ವ್ಯಕ್ತಿಚಿತ್ರ: ನಾಗರಕೋಯಿಲ್ ಬಿಜೆಪಿ ಶಾಸಕ ಎಂ.ಆರ್ ಗಾಂಧಿ
ತಮಿಳುನಾಡು ವಿಧಾನಸಭಾ ಚುನಾವಣೆ 2021 ಫಲಿತಾಂಶ ಮೇ 2ರಂದು ಪ್ರಕಟವಾಗಿದೆ. ದಶಕದ ನಂತರ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಅಧಿಕಾರ ಗಳಿಸಿದೆ. ಈ ನಡುವೆ ಭಾರಿ ಹುಮ್ಮಸ್ಸಿನಿಂದ ಕಣಕ್ಕಿಳಿದಿದ್ದ ಬಿಜೆಪಿ ಅಭ್ಯರ್ಥಿಗಳು ನಿರಾಶೆ ಮೂಡಿಸಿದ್ದಾರೆ. ಆದರೆ, ಇವರೆಲ್ಲರ ನಡುವೆ ''ಕುಟ್ಟಿ ಕಾಮರಾಜ್ ''ಎಂ. ಆರ್ ಗಾಂಧಿ ಗಮನ ಸೆಳೆದಿದ್ದಾರೆ.
ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನಾಗರಕೋಯಿಲ್ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಅಭ್ಯರ್ಥಿ ಜಯಭೇರಿ ಬಾರಿಸಿದ್ದಾರೆ. ಜನಾನುರಾಗಿ ರಾಜಕಾರಣಿ ಎಂದೇ ಕರೆಸಿಕೊಳ್ಳುವ ಎಂ. ಆರ್ ಗಾಂಧಿ ಬಗ್ಗೆ ಸಂಕ್ಷಿಪ್ತ ವ್ಯಕ್ತಿಚಿತ್ರ ಇಲ್ಲಿದೆ. ಎಂ.ಆರ್ ಗಾಂಧಿ 88,804 ಮತ ಗಳಿಸಿದರೆ ಸುರೇಶ್ ರಾಜನ್ 73,371 ಮತ ಪಡೆದುಕೊಂಡು ಸೋಲೊಪ್ಪಿಕೊಂಡಿದ್ದಾರೆ.
ಜನಸಂಘದಿಂದ ಬಂದಿರುವ ಜನಾನುರಾಗಿ ಜನ ಸೇವಕ 1967ರಲ್ಲಿ ಜನ ಸಂಘದ ಜಿಲ್ಲಾಧ್ಯಕ್ಷರಾಗಿ ಸಾರ್ವಜನಿಕ ಬದುಕಿಗೆ ತಮ್ಮನ್ನು ತಾವು ತೊಡಗಿಸಿಕೊಂಡ ಗಾಂಧಿ ಅವರು 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಯನ್ನು ಎಂ. ಆರ್ ಗಾಂಧಿ ಅವರು ತೀವ್ರವಾಗಿ ವಿರೋಧಿಸಿ ಪ್ರತಿಭಟಿಸಿದರು. ಆ ಸಮಯಕ್ಕೆ ಪಕ್ಷದ ಕಾರ್ಯದರ್ಶಿಯಾಗಿ ಬೆಳೆದಿದ್ದರು. ಎಮೆರ್ಜನಿ ವಿರೋಧಿಸಿದ್ದರಿಂದ ಇವರ ವಿರುದ್ಧ Maintenance of Internal Security Act (MISA) ಕಾಯ್ದೆಯಡಿ ಪ್ರಕರಣ ದಾಖಲಿಸಲಾಯಿತು, ಒಂದು ವರ್ಷಗಳ ಕಾಲ ಜೈಲುವಾಸ ಅನುಭವಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಗಾಂಧಿ ಅವರು ನಂತರ ರಾಷ್ಟ್ರೀಯ ಕೌನ್ಸಿಲ್ ಸದಸ್ಯರಾಗಿ ಬೆಳೆದರು.
ಅಟಲ್ ಬಿಹಾರಿ ವಾಜಪೇಯಿ, ಸುಂದರ್ ಸಿಂಗ್ ಭಂಡಾರಿ, ನಾನಾಜಿ ದೇಶಮುಖ್ ಅವರಂತೆ ಪೂರ್ಣಪ್ರಮಾಣದಲ್ಲಿ ಪಕ್ಷದ ಕಾರ್ಯಕರ್ತರಾಗಿ ಉಳಿದುಕೊಳ್ಳಲು ಬಯಸಿದರು.
ರಾಜಕೀಯವಾಗಿ ಬೆಳೆದರೂ ಸಹಾಯ ಕೇಳಿ ಬರುವ ಯಾವುದೇ ಸ್ತರದ ಜನರಿಗೆ ಎಂದಿಗೂ ಇಲ್ಲ ಎಂದು ವಾಪಸ್ ಕಳಿಸಿದವರಲ್ಲ. ಹೆಸರಿಗೆ ತಕ್ಕಂತೆ ಮಹಾತ್ಮ ಗಾಂಧಿಯಂತೆ ಸರಳ ಜೀವನ, ಗ್ರಾಮೀಣಾಭಿವೃದ್ಧಿಯಲ್ಲಿ ನಂಬಿಕೆ ಇಟ್ಟುಕೊಂಡು ಅದರಂತೆ ನಡೆದುಕೊಂಡು ಬಂದಿದ್ದಾರೆ.
ಹಿಂದೂ ಕೈಸ್ತ್ರ ಸಮುದಾಯಗಳ ನಡುವಿನ ತಿಕ್ಕಾಟದ ನಡುವೆ ಎಲ್ಲಾ ಸಮುದಾಯಗಳನ್ನು ಸಮಾನವಾಗಿ ಕಾಣುತ್ತಾ ಜನಪ್ರತಿನಿಧಿಯಾಗಿ ಗಾಂಧಿ ಗುರುತಿಸಿಕೊಂಡಿದ್ದಾರೆ. ಆದರೂ ಗಾಂಧಿ ಮೇಲೆ ಎರಡು ಬಾರಿ ಹಲ್ಲೆ ಯತ್ನ ಕೂಡಾ ನಡೆದು ಕೋಮು ಸೌಹಾರ್ದ ಕದಡಲು ಕಾರಣವಾಗಿತ್ತು.
2016ರಲ್ಲಿ ಡಿಎಂಕೆಯ ಸುರೇಶ್ ರಾಜನ್ ಅವರನ್ನು 21,000 ಮತಗಳ ಅಂತರದಿಂದ ಎಂ. ಆರ್ ಗಾಂಧಿ ಸೋಲು ಕಂಡಿದ್ದರು. ಎಐಎಡಿಎಂಕೆ ಪ್ರತ್ಯೇಕವಾಗಿ ಸ್ಪರ್ಧಿಸಿ 45,000 ಮತ ಗಳಿಸಿತ್ತು.
ಕನ್ಯಾಕುಮಾರಿ ಜಿಲ್ಲೆಯಲ್ಲಿನ ಹಲವು ಹಿಂದೂಯೇತರ ಸಮುದಾಯಗಳು ನಾಗರಿಕ ಪೌರತ್ವ ಕಾಯ್ದೆ(ಸಿಎಎ) ವಿರೋಧಿಸಿ ಪ್ರತಿಭಟನೆ ನಡೆಸಿದ್ದವು, ಆದರೆ 75 ವರ್ಷ ವಯಸ್ಸಿನ ಗಾಂಧಿ ಅವರು ಪ್ರತಿದಿನ ಮುಂಜಾನೆ 5ಕ್ಕೆ ಎದ್ದು ರುಕ್ಮಿಣಿ ಭವನಂನಿಂದ ಕಾರ್ಯಕರ್ತರನ್ನು ಕರೆದುಕೊಂಡು ಬರಿ ಗಾಲಿನಲ್ಲಿ ಜನರ ಬಳಿ ತೆರಳಿ ಈ ಚುನಾವಣೆಯಲ್ಲಿ ಸೆಣೆಸಿದ್ದಾರೆ.
ಬಿಳಿ ಪಂಚೆ, ಶರ್ಟ್ ತೊಟ್ಟ ಮಾವಿಲೈ ರಾಮಸ್ವಾಮಿ ಗಾಂಧಿ ಅವರದ್ದು ಕೃಷಿ ಮೂಲದ ಕುಟುಂಬ. 50-60ಲಕ್ಷ ಆಸ್ತಿ ಘೋಷಿಸಿಕೊಂಡಿರುವ ಗಾಂಧಿ ವಿರುದ್ಧ ಅಕ್ರಮ ಆಸ್ತಿ ದೂರು ಕೇಳಿ ಬಂದಿತ್ತು. ಆದರೆ, ಗಾಂಧಿ ಅವರ ಕ್ಲೀನ್ ಇಮೇಜ್ ಬಗ್ಗೆ ಜನರಿಗೆ ನಂಬಿಕೆಯಿದ್ದು, ಕಳೆದ ಐದು ವರ್ಷಗಳಲ್ಲಿ ಡಿಎಂಕೆಯಿಂದ ಆಗದೆ ಇರುವ ಅಭಿವೃದ್ಧಿ ಕಾರ್ಯ ಬಿಜೆಪಿ ಶಾಸಕರಿಂದ ಸಾಧ್ಯ ಎಂದು ಜನ ನಂಬಿ ಗೆಲ್ಲಿಸಿದ್ದಾರೆ.