ವಿಶ್ಲೇಷಣೆ: ಗೆಳೆಯರನ್ನು ಗೆಲ್ಲೋದು ಹೇಗೆ ಮೋದಿ-ಶಾಗೆ ಪಾಠಗಳಿವೆ!

ನಾಲ್ಕು ವರ್ಷದಲ್ಲಿ ಎಷ್ಟೆಲ್ಲ ಬದಲಾಗಿದೆ. 2018ರ ಮೇ ತಿಂಗಳು ಎನ್ ಡಿಎ ಮಿತ್ರ ಪಕ್ಷಗಳ ಪಾಲಿಗೆ ದೊಡ್ಡ ಪಾಠ. ಹಾಗಂತ ಕಾಂಗ್ರೆಸ್ ಗೇನೂ ಪಾಠಗಳಿಲ್ಲ ಅಂತಲ್ಲ. ಅದು ಈಗಾಗಲೇ ಅಕ್ಷರ ತಿದ್ದಲು ಆರಂಭಿಸಿ ಆಗಿದೆ.

ಏಕೆಂದರೆ, ಕರ್ನಾಟಕ ವಿಧಾನಸಭೆಯ ಚುನಾವಣೆ ನಂತರ ಎಪ್ಪತ್ತೆಂಟು ಸ್ಥಾನಗಳಲ್ಲಿ ಗೆದ್ದ ಹೊರತಾಗಿಯೂ ಮೂವತ್ತೇಳು ಸ್ಥಾನಗಳಲ್ಲಿ ಗೆದ್ದಿದ್ದ ಜೆಡಿಎಸ್ ಗೆ ಮುಖ್ಯಮಂತ್ರಿ ಗಾದಿ ಬಿಟ್ಟುಕೊಡಲು ಸಿದ್ಧವಾಯಿತಲ್ಲ, ಇಷ್ಟು ಸಾಕಲ್ಲವಾ ಅದರ ಸ್ಥಿತಿಯನ್ನು ತಿಳಿಸುವುದಕ್ಕೆ. ಏಕೋ ಇತ್ತೀಚೆಗೆ ಕಳೆದುಕೊಳ್ಳುವುದೇ ಹೆಚ್ಚು ರೂಢಿಯಾದಂತಿದೆ ಭಾರತದ ಹಳೆಯ ರಾಜಕೀಯ ಪಕ್ಷವಾದ ಕಾಂಗ್ರೆಸ್ ಗೆ.

ಆದರೆ, ಈಗ ರಾಷ್ಟ್ರೀಯ ಮಟ್ಟದಲ್ಲಿ ಎನ್ ಡಿಎ ಮಿತ್ರಕೂಟದ ವಿರುದ್ಧ ಇರುವ ಪಕ್ಷಗಳ ರೆಟ್ಟೆ ಬಲವಾದಂತೆ ವಿವಿಧ ಚುನಾವಣೆಗಳ ಫಲಿತಾಂಶ ಎಚ್ಚರಿಕೆ ಸಂದೇಶ ರವಾನಿಸುತ್ತಿರುವಂತಿದೆ. ಬಿಜೆಪಿ ಪಾಲಿಗೆ ಈ ಫಲಿತಾಂಶಗಳು ಏನು ಎಂಬುದರ ವಿಶ್ಲೇಷಣೆ ತುರ್ತಾಗಿ ಆಗಬೇಕಿದೆ. ಉತ್ತರ ಪ್ರದೇಶದ ಕೈರಾನ ಲೋಕಸಭೆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಸೋತಿದೆ.

ಆ ಕ್ಷೇತ್ರ ಆರ್ ಎಲ್ ಡಿ ಪಾಲಿಗೆ ಒಲಿದಿದೆ. ಈ ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೇತರ ಮತ ಬ್ಯಾಂಕ್ ಛಿದ್ರವಾಗಿತ್ತು. ಆದ್ದರಿಂದ ಈ ಕ್ಷೇತ್ರದಿಂದ ಬಿಜೆಪಿಯ ಹುಕುಮ್ ಸಿಂಗ್ ವಿಜಯಿಯಾಗಿದ್ದರು. ಕಳೆದ ವರ್ಷ ಅವರ ಸಾವಿನಿಂದ ತೆರವಾದ ಸ್ಥಾನಕ್ಕೆ ರಾಷ್ಟ್ರೀಯ ಲೋಕದಳದ ಬೇಗಮ್ ತಬಸ್ಸುಮ್ ಹಸನ್ ಆಯ್ಕೆಯಾಗಿದ್ದಾರೆ.

ಇದೇ ಕ್ಷೇತ್ರ ವ್ಯಾಪ್ತಿಗೆ ಬರುವ ನೂರ್ ಪುರ್ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಮತ ವಿಭಜನೆಯ ಕಾರಣಕ್ಕೇ ಬಿಜೆಪಿ ವಿಜಯಿಯಾಗಿತ್ತು. ಆದರೆ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷ ಇತರರು ಒಟ್ಟಾಗಿ ಯುದ್ಧಕ್ಕೆ ಇಳಿದರೆ ಗೆಲುವು ಸಲೀಸಲ್ಲ ಎಂಬುದು ಈ ಸಲ ಗೊತ್ತಾಗಿದೆ. ಆದ್ದರಿಂದ ಈ ಫಲಿತಾಂಶದಲ್ಲಿ ಖಂಡಿತಾ ಬಿಜೆಪಿಗೆ ಪಾಠವಿದೆ.

ಬಿಹಾರದಲ್ಲಿ 'ಲಾಲೂವಾದ'ಕ್ಕೆ ಗೆಲುವು

ಬಿಹಾರದಲ್ಲಿ 'ಲಾಲೂವಾದ'ಕ್ಕೆ ಗೆಲುವು

ಇನ್ನು ಬಿಹಾರದ ಜೋಕಿಹತ್ ವಿಧಾನಸಭೆ ಕ್ಷೇತ್ರದಲ್ಲಿ ಜೆಡಿಯು- ಬಿಜೆಪಿ ಮೈತ್ರಿಗೆ ಮುಖಭಂಗವಾಗಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಎದುರು 'ಲಾಲೂವಾದ' ಗೆಲುವು ಸಾಧಿಸಿದೆ. ಅರ್ಥಾತ್ ಈ ಕ್ಷೇತ್ರದಲ್ಲಿ ಲಾಲೂ ಪ್ರಸಾದ್ ಯಾದವ್ ರ ರಾಷ್ಟ್ರೀಯ ಜನತಾ ದಳದ ಅಭ್ಯರ್ಥಿ ವಿಜಯಿಯಾಗಿದ್ದಾರೆ.

ಜಾರ್ಖಂಡ್ ನಲ್ಲಿ ಮುಖ್ಯಮಂತ್ರಿಗೆ ಹಿನ್ನಡೆ

ಜಾರ್ಖಂಡ್ ನಲ್ಲಿ ಮುಖ್ಯಮಂತ್ರಿಗೆ ಹಿನ್ನಡೆ

ಜಾರ್ಖಂಡ್ ನ ಸಿಲ್ಲಿ ಮತ್ತು ಗೋಮಿಯಾದ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಜಯ ಗಳಿಸಿರುವುದು ಅಲ್ಲಿನ ಮುಖ್ಯಮಂತ್ರಿ ರಘುಬರ್ ದಾಸ್ ಗೆ ಭಾರೀ ಹಿನ್ನಡೆ. ಅಲ್ಲಿನ ಸರಕಾರದ ಪರವಾಗಿ ಬಿಜೆಪಿಯ ಕೇಂದ್ರ ನಾಯಕತ್ವದಿಂದ ಅಭಿವೃದ್ಧಿಯ ಆಡಳಿತ ಎಂಬ ಮೆಚ್ಚುಗೆ ಸಿಕ್ಕಿತ್ತು. ಆದರೆ ಬಾಬುಲಾಲ್ ಮರಾಂಡಿಯನ್ನು ಹನ್ನೆರಡು ವರ್ಷದ ಹಿಂದೆ ಪಕ್ಷದಿಂದ ಹೊರಹಾಕಿದ್ದು ಮತ್ತು ಅವರ ಜೆವಿಎಂ ಅನ್ನು ಮೂರು ವರ್ಷದ ಹಿಂದೆ ಇಬ್ಭಾಗ ಮಾಡಿದ್ದು ತಪ್ಪು ಎಂಬ ಸಂದೇಶವನ್ನು ಜನತೆ ರವಾನಿಸಿದಂತಾಗಿದೆ.

ಬಿಜೆಪಿ ಜತೆ ವಿಚ್ಛೇದನದ ಬಗ್ಗೆ ಶಿವಸೇನೆ ಮತ್ತೊಮ್ಮೆ ಯೋಚಿಸಬೇಕಿದೆ

ಬಿಜೆಪಿ ಜತೆ ವಿಚ್ಛೇದನದ ಬಗ್ಗೆ ಶಿವಸೇನೆ ಮತ್ತೊಮ್ಮೆ ಯೋಚಿಸಬೇಕಿದೆ

ಶಿವಸೇನೆಯ ಪ್ರಬಲ ಪೈಪೋಟಿಯ ಮಧ್ಯೆಯೂ ಮಹಾರಾಷ್ಟ್ರದ ಪಲ್ಘರ್ ಲೋಕಸಭೆ ಕ್ಷೇತ್ರವನ್ನು ಬಿಜೆಪಿ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಸಫಲವಾಗಿದೆ. ವಿರೋಧ ಪಕ್ಷಗಳು ಛಿದ್ರವಾಗಿದ್ದು ಬಿಜೆಪಿಗೆ ಪ್ಲಸ್ ಆಗಿದೆ. ಆದರೆ ಭಂದಾರ ಗೋದಿಯಾವನ್ನು ಎನ್ ಸಿಪಿ ಎದುರು ಸೋತಿದೆ ಕೇಸರಿ ಪಕ್ಷ. ಈ ಹಿಂದೆ ಅದನ್ನು ಬೆಂಬಲಿಸಿದ್ದವರು ಎಂಪಿ ನಾನಾ ಪಟೋಲೆ (ಬಿಜೆಪಿಯಿಂದ ಕಾಂಗ್ರೆಸ್ ಗೆ ಸೇರ್ಪಡೆಯಾದ ಮೇಲೆ ಕಳೆದ ವರ್ಷ ತಮ್ಮ ಸ್ಥಾನಕ್ಕೆ ಅವರು ರಾಜೀನಾಮೆ ಸಲ್ಲಿಸಿದ್ದರು). ಮಹಾರಾಷ್ಟ್ರದ ಪಲುಸ್ ಕಡೆಗಾಂವ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಏಕೆಂದರೆ ಶಿವಸೇನೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಘೋಷಿಸಿ, ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿಲ್ಲ. ಬಿಜೆಪಿ ಸ್ಪರ್ಧೆಯಿಂದ ಹಿಂದೆ ಸರಿಯಿತು. ಬಿಜೆಪಿ ಜತೆಗಿನ ವಿಚ್ಛೇದನದ ಬಗ್ಗೆ ಶಿವಸೇನೆ ಇನ್ನೊಮ್ಮೆ ಯೋಚಿಸಬೇಕಿದೆ.

ಸಂಭ್ರಮಕ್ಕೆ ಕಾರಣಗಳಿಲ್ಲ

ಸಂಭ್ರಮಕ್ಕೆ ಕಾರಣಗಳಿಲ್ಲ

ನಾಗಾಲ್ಯಾಂಡ್ ನಲ್ಲಿ ಲೋನ್ ಲೋಕಸಭಾ ಕ್ಷೇತ್ರದ ಸಂಸದ ನೈಫಿಯು ರಿಯೊ ಅಲ್ಲಿನ ಮುಖ್ಯಮಂತ್ರಿ ಆದ ಮೇಲೆ ತೆರವಾದ ಸ್ಥಾನಕ್ಕೆ ಎನ್ ಡಿಪಿಪಿಯ ಯೆಪ್ತೋಮಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತ ನಾಗಾ ಪೀಪಲ್ಸ್ ಫ್ರಂಟ್ ನ ಅಭ್ಯರ್ಥಿ ಸಿ ಸ್ಪೋಕ್ ಜಮೀರ್ ಸೋತಿದ್ದಾರೆ. ಈಶಾನ್ಯ ರಾಜ್ಯಗಳ ಮತದಾರರು ಸಾಮಾನ್ಯವಾಗಿ ಆಡಳಿತಾರೂಢ ಪಕ್ಷದ ಪರವಾಗಿ ನಿಲ್ಲುತ್ತಾರೆ. ಆದ್ದರಿಂದ ಎನ್ ಡಿಎ ಮಿತ್ರ ಕೂಟಕ್ಕೆ ಸಂಭ್ರಮ ಪಡಲು ಕಾರಣವಿಲ್ಲ.

ಉತ್ತರಾಖಂಡ್ ನಲ್ಲಿ ಮುಖ್ಯಮಂತ್ರಿ ಮಾನ ಉಳಿಯಿತು

ಉತ್ತರಾಖಂಡ್ ನಲ್ಲಿ ಮುಖ್ಯಮಂತ್ರಿ ಮಾನ ಉಳಿಯಿತು

ಉತ್ತರಾಖಂಡ್ ನ ಥರಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಮಗನ್ ಲಾಲ್ ಶಾ ನಿಧನದಿಂದ ತೆರವಾದ ಸ್ಥಾನಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಪೈಪೋಟಿ ಇತ್ತು. ಈ ರಾಜ್ಯದಲ್ಲಿ ಕಳೆದ ವರ್ಷವಷ್ಟೇ ಎಪ್ಪತ್ತು ಸ್ಥಾನಗಳ ಪೈಕಿ ಐವತ್ತೇಳು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯ ಗಳಿಸಿತ್ತು. ಇಲ್ಲಿ ಜಯ ಗಳಿಸಬೇಕಾದ ಅನಿವಾರ್ಯ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಗೆ ಇತ್ತು. ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಅನುಕಂಪದ ಆಧಾರದಲ್ಲಿ ಮಗನ್ ಲಾಲ್ ರ ವಿಧವೆ ಪತ್ನಿ ಮುನ್ನಿ ದೇವಿ ಗೆದ್ದಿದ್ದಾರೆ.

ಉಳಿದ ಕಡೆ ನಿರೀಕ್ಷಿತ ಜಯಗಳು

ಉಳಿದ ಕಡೆ ನಿರೀಕ್ಷಿತ ಜಯಗಳು

ಇನ್ನು ಉಳಿದ ವಿಧಾನಸಭಾ ಕ್ಷೇತ್ರಗಳಲ್ಲಿನ ಉಪ ಚುನಾವಣೆ ಫಲಿತಾಂಶಗಳು ನಿರೀಕ್ಷೆಯಂತೆಯೇ ಬಂದಿವೆ. ಪಂಜಾಬ್ ನಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್, ಪಶ್ಚಿಮ ಬಂಗಾಲದಲ್ಲಿ ಟಿಎಂಸಿ, ಮೇಘಾಲಯದಲ್ಲಿ ಕಾಂಗ್ರೆಸ್ ನ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾರ ಮಗಳು ಗೆದ್ದುಕೊಂಡಿದ್ದಾರೆ.

ಮೋದಿ ಬ್ರ್ಯಾಂಡ್ ನಂಬಿ ಕೂರುವ ಕಾಲ ಇದಲ್ಲವಾ?

ಮೋದಿ ಬ್ರ್ಯಾಂಡ್ ನಂಬಿ ಕೂರುವ ಕಾಲ ಇದಲ್ಲವಾ?

ಮೋದಿ ಬ್ರ್ಯಾಂಡ್ ನ ಇನ್ನು ಹೆಚ್ಚು ಕಾಲ ನಂಬಿ ಕೂರಲು ಬಿಜೆಪಿಗೆ ಸಾಧ್ಯವಿಲ್ಲ ಎಂಬುದು ಇದರಿಂದ ವೇದ್ಯವಾಗುತ್ತದೆ. ಮತದಾರರ ಮನಸ್ಥಿತಿಯನ್ನು ಒಂದೇ ರೀತಿ ಪ್ರಭಾವಿಸುವುದು ಸಾಧ್ಯವಿಲ್ಲ ಎಂಬ ಸಂದೇಶ ಸಿಗುತ್ತಿದೆ. ಇದೇ ಸಂದರ್ಭದಲ್ಲಿ ವಿಪಕ್ಷಗಳ ಒಗ್ಗಟ್ಟು ಇನ್ನು ಹತ್ತು- ಹನ್ನೆರಡು ತಿಂಗಳ ಅವಧಿಗೆ ಹೀಗೇ ಇರುತ್ತದಾ ಎಂಬ ಅಂಶವು ಬಿಜೆಪಿ ಪಾಲಿಗೆ ಪ್ಲಸ್ ಪಾಯಿಂಟ್. ಕೇಂದ್ರದ ವಿರುದ್ಧದ ಆಡಳಿತ ವಿರೋಧಿ ಅಲೆ ಉಪ ಚುನಾವಣೆಯಲ್ಲಿ ಕೆಲಸ ಮಾಡಿರಬಹುದು. ಆದರೆ ಇದೇ ಮುಖ್ಯ ಸಂಗತಿಯಲ್ಲ. ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟು ಕೆಲಸ ಮಾಡಿರಬಹುದು. ಬಿಜೆಪಿಗೆ ಸ್ಪಷ್ಟ ಸಂದೇಶವಿದೆ: ಅವಮಾನದಿಂದ ಪುಟಿದೆದ್ದು, ಹೊಸ ಗೆಳೆಯರನ್ನು ಸಂಪಾದಿಸಿ ಮತ್ತು ಮತದಾರರ ಮೇಲೆ ಪ್ರಭಾವ ಬೀರಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+