NREGA Scheme; ಕೆಲಸಗಾರರ ಸಹಾಯಕವಾದ NMMS ಅಪ್ಲಿಕೇಶನ್
ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳುತ್ತಿದೆ. ಪ್ರತಿ ವರ್ಷ ಈ ಯೋಜನೆಗೆ ಕೋಟ್ಯಾಂತರ ರೂ. ವೆಚ್ಚ ಮಾಡುವ ಸರ್ಕಾರ ಮಾಡಿರುವ ಹೊಸ ಪ್ರಯೋಗ ಈಗ ಗಮನ ಸೆಳೆಯುತ್ತಿದೆ.
ಗ್ರಾಮೀಣ ಪ್ರದೇಶದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯು ಜನಸ್ನೇಹಿಯಾಗಿದೆ. ಈ ಯೋಜನೆ ಸಮರ್ಪಕ ಅನುಷ್ಠಾನದಲ್ಲಿ ಈಗ ಹೊಸ ಪ್ರಯೋಗವು ಗಮನ ಸೆಳೆದಿದೆ. ಯೋಜನೆಯಡಿ ಪಾರದರ್ಶಕವಾಗಿ ಕಾರ್ಯ ನಿರ್ವಹಣೆ ಮಾಡಲು ಇದು ಸಹಾಯಕವಾಗಿದೆ.
ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಅನುಷ್ಠಾನದಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳುವ ಸಲುವಾಗಿ National Mobile Monitoring ಅಪ್ಲಿಕೇಶನ್ ಸಿದ್ಧಗೊಳಿಸಿದೆ ಮತ್ತು ಇದನ್ನು ಬಳಕೆ ಮಾಡುವುದು ಕಡ್ಡಾಯ ಗೊಳಿಸಿದೆ.
ನರೇಗಾ ಯೋಜನೆ ಕಾರ್ಯ ನಿರ್ವಹಣೆ ಮಾಡುವ ಕೂಲಿಕಾರರ ಹಾಜರಾತಿ ವೇಳೆ ನಕಲಿ ಹಾಜರಾತಿ ಬಗ್ಗೆ ಹಲವು ಆರೋಪಗಳು ಕೇಳಿ ಬಂದಿದ್ದ ಹಿನ್ನೆಲೆಯಲ್ಲಿ ಈ ಅಪ್ಲಿಕೇಶನ್ ಸಿದ್ಧಪಡಿಸಲಾಗಿದೆ. ಯೋಜನೆ ಜಾರಿಗೊಳಿಸುವ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳು ಇದನ್ನು ಬಳಕೆ ಮಾಡುತ್ತಿವೆ.
ಕೇಂದ್ರ ಸರ್ಕಾರ 2021-22ರ ಬಜೆಟ್ನಲ್ಲಿ ನರೇಗಾ ಯೋಜನೆಗೆ 70 ಸಾವಿರ ಕೋಟಿ ರೂ. ಅನುದಾನ ನಿಗದಿ ಮಾಡಿತ್ತು. 2022-23ರ ಬಜೆಟ್ನಲ್ಲಿಯೂ ಅಷ್ಟೇ ಅನುದಾನ ಮೀಸಲಿಡಲಾಗಿತ್ತು. ಕೋವಿಡ್ ಸಂದರ್ಭದಲ್ಲಿ ಗ್ರಾಮ ಮಟ್ಟದಲ್ಲಿ ಈ ಯೋಜನೆ ಜನರ ನೆರವಿಗೆ ಬಂದಿತ್ತು.

ಏನು ಈ ಅಪ್ಲಿಕೇಶನ್ ಕಾರ್ಯ?
ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ನಿರ್ದೇಶನದಂತೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ವಹಿಸುವ ಕಾಮಗಾರಿಗಲ್ಲಿ ಒಂದು ಕಾಮಗಾರಿ ಸ್ಥಳದಲ್ಲಿ 20 ಅಥವ ಅದಕ್ಕಿಂತ ಹೆಚ್ಚು ಕೂಲಿಕಾರರು ಇದ್ದಲ್ಲಿ ಹಾಜರಾತಿಯನ್ನು ಎನ್ಎಂಎಂಎಸ್ ಮುಖಾಂತರ ದಾಖಲು ಮಾಡಿಕೊಳ್ಳಲಾಗುತ್ತಿದೆ. ವೈಯಕ್ತಿಕ ಕಾಮಗಾರಿಗಳನ್ನು ಹೊರತುಪಡಿಸಿ ಉಳಿದೆಲ್ಲ ಕಾಮಗಾರಿಗಳ ಕೂಲಿಕಾರರ ಹಾಜರಾತಿಯನ್ನು ಈ ಮೊಬೈಲ್ ಅಪ್ಲಿಕೇಶನ್ ಮೂಲಕ ಪಡೆಯಲಾಗುತ್ತಿದೆ.

ದಿನ್ಕಕ್ಕೆರಡು ಬಾರಿ ಹಾಜರಾತಿ
ಈ ಹಿಂದೆ ಎನ್ಎಂಆರ್ ಶೀಟ್ನಲ್ಲಿ ನರೇಗಾ ಕೂಲಿಕಾರರ ಹಾಜರಾತಿಯನ್ನು ಪಡೆಯಲಾಗುತ್ತಿತ್ತು. ಕೆಲ ಕೂಲಿಕಾರರು ಕೆಲಸಕ್ಕೆ ಗೈರಾದರೂ ಹಾಜರಾತಿ ಬೀಳುತ್ತಿತ್ತು. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಎನ್ಎಂಎಂಎಸ್ ಅಪ್ಲಿಕೇಶನ್ ಜಾರಿಗೆ ತಂದಿದೆ. ದಿನಕ್ಕೆ ಎರಡು ಬಾರಿ ಹಾಜರಾತಿ ದಾಖಲು ಮಾಡಲಾಗುತ್ತಿದೆ. ಆದ್ದರಿಂದ ಪಾರದರ್ಶಕತೆ ಕಾಣುತ್ತಿದೆ. ಬೆಳಗ್ಗೆ 8 ರಿಂದ 11 ರಿಂದ ಹಾಜರಾತಿ ಹಾಕಲು ಅವಕಾಶ ಇದ್ದು, ಕಾಯಕ ಬಂಧುಗಳು, ಬಿಎಫ್ಟಿಗಳು, ಗ್ರಾಮ ಕಾಯಕ ಮಿತ್ರರು ಕೂಲಿಕಾರರ ಹಾಜರಾತಿ ಪಡೆಯುತ್ತಿದ್ದಾರೆ.

ಕೂಲಿ ಕಾರ್ಮಿಕರಿಗೂ ಮಾಹಿತಿ ನೀಡಲಾಗುತ್ತಿದೆ
ಕರ್ನಾಟಕದ ಕೊಪ್ಪಳ ಜಿಲ್ಲೆಯ 153 ಗ್ರಾಮ ಪಂಚಾಯತಿಗಳಲ್ಲಿ ಎನ್ಎಮ್ಎಮ್ಎಸ್ ಜಾರಿಗಾಗಿ ರೋಜಗಾರ್ ದಿವಸ್ದಂದು ನರೇಗಾ ಕಾಮಗಾರಿ ಸ್ಥಳಗಳಲ್ಲಿ ಕೂಲಿಕಾರರಿಗೆ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಕಾರ್ಯಾಲಯಗಳಲ್ಲಿ ಕಾಯಕ ಬಂಧುಗಳ ಸಭೆ ಕೈಗೊಂಡು ಜಿಲ್ಲೆಯಲ್ಲಿ ಎನ್ಎಮ್ಎಮ್ಎಸ್ ಅಪ್ಲಿಕೇಶನ್ ಬಳಕೆ ಕುರಿತು ಮಾಹಿತಿ ನೀಡಿದ್ದರಿಂದ ಎಲ್ಲಾ ಕಾಮಗಾರಿಗಳಲ್ಲಿ ಕೂಲಿಕಾರರ ಹಾಜರಾತಿ ಎನ್ಎಂಎಂಎಸ್ ಮೂಲಕವೇ ಪಡೆಯಲಾಗುತ್ತಿದೆ.

ಜಿಲ್ಲಾ ಪಂಚಾಯಿತಿ ಸಿಇಓ ಪ್ರತಿಕ್ರಿಯೆ
ಕೊಪ್ಪಳ ಜಿಲ್ಲೆಯಲ್ಲಿ ನರೇಗಾ ಯೋಜನೆಯು ವರ್ಷದಿಂದ ವರ್ಷಕ್ಕೆ ಗುರಿ ಮೀರಿದ ಸಾಧನೆ ಮಾಡಿದೆ. ನರೇಗಾ ಯೋಜನೆಯ ಪರಿಣಾಮಕಾರಿ ಹಾಗೂ ಪಾರದರ್ಶಕ ಅನುಷ್ಠಾನಕ್ಕೆ ಎನ್ಎಮ್ಎಮ್ಎಸ್ ಸಹಕಾರಿಯಾಗಿದೆ.
ಕೊಪ್ಪಳ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಫೌಜಿಯಾ ತರುನ್ನುಮ್ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. "ಇದರಿಂದಾಗಿ ಕೂಲಿಕಾರರು ತಮ್ಮ ಕೆಲಸದ ಅವಧಿ ಮುಗಿಯುವವರೆಗೂ ಕಾಮಗಾರಿ ಸ್ಥಳದಲ್ಲಿದ್ದು, ಕೆಲಸ ನಿರ್ವಹಿಸುವಂತಾಗುತ್ತದೆ" ಎಂದು ಹೇಳಿದ್ದಾರೆ.












Click it and Unblock the Notifications