ಯಶೋಗಾಥೆ: ತ್ರಿಪುರಾದಲ್ಲಿ ಜಿಲ್ಲಾಧಿಕಾರಿಯಾದ ನವಲಗುಂದದ ಮೇಘಾ ಜೈನ್
ಧಾರವಾಡ, ಸೆಪ್ಟೆಂಬರ್ 16 : ರೈತರ ಹೋರಾಟ, ರಕ್ತಪಾತ, ಕಳಸ -ಬಂಡೂರಿ ಮತ್ತು ಮಹಾದಾಯಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಯುವತಿಯೊಬ್ಬರು ತಮ್ಮ ಸಾಧನೆಯ ಮೂಲಕ ಬಂಡಾಯದ ನೆಲಕ್ಕೆ ಗೌರವ ತಂದುಕೊಟ್ಟಿದ್ದಾರೆ.
ನವಲಗುಂದ ಪಟ್ಟಣದ ಯುವತಿ 2020-21ನೇ ಸಾಲಿನಲ್ಲಿ ನಡೆದ ಕೇಂದ್ರ ನಾಗರಿಕ ಸೇವಾ ಆಯೋಗ (ಯುಪಿಎಸ್ ಸಿ) ಪರೀಕ್ಷೆಯಲ್ಲಿ 354ನೇ ಸ್ಥಾನ ಪಡೆದಿದ್ದ ಮೇಘಾ ಜೈನ್ ತ್ರಿಪುರಾದ ಅಥರ್ಗಾ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ನೇಮಕಗೊಳ್ಳುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಬಿಲಿಯನೇರ್ಸ್ ಪಟ್ಟಿ: ಬೆಂಗಳೂರಿನ ಕೋಟ್ಯಧಿಪತಿಗಳ ಸಂಖ್ಯೆ ಎಷ್ಟು?
ಸತತ ಪರಿಶ್ರಮದಿಂದ 5ನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಯಾಂಕ ಪಡೆದು ಈ ಹುದ್ದೆ ಪಡೆದುಕೊಂಡಿದ್ದಾರೆ. ತಂದೆ ಮನೋಜ್ ಜೈನ್ ಔಷಧಿ ವ್ಯಾಪಾರಿಯಾಗಿದ್ದಾರೆ. ಮೇಘಾ ಜೈನ್ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿಎಂಜಿನಿಯರಿಂಗ್ ಪದವಿ ಪಡೆದು, ವ್ಯಾಸಂಗ ಮುಗಿದ ನಂತರ ಬೆಂಗಳೂರಿನ ಸಾಫ್ವೇರ್ ಕಂಪನಿಯೊಂದರಲ್ಲಿ ಒಂದು ವರ್ಷ ಕೆಲಸ ಮಾಡಿದ್ದರು. ನಂತರ ಯುಪಿಎಸ್ಸಿ ಕಡೆ ಮುಖ ಮಾಡಿ 5 ವರ್ಷಗಳ ಪ್ರಯತ್ನದಿಂದ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.
10 ಗಂಟೆ ಅಧ್ಯಯನ, 5ನೇ ಬಾರಿಗೆ ಯಶಸ್ಸು
ಸಾಫ್ಟ್ವೇರ್ ಹುದ್ಯೋಗ ತ್ಯಜಿಸಿದ ನಂತರ ಮೇಘ ಜೈನ್ ದೆಹಲಿಗೆ ತೆರಳಿ ತರಬೇತಿ ಪಡೆದುಕೊಂಡಿದ್ದಾರೆ. ಕಠಿಣ ಪರಿಶ್ರಮ ನಿತ್ಯ 10 ತಾಸು ಅಧ್ಯಯನ ಮಾಡುತ್ತಿದ್ದ ಅವರು ಹಲವು ವಿಫಲ ಯತ್ನದ ನಂತರ 5ನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ಸನ್ನು ಸಾಧಿಸಿದರು. ತಂದೆ ತಾಯಿಯ ಪ್ರೋತ್ಸಾಹ ಮತ್ತು ಕಠಿಣ ಪರಿಶ್ರಮದ ಮೂಲಕ ತಮ್ಮ ಕನಸಿನ್ನು ನನಸು ಮಾಡಿಕೊಂಡು ಇಂದು ಜಿಲ್ಲಾಧಿಕಾರಿ ಹುದ್ದೆಗೇರಿದ್ದಾರೆ.
ಕ್ಯಾನ್ಸರ್ಪೀಡಿತ ತಾಯಿ, ಪವರ್ ಲಿಫ್ಟಿಂಗ್ನಲ್ಲಿ ಬೆಳ್ಳಿ ಗೆದ್ದ ಮಗಳು
ಮೇಘಾ ಸಾಧನೆಗೆ ಶಿಕ್ಷಕರಿಂದ ಶ್ಲಾಘನೆ
ಪ್ರಾಥಮಿಕ ಶಿಕ್ಷಣವನ್ನು ಸ್ಥಳೀಯ ರೋಟರಿ ಶಾಲೆಯಲ್ಲಿ ಅಭ್ಯಾಸ ಮಾಡಿದ್ದ ಜೈನ್ ನಂತರ ಲಯನ್ಸ್ ಪ್ರೌಢಶಾಲಾ ಶಿಕ್ಷಣ, ಹುಬ್ಬಳ್ಳಿಯ ಪಿಸಿ ಕಾಲೇಜಿನಲ್ಲಿ ವಿಜ್ಞಾನದಲ್ಲಿ ಪಿಯುಸಿ ಮತ್ತು ಹುಬ್ಬಳ್ಳಿಯ ಪಿ.ಸಿ. ಜಾಬಿನ ಕಾಲೇಜಿನಲ್ಲಿ ಪಿಯುಸಿ ಹಾಗೂ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಮೇಘ ಸಾಧನೆಗೆ ಶಾಲಾ ಆಡಳಿತ ಶಿಕ್ಷಕ ವೃಂದ ತಮ್ಮ ವಿದ್ಯಾರ್ಥಿನಿಯ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಮೇಘಾ ಬಾಲ್ಯದಲ್ಲಿ ಶಿಕ್ಷಕಿಯಾಗಿದ್ದ ಶಿವಲೀಲಾ ಬಾದೋಡಗಿ ಮಾತನಾಡಿ 'ಮೇಘನಾಳ ಸಾಧನೆ ಎಲ್ಲಿಲ್ಲದ ಸಂತಸವಾಗಿದೆ. ಇದು ಇತರೆ ವಿದ್ಯಾರ್ಥಿಗಳಿಗೆ ಮಾದರಿ, ನವಲಗುಂದ ಕೀರ್ತಿಯನ್ನು ಹೆಚ್ಚಿಸಿದ್ದಾರೆ' ಎಂದು ಶುಭ ಹಾರೈಸಿದ್ದಾರೆ.
ಮಗಳ ಪರಿಶ್ರಮಕ್ಕೆ ಫಲ ಸಿಕ್ಕಿದೆ ಎಂದ ತಂದೆ
ನವಲಗುಂದದಲ್ಲಿ ಮೆಡಿಕಲ್ ಶಾಪ್ ನಡೆಸುವ ಮೇಘಾ ತಂದೆ ಮನೋಜ್ ಪಾರಸಮಲ್ ಜೈನ್ ತಮ್ಮ ಮಗಳ ಸಾಧನೆಯಿಂದ ಹೆಮ್ಮ ವ್ಯಕ್ತಪಡಿಸಿದ್ದಾರೆ. 'ನಮ್ಮ ಮಗಳ ನಿರಂತರ ಪ್ರಯತ್ನಕ್ಕೆ ಫಲ ಸಿಕ್ಕಿದೆ, ಅವಳಿಗೆ ಯುಪಿಎಸ್ ಪಾಸ್ ಮಾಡಬೇಕೆಂದು ಛಲ ಹೊಂದಿದ್ದಳು. ನಮಗೂ ಅವಳ ಪರಿಶ್ರಮದ ಮೇಲೆ ನಂಬಿಕೆ ಇತ್ತು, 2 ವರ್ಷ ನಿರಾಶೆಯಾಗಿತ್ತು. ಆದರೆ, ಕಳೆದ ಬಾರಿ ಪಾಸ್ ಮಾಡಿದ್ದರು. ಇದೀಗ ನಿಜವಾಗಿಸಿದ್ದಾಳೆ, ಇದಕ್ಕೆ ಅವಳ ಪರಿಶ್ರಮವೇ ಕಾರಣ' ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಮೇಘಾ ಸಾಧನೆಗೆ ಅವರ ಸಂಬಂಧಿಗಳು, ನವಲವಗುಂದ ಹಾಗೂ ಧಾರವಾಡ ಜಿಲ್ಲೆಯ ಜನರು ಶುಭವಾಗಲಿ ಎಂದು ಹಾರೈಸಿದ್ದಾರೆ.
ಯುವಕರಿಗೆ ಸ್ಪೂರ್ತಿ ಎಂದ ಮಾಜಿ ಶಾಸಕ
ಧಾರವಾಡ ಜಿಲ್ಲೆಯ ನವಲಗುಂದ ವಿಧಾನಸಭಾ ಕ್ಷೇತ್ರದ ಶಲವಡಿ ಸೇಠಜಿ ಎಂದೇ ಹೆಸರಾದ ಪಾರಸಮಲ್ ಜೈನ್ ಮನೆತನದಲ್ಲಿ ಹುಟ್ಟಿ ಮನೋಜ ಜೈನ್ ಅವರು ನವಲಗುಂದ ನಗರದಲ್ಲಿ ವ್ಯಾಪಾರ ಮಾಡುತ್ತಾ ಅವರ ಮಗಳಾದ ಕುಮಾರಿ ಮೇಘನಾ ಮನೋಜ ಜೈನ ಅವರಿಗೆ ಒಳ್ಳೆಯ ಶಿಕ್ಷಣ ನೀಡಿದ್ದು IAS ಅಧಿಕಾರಿಯಾಗಿ ತ್ರಿಪುರಾ ರಾಜ್ಯದ ಅಥರ್ಗಾ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ರೈತ ಬಂಡಾಯದ ಗಂಡು ಮೆಟ್ಟಿದ ಸ್ಥಳ ನವಲಗುಂದದ ಕೀರ್ತಿ ಹೆಚ್ಚಿಸಿದ ಕುಮಾರಿ ಮೇಘನಾ ಮನೋಜ್ ಜೈನ ಅವರಿಗೆ ಕ್ಷೇತ್ರದ ಜನತೆಯ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದು ನವಲಗುಂದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಶುಭಾಶಯ ಕೋರಿದ್ದಾರೆ.
ಇದೇ ರೀತಿ ನಮ್ಮ ಕ್ಷೇತ್ರದ ವಿದ್ಯಾರ್ಥಿಗಳು IAS, IPS ಹಾಗೂ KAS ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳಾಗಿ ಕ್ಷೇತ್ರದ ಗೌರವವನ್ನು ಹೆಚ್ಚಿಸಲು ಯುವಕರಿಗೆ ಮೇಘನಾ ಅವರು ಮಾದರಿಯಾಗಿದ್ದಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಮೇಘನಾ ಜೈನ್ ಸಾಧನೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಸಚಿವ ಕೆ ಎನ್ ಗಡ್ಡಿ ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.