ಒಂದಲ್ಲ ಎರಡಲ್ಲ ಮೂರು ಬಾರಿ ಕೊರೊನಾ ಗೆದ್ದ ಪತ್ರಕರ್ತ ಗೆಳೆಯನ ಪಾಸಿಟಿವ್ ಮಾತು
ಕಳೆದ ವರ್ಷದ ಆರಂಭದಲ್ಲಿ ಮೊದಲ ಬಾರಿಗೆ ಕಿವಿಗೆ ಬಿದ್ದಿತ್ತು ಕೊರೊನಾ ವೈರಸ್ ಎಂಬ ಅದೃಶ್ಯ ಶತ್ರುವಿನ ಹೆಸರು. ಆರಂಭದಲ್ಲಿ ಅಲ್ಲೆಲ್ಲೋ ಚೀನಾದಲ್ಲಿ ಎಂದು ವರದಿಯಾಗುತ್ತಿದ್ದರೆ ಕೇವಲ ಒಂದು ಸುದ್ದಯೆಂಬಂತೆ ಪ್ರತಿಕ್ರಿಯೆಗಳು ನಮ್ಮದಾಗಿರುತ್ತು. ಆದರೆ ಆ ಕಣ್ಣಿಗೆ ಕಾಣದ ಶತ್ರು ಪಕ್ಕಕ್ಕೆ ಬಂದು ನಿಲ್ಲಲು ಹೆಚ್ಚು ಸಮಯವೇ ತೆಗೆದುಕೊಳ್ಳಲಿಲ್ಲ. ಅಲ್ಲೊಂದು ಇಲ್ಲೊಂದು ಬೆಳಕಿಗೆ ಬರುತ್ತಿದ್ದ ಪ್ರಕರಣಗಳು ಊಹೆಗೂ ಮೀರಿ ಹರಡಿ ಬಿಟ್ಟಿತ್ತು.
Recommended Video
ಈಗ ಈ ವೈರಸ್ ನಮ್ಮನ್ನು ಕಾಡಲು ಆರಂಭಿಸಿ ಒಂದು ವರ್ಷ ಕಳೆದಿದೆ. ಹಲವಾರು ಜನರು ಈ ವೈರಸ್ಗೆ ನಲುಗಿದ್ದಾರೆ. ಕೆಲವರಿಗೆ ಏನೂ ಆಗಿಲ್ಲವೆಂಬಂತೆ ಬಂದು ಹೋಗಿದ್ದರೆ ಇನ್ನೂ ಕೆಲವರಿಗೆ ದೊಡ್ಡ ಆಘಾತವನ್ನೇ ನೀಡಿತ್ತು. ಈ ಮಧ್ಯೆ ನನ್ನ ಗೆಳೆಯನೊಬ್ಬ ಒಂದಲ್ಲ ಎರಡಲ್ಲ ಮೂರು ಬಾರಿ ಕೊರೊನಾ ವೈರಸ್ಗೆ ತುತ್ತಾಗಿ ಗೆದ್ದು ಬಂದಿದ್ದಾನೆ.
ಪಾಸಿಟಿವ್ ಪುರಾಣ: ಕೊರೊನಾವೈರಸ್ ಅಂಟದಿರಲು "ನಮ್ಮಲ್ಲೇ" ಮದ್ದು!
ಆತ ಪತ್ರಕರ್ತ. ರಾಜ್ಯದ ಖ್ಯಾತ ಖಾಸಗಿ ವಾಹಿನಿಯಲ್ಲಿ ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದಾನೆ. ಕೊರೊನಾ ವೈರಸ್ನ ಸಂದರ್ಭದಲ್ಲಿ ವರದಿಗಾರಿಕೆಯ ಪಾಡು ಸಂಕಷ್ಟ ಅನುಭವಿಸಿದವರಿಗೆ ಅರ್ಥವಾಗಲು ಸಾಧ್ಯ. ಇಂಥ ಸ್ಥಿತಿಯಲ್ಲಿ ರ್ಯಾಂಡಮ್ ಟೆಸ್ಟ್ಗೆ ಒಳಗಾಗಿದ್ದ ಈ ನನ್ನ ಗೆಳೆಯನಿಗೆ ಮೊದಲ ಬಾರಿ ಕೊರೊನಾ ವೈರಸ್ ಇರುವುದು ದೃಢಪಟ್ಟಿತ್ತು. ಯಾವುದೇ ಲಕ್ಷಣಗಳು ಇಲ್ಲದಿದ್ದರೂ ನಿಯಮದಂತೆಯೇ 14 ದಿನಗಳ ಕ್ವಾರಂಟೈನ್ ಪೂರೈಸಿ ನೆಗೆಟಿವ್ ವರದಿಯೊಂದಿಗೆ ಮತ್ತೆ ತನ್ನ ಕರ್ತವ್ಯದಲ್ಲಿ ಮಗ್ನನಾಗಿದ್ದ.
ಒಂದೂವರೆ ತಿಂಗಳ ನಂತರ ಮತ್ತೆ ಜ್ವರ, ಮತ್ತೆ ಪಾಸಿಟಿವ್
ಇದಾಗಿ ಒಂದೂವರೆ ತಿಂಗಳಾಗಿತ್ತಷ್ಟೆ. ರಾತ್ರಿ ಹೆಚ್ಚೇ ಸುಸ್ತಿನ ಅನುಭವವಿದ್ದ ಗೆಳೆಯನಿಗೆ ಮರುದಿನ ಬೆಳಗ್ಗೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ತಕ್ಷಣವೇ ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಪರೀಕ್ಷೆಗೆ ಒಳಗಾಗಿದ್ದ. ವರದಿಗಳು ಬರುವುದರ ಒಳಗಾಗಿ ವೈರಸ್ನ ಎಲ್ಲಾ ಲಕ್ಷಣಗಳು ಕಾಣಿಸಿಕೊಂಡಿತ್ತು. ಮೊದಲ ಬಾರಿ ಶಾಂತವಾಗಿದ್ದ ಕೊರೊನಾ ವೈರಸ್ ಆತನನ್ನು ಹೆಚ್ಚೇ ಕಾಡಿತ್ತು. ಆದರೆ ಮನೆಯಲ್ಲಿಯೇ ಇದ್ದು ಚಿಕಿತ್ಸೆಯನ್ನು ಪಡೆದುಕೊಂಡಿದ್ದ. ವೈದ್ಯ ಗೆಳೆಯನ ಸಹಾಯ ಸಿಕ್ಕಿದ್ದು ಆತನಿಗೆ ದೊಡ್ಡ ಸಹಕಾರಿಯಾಗಿತ್ತು. ಕೆಲ ದಿನಗಳ ಜ್ವರ, ಮೈಕೈ ನೋವುಗಳಂತಾ ಅನುಭವಗಳೊಂದಿಗೆ ಜ್ವರ ಶಾಂತವಾಗಿತ್ತು. ಕೊರೊನಾ ಹಿಮ್ಮೆಟ್ಟಿತ್ತು.
ಎರಡನೇ ಅಲೆಯಲ್ಲಿ ಮತ್ತೊಮ್ಮೆ ಬಂದ ಬೇಡದ ಗೆಳೆಯ
ಮೊದಲ ಅಲೆಯಲ್ಲಿ ಎರಡು ಬಾರಿ ಕೊರೊನಾ ವೈರಸ್ನ ಭಿನ್ನ ಅನುಭವಗಳನ್ನು ಪಡೆದಿದ್ದ ಗೆಳೆಯನಿಗೆ ಎರಡನೇ ಅಲೆಯಲ್ಲಿಯೂ ಕಾಡಿತ್ತು. ಮೇ ತಿಂಗಳ ಆರಂಭದಲ್ಲಿ ಕಾಣಿಸಿಕೊಂಡ ಜ್ವರ ಮತ್ತೆ ಕೊರೊನಾ ವೈರಸ್ ಎಂದು ಸ್ವತಃ ಗೆಳೆಯನಿಗೆ ಆರಂಭದಲ್ಲೇ ಅನುಭವಕ್ಕೆ ಬಂದಿತ್ತು. ಪರೀಕ್ಷೆಯಲ್ಲಿಯೂ ಅದು ದೃಢವಾಗಿತ್ತು. ಮೊದಲ ಎರಡು ಬಾರಿಯ ಅನುಭವಕ್ಕಿಂತಲೂ ಇದು ಕಠಿಣವಾಗಿತ್ತು. ಆದರೆ ಈ ಬಾರಿಯೂ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಲು ನಿರ್ಧರಿಸಿದ್ದ. ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿಕೊಂಡಿದ್ದ. ಆದರೆ ಈ ಬಾರಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಆತಂಕ, ದುಗುಡಗಳು ಕಾಡಲು ಆರಂಭಿಸಿದ್ದರೂ ಆತ್ಮಸ್ಥೈರ್ಯ ಗಟ್ಟಿಯಾಗಿತ್ತು. ಆಕ್ಸಿಜನ್ ಕಾನ್ಸಂಟ್ರೇಟರ್ ವ್ಯವಸ್ಥೆ ಸೂಕ್ತ ಸಂದರ್ಭದಲ್ಲಿ ದೊರೆತಿದ್ದ ಕಾರಣ ಈ ಬಾರಿಯೂ ಮನೆಯಲ್ಲಿಯೇ ಚಿಕಿತ್ಸೆ ಮುಂದುವರಿದಿತ್ತು. ಎರಡು ವಾರಗಳ ಚಿಕಿತ್ಸೆಯ ನಂತರ ಸಂಪೂರ್ಣ ಗುಣಮುಖನಾಗಿದ್ದ.
ಉತ್ತಮ ಆಹಾರ, ಸಮಯಕ್ಕೆ ಸರಿಯಾಗಿ ಔಷಧಿ
ಮೂರು ಬಾರಿಯೂ ಆಸ್ಪತ್ರೆಗೆ ಹೋಗದೆ ಚಿಕಿತ್ಸೆಯನ್ನು ಪಡೆದು ಹಿಮ್ಮೆಟ್ಟಿಸಿದ್ದಾನೆ ನನ್ನ ಮಿತ್ರ. ಮೊದಲ ಬಾರಿಗೆ ಲಕ್ಷಣಗಳು ಇಲ್ಲದೆ ಇದ್ದರೂ ಮತ್ತೆರಡು ಬಾರಿ ಅಕ್ಷರಶಃ ಆತನನ್ನು ಆತಂಕಕ್ಕೆ ಮೂಡಿಸಿತ್ತು. ಆದರೆ ಧೈರ್ಯದಿಂದ ಹಿಮ್ಮೆಟ್ಟಿಸಿದ್ದ. ಔಷಧಿಗಳ ಜೊತೆಗೆ ಪೌಷ್ಟಿಕ ಆಹಾರ ಸೇವಿಸುವಂತೆ ವೈದ್ಯರೊಬ್ಬರು ನೀಡಿದ್ದ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸಿದ್ದ. ಡ್ರೈ ಫ್ರೂಟ್ಸ್, ಮಾಂಸಾಹಾರವನ್ನು ಹೆಚ್ಚಾಗಿ ಸೇವಿಸುತ್ತಾ ದೇಹಕ್ಕೆ ಪೌಷ್ಟಿಕಾಂಶಗಳ ಕೊರತೆಯಾಗದಂತೆ ಎಚ್ಚರಿಕೆ ವಹಿಸಿದ್ದ. ಮಾನಸಿಕ ಒತ್ತಡಕ್ಕೆ ಒಳಗಾಗದಂತೆ ಸಿನಿಮಾ, ಪುಸ್ತಕಗಳ ಒಡನಾಟ ಹೆಚ್ಚಿಸಿಕೊಂಡ. ಜೊತೆಗೆ ಬರಹಗಾರನೂ ಆಗಿರುವ ಆತನಿಗೆ ಈ ಸಂದರ್ಭ ಒಂದು ಕಾದಂಬರಿಯನ್ನು ಬರೆಯಲು ಪ್ರೇರೇಪಿಸಿದೆ ಎನ್ನುತ್ತಾನೆ.
ಧೈರ್ಯವೇ ಅಸ್ತ್ರ
ಸಣ್ಣ ಪ್ರಮಾಣದ ಅಸ್ತಮಾ ಸಮಸ್ಯೆ ಇರುವ ಮಧ್ಯೆಯೂ ಆಮ್ಲಜನಕದ ಮಟ್ಟ 85ಕ್ಕಿಂತ ಕಡಿಮೆಯಾದಾಗ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಆತನಿಗೆ ನೆರವಾಗಿದ್ದು ವೈದ್ಯಕೀಯ ನೆರವುಗಳು ಮಾತ್ರವಲ್ಲ. ಆತನ ಮಾನಸಿಕ ಸಿದ್ಧತೆ. ಹೀಗಾಗಿ ಕೊರೊನಾ ವೈರಸ್ ತಗುಲಿತೆಂದರೆ ಆತಂಕಕ್ಕೆ ಒಳಗಾಗಿ ಮತ್ತಷ್ಟು ಸಮಸ್ಯೆಗೆ ಒಳಗಾಗುವ ಬದಲು ಅದನ್ನು ಹಿನ್ನೆಟ್ಟಿಸಲು ಬೇಕಾಗುವ ಧೈರ್ಯವನ್ನು ನಾವೇ ಪಡೆದುಕೊಳ್ಳಬೇಕಿದೆ.