Jamboo Savari 2022: ಮೈಸೂರು ದಸರಾ: ಈಗ ಎಲ್ಲರ ಚಿತ್ತ ಜಂಬೂಸವಾರಿಯತ್ತ...
ಪ್ರತಿ ವರ್ಷವೂ ದಸರಾಕ್ಕೆ ಕಾಯುವುದು ಮಾಮೂಲಿ. ಸಡಗರ ಸಂಭ್ರಮದಿಂದಲೇ ಆರಂಭವಾಗುವ ದಸರಾ ಜಂಬೂ ಸವಾರಿಯೊಂದಿಗೆ ಮುಗಿದು ಹೋಗುತ್ತದೆ. ಇಷ್ಟು ವರ್ಷಗಳಲ್ಲಿ ನಡೆದ ದಸರಾಕ್ಕೆ ಹೋಲಿಸಿದರೆ ಈ ಬಾರಿಯ ದಸರಾವನ್ನು ಜನ ಸ್ವಾಗತಿಸಿದ ರೀತಿ ವಿಶೇಷವಾಗಿದೆ. ಏಕೆಂದರೆ ಎರಡು ವರ್ಷಗಳ ಕಾಲ ಕಾಡಿದ ಕೊರೋನಾ ದಸರಾ ಸಂಭ್ರಮವನ್ನು ನುಂಗಿ ಹಾಕಿತ್ತು. ಹೀಗಾಗಿ ಈ ಬಾರಿಯ ದಸರಾದಲ್ಲಿ ಜನ ಮೈಕೊಡವಿಕೊಂಡು ಮನೆಯಿಂದ ಹೊರ ಬಂದಿದ್ದರ ಪರಿಣಾಮ ಎಲ್ಲೆಂದರಲ್ಲಿ ಜನವೋ ಜನ...
ಸಾಮಾನ್ಯವಾಗಿ ದಸರಾ ಎಂದರೆ ಜಗಮಗಿಸುವ ವಿದ್ಯುದ್ದೀಪದ ಅಲಂಕಾರ, ವಿವಿಧ ಕಾರ್ಯಕ್ರಮಗಳು, ಮೇಳಗಳು, ಕುಸ್ತಿ, ಆಟಗಳು, ವ್ಯಾಪಾರ ವಹಿವಾಟು, ಜನಜಂಗುಳಿ ಅಂತಿಮವಾಗಿ ಜಂಬೂಸವಾರಿ ಪಂಜಿನ ಕವಾಯತು ಮೂಲಕ ಮುಗಿದು ಹೋಗಿ ಬಿಡುತ್ತದೆ. ಆದರೆ ಸುಮಾರು 413 ವರ್ಷಗಳ ಕಾಲ ನಡೆದ ದಸರಾ ಆರಂಭದಿಂದ ಇಲ್ಲಿಯವರೆಗೆ ಮಗ್ಗುಲು ಬದಲಿಸಿಕೊಂಡು ಅವತ್ತಿನ ರಾಜವೈಭದಿಂದ ಇಂದಿನ ಪ್ರಜಾವೈಭವದವರೆಗೆ ಹತ್ತು ಹಲವು ಕಾರ್ಯಕ್ರಮಗಳ ಸೇರ್ಪಡೆಯೊಂದಿಗೆ ಜನಮನ ಸೆಳೆಯುತ್ತಾ ಬಂದಿದೆ.
ಮೈಸೂರು ಮಹಾರಾಜರಿಗೆ ಪ್ರಿಯವಾಗಿದ್ದ 'ಅರಮನೆ ಹಣ್ಣು' ಯಾವುದು?
ಮೈಸೂರು ದಸರಾದಲ್ಲಿ ಏನಿದೆ ಎಂದು ನೋಡುತ್ತಾ ಹೋದರೆ... ನಾಲ್ಕು ಶತಮಾನಗಳ ಇತಿಹಾಸದ ಹಿರಿಮೆ, ಸಾಂಸ್ಕೃತಿಕ ರಂಗುರಂಗಿನ ಗರಿಮೆ. ಬೆಡಗು ಭಿನ್ನಾಣದ ದಸರಾದಲ್ಲಿ ಒಂಭತ್ತು ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಸುಗ್ಗಿಯೊಂದಿಗೆ ಹಳ್ಳಿಗಳಿಂದ ಆರಂಭವಾಗಿ ಜಾಗತಿಕ ಜಗುಲಿಯ ಎತ್ತರಕ್ಕೆ ದಸರಾ ಬೆಳೆದು ನಿಂತಿರುವ ಜನಮನದ ಜನತಾ ದಸರಾದ ಬದಲಾವಣೆಗಳಿವೆ. ಮೈಸೂರು ದಸರಾವನ್ನು ಹೊಗಳಲು ಪದಗಳಿಲ್ಲ. ಚಾಮುಂಡೇಶ್ವರಿಯ ಒಂಭತ್ತು ಅವತಾರಗಳ ಪೂಜೆಯ ನಂತರ ಹತ್ತನೇ ದಿನದ "ವಿಜಯದಶಮಿ" ನಾಡ ಹಬ್ಬಕ್ಕೆ ಕಿರೀಟವಿಟ್ಟಂತೆ ನಡೆಯುತ್ತದೆ.
ಸಿರಿವಂತರಿಂದ ಬಡವರವರೆಗೂ ಸಂಭ್ರಮ
ವಿಶ್ವದ ಎಲ್ಲೆಡೆಯಿಂದ ಜನ ಬರುತ್ತಾರೆ. ಹಳ್ಳಿಹಳ್ಳಿಗಳಲ್ಲಿ ದಸರಾ ಸಂಭ್ರಮ ಮುಗಿಲು ಮುಟ್ಟುತ್ತದೆ. ನಾಡಹಬ್ಬಕ್ಕಾಗಿ ಅರಮನೆ, ಚಿನ್ನದ ಸಿಂಹಾಸನ, ಚಿನ್ನಬೆಳ್ಳಿಯ ಅಂಬಾರಿಗಳು, ದೇವರುಗಳು ಸಿದ್ಧಗೊಂಡರೆ, ಮೈಸೂರಿನ ಗಲ್ಲಿಗಲ್ಲಿಗಳಲ್ಲೂ ಜನ ಹಿತ್ತಾಳೆ, ಕಂಚಿನ ದೇವರುಗಳ ವಿಗ್ರಹ ತೊಳೆದು ಆಯುಧ ಪೂಜೆಗೆ ಸಜ್ಜಾಗುತ್ತಾರೆ. ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಆರಂಭವಾಗುವ ದಸರಾ ಆ ಒಂಭತ್ತು ರಾತ್ರಿಹಗಲು ಮಿಂಚಿನಂತೆ ಮೆರೆಯುತ್ತದೆ. ಇತಿಹಾಸದ ಕಾಲಘಟ್ಟಗಳಿಗೆ ಹೊಸತು ಕೊಂಡಿಯನ್ನು ಸೇರಿಸಿ, ಮಕ್ಕಳಿಂದ ಮುದುಕರವರೆಗೂ, ಸಿರಿವಂತರಿಂದ ಬಡವರವರೆಗೂ ಎಲ್ಲರಿಗೂ ಸಂಭ್ರಮವನ್ನು ಉಣಬಡಿಸುತ್ತದೆ.
ಮೈಸೂರು ದಸರಾ ಮಹೋತ್ಸವದಲ್ಲಿ 250 ತಳಿಯ 500 ಶ್ವಾನಗಳ ಪ್ರದರ್ಶನ
ದಸರಾಗೆ ನಾಲ್ಕು ಶತಮಾನದ ಇತಿಹಾಸ
ಐತಿಹಾಸಿಕ ಪುರಾಣ ಕಥೆ ಜೊತೆಗೆ 1399ರಲ್ಲಿ ಮೈಸೂರು ಅರಸರ ಮೂಲ ಪುರುಷರು ಈ ಇತಿಹಾಸವನ್ನು ಮುಂದುವರೆಸಿದ್ದಾರೆ. ಹದಿನಾಡಿನಿಂದ ಯದುವಂಶ ಆರಂಭವಾಗುತ್ತದೆ. 'ಗಂಡಭೇರುಂಡ' ಪಕ್ಷಿ ಲಾಂಛನವಾಗುತ್ತದೆ. 25ಕ್ಕೂ ಹೆಚ್ಚು ಒಡೆಯರ್ 1399ರಿಂದ 1970ರವರೆಗೆ ಮೈಸೂರು ಸಾಮ್ರಾಜ್ಯ ಕಟ್ಟಿ ಆಳುತ್ತಾರೆ. ಹಳೆ ಮೈಸೂರು ಪ್ರಾಂತ್ಯವು ಸ್ವಾತಂತ್ರ್ಯಾ ನಂತರ ದೇಶದ ಗಣರಾಜ್ಯದಲ್ಲಿ ವಿಲೀನವಾಗುತ್ತದೆ. ಆ ನಂತರ ಕರ್ನಾಟಕದ ಉದಯವೂ ಆಗುತ್ತದೆ. ಇವೆಲ್ಲಾ ಇತಿಹಾಸದ ಕಾಲಚಕ್ರದೊಳಗೆ ಸಾಗಿದಂತೆ 'ಮೈಸೂರು ದಸರಾ' ಮಾತ್ರ ಜನರ ನಡೆ ನುಡಿಯ ಬದುಕಾಗಿ ಇತಿಹಾಸದ ನಾಲ್ಕು ಶತಮಾನದ ಕಾಲಘಟ್ಟದಲ್ಲಿ ಮಗ್ಗಲು ಬದಲಿಸುತ್ತಾ ಸಾಗುತ್ತಿರುವುದು ವಿಶೇಷವಾಗಿದೆ.
ಅರಮನೆಯಿಂದ ಮನೆಮನೆಯ ತನಕವೂ ದಸರಾ ಸಂಭ್ರಮ
ಈಗ 413ನೇ ದಸರಾ ಆಚರಣೆಯಲ್ಲಿದ್ದೇವೆ. ಕಳೆದ ದಸರಾದ ಗುಂಗಿನೊಂದಿಗೆ ನಾಳಿನ ದಸರೆಗೆ ಜನ ಮುನ್ನಡಿಯಿಡುವುದು ಮಾಮೂಲಿ. ಕೊರೊನಾ ಕಾರಣಕ್ಕೆ ಸರಳ ದಸರಾ ಆಚರಣೆ ಮಾಡಿದವರಿಗೆ ಈ ಬಾರಿಯ ದಸರಾ ಹೊಸತನದ ದಸರಾ.. ಹೀಗಾಗಿ ಜನ ಸಂಭ್ರಮದಲ್ಲಿಯೇ ಪೂಜೆ ಹಬ್ಬ ಮಾಡಿ ಖುಷಿ ಪಡುತ್ತಿದ್ದಾರೆ. ಅರಮನೆಯಿಂದ ಮನೆಮನೆಯ ತನಕವೂ ದಸರಾ ಸಂಭ್ರಮ ಮನೆಮಾಡಿದೆ. ಆಯುಧ ಪೂಜೆಯ ಸಂಭ್ರಮದ ಬಳಿಕ ವಿಜಯದಶಮಿಯ ದಿನ ನಡೆಯುವ ಜಂಬೂ ಸವಾರಿಗಾಗಿ ಜನ ಕಾದು ಕೂತಿದ್ದಾರೆ.
ಜಂಬೂ ಸವಾರಿ ನೋಡಲು ಕಾತರ
ಅರಮನೆಯ ಆವರಣಕ್ಕೆ ಪಾಸು ಪಡೆದವರು ನೆಮ್ಮದಿಯುಸಿರು ಬಿಟ್ಟಿದ್ದರೆ ಉಳಿದಂತೆ ಅರಮನೆಯಿಂದ ಬನ್ನಿಮಂಟಪದವರೆಗಿನ ಹಾದಿಯಲ್ಲಿ ಕಾದು ಕುಳಿತು ಜಂಬೂಸವಾರಿ ನೋಡುವ ಬಗ್ಗೆ ಆಲೋಚಿಸುತ್ತಿದ್ದಾರೆ. ಇದುವರೆಗೆ ಕಾತರದಿಂದ ಕಾದು ಬೆಳಕಿನ ದಸರಾದಲ್ಲಿ ಖುಷಿಯಾಗಿ ಮನೆಮಂದಿಯೆಲ್ಲ ಬೆರೆತು ಖುಷಿಪಟ್ಟವರು ನಾಡಿದ್ದು ನಡೆಯುವ ಜಂಬೂ ಸವಾರಿಯತ್ತ ದೃಷ್ಟಿ ನೆಟ್ಟಿದ್ದಾರೆ.