ಪವರ್ ಕಟ್ಗೆ ಕಾರಣ Coal ಮಣ್ಣು ಮಸಿ ಅಲ್ಲ, ಪೇಮೆಂಟ್ ಕಟ್
ಬೆಂಗಳೂರು, ಏ. 28: ದೇಶಾದ್ಯಂತ ವಿದ್ಯುತ್ ಕಡಿತದ ಸಮಸ್ಯೆ ವಿಪರೀತವಾಗಿದೆ, ವಿವಿಧ ಮೂಲಗಳಿಂದ ವಿದ್ಯುತ್ ಉತ್ಪಾದನೆ ನಡೆಯುತ್ತಿರುವ ಕರ್ನಾಟಕದಂಥ ಕೆಲ ರಾಜ್ಯಗಳನ್ನ ಬಿಟ್ಟರೆ ಇಡೀ ದೇಶ ಬೇಸಿಗೆಯ ಆರಂಭದಿಂದಲೇ ವಿದ್ಯುತ್ ಅಭಾವದಿಂದ ಬಳಲುತ್ತಿದೆ. ಕಲ್ಲಿದ್ದಲು ಪೂರೈಕೆ (Coal Supply) ಇಲ್ಲದ ಕಾರಣ ವಿದ್ಯುತ್ ಉತ್ಪಾದನೆ ಆಗುತ್ತಿಲ್ಲ. ಇದು ಪವರ್ ಬಿಕ್ಕಟ್ಟಿಗೆ ಕಾರಣ ಎಂಬ ಮಾತು ಬಲವಾಗಿ ಕೇಳಿಬರುತ್ತಿರುವುದು ಹೌದು. ಆದರೆ, ವಾಸ್ತವ ಇನ್ನೂ ಸ್ವಲ್ಪ ಭಿನ್ನವಾಗಿದೆ.
ಮನಿ ಕಂಟ್ರೋಲ್ನಲ್ಲಿ ಬಂದಿರುವ ವರದಿ ಪ್ರಕಾರ, ದೇಶದಲ್ಲಿ ವಿದ್ಯುತ್ ಸಮಸ್ಯೆಗೆ ಪ್ರಮುಖ ಕಾರಣ ಕಲ್ಲಿದ್ದಲು ಕೊರತೆಯದ್ದಲ್ಲ. ಬದಲಾಗಿ ಕಲ್ಲಿದ್ದಲು ಪೂರೈಕೆಯಿಂದ ವಿದ್ಯುತ್ ಪೂರೈಕೆವರೆಗಿನ ಸರಣಿಯಲ್ಲಿ ಹಣದ ಹರಿವು ಸ್ಥಗಿತಗೊಂಡಿರುವುದು ಈ ಸಮಸ್ಯೆಗೆ ಕಾರಣ ಎನ್ನಲಾಗಿದೆ. ಅಂದರೆ, ಕಲ್ಲಿದ್ದಲು ಪೂರೈಕೆ ಮಾಡುವ ಸಂಸ್ಥೆಗೆ (Coal India Company) ವಿದ್ಯುತ್ ಉತ್ಪಾದನೆ ಕಂಪನಿಗಳು (Power Generation Companies) ಸಾವಿರಾರು ಕೋಟಿ ರೂ ಹಣ ಬಾಕಿ ಉಳಿಸಿಕೊಂಡಿವೆ. ಇನ್ನು ವಿದ್ಯುತ್ ಉತ್ಪಾದನೆ ಕಂಪನಿಗಳಿಗೆ ವಿದ್ಯುತ್ ಪೂರೈಕೆ ಕಂಪನಿಗಳು (Discoms - Power Distribution Companies) ಲಕ್ಷಗಟ್ಟಲೆ ಹಣ ಬಾಕಿ ಉಳಿಸಿಕೊಂಡಿವೆ. ಈ ಡಿಸ್ಕಾಂಗಳಂತೂ ನಷ್ಟ ಮಾಡಿಕೊಂಡು ಒದ್ದಾಡುತ್ತಿವೆ.
ಅಂಕಿ ಅಂಶಗಳನ್ನ ಗಮನಿಸುವುದಾದರೆ ವಿದ್ಯುತ್ ಉತ್ಪಾದನೆ ಕಂಪನಿಗಳು ಕೋಲ್ ಇಂಡಿಯಾ ಸಂಸ್ಥೆಗೆ ಕೊಡಬೇಕಾಗಿರುವ ಬಾಕಿ ಹಣ 12,300 ಕೋಟಿ ರೂ. ವಿದ್ಯುತ್ ಪೂರೈಕೆ ಕಂಪನಿಗಳಿಂದ ಪವರ್ ಜನರೇಟರ್ ಕಂಪನಿಗಳಿಗೆ ಬರಬೇಕಿರುವ ಬಾಕಿ ಮೊತ್ತ ಬರೋಬ್ಬರಿ 1.1 ಲಕ್ಷ ಕೋಟಿ ರೂ.

ಬೇರೆ ಬೇರೆ ಕಾರಣಗಳಿಂದಾಗಿ 5 ಲಕ್ಷ ಕೋಟಿ ನಷ್ಟ
ಇದೇ ವೇಳೆ, ವಿದ್ಯುತ್ ಪೂರೈಕೆ ಕಂಪನಿಗಳು ಬೇರೆ ಬೇರೆ ಕಾರಣಗಳಿಂದಾಗಿ 5 ಲಕ್ಷ ಕೋಟಿ ನಷ್ಟ ಅನುಭವಿಸಿವೆ. ಇದರಲ್ಲಿ ವಿವಿಧ ಸರಕಾರಗಳು ಜನರಿಗೆ ನೀಡುವ ವಿದ್ಯುತ್ ಸಬ್ಸಿಡಿ, ವಿದ್ಯುತ್ ದರ ಏರಿಕೆ ಆಗದಿರುವುದು ಇತ್ಯಾದಿ ಕಾರಣಗಳು ಸೇರಿವೆ. ಆದರೂ ಈ ಡಿಸ್ಕಾಂಗಳು ಗ್ರಾಹಕರಿಗೆ ಕೈಲಾದಷ್ಟು ವಿದ್ಯುತ್ ಪೂರೈಕೆ ಮಾಡುತ್ತಿವೆ.
ಇದು ಭಾರತದ ವಿದ್ಯುತ್ ವಲಯವನ್ನು ಕಾಡುತ್ತಿರುವ ಸಮಸ್ಯೆ. ಕಲ್ಲಿದ್ದಲು ಪೂರೈಕೆ ಇಲ್ಲದೇ ಅನೇಕ ವಿದ್ಯುತ್ ಉತ್ಪಾದನೆ ಕಂಪನಿಗಳ ಘಟಕಗಳಲ್ಲಿ ಕೆಲಸಗಳೇ ಸ್ಥಗಿತಗೊಂಡಿವೆ. ಹೀಗಾಗಿ, ಕಲ್ಲಿದ್ದಲು ಪೂರೈಕೆ ಇಲ್ಲದಿರುವುದು ಪವರ್ ಸಮಸ್ಯೆಗೆ ಕಾರಣ ಎಂದು ಮೇಲ್ನೋಟಕ್ಕೆ ತೋರುತ್ತದೆ. ಸಮಸ್ಯೆಯನ್ನ ಇನ್ನಷ್ಟು ಆಳವಾಗಿ ನೋಡಿದಾಗ ಇಲ್ಲಿ ವಿದ್ಯುತ್ ವಲಯದ ಪೂರೈಕೆ ಸರಪಳಿಯಲ್ಲಿ ಹಣದ ಹರಿವು ಕತ್ತರಿಸಿಹೋಗಿರುವುದು ಎದ್ದುಕಾಣುತ್ತದೆ. ಹೀಗಾಗಿ, ಇದು ವಿದ್ಯುತ್ ಸಮಸ್ಯೆ ಅಲ್ಲ, ಕಲ್ಲಿದ್ದಲು ಸಮಸ್ಯೆಯಲ್ಲ, ಬದಲಾಗಿ ಹಣದ ಸಮಸ್ಯೆ ಎನ್ನಲಡ್ಡಿ ಇಲ್ಲ.

ಪವರ್ ಜನರೇಶನ್ ಕಂಪನಿಗಳು ಸಂಕಷ್ಟ
ಡಿಸ್ಕಾಂಗಳಿಂದ ಬಾಕಿ ಉಳಿದಿರುವ ಲಕ್ಷಕೋಟಿಯಷ್ಟು ಹಣ ಬರದೇ ಪವರ್ ಜನರೇಶನ್ ಕಂಪನಿಗಳು ಸಂಕಷ್ಟ ಎದುರಿಸುತ್ತಿವೆ. ಬ್ಯಾಂಕ್ಗಳಿಗೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗದ ಸ್ಥಿತಿ ಇದೆ. ಪರಿಣಾಮವಾಗಿ ಈ ಕಂಪನಿಗಳ ವಿರುದ್ಧ ಬ್ಯಾಂಕ್ಗಳು ನ್ಯಾಯಾಲಯದ ಮೊರೆಹೋಗುವಂತಾಗಿದೆ. ಈ ಸಪ್ಲೈ ಚೈನ್ನಲ್ಲಿ ಇರುವುದು ಸರಕಾರಿ ಸಂಸ್ಥೆಗಳೇ.
ವಿದ್ಯುತ್ ಉತ್ಪಾದನೆ ಕಂಪನಿಗಳು ಹಣ ಪಾವತಿ ಮಾಡಿದರೆ ಮಾತ್ರ ಕೋಲ್ ಇಂಡಿಯಾ ಸಂಸ್ಥೆ ಕಲ್ಲಿದ್ದಲು ಪೂರೈಸುತ್ತಿರುವಂತಿದೆ. ಬಹಳಷ್ಟು ಹಣ ಬಾಕಿ ಉಳಿಸಿಕೊಂಡ ಪವರ್ ಜನರೇಶನ್ ಕಂಪನಿಗಳನ್ನ ಬ್ಲ್ಯಾಕ್ ಲಿಸ್ಟ್ಗೆ ಹಾಕಿರುವುದು ತಿಳಿದುಬಂದಿದೆ. ಮನಿ ಕಂಟ್ರೋಲ್ ವರದಿಯಲ್ಲಿ ಈ ಬಗ್ಗೆ ಕೋಲ್ ಇಂಡಿಯಾದಿಂದ ಯಾವುದೇ ಸ್ಪಷ್ಟನೆ ಬಂದಿಲ್ಲವೆಂದು ಬರೆಯಲಾಗಿದೆ.

ದೇಶದಲ್ಲಿ ಈಗ ವಿದ್ಯುತ್ಗೆ ಬೇಡಿಕೆ ದಾಖಲೆ
ದೇಶದಲ್ಲಿ ಈಗ ವಿದ್ಯುತ್ಗೆ ಬೇಡಿಕೆ ದಾಖಲೆ ಮಟ್ಟಕ್ಕೆ ಏರಿದೆ. ಮೊನ್ನೆಗೆ, ಅಂದರೆ ಏಪ್ರಿಲ್ 26ಕ್ಕೆ ವಿದ್ಯುತ್ಗೆ ಬೇಡಿಕೆ 201 ಗಿಗಾವ್ಯಾಟ್ ಮುಟ್ಟಿದೆ. ಬೇಸಿಗೆಯ ಉಚ್ಛ್ರಾಯ ಅವಧಿಯಾದ ಮೇ-ಜೂನ್ ತಿಂಗಳಲ್ಲಿ ಇದು 220 ಗಿಗಾ ವ್ಯಾಟ್ ತಲುಪಬಹುದು ಎಂದು ಸರಕಾರ ನಿರೀಕ್ಷಿಸಿದೆ.
ವಿದ್ಯುತ್ಗೆ ಹೆಚ್ಚುತ್ತಿರುವ ಬೇಡಿಕೆಯು ದೇಶದಲ್ಲಿ ಆರ್ಥಿಕ ಬೆಳವಣಿಗೆ ಆಗುತ್ತಿರುವುದರ ಕೈಗನ್ನಡಿಯಾಗಿದೆ ಎಂದು ಕೇಂದ್ರ ವಿದ್ಯುತ್ ಸಚಿವಾಲಯ ಒಂದು ಹೇಳಿಕೆ ಕೊಟ್ಟಿದೆ. ಕೋವಿಡ್ ವೇಳೆ ಮುರುಟಿಹೋಗಿದ್ದ ದೇಶದ ಹಲವು ಉದ್ಯಮಗಳು ಎರಡು ವರ್ಷಗಳ ಬಳಿಕ ಹೊಸ ಶಕ್ತಿಯೊಂದಿಗೆ ಚೇತರಿಸಿಕೊಳ್ಳತೊಡಗಿವೆ. ಹೀಗಾಗಿ, ವಿದ್ಯುತ್ಗೆ ಬೇಡಿಕೆ ಇಷ್ಟು ಹೆಚ್ಚಾಗಿದೆ. ಇದು ಆರ್ಥಿಕತೆ ಬೆಳವಣಿಗೆ ಸಾಧಿಸುತ್ತಿರುವ ಸಂಕೇತ ಹೌದೆಂದರೆ ತಪ್ಪೇನಿಲ್ಲ.
Recommended Video

ವಿದ್ಯುತ್ ಸಮಸ್ಯೆಗೆ ಪರಿಹಾರ ಏನು?:
ಕಲ್ಲಿದ್ದಲು ಪೂರೈಕೆಯಿಂದ ಹಿಡಿದು ವಿದ್ಯುತ್ ಪ್ರಸರಣದವರೆಗೆ ಇರುವ ಸಪ್ಲೈ ಚೈನ್ನಲ್ಲಿ ಹಣದ ಹರಿವು ಸರಾಗವಾಗಿ ನಡೆಯಬೇಕು. ಡಿಸ್ಕಾಂಗಳ ನಷ್ಟವನ್ನು ಸರಕಾರವೇ ಭರಿಸುವುದು ಒಂದು ಪರಿಹಾರವಾದರೆ, ವಿದ್ಯುತ್ ಮೇಲಿನ ಸಬ್ಸಿಡಿ, ಉಚಿತ ಪೂರೈಕೆ ಇತ್ಯಾದಿ ಜನಪ್ರಿಯ ನಿರ್ಧಾರಗಳನ್ನ ಕೈಬಿಡುವುದು ಇನ್ನೊಂದು ಪರಿಹಾರ. ಸರಕಾರ ವಿದ್ಯುತ್ಗೆ ಸಬ್ಸಿಡಿ ಕೊಟ್ಟರೆ ಸರಿಯಾದ ಸಮಯಕ್ಕೆ ಪ್ರಸರಣ ಕಂಪನಿಗಳಿಗೆ ಹಣದ ಪಾವತಿ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಸಪ್ಲೈ ಚೈನ್ ಒತ್ತಡಕ್ಕೆ ಸಿಲುಕುತ್ತದೆ ಎಂಬುದು ತಜ್ಞರ ಅನಿಸಿಕೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications