ವರ್ಷದ ವ್ಯಕ್ತಿ 2017: ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗೀಲ್
ಹೊಸ ವರ್ಷವನ್ನು ಸ್ವಾಗತಿಸಲು ಒನ್ಇಂಡಿಯಾ ಕೂಡಾ ಸಜ್ಜಾಗಿದೆ. ಹಳೆಯ ವರ್ಷದ ಕಹಿ ಘಟನೆಗಳನ್ನು ಮರೆತು ಹೊಸ ಕನಸುಗಳ ಜೊತೆ ಹೊಸ ವರ್ಷಕ್ಕೆ ಕಾಲಿಡಲು ಮುಂದಾಗಿರುವ ನಮ್ಮ ಓದುಗರ ಮುಂದೆ ವರ್ಷದ ವ್ಯಕ್ತಿಗಳನ್ನು ಪರಿಚಯಿಸುತ್ತಿದ್ದೇವೆ.
ಅಕ್ರಮ ಆಸ್ತಿ ಸಂಪಾದನೆ ಆರೋಪಿ ಎಐಎಡಿಎಂಕೆಯ ಶಶಿಕಲಾ ಪರಪ್ಪನ ಅಗ್ರಹಾರದಲ್ಲಿ ರಾಜವೈಭೋಗ ಅನುಭವಿಸುತ್ತಿರುವ ಬಗ್ಗೆ ತನಿಖೆ ನಡೆಸಿ ಡಿಜಿಪಿ ವಿರುದ್ಧವೇ ಆರೋಪಪಟ್ಟಿ ಸಲ್ಲಿಸಿದ ದಿಟ್ಟ ಅಧಿಕಾರಿ ಡಿ.ರೂಪ.
ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಸುಧಾರಣೆ, ಭ್ರಷ್ಟಾಚಾರ ಬಯಲಿಗೆಳೆದಿದ್ದು, ದಿಟ್ಟವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯವಸ್ಥೆಯನ್ನು ಟೀಕಿಸಿದ್ದು, ಜನಾನುರಾಗಿಯಾಗಿ ಜಾಗೃತಿ ಮೂಡಿಸಿದ್ದು ಎಲ್ಲವೂ ಇವರನ್ನು ಸುದ್ದಿಯಲ್ಲಿರುವಂತೆ ಮಾಡಿತು.

ಬಂದಿ ಖಾನೆಯ ಡಿಜಿಪಿ ಹುದ್ದೆಯಿಂದ ಟ್ರಾಫಿಕ್ ವಿಭಾಗಕ್ಕೆ ವರ್ಗಾವಣೆಯಾದ ಬಳಿಕವೂ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಮುಂದುವರೆಸಿದ್ದಾರೆ.
ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಬಳಿಕ 2000ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ 43ನೇ ಶ್ರೇಯಾಂಕ ಗಳಿಸಿದ್ದರು. ಹೈದರಾಬಾದ್ ನ ಪೊಲೀಸ್ ಅಕಾಡೆಮಿಯಲ್ಲಿ ಐಪಿಎಸ್ ತರಬೇತಿ ಪಡೆದ ರೂಪಾ ಅತ್ಯುತ್ತಮ ಶಾರ್ಪ್ ಶೂಟರ್. ಬಂದೂಕು ಗುರಿಯಿಂದಾಗಿಯೇ ರೂಪಾ ಅವರು ಸಾಕಷ್ಟು ಪ್ರಶಸ್ತಿಗಳನ್ನು ತರಬೇತಿ ಅವಧಿಯಲ್ಲಿಯೇ ಪಡೆದಿದ್ದರು.
ಬಹುಮುಖ ಪ್ರತಿಭೆಯ ರೂಪಾ ಅವರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಹಾಗೂ ಭರತನಾಟ್ಯ ನೃತ್ಯ ಪ್ರವೀಣೆ ಕೂಡಾ. ಹಾಡುಗಾರ್ತಿ, ಪ್ರೇರಣಾತ್ಮಕ ಭಾಷಣಕಾರ್ತಿ ಕೂಡಾ, ಟೆಡ್ಎಕ್ಸ್ ನಲ್ಲಿ ಇವರ ಭಾಷಣಗಳು ಖ್ಯಾತಿಗಳಿಸಿವೆ.
ವೃತ್ತಿ ಜೀವನದ ಆರಂಭದಲ್ಲಿಯೇ ದಿಟ್ಟತನಕ್ಕೆ ಹೆಸರಾಗಿದ್ದ ರೂಪಾ ಮೊದಲಿಗೆ ಬೆಳಕಿಗೆ ಬಂದದ್ದು ಈಗಿನ ಕೇಂದ್ರ ಸಚಿವೆ ಉಮಾ ಭಾರತಿ ಅವರನ್ನು ಬಂಧಿಸಿದಾಗ. ಗಲಭೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಉಮಾ ಭಾರತಿ ಅವರನ್ನು ಬಂಧಿಸುವಂತೆ ನ್ಯಾಯಾಲಯದ ಆದೇಶ ಇತ್ತು, ಆ ಕೆಲಸವನ್ನು ದಿಟ್ಟತನದಿಂದ ಡಿ.ರೂಪಾ ಮಾಡಿ ಮುಗಿಸಿ ಶಹಭಾಷ್ ಎನಿಸಿಕೊಂಡಿದ್ದರು.












Click it and Unblock the Notifications