ಪತ್ರಕರ್ತ- ಸಾಹಿತಿ ರವಿ ಬೆಳಗೆರೆ ನಿಧನ- 1958ರಿಂದ 2020ರ ಹಾದಿ
ಹಿರಿಯ ಪತ್ರಕರ್ತ ರವಿ ಬೆಳಗೆರೆ (62) ಶುಕ್ರವಾರ (ನವೆಂಬರ್ 13, 2020) ನಿಧನರಾಗಿದ್ದಾರೆ. ಹಾಯ್ ಬೆಂಗಳೂರ್ ವಾರಪತ್ರಿಕೆ ಹಾಗೂ ಓ ಮನಸೇ ಪಾಕ್ಷಿಕದ ಸಂಪಾದಕರಾಗಿದ್ದ ಅವರು ಪ್ರಾರ್ಥನಾ ಹೆಸರಿನ ಶಾಲೆ ನಡೆಸುತ್ತಿದ್ದರು. ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದ ರವಿ ಬೆಳಗೆರೆ ಅವರು ಕಥೆಗಾರರಾಗಿ, ಟೀವಿಗಳಲ್ಲಿ ಕಾರ್ಯಕ್ರಮ ನಿರೂಪಕರಾಗಿಯೂ ಅಷ್ಟೇ ಜನಪ್ರಿಯತೆ ಗಳಿಸಿದವರು.
Recommended Video
ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಕರ್ನಾಟಕದ ಪತ್ರಿಕೋದ್ಯಮದಲ್ಲಿ ಪ್ರತ್ಯೇಕವಾದ ಸ್ಥಾನ ಪಡೆದ ವ್ಯಕ್ತಿ ರವಿ ಬೆಳಗೆರೆ. ಇತ್ತೀಚಿನ ವರ್ಷಗಳಲ್ಲಿ ಯೂಟ್ಯೂಬ್ ನಲ್ಲೂ ಚಾನೆಲ್ ಆರಂಭಿಸಿದ್ದ ಅವರಿಗೆ ಅದರಲ್ಲೂ ಜನಪ್ರಿಯತೆ ದಕ್ಕಿತ್ತು. "ನಾನು ಗಣಿತದಲ್ಲಿ ದಡ್ಡ ಇರಬಹುದು, ಎಕನಾಮಿಕ್ಸ್ ನಲ್ಲಿ ಅಲ್ಲ," ಎಂಬುದು ಅವರು ಆಗಾಗ ಹೇಳುತ್ತಿದ್ದ ಮಾತು.
ಕನ್ನಡ ಪತ್ರಿಕೋದ್ಯಮದಲ್ಲಿ ಪಿ.ಲಂಕೇಶ್ ವಾರಪತ್ರಿಕೆ ಒಂದು ಮೈಲುಗಲ್ಲು ಎಂದು ಪರಿಗಣಿಸಲಾಗುತ್ತದೆ. ಆ ನಂತರ ಭಿನ್ನ ಹಾದಿಯಲ್ಲಿ ಓದುಗರನ್ನು ತಲುಪಲು ಯತ್ನಿಸಿ, ಯಶಸ್ಸು ಕಂಡಿದ್ದವರು ರವಿ ಬೆಳಗೆರೆ. ಕಾರ್ಗಿಲ್ ಯುದ್ಧ, ಗುಜರಾತ್ ಭೂಕಂಪ, ಅಫ್ಗಾನಿಸ್ತಾನದ ಯುದ್ಧ ಭೂಮಿ ಹಾಗೂ ಈಚಿನ ಪುಲ್ವಾಮಾ ತನಕ ಕನ್ನಡದ ಓದುಗರಿಗೆ ದೇಶ- ವಿದೇಶದ ಅತ್ಯಂತ ಸವಾಲಿನ ವರದಿ- ಸುದ್ದಿಯನ್ನು ನೀಡಿದ್ದರು.

ರವಿ ಬೆಳಗೆರೆ ಹುಟ್ಟಿದ್ದು ಮಾರ್ಚ್ 15, 1958. ತಾಯಿ ಬೆಳಗೆರೆ ಪಾರ್ವತಮ್ಮ ಹಾಗೂ ಸ್ವತಃ ರವಿ ಬೆಳಗೆರೆ ಅವರೇ ಹೇಳಿಕೊಂಡಂತೆ ತಂದೆ- ಕನ್ನಡದ ಹೆಸರಾಂತ ಸಾಹಿತಿ ಬೀಚಿ. ಚಿತ್ರದುರ್ಗದ ಚಳ್ಳಕೆರೆ, ತುಮಕೂರು, ಬಳ್ಳಾರಿ, ಧಾರವಾಡ ಹೀಗೆ ವಿವಿಧೆಡೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಅವರು ಬಳ್ಳಾರಿಯಲ್ಲಿ ಉಪನ್ಯಾಸಕರಾಗಿಯೂ ಇದ್ದರು.
ಅಲ್ಲಿ ಬಳ್ಳಾರಿ ಪತ್ರಿಕೆ ಎಂದು ಸ್ವಂತ ಪತ್ರಿಕೆ ಕೂಡ ಇತ್ತು. ಸಂಯುಕ್ತ ಕರ್ನಾಟಕ, ಲಂಕೇಶ್ ಪತ್ರಿಕೆ, ಈ ಸಂಜೆ ಸೇರಿದಂತೆ ವಿವಿಧ ಪತ್ರಿಕೆಗಳಿಗೆ ಕೆಲಸ ಮಾಡಿದ ಅವರು, 1995ರ ಸೆಪ್ಟೆಂಬರ್ 25ನೇ ತಾರೀಕು ಹಾಯ್ ಬೆಂಗಳೂರ್ ವಾರಪತ್ರಿಕೆ ಆರಂಭಿಸಿದರು. ಆ ನಂತರ ಅವರು ಟ್ರೆಂಡ್ ಸೆಟ್ಟರ್ ಆದರು. ಆ ಮೇಲೆ ಓ ಮನಸೇ ಪಾಕ್ಷಿಕ ಮಾಡಿದರು.
ಈಟಿವಿಗಾಗಿ ಅವರು ನಡೆಸಿಕೊಡುತ್ತಿದ್ದ ಕ್ರೈಂ ಡೈರಿ ಕಾರ್ಯಕ್ರಮ ರವಿ ಬೆಳಗೆರೆ ಅವರನ್ನು ಇನ್ನೊಂದು ಎತ್ತರಕ್ಕೆ ಒಯ್ದಿತು. ಇನ್ನು ಆಕಾಶವಾಣಿಗಾಗಿ ಬೆಳ್ ಬೆಳಗ್ಗೆ ಬೆಳಗೆರೆ ಎಂಬ ಕಾರ್ಯಕ್ರಮ ಮಾಡುತ್ತಿದ್ದರು. ಈಟಿವಿಗಾಗಿ ಅವರು ನಡೆಸಿಕೊಡುತ್ತಿದ್ದ ಎಂದೂ ಮರೆಯದ ಹಾಡು ಜನಪ್ರಿಯತೆಯ ಉತ್ತುಂಗಕ್ಕೆ ಏರಿಸಿತ್ತು. ಟಿ.ಎನ್. ಸೀತಾರಾಂ ಹಾಗೂ ಭಾವನಾ ಬೆಳಗೆರೆ ನಿರ್ಮಾಣದ ಧಾರಾವಾಹಿಯಲ್ಲೂ ಅವರು ಅಭಿನಯಿಸಿದ್ದರು.
ವಾರಸ್ದಾರ, ಮಾದೇಶ, ಗಂಡ- ಹೆಂಡತಿ ಸೇರಿದಂತೆ ಕನ್ನಡದ ಕೆಲ ಚಲನಚಿತ್ರಗಳಲ್ಲೂ ಅವರು ಅಭಿನಯಿಸಿದ್ದರು. ಹಾಯ್ ಬೆಂಗಳೂರ್ ಹೆಸರಿನಲ್ಲಿ ಸಿನಿಮಾವೊಂದು ಬಂದಿದ್ದು, ಅದಕ್ಕೆ ಶಶಿಕುಮಾರ್ ನಾಯಕ. ಸ್ವತಃ ರವಿ ಬೆಳಗೆರೆ ಅವರೇ ನಿರ್ದೇಶನ- ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದ ಸಿನಿಮಾ 'ಮುಖ್ಯಮಂತ್ರಿ ಐ ಲವ್ ಯೂ'. ಆ ಸಿನಿಮಾ ವಿವಾದಕ್ಕೆ ಗುರಿಯಾಗಿ ಚಿತ್ರೀಕರಣದ ನಂತರದ ಹಂತ ತಲುಪಲಿಲ್ಲ.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಒಡೆತನದ ಜನಶ್ರೀ ಚಾನೆಲ್ ನಲ್ಲಿ ಕೆಲ ಸಮಯ ಪ್ರಮುಖ ಹುದ್ದೆ ಕೂಡ ನಿರ್ವಹಿಸಿದ್ದರು ರವಿ ಬೆಳಗೆರೆ. ರವಿ ಬೆಳಗೆರೆ ಅವರಿಗೆ ಲಲಿತಾ ಬೆಳಗೆರೆ, ಯಶೋಮತಿ ಆಚಾರ್ ಇಬ್ಬರು ಪತ್ನಿಯರು. ಚೇತನಾ ಬೆಳಗೆರೆ, ಭಾವನಾ ಬೆಳಗೆರೆ, ಕರ್ಣ ಬೆಳಗೆರೆ ಹಾಗೂ ಹಿಮವಂತ್ ಬೆಳಗೆರೆ ನಾಲ್ವರು ಮಕ್ಕಳು.

ಇಪತ್ತೆರಡನೇ ವಯಸ್ಸಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಬೆಳಗೆರೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಕೋಟಾ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ, ಅನುವಾದ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಬಂದಿವೆ. ಇನ್ನು ಕಳೆದ ಸೀಸನ್ ನಲ್ಲಿ ಕನ್ನಡ ಬಿಗ್ ಬಾಸ್ ನಲ್ಲಿ ಕೂಡ ರವಿ ಬೆಳಗೆರೆ ಭಾಗವಹಿಸಿದ್ದರು.
ಕಚೇರಿಯಲ್ಲಿ 'ಬಾಸ್' ಎಂದು ಕರೆಸಿಕೊಳ್ಳುವ ರವಿ ಬೆಳಗೆರೆ, ತಮ್ಮ ನಿಧನಕ್ಕೂ ಮುನ್ನ ಪತ್ರಿಕೆಯನ್ನು ಅಚ್ಚಿಗೆ ಕಳುಹಿಸಿಕೊಟ್ಟಿದ್ದಾರೆ. ಹಾಯ್ ಬೆಂಗಳೂರ್ ಅವರಿಗೆ ಎಲ್ಲವನ್ನೂ ಕೊಟ್ಟಿತ್ತು. ಕೊರೊನಾ ಕಾರಣಕ್ಕೆ ಕೆಲ ಕಾಳ ಪತ್ರಿಕೆ ಪ್ರಕಟಣೆಯನ್ನು ಅವರು ನಿಲ್ಲಿಸಿದ್ದರು. ಆ ಮೇಲೆ ಈಚೆಗೆ ಪುನರಾರಂಭಿಸಿದ್ದರು.
ಅಂದ ಹಾಗೆ, ರವಿ ಬೆಳಗೆರೆ ಅಂದರೆ ವಿವಾದ ಸಹ ಹೊರತಾಗಿರಲಿಲ್ಲ. ತಮ್ಮ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ವರದಿಗಾರನನ್ನು ಕೊಲ್ಲಿಸಲು ಸುಪಾರಿ ನೀಡಿದ್ದರು ಎಂಬ ಆರೋಪ ಇತ್ತು. ಬ್ಲ್ಯಾಕ್ ಮೇಲರ್ ಎಂದು ಆರೋಪಿಸುತ್ತಿದ್ದರು. ನಾನಾ ಆರೋಪ ಮಾಡುತ್ತಿದ್ದರೂ ಅವರೊಬ್ಬ ಅದ್ಭುತ ಬರಹಗಾರ ಎಂಬುದನ್ನು ಎಂಥವರೂ ಒಪ್ಪುತ್ತಿದ್ದರು.
"ನೀವು ಹಣ ಮಾಡಬೇಕು ಅಂದುಕೊಂಡರೆ ಹಣ ಮಾತ್ರ ಮಾಡ್ತೀರಿ, ಹೆಸರು ಮಾಡಬೇಕು ಅಂದರೆ ಹೆಸರು, ಆದರೆ ಕೆಲಸ ಮಾಡಬೇಕು ಅಂತ ಶುರು ಮಾಡಿದರೆ ಹಣ-ಹೆಸರು ಹುಡುಕಿಕೊಂಡು ಬರುತ್ತದೆ," ಎಂಬುದು ರವಿ ಬೆಳಗೆರೆ ಹೇಳುತ್ತಿದ್ದ ಮಾತು.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications