ಮುರುಘಾ ಶ್ರೀಗಳ ಬಂಧನ: ರಾಜ್ಯ ರಾಜಕೀಯಕ್ಕೆ ಹೊಸ ಟ್ವಿಸ್ಟ್
ಉತ್ತರ ಮತ್ತು ಮಧ್ಯ ಕರ್ನಾಟಕಕ್ಕೆ ಕೊಂಡಿಯಂತಿರುವ ಮತ್ತು ರಾಜ್ಯದ ಬಹುದೊಡ್ಡ ಲಿಂಗಾಯತ ಪೀಠಗಳಲ್ಲಿ ಒಂದಾದ ಮುರುಘ ರಾಜೇಂದ್ರ ಬೃಹನ್ಮಠದ ಡಾ. ಶಿವಮೂರ್ತಿ ಮುರುಘಾ ಶರಣರ ಬಂಧನವಾಗಿದೆ. ಪೋಕ್ಸೋ ಪ್ರಕರಣದಡಿಯಲಿ ಶರಣರನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದಾರೆ.
ಆ ಮೂಲಕ, ಕಳೆದ ಕೆಲವು ದಿನಗಳಿಂದ ಮುರುಘಾ ಮಠದ ಸುತ್ತ ಸುತ್ತುತ್ತಿದ್ದ ಸುದ್ದಿಗೆ ತಾರ್ಕಿಕ ಅಂತ್ಯ ಬಿದ್ದಿದೆ. ಜೊತೆಗೆ, ಕರ್ನಾಟಕದ ರಾಜಕೀಯ ಹಲವು ಆಯಾಮಗಳಲ್ಲಿ ಸುತ್ತಲು ಈ ವಿದ್ಯಮಾನ ಕಾರಣವಾಗುವ ಎಲ್ಲಾ ಸಾಧ್ಯತೆಗಳಿವೆ.
ಶರಣರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರು ಎಂದು ಹೇಳಲಾಗುತ್ತಿರುವ ವಿದ್ಯಾರ್ಥಿಗಳು ನ್ಯಾಯ ದೊರಕಿಸಿ ಕೊಡಿ ಎಂದು ಮೈಸೂರಿನ ಸ್ಟಾನ್ಲಿ ನೇತೃತ್ವದ ಒಡನಾಡಿ ಸಂಸ್ಥೆಯ (NGO) ಕದ ತಟ್ಟಿದ್ದರು. ಅಲ್ಲಿಂದ ಈ ಕೇಸು ಹಲವು ಆಯಾಮಗಳನ್ನು ಪಡೆದುಕೊಂಡು, ಸೆಪ್ಟಂಬರ್ ಐದರ ವರೆಗೆ ಶರಣರನ್ನು ಪೊಲೀಸ್ ಕಸ್ಟಡಿಗೆ ಹೋಗುವಂತೆ ನ್ಯಾಯಾಲಯ ಆದೇಶಿಸಿದೆ.
ಬಲಿಷ್ಠ ಲಿಂಗಾಯತ ಪೀಠ ಎಂದೇ ಗುರುತಿಸಲ್ಪಡುವ ಮುರುಘಾ ಮಠದ ಶ್ರೀಗಳು ಯಾವುದೇ ಪಕ್ಷದ ಜೊತೆಗೆ ಅಥವಾ ಯಾವುದೇ ಪಕ್ಷದ ಪರವಾಗಿ ಎಂದೂ ನಿಂತವರಲ್ಲ. ಎಲ್ಲಾ ವರ್ಗದ ಜನರು ಆ ಮಠಕ್ಕೆ ಹೋಗುತ್ತಿದ್ದರು. ಹಾಗಾಗಿ, ಮುರುಘಾ ಶ್ರೀಗಳ ಬಂಧನ ಮುಂದಿನ ರಾಜಕೀಯಕ್ಕೆ ಹೊಸ ತಿರುವನ್ನು ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮುರುಘಾ ಶ್ರೀಗಳ ಬಂಧನಕ್ಕೆ ಮುನ್ನ ಮತ್ತು ನಂತರ
ಮುರುಘಾ ಶ್ರೀಗಳ ಬಂಧನಕ್ಕೆ ಮುನ್ನ ಮತ್ತು ನಂತರ ಯಾವುದೇ ಪಕ್ಷದ ನಾಯಕರು ಪರವಿರೋಧ ಹೇಳಿಕೆಯನ್ನು ನೀಡಲಿಲ್ಲ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡಾ ಈ ವಿಚಾರದಲ್ಲಿ ಮೌನಕ್ಕೆ ಶರಣಾಗಿದ್ದದ್ದು ಗೊತ್ತಿರುವ ವಿಚಾರ. ಒಂದು ಸಮುದಾಯದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಸಮುದಾಯದ ಸಂಘಟನೆಗಳು ಶ್ರೀಗಳನ್ನು ಬಂಧಿಸುವಂತೆ ಪ್ರತಿಭಟನೆ ನಡೆಸಿದ್ದವು. ಆ ವೇಳೆಯೂ, ಯಾವುದೇ ನಾಯಕರು ಬಹಿರಂಗ ಹೇಳಿಕೆಯನ್ನು ನೀಡಲಿಲ್ಲ.

ಬಂಧನಕ್ಕೆ ಮುನ್ನ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ
ಬಂಧನಕ್ಕೆ ಮುನ್ನ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮುರುಘಾ ಶರಣರಿಗೆ ಕ್ಲೀನ್ ಚಿಟ್ ನೀಡಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡಾ ಶ್ರೀಗಳ ಬಗ್ಗೆ ಗೌರವದ ಮಾತನ್ನಾಡಿದ್ದರು. ಆದರೆ, ಈಗ ಶ್ರೀಗಳ ಬಂಧನವಾಗಿದೆ ಮತ್ತು ಈ ವಿದ್ಯಮಾನ ರಾಜ್ಯ ರಾಜಕೀಯದಲ್ಲಿ ಯಾವ ತಿರುವನ್ನು ಪಡೆದುಕೊಳ್ಳಲಿದೆ ಎನ್ನುವುದು ಹೊಸ ಲೆಕ್ಕಾಚಾರಕ್ಕೆ ಕಾರಣವಾಗಿದೆ.

ಶ್ರೀಗಳ ಬಂಧನ ಸಮುದಾಯದ ಹೊಸ ಚಿಂತನೆಗೆ ಕಾರಣ
ಕಳೆದ ಬಾರಿ ಲಿಂಗಾಯತ ಧರ್ಮವನ್ನು ಒಡೆಯಲು ಹೋದರು ಎನ್ನುವ ವಿಚಾರ ಕಾಂಗ್ರೆಸ್ಸಿಗೆ ಬಹುದೊಡ್ಡ ಹಿನ್ನಡೆಯನ್ನು ತಂದೊಡ್ಡಿತ್ತು. ಹಾಗಾಗಿ, ಮುರುಘಾ ಶ್ರೀಗಳ ವಿಚಾರದಲ್ಲಿ ಮಾತನಾಡಬಾರದು ಎನ್ನುವ ಫರ್ಮಾನು ನೇರವಾಗಿ ದೆಹಲಿಯಿಂದಲೇ ಕಾಂಗ್ರೆಸ್ಸಿಗರಿಗೆ ಬಂದಿತ್ತು ಎಂದು ಹೇಳಲಾಗುತ್ತಿದೆ. ಚುನಾವಣಾ ವರ್ಷವಾಗಿರುವುದರಿಂದ ಮುರುಘಾ ಶ್ರೀಗಳ ಬಂಧನ ಸಮುದಾಯದ ಹೊಸ ಚಿಂತನೆಗೆ ಕಾರಣವಾಗಬಹುದು ಎನ್ನುವುದು ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಕೇಳಿ ಬರುತ್ತಿರುವ ಮಾತು.

ಬಿಜೆಪಿ ಬಹುವಾಗಿ ಲಿಂಗಾಯತ ಸಮುದಾಯವನ್ನು ಅವಲಂಬಿತವಾಗಿದೆ
ಬಿಜೆಪಿ ಬಹುವಾಗಿ ಲಿಂಗಾಯತ ಸಮುದಾಯವನ್ನು ಅವಲಂಬಿತವಾಗಿದೆ ಎನ್ನುವುದು ರಾಜ್ಯ ರಾಜಕೀಯದ ಸಮೀಕರಣ. ಹಾಗಾಗಿ, ಮೊದಲೇ ನಲವತ್ತು ಪರ್ಸೆಂಟ್ ವಿಚಾರದಲ್ಲಿ ಬಿಜೆಪಿಗೆ ಹಿನ್ನಡೆಯಾಗುತ್ತಿದೆ. ಜೊತೆಗೆ, ಸಮುದಾಯದ ನಾಯಕನೇ ಮುಖ್ಯಮಂತ್ರಿಯಾಗಿದ್ದರೂ ಮುರುಘಾ ಶರಣರಿಗೆ ಅನ್ಯಾಯವಾಗಿದೆ ಎನ್ನುವ ರೀತಿಯಲ್ಲಿ ಸಮುದಾಯ ಆಲೋಚನೆ ಮಾಡಿದರೆ ಬಿಜೆಪಿಗೆ ಸೋಲು ಇನ್ನಷ್ಟು ಕಟ್ಟಿಟ್ಟಬುತ್ತಿ. ರಾಜ್ಯ ರಾಜಕೀಯ ಪಂಡಿತರ ಪ್ರಕಾರ, ಮುಂದಿನ ದಿನಗಳಲ್ಲಿ ಮುರುಘಾ ಶ್ರೀಗಳ ವಿಚಾರ ಯಾವ ರೀತಿಯಲ್ಲಿ ಸಾಗಲಿದೆ ಎನ್ನುವುದರ ಮೇಲೆ ಬಿಜೆಪಿ ಮತ್ತು ಕಾಂಗ್ರೆಸ್ಸಿನ ಭವಿಷ್ಯ ನಿಂತಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications