Top Points: 75ರ ಸ್ವಾತಂತ್ರ್ಯ ಸಂಭ್ರಮ ಹಾಗೂ ಕೆಂಪುಕೋಟೆಯಲ್ಲಿ ಮೋದಿ ಮಾತು
ನವದೆಹಲಿ, ಆಗಸ್ಟ್ 15: ಭಾರತದ ಭೂಮಿಯಲ್ಲಿ ಸ್ವಾತಂತ್ರ್ಯದ ತ್ರಿವರ್ಣ ಧ್ವಜ ಹಾರಿ 75 ವರ್ಷ ಪೂರ್ಣಗೊಂಡಿದೆ. 76ನೇ ವರ್ಷಕ್ಕೆ ಲಗ್ಗೆಯಿಟ್ಟಿರುವ ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.
ನವದೆಹಲಿಯ ಕೆಂಪುಕೋಟೆಯ ಮೇಲೆ ನಿಂತು ಭಾಷಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಮುಂದಿನ 25 ವರ್ಷಗಳಲ್ಲಿ ಭಾರತೀಯರು ಏನು ಮಾಡಬಹುದು ಎಂಬುದರ ಗುರಿ ತೋರಿದ್ದಾರೆ. ಜಗತ್ತಿನಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಿಕೊಳ್ಳಬೇಕಾದರೆ ಭಾರತೀಯರು ಏನು ಮಾಡಬೇಕು ಎಂಬುದನ್ನು ವಿವರಿಸಿದ್ದಾರೆ.
ಕೆಂಪುಕೋಟೆಯಲ್ಲಿ ಭಾಷಣ: ಟೆಲಿಪ್ರಾಂಪ್ಟರ್ ಬಿಟ್ಟು ನೋಟ್ಸ್ ಬಳಸಿದ ಮೋದಿ
ಸ್ವಾತಂತ್ರ್ಯ ಮಹೋತ್ಸವದ ಹಿನ್ನೆಲೆ ಸೋಮವಾರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಾತಿನಲ್ಲಿ ಏನೆಲ್ಲಾ ಇತ್ತು? ಪ್ರಧಾನಿ ಭಾಷಣದ ಪ್ರಮುಖ ಅಂಶಗಳು ಏನಾಗಿದ್ದವು? ಮುಂದಿನ 25 ವರ್ಷಗಳಿಗೆ ಮೋದಿ ಹಾಕಿದ ಸ್ಕೆಚ್ ಹೇಗಿದೆ? ಭಾಷಣದ ಟಾಪ್ 10 ಅಂಶಗಳ ಕುರಿತು ವಿಸ್ತೃತ ವರದಿಯೊಂದು ಇಲ್ಲಿದೆ.
ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದ ಮೋದಿ
"ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ನೀಡಿದ ಬಾಪು, ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಬಾಸಾಹೇಬ್ ಅಂಬೇಡ್ಕರ್, ವೀರ್ ಸಾವರ್ಕರ್ ಅವರಿಗೆ ನಾವು ಕೃತಜ್ಞರಾಗಿರುತ್ತೇವೆ," ಎಂದು ಪ್ರಧಾನಿ ಮೋದಿ ಮೊದಲು ಮಾತಿನಲ್ಲಿ ಹೇಳಿದರು.
ಭಾರತೀಯರಿಗೆ ಪಂಚಪ್ರಾಣದ ಕುರಿತು ಮೋದಿ ಕರೆ
ತಮ್ಮ ಭಾಷಣದಲ್ಲಿ, 2047 ರ ವೇಳೆಗೆ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸಲು ಐದು ಪ್ರತಿಜ್ಞೆಗಳೊಂದಿಗೆ ಮುಂದುವರಿಯುವಂತೆ ಪ್ರಧಾನಿ ಮೋದಿ ಜನರಿಗೆ ಕರೆ ನೀಡಿದರು. ಮೊದಲನೆಯದಾಗಿ, ಅಭಿವೃದ್ಧಿ ಹೊಂದಿದ ಭಾರತದ ದೊಡ್ಡ ಸಂಕಲ್ಪ; ಎರಡನೆಯದಾಗಿ ಗುಲಾಮಗಿರಿಯ ಎಲ್ಲಾ ಗುರುತುಗಳನ್ನು ಅಳಿಸಿ ಹಾಕುವುದು; ಮೂರನೆಯದಾಗಿ, ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡಬೇಕು; ನಾಲ್ಕನೇಯದಾಗಿ ಏಕತೆಯ ಶಕ್ತಿ ಮತ್ತು ಐದನೇ, ಪ್ರಧಾನಿ ಮತ್ತು ಮುಖ್ಯಮಂತ್ರಿಗಳನ್ನು ಒಳಗೊಂಡಿರುವ ನಾಗರಿಕರ ಕರ್ತವ್ಯಗಳ ಬಗ್ಗೆ ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಸಹ ಸ್ವಾತಂತ್ರ್ಯ ದಿನದ ಮುನ್ನಾದಿನದ ತಮ್ಮ ಭಾಷಣದಲ್ಲಿ ಇದನ್ನು ಒತ್ತಿ ಹೇಳಿದ್ದರು.
ಮಹಾತ್ಮರಿಗೆ ಮೋದಿ ಪುಷ್ಪನಮನ
ರಾಜ್ ಘಾಟ್ಗೆ ಭೇಟಿ ನೀಡಿದ ಪ್ರಧಾನಿ ಮೋದಿ ಮಹಾತ್ಮ ಗಾಂಧಿಗೆ ನಮನ ಸಲ್ಲಿಸುವುದರೊಂದಿಗೆ ಆಚರಣೆ ಪ್ರಾರಂಭಿಸಿದರು. ಕೆಂಪುಕೋಟೆಗೆ ಆಗಮಿಸಿದ ಅವರು, ಅಂತರ್ಸೇವೆ ಮತ್ತು ಪೊಲೀಸ್ ಗಾರ್ಡ್ ಆಫ್ ಆನರ್ ಪರೀಕ್ಷಿಸಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಈ 75 ವರ್ಷಗಳ ಪಯಣದಲ್ಲಿ, ಭರವಸೆಗಳು, ಆಕಾಂಕ್ಷೆಗಳು, ಏರಿಳಿತಗಳ ನಡುವೆ ಎಲ್ಲರ ಪ್ರಯತ್ನದಿಂದ ನಾವು ಇಲ್ಲಿಗೆ ತಲುಪಿದ್ದೇವೆ. 2014ರಲ್ಲಿ ನಾಗರಿಕರು ನನಗೆ ಜವಾಬ್ದಾರಿಯನ್ನು ನೀಡಿದರು. ಸ್ವಾತಂತ್ರ್ಯದ ನಂತರ ಜನಿಸಿದ ಮೊದಲ ವ್ಯಕ್ತಿ ಕೆಂಪು ಕೋಟೆಯಿಂದ ಈ ದೇಶದ ನಾಗರಿಕರನ್ನು ಹಾಡಿ ಹೊಗಳುವ ಅವಕಾಶ ಸಿಕ್ಕಿದೆ ಎಂದು ಮೋದಿ ಹೇಳಿದರು.
ಆಜಾದಿ ಕಾ ಅಮೃತ್ ಮಹೋತ್ಸವ ಪ್ರಾರಂಭವಾಗಿದ್ದು ಯಾವಾಗ?
ಕಳೆದ 2021ರ ಮಾರ್ಚ್ 12ರಿಂದ ಪ್ರಾರಂಭವಾದ ಆಜಾದಿ ಕಾ ಅಮೃತ್ ಮಹೋತ್ಸವ ಎಂಬ ಮೆಗಾ ಕಾರ್ಯಕ್ರಮದ ಮೂಲಕ 75 ವರ್ಷಗಳ ಸ್ವಾತಂತ್ರ್ಯದ ಆಚರಣೆಗಳು ಶುರುವಾಯಿತು. ಸ್ವಾತಂತ್ರ್ಯ ದಿನಕ್ಕೆ ಇನ್ನೂ 75 ವಾರಗಳು ಬಾಕಿ ಇರುವಂತೆ ಅಮೃತ್ ಮಹೋತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ ಕೊಟ್ಟಿದ್ದರು. ಅಲ್ಲಿಂದ ದೇಶದಲ್ಲಿ ವಿವಿಧ ಕಾರ್ಯಕ್ರಮಗಳು, ರಾಷ್ಟ್ರೀಯ ಸ್ಮಾರಕಗಳು ಮತ್ತು ಸಾಂಪ್ರದಾಯಿಕ ಕಟ್ಟಡಗಳನ್ನು ಬೆಳಗಿಸಲಾಯಿತು. ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿಯು ಮಿಷನ್ 'ಅಮೃತಾರೋಹಣ' ಎಂದು ಏಕಕಾಲದಲ್ಲಿ 75 ಶಿಖರಗಳನ್ನು ಏರಿದ್ದಾರೆ. ಆ 75 ಶಿಖರಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿದ್ದು ಒಂದು ವಿಶಿಷ್ಟ ದಾಖಲೆಯಾಗಿದೆ.