ಅಕ್ಟೋಬರ್ ಮೈಸೂರಿಗೆ ಅತಿಥಿಗಳ ಕಾಲ... ಆದರೆ ಈಗ?
ಅದೊಂದು ಸಡಗರ ಸಂಭ್ರಮದ ಕಾಲವಾಗಿತ್ತು... ಅಕ್ಟೋಬರ್ ತಿಂಗಳು ಬಂತೆಂದರೆ ಮುಂಗಾರು ಮಳೆ ಬಿಡುವು ನೀಡಿ ಸಣ್ಣಗಿನ ಚಳಿ ಶುರುವಾಗಿ, ಕೆಸರು ಒಣಗಿ ಸುಂದರ ವಾತಾವರಣ ಸೃಷ್ಟಿಯಾಗುತ್ತಿತ್ತು. ಇಂತಹ ಸಂದರ್ಭದಲ್ಲಿಯೇ ಆಯುಧಪೂಜೆ ಸೇರಿದಂತೆ ನಾಡಹಬ್ಬ ದಸರಾ ಬರುತ್ತಿತ್ತು.
ಗ್ರಾಮೀಣ ಪ್ರದೇಶದಲ್ಲಿ ಹೊಲಗದ್ದೆಗಳಲ್ಲಿ ಮೈಬಗ್ಗಿಸಿ ದುಡಿಯುತ್ತಿದ್ದವರಿಗೆ ಅದೇನೋ ಸಂಭ್ರಮ. ತಮ್ಮೆಲ್ಲ ಕೆಲಸಗಳನ್ನು ಬದಿಗೊತ್ತಿ ಮೈಸೂರಿಗೆ ತೆರಳಿ ದಸರಾ ಸಂಭ್ರಮದಲ್ಲಿ ಮಿಂದೇಳುವ ತವಕವಿತ್ತು. ಹೀಗಾಗಿ ದಸರಾಕ್ಕೆ ನಗರದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿ ಠಿಕಾಣಿ ಹೂಡುತ್ತಿದ್ದರು. ಇನ್ನು ರಾಜ್ಯ, ಅಂತರ್ ರಾಜ್ಯ, ದೇಶ ವಿದೇಶಗಳಿಂದ ಪ್ರವಾಸಿಗರು ಮೈಸೂರಿನತ್ತ ಮುಖ ಮಾಡುತ್ತಿದ್ದರು. ಹೀಗಾಗಿ ನಗರದ ಹೋಟೆಲ್, ಲಾಡ್ಜ್ ಗಳು ಪ್ರವಾಸಿಗರ ಆಗಮನದಿಂದ ಭರ್ತಿಯಾಗುತ್ತಿದ್ದವು.
ನಗರ ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು!
ದಸರಾ ಹತ್ತಿರ ಬರುತ್ತಿದ್ದಂತೆ ಮೈಸೂರಿನ ತುಂಬಾ ಜನ ಜಾತ್ರೆ ಸೇರುತ್ತಿತ್ತು. ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ಇಡೀ ಮೈಸೂರಿಗೆ ಮೈಸೂರೇ ಸಡಗರ ಸಂಭ್ರಮದಲ್ಲಿ ತೇಲಾಡುತ್ತಿತ್ತು.
ಮೈಸೂರು ಮಹಾರಾಜರಿಗೆ ಬಲುಪ್ರಿಯವಾಗಿತ್ತಂತೆ ಎಚ್.ಡಿ.ಕೋಟೆ
ಮೈಸೂರಿನಂತಹ ಸುಂದರ ನಗರವನ್ನು ಮತ್ತೆಲ್ಲೂ ನೋಡಲು ಸಾಧ್ಯವಿಲ್ಲ. ಹೀಗಾಗಿಯೇ ಇಲ್ಲಿಗೆ ವರ್ಷ ಪೂರ್ತಿ ಪ್ರವಾಸಿಗರು ಬರುತ್ತಿರುತ್ತಾರೆ. ಆದರೆ ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಅಥವಾ ಅಕ್ಟೋಬರ್ ತಿಂಗಳಲ್ಲಿ ನಾಡ ಹಬ್ಬ ದಸರಾ ಬರುವುದರಿಂದ ಈ ಸಂದರ್ಭದಲ್ಲಿ ಹೆಚ್ಚಿನ ಪ್ರವಾಸಿಗರು ಇತ್ತ ಮುಖ ಮಾಡುತ್ತಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾರಾಜರ ಕಾಲದಲ್ಲಿಯೇ ವಿದೇಶದಿಂದ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದರು ಎಂದರೆ ಮೈಸೂರಿನ ಖ್ಯಾತಿ ಹೇಗಿದ್ದಿರಬಹುದು ಎಂಬುದನ್ನು ನಾವು ಗಮನಿಸಲೇ ಬೇಕಾಗುತ್ತದೆ.
ಮೈಸೂರು ಪ್ರವಾಸಿಗರನ್ನು ಸೆಳೆಯುವುದೇಕೆ?
ಮೈಸೂರು ಪ್ರವಾಸಿಗರನ್ನು ಸೆಳೆಯಲು ಕಾರಣವೇನು ಎಂಬುದನ್ನು ನೋಡಿದರೆ, ಜಗತ್ತಿನ ಸುಂದರ ನಗರಗಳಲ್ಲಿ ಮೈಸೂರು ಕೂಡ ಒಂದು ಎಂದರೆ ತಪ್ಪಾಗಲಾರದು. ಅಷ್ಟೇ ಅಲ್ಲದೆ ತನ್ನದೇ ಆದ ವಿಶೇಷತೆ ಹೊಂದಿರುವ ಕಾರಣದಿಂದ ದೇಶ ವಿದೇಶಗಳ ಜನ ಮೈಸೂರನ್ನು ಇಷ್ಟಪಡುತ್ತಾರೆ.
ಇವತ್ತು ಮೈಸೂರನ್ನು ಸಾಂಸ್ಕೃತಿಕ ನಗರಿ, ಅರಮನೆಗಳ ನಗರಿ, ಪಾರಂಪರಿಕ ನಗರಿ, ನಿವೃತ್ತರ ಸ್ವರ್ಗ ಹೀಗೆ ವಿವಿಧ ಹೆಸರುಗಳಿಂದ ಕರೆಯಲಾಗುತ್ತಿದೆ. ಅಷ್ಟೇ ಅಲ್ಲ, ವಿಶ್ವದ ಹಲವು ಪ್ರಥಮಗಳಿಗೂ ಸಾಕ್ಷಿಯಾಗಿರುವುದು ಕರ್ನಾಟಕಕ್ಕೊಂದು ಹೆಮ್ಮೆ. ಇದಕ್ಕೆ ಕಾರಣ ಮೈಸೂರು ಸಂಸ್ಥಾನವನ್ನಾಳಿದ ಅರಸರು ನೀಡಿರುವ ಕೊಡುಗೆ. 1399 ರಿಂದ 1950 ರವರೆಗೆ ಸುಮಾರು 550 ವರ್ಷಗಳ ಕಾಲ 25 ಮಂದಿ ಮಹಾರಾಜರು ಈ ಸಂಸ್ಥಾನವನ್ನು ಆಳಿದ್ದಾರೆ. ಇವರಲ್ಲಿ ಅನೇಕ ರಾಜರು ಮೇಧಾವಿಗಳೂ, ಶೂರರೂ, ಸ್ವತಃ ಸಾಹಿತಿಗಳೂ, ಕವಿಗಳು, ದೇಶಭಕ್ತರೂ, ಆಡಳಿತದಲ್ಲಿ ಮಹಾದಕ್ಷರೂ ಆಗಿದ್ದರಿಂದ ಕಲೆ, ಸಂಸ್ಕೃತಿ ಬೆಳೆಯಲು ಸಾಧ್ಯವಾಯಿತು.
ಕೇವಲ ಪಾಳೇಗಾರ ಮಟ್ಟದಲ್ಲಿದ್ದ ಮೈಸೂರನ್ನು ತಮ್ಮ ಧೈರ್ಯ ಪರಾಕ್ರಮಗಳಿಂದ ರಾಜ್ಯಮಟ್ಟಕ್ಕೆ ಕೊಂಡೊಯ್ದು ಇಡೀ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಕೀರ್ತಿಯನ್ನು ಬೆಳಗಿಸಿದ್ದು ಇಲ್ಲಿನ ಮಹಾರಾಜರ ಸಾಧನೆ.
ಮೈಸೂರು ಹಲವು ವಿಶೇಷತೆಗಳ ನಗರಿ
ನಾವು ಮೈಸೂರು ನಗರದಲ್ಲೊಂದು ಸುತ್ತು ಹೊಡೆದರೆ ಮುಕುಟಮಣಿಯಂತೆ ಭಾಸವಾಗುವ ಚಾಮುಂಡಿ ಬೆಟ್ಟ, ಅರಮನೆ, ಸುಂದರ ಉದ್ಯಾನವನ, ಕೆರೆ, ಪಾರಂಪರಿಕ ಕಟ್ಟಡಗಳು ಹಾಗೂ ದೊಡ್ಡ ದೊಡ್ಡ ರಸ್ತೆಗಳು ಕಂಡು ಬರುತ್ತವೆ. ಇಲ್ಲಿ ಬೃಹತ್ ಕೈಗಾರಿಕೆಗಳು ದೊಡ್ಡ ಪ್ರಮಾಣದಲ್ಲಿ ಇಲ್ಲವಾದರೂ ಇಂಫೋಸಿಸ್, ಜೆಕೆ ಟೈಯರ್ಸ್, ಟಿವಿಎಸ್ ಸೇರಿದಂತೆ ಹಲವು ಮಧ್ಯಪ್ರಮಾಣದ ಕಾರ್ಖಾನೆಗಳಿವೆ. ಉತ್ತಮ ವ್ಯಾಪಾರ ಕೇಂದ್ರವಾಗಿರುವ ಮೈಸೂರು ನಗರ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತಹ ಎಲ್ಲ ರೀತಿಯ ಕಾಲೇಜುಗಳನ್ನು ಹೊಂದಿರುವುದು ಹೆಮ್ಮೆ.
ಈ ಬಾರಿ ಮೈಸೂರು ದಸರಾ ಸಂಭ್ರಮ ಬರೀ ನೆನಪಷ್ಟೆ
ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ, ಸುಂದರ ಬೃಂದಾವನದ ಕೃಷ್ಣರಾಜಸಾಗರ ಜಲಾಶಯ, ಮೃಗಾಲಯ, ಚಾಮುಂಡಿಬೆಟ್ಟ, ಸುಂದರ ಕೆರೆಗಳಲ್ಲದೆ, ವಿವಿಧ ಐತಿಹಾಸಿಕ ದೇವಾಲಯಗಳು, ಮಸೀದಿಗಳು, ಚರ್ಚ್ ಗಳಲ್ಲದೆ, ಮೈಸೂರಿನ ಸುತ್ತಮುತ್ತ ಹಲವು ಪ್ರವಾಸಿ ತಾಣಗಳಿದ್ದು ದೂರದಿಂದ ಬರುವ ಪ್ರವಾಸಿಗರನ್ನು ಸೆಳೆಯುತ್ತವೆ. ಇದಲ್ಲದೆ ಮೈಸೂರು ಮಸಾಲೆ, ಮೈಸೂರು ಪಾಕ, ಮೈಸೂರು ಮಲ್ಲಿಗೆ, ಮೈಸೂರು ಪೇಟ, ಮೈಸೂರು ವೀಳ್ಯದೆಲೆ, ಮೈಸೂರು ರೇಷ್ಮೆ ಸೀರೆ ಸೇರಿದಂತೆ ಹತ್ತು ಹಲವು ವಿಶೇಷತೆಗಳನ್ನು ಹೊಂದಿದೆ.
ಇಲ್ಲಿ ಸದಾ ಆಹ್ಲಾದಕರ ವಾತಾವರಣ
ಸಮುದ್ರ ಮಟ್ಟದಿಂದ ಸುಮಾರು 2525 ಅಡಿ ಎತ್ತರದಲ್ಲಿ ನಗರವಿರುವುದರಿಂದ ಬೇಸಿಗೆಯಲ್ಲಿ ಹೆಚ್ಚು ಸೆಖೆಯೂ ಇಲ್ಲದೆ, ಚಳಿಗಾಲದಲ್ಲಿ ಹೆಚ್ಚು ಚಳಿಯೂ ಇಲ್ಲದೆ ಆಹ್ಲಾದಕರ ವಾತಾವರಣದಿಂದ ಕೂಡಿರುತ್ತದೆ. ಇದು ಕೂಡ ಎಲ್ಲ ದಿನಗಳಲ್ಲಿಯೂ ಪ್ರವಾಸಿಗರನ್ನು ಸೆಳೆಯಲು ಕಾರಣವಾಗಿದೆ.
ಇದೆಲ್ಲದರ ನಡುವೆ ಒಂದಷ್ಟು ಕುತೂಹಲವೂ ನಮ್ಮನ್ನು ಕಾಡದಿರದು, ಇವತ್ತಿನ ಸುಂದರ ಮೈಸೂರು ಹಿಂದೆ ಹೇಗಿದ್ದರಬಹುದು? ಮೈಸೂರು ಹೆಸರು ಹೇಗೆ ಬಂದಿರಬಹುದು? ಹಲವು ಪ್ರಶ್ನೆಗಳು ಕಾಡದಿರದು. ಇದೆಲ್ಲವನ್ನು ತಿಳಿಯಬೇಕಾದರೆ ನಾವು ಇತಿಹಾಸ ಮಾತ್ರವಲ್ಲ ಪೌರಾಣಿಕ ಯುಗಕ್ಕೂ ಹೋಗಬೇಕಾಗುತ್ತದೆ.
ಮಹಿಷನಿದ್ದ ಊರು ಮೈಸೂರಾಯಿತು
ಪುರಾಣದ ಕಥೆಯ ಪ್ರಕಾರ ಪೌರಾಣಿಕ ಯುಗದಲ್ಲಿ ಮಹಿಷಾಸುರನೆಂಬ ಅಸುರ ಇಲ್ಲಿದ್ದ. ಆತ ತನ್ನ ತಪಸ್ಸಿನ ಮೂಲಕ ಶಿವನಿಂದ ಅಧಿಕ ಶಕ್ತಿಯನ್ನು ಪಡೆದಿದ್ದನಂತೆ. ಹೀಗಾಗಿ ದೇವತೆಗಳು ಸೇರಿದಂತೆ ಜನರಿಗೆ ವಿವಿಧ ರೀತಿಯ ತೊಂದರೆ ನೀಡಿ ಹಿಂಸಿಸುತ್ತಿದ್ದನಂತೆ. ಈತನ ಉಪಟಳ ತಾಳಲಾರದೆ ಜನರು ಶ್ರೀ ಚಾಮುಂಡೇಶ್ವರಿಯಲ್ಲಿ ಮೊರೆಯಿಟ್ಟರಂತೆ. ಆಗ ಚಾಮುಂಡೇಶ್ವರಿ ಮಹಿಷಾಸುರನೊಂದಿಗೆ ಯುದ್ಧ ಮಾಡಿದಳಂತೆ. ಆದರೆ ಯುದ್ಧದ ಸಮಯದಲ್ಲಿ ಆತನ ದೇಹದಿಂದ ಒಂದು ತೊಟ್ಟು ರಕ್ತ ಬಿದ್ದರೂ ಆ ನೆಲದಿಂದ ಸಹಸ್ರ ರಾಕ್ಷಸರು ಹುಟ್ಟುತ್ತಿದ್ದರಂತೆ. ಮಹಿಷಾಸುರನ ಈ ಶಕ್ತಿ ತಿಳಿದ ಚಾಮುಂಡೇಶ್ವರಿಯ ಸಹೋದರಿ ಉತ್ತನಳಮ್ಮ ತನ್ನ ವಿಶಾಲವಾದ ನಾಲಿಗೆಯನ್ನು ಚಾಚಿ ಆತನ ರಕ್ತ ನೆಲಕ್ಕೆ ಬೀಳದಂತೆ ನೋಡಿಕೊಂಡಳಂತೆ.
ದಸರಾ ಗಜಪಡೆ ಜತೆ ಈ ಬಾರಿ ಮಾವುತರ ಕುಟುಂಬಕ್ಕಿಲ್ಲ ಅವಕಾಶ
ಹತ್ತನೇ ಶತಮಾನದಿಂದಲೂ ಮೈಸೂರು ಎಂದು ಕರೆಸಿಕೊಂಡಿದೆ
ಆ ಸಂದರ್ಭ ಚಾಮುಂಡೇಶ್ವರಿ ಉಗ್ರರೂಪ ತಾಳಿ ಮಹಿಷಾಸುರನನ್ನು ಸಂಹರಿಸಿದಳಂತೆ. ಇವತ್ತಿಗೂ ನಾವು ಚಾಮುಂಡಿ ಬೆಟ್ಟವನ್ನು ದೂರದಿಂದ ಸೂಕ್ಷ್ಮವಾಗಿ ಗಮನಿಸಿದರೆ ಮಹಿಷಾಸುರ ಮಲಗಿದಂತೆ ಗೋಚರಿಸುತ್ತದೆ. ಮಹಿಷಾಸುರ ನೆಲೆಸಿದ ಊರು "ಮಹಿಷೂರು" ಆಯಿತೆಂದೂ ಕ್ರಮೇಣ ಬಾಯಿಯಿಂದ ಬಾಯಿಗೆ ಮೈಸೂರಾಗಿ ಬದಲಾಯಿತೆಂದು ಹೇಳಲಾಗುತ್ತಿದೆ.
ಹತ್ತನೇ ಶತಮಾನದಿಂದಲೂ ಮೈಸೂರು ಎಂದೇ ಕರೆಯುತ್ತಾ ಬರಲಾಗಿದೆ. ಮೈಸೂರು ನಗರ ಮತ್ತು ಸುತ್ತಮುತ್ತ ದೊರೆತ ಹಳೆಯ ಶಾಸನಗಳ ಪ್ರಕಾರ ಸುಮಾರು 70 ಹಳ್ಳಿಗಳಿಂದ ಕೂಡಿ "ಮೈಸೂರು ನಾಡು" ಎಂದು ಕರೆಯಲ್ಪಡುತ್ತಿತ್ತು ಎಂದು ಹೇಳಲಾಗಿದೆ.
ದಸರಾ ಸಂಭ್ರಮಕ್ಕೆ ಕೊರೊನಾದ ಭಯ
ಪ್ರತಿ ವರ್ಷವೂ ಮೈಸೂರಿನಲ್ಲಿ ಈ ವೇಳೆಗೆ ಎಲ್ಲೆಂದರಲ್ಲಿ ಸಂಭ್ರಮ ಮನೆ ಮಾಡುತ್ತಿತ್ತು. ಪ್ರತಿ ಮನೆಮನೆಗಳಲ್ಲಿ ದಸರಾ ಸಡಗರ ಎದ್ದು ಕಾಣುತ್ತಿತ್ತು. ಪ್ರವಾಸಿಗರು ನಗರದ ಪ್ರವಾಸಿ ತಾಣಗಳು, ಮಾರುಕಟ್ಟೆ ಪ್ರದೇಶ, ಹೋಟೆಲ್ ಗಳಲ್ಲಿ ಗುಂಪು ಗುಂಪಾಗಿ ಕಾಣುತ್ತಿದ್ದರು. ಆದರೆ ಕೊರೊನಾ ಸೋಂಕಿನಿಂದಾಗಿ ದಸರಾ ಕಳೆಗುಂದಿದೆ. ಸಂಪ್ರದಾಯದಂತೆ ಸರಳವಾಗಿ ಆಚರಣೆಯಾಗುತ್ತಿರುವುದರಿಂದ ದಸರಾ ಕೇವಲ ಅರಮನೆಗಷ್ಟೆ ಈ ಬಾರಿ ಸೀಮಿತವಾಗಿದೆ.
ದಸರಾ ನೆಪದಲ್ಲಿ ಪ್ರವಾಸಿಗರು ನಗರಕ್ಕೆ ಬರುವುದಾಗಲೀ, ಗುಂಪು ಸೇರುವುದಾಗಲೀ ಈಗಿನ ಪರಿಸ್ಥಿತಿಯಲ್ಲಿ ಸೂಕ್ತವಲ್ಲ. ಹೀಗಾಗಿ ಜನ ಈ ಬಾರಿ ದಸರಾ ಸಂಭ್ರಮದಲ್ಲಿ ಪಾಲ್ಗೊಂಡಿಲ್ಲವಲ್ಲ ಎಂದು ಬೇಸರ ಪಡುವುದಕ್ಕಿಂತ ತಮ್ಮ ಆರೋಗ್ಯದ ದೃಷ್ಟಿಯಿಂದ ಎಲ್ಲವನ್ನು ತ್ಯಾಗ ಮಾಡಲೇ ಬೇಕಾಗಿದೆ. ಎಲ್ಲವೂ ಸರಿ ಹೋದರೆ ಮತ್ತೆ ಮುಂದಿನ ವರ್ಷ ದಸರಾದಲ್ಲಿ ಸಂಭ್ರಮಿಸಿದರಾಯಿತು...!