Explained: ಭಾರತದಲ್ಲಿ ಕೊರೊನಾ ಲಸಿಕೆ ವ್ಯರ್ಥಕ್ಕೆ ಕಾರಣವೇನು?
ನವದೆಹಲಿ, ಮಾರ್ಚ್ 19: ಭಾರತದಾದ್ಯಂತ ಕೊರೊನಾವೈರಸ್ ನಿಯಂತ್ರಿಸಲು ನೀಡುತ್ತಿರುವ ಪ್ರತಿ ರಾಜ್ಯಗಳಿಗೂ 7 ಕೋಟಿ ಡೋಸ್ ಲಸಿಕೆಯನ್ನು ರವಾನಿಸಲಾಗಿದೆ. ಆದರೆ ಈ ಲಸಿಕೆ ಪೈಕಿ ಶೇ.6.5ರಷ್ಟು ಡೋಸ್ ಲಸಿಕೆಗಳು ವ್ಯರ್ಥವಾಗುತ್ತಿವೆ ಎಂದು ತಿಳಿದು ಬಂದಿದೆ.
ದೇಶದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರು, 45 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರೂ ಸೇರಿದಂತೆ 3.93 ಕೋಟಿ ಫಲಾನುಭವಿಗಳಿಗೆ ಲಸಿಕೆ ವಿತರಣೆ ಮಾಡಲಾಗಿದೆ. ಈ ಅವಧಿಯಲ್ಲೇ 23 ಲಕ್ಷ ಡೋಸ್ ಕೊರೊನಾವೈರಸ್ ಲಸಿಕೆಯ ವ್ಯರ್ಥವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರದಿಂದ ಕಳುಹಿಸಿದ 7 ಕೋಟಿ ಡೋಸ್ ಕೊವಿಡ್-19 ಲಸಿಕೆಯ ಪೈಕಿ ಶೇ. 6.5ರಷ್ಟು ಲಸಿಕೆಯು ಉಪಯೋಗವಾಗದೇ ವ್ಯರ್ಥವಾಗಿದೆ. ಈ ಹಿನ್ನೆಲೆ ಲಸಿಕೆಗಳ ಸದುಪಯೋಗದ ಬಗ್ಗೆ ರಾಜ್ಯ ಸರ್ಕಾರಗಳಿಗೆ ಸಲಹೆ ಸೂಚನೆ ಜೊತೆಗೆ ಎಚ್ಚರಿಕೆಯನ್ನು ನೀಡಲಾಗಿದೆ. ದೇಶದಲ್ಲಿ ಕೊರೊನಾವೈರಸ್ ಲಸಿಕೆ ವ್ಯರ್ಥವಾಗಿದ್ದು ಹೇಗೆ, ಲಸಿಕೆ ವ್ಯರ್ಥವಾಗುವುದನ್ನು ತಡೆಯಲು ಏನು ಮಾಡಬೇಕು ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆ ವಿತರಣೆ
ಭಾರತದಲ್ಲಿ ಎರಡು ಮಾದರಿಯ ಕೊರೊನಾವೈರಸ್ ಲಸಿಕೆ ವಿತರಣೆಗೆ ಅನುಮೋದನೆ ನೀಡಲಾಗಿದೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಂಶೋಧಿಸಿದ ಮತ್ತು ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸಿದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯಲ್ಲಿ ಉತ್ಪಾದಿಸಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜನವರಿ 16ರಂದು ಪ್ರಧಾನಿ ನರೇಂದ್ರ ಮೋದಿ ಮೊದಲು ಕೊರೊನಾವೈರಸ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಫೆಬ್ರವರಿ.2ರಿಂದ ಎರಡನೇ ಡೋಸ್ ಲಸಿಕೆಯ ವಿತರಣೆ ಕಾರ್ಯಾರಂಭ ಮಾಡಲಾಗಿತ್ತು. ಅದಾಗಿ ಮಾರ್ಚ್ 1 ರಿಂದ ದೇಶಾದ್ಯಂತ ಎರಡನೇ ಹಂತದ ಲಸಿಕೆ ವಿತರಣೆ ಕಾರ್ಯ ನಡೆಸಲಾಗುತ್ತಿದೆ.

ಲಸಿಕೆಯ ಒಂದು ಸೀಸೆಯಲ್ಲಿ ಎಷ್ಟಿರುತ್ತೆ ಲಸಿಕೆ?
ಕೊವಿಶೀಲ್ಡ್ ಲಸಿಕೆಯ ಒಂದು ಸೀಸೆಯಲ್ಲಿ ಒಟ್ಟು 10 ಡೋಸ್(5ಎಂಎಲ್) ಲಸಿಕೆ ಇರುತ್ತದೆ. ಅದೇ ರೀತಿ ಕೊವ್ಯಾಕ್ಸಿನ್ ಲಸಿಕೆಯ ಒಂದು ಸೀಸೆಯಲ್ಲಿ 20 ಡೋಸ್(10 ಎಂಎಲ್) ಲಸಿಕೆ ಇರುತ್ತದೆ. ಒಬ್ಬ ಫಲಾನುಭವಿಗೆ ಒಂದು ಡೋಸ್ ಎಂದರೆ 0.5 ಎಂಎಲ್ ಲಸಿಕೆ ನೀಡಲಾಗುತ್ತದೆ.

ಲಸಿಕೆ ವ್ಯರ್ಥ ಆಗಲು ನಿಜವಾದ ಕಾರಣವೇನು?
ಕೊರೊನಾವೈರಸ್ ಸೋಂಕು ನಿಯಂತ್ರಿಸುವುದಕ್ಕಾಗಿ ವಿತರಿಸುತ್ತಿರುವ ಲಸಿಕೆ ಬಹಳ ಪರಿಣಾಮಕಾರಿ ಆಗಿರುತ್ತದೆ. ಸಾಮಾನ್ಯ ಲಸಿಕೆಯಂತೆ ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಲಸಿಕೆಯ ಸೀಸೆಯನ್ನು ತೆರೆದು ಇಡುವುದಕ್ಕೆ ಸಾಧ್ಯವಿಲ್ಲ. ಒಂದು ಬಾರಿ ಲಸಿಕೆಯ ಸೀಸೆಯನ್ನು ತೆರೆದ ನಂತರದ ನಾಲ್ಕು ಗಂಟೆಯಲ್ಲೇ ಅದನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳಬೇಕು. ನಾಲ್ಕು ಗಂಟೆಗಳ ನಂತರದಲ್ಲಿ ಆ ಲಸಿಕೆಯನ್ನು ಮತ್ತೆ ಬಳಸುವುದಕ್ಕೆ ಬರುವುದಿಲ್ಲ. ಇದರಿಂದಾಗಿ ಲಸಿಕೆಯು ವ್ಯರ್ಥವಾಗುತ್ತಿದೆ.

ಕೊವಿಡ್-19 ಲಸಿಕೆ ಹೇಗೆ ವ್ಯರ್ಥವಾಗುತ್ತಿದೆ ಗೊತ್ತೆ?
ನವದೆಹಲಿಯ ಲೋಕನಾಯಕ ಜಯಪ್ರಕಾಶ್ ನಾರಾಯಣ ಸರ್ಕಾರಿ ಆಸ್ಪತ್ರೆಯಲ್ಲಿ ದಿನದ 24 ಗಂಟೆಗಳ ಕಾಲವೂ ಕೊರೊನಾವೈರಸ್ ಲಸಿಕೆ ವಿತರಣೆ ಮಾಡಲಾಗುತ್ತಿದೆ. ಇದೇ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸುರೇಶ್ ಕುಮಾರ್ ಲಸಿಕೆ ವ್ಯರ್ಥದ ಬಗ್ಗೆ ಮಾತನಾಡಿದ್ದಾರೆ. "ಸಂಜೆ 6 ಗಂಟೆ ಸುಮಾರಿಗೆ ಇಬ್ಬರಿಗೆ ಕೊರೊನಾವೈರಸ್ ಲಸಿಕೆ ನೀಡಬೇಕಾದಲ್ಲಿ ನಾವು 5 ಎಂಎಲ್ ಇರುವ ಲಸಿಕೆಯ ಸೀಸೆಯನ್ನು ತೆರೆಯಬೇಕಾಗುತ್ತದೆ. ಅದಾದ ನಂತರದಲ್ಲಿ ಲಸಿಕೆ ಪಡೆದುಕೊಳ್ಳುವವರೇ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಅನಿವಾರ್ಯವಾಗಿ ನಾವು ಸೀಸೆಯಲ್ಲಿ ಉಳಿದ ಲಸಿಕೆಯನ್ನು ನಾಶಪಡಿಸಬೇಕಾಗುತ್ತದೆ" ಎಂದಿದ್ದಾರೆ.

ಒಂದು ಸೀಸೆಯಲ್ಲಿ ಒಂದು ಡೋಸ್ ಲಸಿಕೆ ಸಾಧ್ಯವಿಲ್ಲ
ಒಂದೇ ಡೋಸ್ ಲಸಿಕೆಯ ಸೀಸೆಯನ್ನು ಸಿದ್ಧಪಡಿಸದರೂ ಅದು ಅಷ್ಟೊಂದು ಪರಿಣಾಮಕಾರಿ ಆಗಿರುವುದಿಲ್ಲ. ಕೇವಲ 0.5ಎಂಎಲ್ ಲಸಿಕೆ ಹೊಂದಿರುವ ಸೀಸೆಯನ್ನು ತಯಾರಿಸುವುದು ಮತ್ತು ಸರಬರಾಜು ಮಾಡುವುದು ಎರಡೂ ದೊಡ್ಡ ಸವಾಲಾಗುತ್ತದೆ. ಹೀಗಾಗಿ ಸಾರ್ವಜನಿಕರೇ ಕೊರೊನಾ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕಿದೆ ಎಂದು ನವದೆಹಲಿ ಲೋಕನಾಯಕ ಜಯಪ್ರಕಾಶ್ ನಾರಾಯಣ ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಕೊವಿಡ್ ಲಸಿಕೆ ವ್ಯರ್ಥ ಆಗುವುದನ್ನು ತಪ್ಪಿಸುವುದು ಹೇಗೆ?
ಜಗತ್ತಿನಲ್ಲೇ ಕಡಿಮೆ ಅವಧಿಯಲ್ಲಿ ಅತಿಹೆಚ್ಚು ಕೊರೊನಾವೈರಸ್ ಲಸಿಕೆ ವಿತರಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೇ ಅಗ್ರಸ್ಥಾನದಲ್ಲಿದೆ. ಅಂಕಿ-ಸಂಖ್ಯೆಗಳ ಹೊರತಾಗಿ ಲಸಿಕೆ ವಿತರಣೆ ವೇಗವನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊರೊನಾವೈರಸ್ ಲಸಿಕೆ ವಿತರಣೆ ಕೇಂದ್ರವನ್ನು ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲೇ ತೆರೆಯಬೇಕು. ಒಂದು ಬಾರಿ ಲಸಿಕೆಯ ಸೀಸೆಯನ್ನು ತೆರೆದ ನಂತರ ಆ ಲಸಿಕೆಯನ್ನು ನಾಶಪಡಿಸದಂತೆ ಎಚ್ಚರಿಕೆ ವಹಿಸಬೇಕು. ಅಗತ್ಯ ಬಿದ್ದಲ್ಲಿ ಲಸಿಕೆಯನ್ನು ನಾಶಪಡಿಸುವುದಕ್ಕಿಂತ ಅರ್ಹತಾ ಪಟ್ಟಿಯಲ್ಲಿ ಹೆಸರು ಇಲ್ಲವರಿಗೂ ಲಸಿಕೆ ನೀಡಿದರೆ ಉತ್ತಮವಾಗಿರುತ್ತದೆ ಎಂದು ಸಾರ್ವಜನಿಕ ಆರೋಗ್ಯ ತಜ್ಞ ದಿಲೀಪ್ ಅವರು ತಿಳಿಸಿದ್ದಾರೆ.

ಕೊರೊನಾ ಸಕ್ರಿಯ ಪ್ರಕರಣ ಹೆಚ್ಚಿರುವ ಜಿಲ್ಲೆಯಲ್ಲಿ ಲಸಿಕೆ
ಭಾರತದಲ್ಲಿ ಒಂದು ಲೆಕ್ಕಾಚಾರದ ಮೇಲೆ ಕೊರೊನಾವೈರಸ್ ಲಸಿಕೆ ವಿತರಣೆ ಮಾಡಲಾಗುತ್ತದೆ. ಇದರ ಹೊರತಾಗಿ ಜಿಲ್ಲಾವಾರು ಲೆಕ್ಕಾಚಾರದ ಮೇಲೆ ಲಸಿಕೆ ವಿತರಣೆಗೆ ಆದ್ಯತೆ ನೀಡಬೇಕಿದೆ. ದೇಶದ 50 ಜಿಲ್ಲೆಗಳಲ್ಲೇ ಶೇ.60ರಷ್ಟು ಕೊರೊನಾವೈರಸ್ ಸಕ್ರಿಯ ಪ್ರಕರಣಗಳಿವೆ. ಈ ಜಿಲ್ಲೆಗಳಲ್ಲಿ ಲಸಿಕೆ ವಿತರಣೆ ಪ್ರಮಾಣವನ್ನು ಹೆಚ್ಚಿಸುವ ಅಗತ್ಯವಿದೆ. ಅದರಿಂದ ಕೊರೊನಾವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವುದಕ್ಕೆ ಸಾಧ್ಯವಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಲಸಿಕೆ ವಿತರಣೆ ವ್ಯಾಪ್ತಿ ವಿಸ್ತರಿಸುವ ಬಗ್ಗೆ ಚರ್ಚೆ
ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವ್ಯರ್ಥವಾಗುತ್ತಿರುವುದನ್ನು ತಪ್ಪಿಸುವುದಕ್ಕಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಪ್ರಸ್ತುತ ದುರ್ಬಲ ಗುಂಪನ್ನು ಗಮನದಲ್ಲಿಟ್ಟುಕೊಂಡು ಲಸಿಕೆ ವಿತರಣೆಯಲ್ಲಿ ಮೊದಲು ಅವರಿಗೆ ಆದ್ಯತೆ ನೀಡಲಾಗುತ್ತಿದೆ. ಅದರ ವ್ಯಾಪ್ತಿ ವಿಸ್ತರಿಸಿದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದ್ದು, ಸರ್ಕಾರ ಆ ಬಗ್ಗೆ ನಂತರದಲ್ಲಿ ಯೋಜನೆ ಹಾಕಿಕೊಳ್ಳಲಿದೆ ಎಂದು ಆರೋಗ್ಯ ಸಚಿವಾಲಯದ ಮೂಲಗಳಿಂದ ತಿಳಿದು ಬಂದಿದೆ.

ಭಾರತದ ಯಾವ ರಾಜ್ಯದಲ್ಲಿ ಎಷ್ಟು ಕೊರೊನಾ ಲಸಿಕೆ ವ್ಯರ್ಥ?
ರಾಜ್ಯ - ಲಸಿಕೆ ವ್ಯರ್ಥದ ಪ್ರಮಾಣ(ಶೇಕಡಾವಾರು) (Table)
ತೆಲಂಗಾಣ - ಶೇ.17.5
ಆಂಧ್ರಪ್ರದೇಶ - ಶೇ.11.6
ಉತ್ತರ ಪ್ರದೇಶ - ಶೇ.9.4
ಕರ್ನಾಟಕ - ಶೇ.6.9
ಜಮ್ಮು ಕಾಶ್ಮೀರ - ಶೇ.6.6
ರಾಷ್ಟ್ರೀಯ ಸರಾಸರಿ - ಶೇ.6.5

ದೇಶದಲ್ಲಿ ಈವರೆಗಿನ ಅದೆಷ್ಟು ಮಂದಿಗೆ ಲಸಿಕೆ ವಿತರಣೆ?
ಭಾರತದಲ್ಲಿ 62 ದಿನಗಳಲ್ಲಿ 3,89,20,259 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ. 76,19,786 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಮತ್ತು 46,92,962 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಲಾಗಿದೆ. 78,11,126 ಜನ ಮೊದಲ ಶ್ರೇಣಿ ಕಾರ್ಮಿಕರಿಗೆ ಮೊದಲ ಡೋಸ್ ಹಾಗೂ 21,50,198 ಕಾರ್ಮಿಕರಿಗೆ ಎರಡನೇ ಡೋಸ್ ಕೊವಿಡ್-19 ಲಸಿಕೆ ನೀಡಲಾಗಿದೆ. ಎರಡನೇ ಹಂತದ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಮಾರ್ಚ್ 01ರಿಂದ ಆರಂಭವಾಗಿದ್ದು, ಈವರೆಗೂ 45 ವರ್ಷಕ್ಕಿಂತ ಮೇಲ್ಪಟ್ಟ 127,27,942 ಜನರಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟ 1,39,18,245 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ.












Click it and Unblock the Notifications