ಗೋವಿಂದ ಕಾರಜೋಳ ತಲೆದಂಡ? ಇಲ್ಲಾಂದ್ರೆ ಯಾಕಿಂತ ಹೇಳಿಕೆ!
ಮುಖ್ಯಮಂತ್ರಿ ಬದಲಾವಣೆಯಿಲ್ಲ ಎಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದರೂ, ಬೊಮ್ಮಾಯಿ ರಾಜೀನಾಮೆ ನೀಡಲಿದ್ದಾರೆ ಎನ್ನುವ ಸುದ್ದಿ ಇನ್ನೂ ತೆರೆಮೆರೆಗೆ ಸರಿದಿಲ್ಲ. ದಿನಕ್ಕೊಂದು ಹೇಳಿಕೆಗಳು ಹುಟ್ಟತ್ತಲೇ ಇವೆ.
ಹುಬ್ಬಳ್ಳಿಯಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿಯಲ್ಲಿ ಪಕ್ಷಕ್ಕೆ ಮುಜುಗರ ಆಗುವ ಹೇಳಿಕೆಯನ್ನು ನೀಡಬಾರದು ಎನ್ನುವ ಖಡಕ್ ಫರ್ಮಾನು ಹೊರಡಿಸಲಾಗಿದ್ದರೂ, ಬಸನಗೌಡ ಪಾಟೀಲ್ ಯತ್ನಾಳ್ ಆದಿಯಾಗಿ ಮಾಧ್ಯಮದವರ ಮುಂದೆ ಇವರುಗಳ ಬಾಯಿಚಪಲಕ್ಕೆ ಬ್ರೇಕ್ ಬಿದ್ದಿಲ್ಲ.
ಮುಂಬರುವ ಸಂಕ್ರಾಂತಿಯ ನಂತರ, ಅದಕ್ಕೆ ಮುನ್ನ ಸಚಿವ ಸಂಪುಟದಲ್ಲಿ ಮೇಜರ್ ಸರ್ಜರಿಯಾಗಲಿದೆ ಎನ್ನುವ ಸುದ್ದಿಗೆ ದಿನಕ್ಕೊಂದು ರೆಕ್ಕೆಪುಕ್ಕಗಳು ಹುಟ್ಟುತ್ತಿವೆ. ಇದಕ್ಕೆ ಪೂರಕ ಎನ್ನುವಂತೆ ಸಚಿವ ಗೋವಿಂದ ಕಾರಜೋಳ ಅವರ ಹೇಳಿಕೆ.
ಮಲೆನಾಡು ಭಾಗದ ಹಿರಿಯ ಮುಖಂಡರೊಬ್ಬರನ್ನು ತಕ್ಷಣವೇ ಸಂಪುಟದಿಂದ ಕೈಬಿಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಒತ್ತಡ ಹೇರುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈ ನಡುವೆ, ಗೋವಿಂದ ಕಾರಜೋಳ ಅವರ ಹೇಳಿಕೆ ಅವರನ್ನೂ ಕೈಬಿಡಲಾಗುತ್ತಾ ಎನ್ನುವ ಪ್ರಶ್ನಿಸುವಂತಾಗಿದೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ಕೆಲವರು ಸರಿಯಾಗಿ ಕೆಲಸ ಮಾಡಿಲ್ಲ
ಸ್ಥಳೀಯ ಸಂಸ್ಥೆ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಕೆಲವು ಮೂಲ ಮತ್ತಷ್ಟು ವಲಸೆ ಸಚಿವರು ಪಕ್ಷದ ಪರವಾಗಿ ಸಮರ್ಥವಾಗಿ ಕೆಲಸ ಮಾಡಲಿಲ್ಲ ಎನ್ನುವ ಆರೋಪ ಬಿಜೆಪಿ ಕಾರ್ಯಕರ್ತರ ವಲಯದಿಂದಲೇ ಕೇಳಿ ಬರುತ್ತಿತ್ತು. ಇದಕ್ಕೆ ಪುಷ್ಟಿ ನೀಡುವಂತೆ, ಕಾರ್ಯಕಾರಿಣಿ ಮುಗಿಸಿ ದೆಹಲಿಗೆ ಹೋಗಿದ್ದ ಅರುಣ್ ಸಿಂಗ್ ಅವರು ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶದಿಂದ ಅಮಿತ್ ಶಾ ಬೇಸರಗೊಂಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

ಜಲಸಂಪನ್ಮೂಲ ಖಾತೆಯ ಸಚಿವ ಗೋವಿಂದ ಕಾರಜೋಳ
ಈ ನಡುವೆ, ಮುಖ್ಯಮಂತ್ರಿಗಳ ಜೊತೆಗಿನ ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಜಲಸಂಪನ್ಮೂಲ ಖಾತೆಯ ಸಚಿವ ಗೋವಿಂದ ಕಾರಜೋಳ, "ನಾನು ಯಾವತ್ತೂ ಕೂಡಾ ಅಧಿಕಾರದಲ್ಲಿ ಇರಬೇಕು ಅಂತಾ ಬಯಸಿದವನಲ್ಲ. ಪಕ್ಷ ಏನು ತೀರ್ಮಾನ ಮಾಡುತ್ತೋ ಅದಕ್ಕೆ ನಾನು ಬದ್ದ. ಪಕ್ಷ ಹೇಳುವುದನ್ನು ಶಿಸ್ತಿನ ಸಿಪಾಯಿ ರೀತಿ ಕೇಳುತ್ತೇನೆ. ಅಧಿಕಾರ ಅನ್ನೋದು ಪಿತ್ರಾರ್ಜಿತ ಆಸ್ತಿ ಅಲ್ಲ, ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಪಕ್ಷದ ಮುಖಂಡರ ಅಣತಿಯಂತೆ ನಡೆಯುತ್ತೇನೆ" ಎಂದು ಕಾರಜೋಳ ಹೇಳಿದ್ದಾರೆ. "ಕಾಂಗ್ರೆಸ್ನವರು ಮೇಕೆದಾಟು ಯೋಜನೆ ಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಜನವರಿ 7, 2013ರಿಂದ ಕಾಂಗ್ರೆಸ್ ನವರು ಕಾಂಗ್ರೆಸ್ ನಡಿಗೆ ಕೃಷ್ಣಾ ಕಡೆಗೆ ಅಂತ ಪಾದಯಾತ್ರೆ ಮಾಡಿದ್ದರು. ಏಳು ವರ್ಷದಲ್ಲಿ ಅವರು ಅಧಿಕಾರದಲ್ಲಿ ಇದ್ದರು. ಅವರು ಕೃಷ್ಣಗಾಗಿ ಖರ್ಚು ಮಾಡಿದ್ದು 7,776 ಕೋಟಿ. ಸಿದ್ದರಾಮಯ್ಯ, ಪರಮೇಶ್ವರ್ ಇಬ್ಬರ ನಡುವಿನ ಪೈಪೋಟಿಗಾಗಿ ನಡೆದಿದ್ದ ಪಾದಯಾತ್ರೆ ಅದು"ಎಂದು ಗೋವಿಂದ ಕಾರಜೋಳ ಲೇವಡಿ ಮಾಡಿದ್ದಾರೆ.

ಪಕ್ಷ ಸಂಘಟನೆಗೆ ಬಳಸಿಕೊಳ್ಳಲು ಬಿಜೆಪಿ ವರಿಷ್ಠರ ತೀರ್ಮಾನ
ಸಂಕ್ರಾಂತಿಯ ನಂತರ ಸಂಪುಟ ಪುನರ್ ರಚನೆಗೊಳ್ಳುವುದು ಬಹುತೇಕ ಖಚಿತ ಎನ್ನುವ ಮಾಹಿತಿಯಿದೆ. ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷವನ್ನು ಸುಧೃಡಗೊಳಿಸುವುದು ಮುಖ್ಯವಾಗಿರುವುದರಿಂದ, ಕೆಲವು ಹಿರಿಯ ಸಚಿವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಲು ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದಾರೆ. ಹಾಗಾಗಿ, ಹಿರಿಯ ಸಚಿವರ ಪೈಕಿ, ಈಶ್ವರಪ್ಪ ಮತ್ತು ಗೋವಿಂದ ಕಾರಜೋಳ ಹೆಸರು ಇದರಲ್ಲಿ ಕೇಳಿ ಬರುತ್ತಿದೆ.

ಕಾಂಗ್ರೆಸ್ ಪಕ್ಷದ ಸಾಧನೆ ಕೆಲವು ತಿಂಗಳಿನಿಂದ ಉತ್ತಮ ರೀತಿಯಲ್ಲಿ ಸಾಗುತ್ತಿದೆ
ಕಾಂಗ್ರೆಸ್ ಪಕ್ಷದ ಸಾಧನೆ ಕೆಲವು ತಿಂಗಳಿನಿಂದ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ಗೆಲ್ಲಬಹುದು ಎನ್ನುವ ಸಮೀಕ್ಷಾ ವರದಿ ಹೊರಬೀಳುತ್ತಿದೆ. ಆದರೆ, ಕರ್ನಾಟಕದಲ್ಲಿ ಅಂತಹ ಅನುಕೂಲ ಪರಿಸ್ಥಿತಿಯಿಲ್ಲ. ಹಾಗಾಗಿ, ಮುಂದಿನ ಹದಿನೈದು ತಿಂಗಳು ಪಕ್ಷಕ್ಕೆ ಅತ್ಯಂತ ಪ್ರಮುಖವಾದ ಅವಧಿಯಾಗಿದೆ. ಒಂದು ಕಡೆ, ಜನಸ್ನೇಹಿ ಸರಕಾರೀ ಆಡಳಿತವನ್ನು ನೀಡುವುದು, ಇನ್ನೊಂದು ಕಡೆ ಪಕ್ಷ ಸಂಘಟನೆ. ಹಾಗಾಗಿ, ಬಿಜೆಪಿ ವರಿಷ್ಠರು ಅಳೆದು ತೂಗಿ ನಿರ್ಧಾರವನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ ಎನ್ನುವ ಮಾಹಿತಿಯಿದೆ.












Click it and Unblock the Notifications