ ಇಳಿದರೆ

ಶೋಭಾ ಕರಂದ್ಲಾಜೆ ರಾಜ್ಯ ರಾಜಕಾರಣಕ್ಕೆ ಇಳಿದರೆ

ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ವಿಚಾರ, ವರಿಷ್ಠರ ಸ್ಪಷ್ಟನೆಯ ನಂತರವೂ ಚಾಲ್ತಿಯಲ್ಲಿದೆ. ಸಿಎಂ ಹುದ್ದೆಗೆ ಪ್ರಪ್ರಥಮ ಬಾರಿಗೆ ಪ್ರಬಲ ಒಕ್ಕಲಿಗ ಸಮುದಾಯದ ಮಹಿಳೆಯೊಬ್ಬರು ಆಯ್ಕೆಯಾಗಲಿದ್ದಾರೆ ಎನ್ನುವ ಮಾತೂ ಹೊಸದೇನಲ್ಲ. ಅವರು ಯಾರು ಎಂದಾಗ ಅದು ಶೋಭಾ ಕರಂದ್ಲಾಜೆ. ಉತ್ತರ ಪ್ರದೇಶದ ಅಸೆಂಬ್ಲಿ ಚುನಾವಣೆಯಲ್ಲಿ ತನಗೆ ವಹಿಸಿದ್ದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದ ಶೋಭಾ ಕರಂದ್ಲಾಜೆ ರಾಜ್ಯ ರಾಜಕಾರಣಕ್ಕೆ ಇಳಿದರೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾರು? ಪ್ರಮೋದ್ ಮಧ್ವರಾಜ್ ಆದರೂ ಆಗಬಹುದು. ರಾಜಕೀಯ ನಿಂತ ನೀರಲ್ಲ, ಸರಾಗವಾಗಿ ಸಾಗುತ್ತಲೇ ಇರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+