ಮಲೆನಾಡಿನ "ಮಿನಿ ಕಾಡು" ಶಿವಮೊಗ್ಗದ ಈ ಈಶ್ವರ ವನ
ಶಿವಮೊಗ್ಗ ಎಂದರೆ ಮಲೆನಾಡ ಹೆಬ್ಬಾಗಿಲು, ಹಸಿರು ಸಸ್ಯಸಂಕುಲದ ನೆಲೆ ಎನ್ನಲಾಗುತ್ತಿತ್ತು. ಆದರೆ ದಿನ ಕಳೆದಂತೆ ನಗರೀಕರಣದ ಮಾಯೆಗೆ ಅಲ್ಲೂ ಹಸಿರು ಮಾಯವಾಗುತ್ತಿದೆ.
ಅಭಿವೃದ್ಧಿಯ ಹೆಸರಿನಲ್ಲಿ ಕಾಡು ಕಡಿಮೆಯಾಗಿ, ನಾಡು ಬೆಳೆಯುತ್ತಿದೆ. ಆದರೆ ಇಂಥ ಪರಿಸ್ಥಿತಿಯಲ್ಲಿ ಹಸಿರನ್ನು ಉಳಿಸಿಕೊಳ್ಳಲೇಬೇಕು ಎಂದು ಪಣ ತೊಟ್ಟು ಇಲ್ಲೊಬ್ಬ ಪರಿಸರಪ್ರೇಮಿ ಜಮೀನು ಖರೀದಿಸಿ ಪುಟ್ಟ ಕಾಡನ್ನು ಸೃಷ್ಟಿಸಿದ್ದಾರೆ.

ಅಬ್ಬಲಗೆರೆಯಲ್ಲಿ "ಮಿನಿ ಕಾಡು"
ನಗರ ಪ್ರದೇಶಗಳಲ್ಲಿ ಒಂದಿಷ್ಟು ಜಾಗ ಸಿಕ್ಕರೆ ಸಾಕು, ಅದನ್ನು ವ್ಯವಹಾರಕ್ಕೆ ಬಳಸಿಕೊಳ್ಳುವವರೇ ಹೆಚ್ಚು. ಆದರೆ ಶಿವಮೊಗ್ಗದ ನವ್ಯಶ್ರೀ ನಾಗೇಶ್ ಎಂಬುವರು ಶಿವಮೊಗ್ಗದ ಶಿಕಾರಿಪುರ ರಸ್ತೆಯಲ್ಲಿ ಅಬ್ಬಲಗೆರೆ ಬಳಿ ಒಂದು ಎಕರೆ ಭೂಮಿ ಖರೀದಿಸಿ ಅದರಲ್ಲಿ ಪುಟ್ಟ ಕಾಡನ್ನು ಸೃಷ್ಟಿಸಿದ್ದಾರೆ. ಹಸಿರು ಗಿಡ ಮರಗಳಿಂದ ತುಂಬಿರುವ ಈ ಜಾಗದ ಒಳಹೊಕ್ಕರೆ ಕಾಡನ್ನೇ ಒಳಹೊಕ್ಕಂತೆ ಭಾಸವಾಗುತ್ತದೆ.

ಎಕರೆಯಲ್ಲಿ 300 ವಿವಿಧ ಸಸಿಗಳು
ನಾಗೇಶ್ ಅವರು ಸೃಷ್ಟಿಸಿರುವ ಈ ಪುಟ್ಟ ಕಾಡಿನಲ್ಲಿ ಸುಮಾರು 300 ವಿವಿಧ ಪ್ರಭೇದದ ಮರಗಳಿವೆ. ನೈಸರ್ಗಿಕವಾಗಿ ಮನುಷ್ಯನ ಆರೋಗ್ಯಕ್ಕೆ ಸಹಕಾರಿಯಾಗುವ ಅನೇಕ ಆಯುರ್ವೇದ ಸಸಿಗಳನ್ನು ಇಲ್ಲಿ ಬೆಳೆಸಲಾಗಿದೆ. ಈ ಕಾಡಿನಲ್ಲಿ ಅಪರೂಪದ ಗಿಡ ಮರಗಳ ಸಂಗ್ರಹವೂ ಇದೆ. ಇದಕ್ಕೆ "ಈಶ್ವರ ವನ" ಎಂದು ಹೆಸರಿಟ್ಟಿದ್ದಾರೆ.

ಕೃತಕ ಕಾಡು ಸೃಷ್ಟಿಸಿ ಸಂದೇಶ ರವಾನೆ
ಶಿವಮೊಗ್ಗದ ಮೂಲಸ್ವರೂಪ ನಗರೀಕರಣದಿಂದಾಗಿ ಬದಲಾಗುತ್ತಿರುವುದನ್ನು ಗಮನಿಸಿದ ನಾಗೇಶ್ ಅವರು, ಈ ಕುರಿತು ಹೇಗಾದರೂ ಜಾಗೃತಿ ಮೂಡಿಸಬೇಕು ಎಂದು ಸಂಕಲ್ಪ ತೊಟ್ಟರು. ಪರಿಸರ ಸಮತೋಲನ ಕಾಪಾಡಲು ಕಾಡು ಎಷ್ಟು ಮುಖ್ಯ ಎಂಬುದನ್ನು ತೋರುವ ಉದ್ದೇಶದಿಂದ ಈ ವನವನ್ನು ಸ್ಥಾಪಿಸಿದರು. ಈ ಮೂಲಕ ಪರಿಸರಕ್ಕೆ ತಮ್ಮ ಪುಟ್ಟ ಕೊಡುಗೆಯನ್ನು ನೀಡಲು ಮುಂದಾದರು.

ವನಕ್ಕೆ ಯಾವ ಬೇಲಿಯೂ ಇಲ್ಲ
ಅಪರೂಪದ ಮತ್ತು ಬೆಲೆ ಬಾಳುವ ಗಿಡ ಮರಗಳು ಇಲ್ಲಿ ಬೆಳೆದಿದ್ದರೂ ಈ ವನಕ್ಕೆ ನಾಗೇಶ್ ಯಾವ ಬೇಲಿಯನ್ನೂ ಹಾಕಿಲ್ಲ. ಈ ವನಕ್ಕೆ ಈಶ್ವರ ವನ ಎಂದು ಹೆಸರಿಟ್ಟಿದ್ದು, ದೇವರ ಕಾಡಿಗೆ ಯಾರು ತಾನೆ ಕನ್ನ ಹಾಕುತ್ತಾರೆ ಎನ್ನುತ್ತಾರೆ ಇವರು. ಇವರ ಈ ಪರಿಸರ ಪ್ರೀತಿ, ಕಾಡನ್ನು ಸೃಷ್ಟಿಸಿರುವ ಕಾರ್ಯವೈಖರಿ ಇತರರಿಗೂ ಮಾದರಿ.












Click it and Unblock the Notifications