ಲೋಕನೀತಿ-ಸಿಎಸ್ಡಿಎಸ್ ಅಭಿಮತ: ಬಿಹಾರಕ್ಕೆ ನಿತೀಶ್ ಸಿಎಂ
ಪಾಟ್ನಾ, ಅ. 20: ಬಿಹಾರ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಚುನಾವಣಾ ಪೂರ್ವ ಸಮೀಕ್ಷೆಗಳು ಬರಲಾರಂಭಿಸಿವೆ. ಇಂಡಿಯಾ ಟುಡೇ- ಆಜ್ ತಕ್ ಸಂಸ್ಥೆ ಜೊತೆಗೆ ಲೋಕನೀತಿ-ಸಿಎಸ್ ಡಿಎಸ್ ಸಂಸ್ಥೆ ಅಭಿಮತ ಇಲ್ಲಿದೆ. ಲೋಕನೀತಿ-ಸಿಎಸ್ ಡಿಎಸ್ ಸಂಸ್ಥೆ ಅಕ್ಟೋಬರ್ 10 ರಿಂದ 17ರ ಅವಧಿಯಲ್ಲಿ ಈ ಸಮೀಕ್ಷೆ, ಅಭಿಪ್ರಾಯ ಸಂಗ್ರಹ ಮಾಡಿ, ಚುನಾವಣಾ ಪೂರ್ವ ವರದಿ ನೀಡುತ್ತಿದೆ.
243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆ ಅವಧಿಯು ನವೆಂಬರ್ 29 ರಂದು ಕೊನೆಗೊಳ್ಳಲಿದೆ. ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಅಕ್ಟೋಬರ್ 28ರಂದು 16 ಜಿಲ್ಲೆಗಳ 71 ಕ್ಷೇತ್ರಗಳಿಗೆ 31,000 ಮತಗಟ್ಟೆಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ನವೆಂಬರ್ 03ರಂದು ಎರಡನೆಯ ಹಂತದಲ್ಲಿ 17 ಜಿಲ್ಲೆಗಳಲ್ಲಿ 94 ಕ್ಷೇತ್ರಗಳಿಗೆ 42,000 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 07ರಂದು ಮೂರನೇ ಹಂತದಲ್ಲಿ 78 ಕ್ಷೇತ್ರಗಳಿಗೆ 15 ಜಿಲ್ಲೆಗಳಲ್ಲಿ ಅಂದಾಜು 33,500 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಅಂತಿಮವಾಗಿ ನವೆಂಬರ್10ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶವು ಹೊರ ಬೀಳಲಿದೆ.
2015ರಲ್ಲಿ ರಾಷ್ಟ್ರೀಯ ಜನತಾ ದಳ 80 ಸ್ಥಾನ, ಜನತಾ ದಳ ಯುನೈಟೆಡ್ 71, ಕಾಂಗ್ರೆಸ್ 27 ಗಳಿಸಿದ್ದವು. ಬಿಜೆಪಿ 53 ಸ್ಥಾನ, ಎಲ್ ಜೆಪಿ 2 ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ ಸೆಕ್ಯುಲರ್ 1, ಇತರೆ 10 ಸ್ಥಾನ. ಬಿಜೆಪಿ ಶೇ 24ರಷ್ಟು ಮತಗಳಿಕೆ, ಅರ್ ಜೆ ಡಿ ಶೇ 18 ಹಾಗೂ ಜೆಡಿಯು ಶೇ 17ರಷ್ಟು, ಕಾಂಗ್ರೆಸ್ ಶೇ 7, ಎಲ್ ಜೆಪಿ ಶೇ 4.8ರಷ್ಟು ಮತ ಗಳಿಸಿದ್ದವು.

ಎಕ್ಸಿಟ್ ಪೋಲ್ ಪ್ರಸಾರಕ್ಕೆ ನಿರ್ಬಂಧ ಹೇರಲಾಗಿದೆ
ಅಕ್ಟೋಬರ್ 28 ರ ಬುಧವಾರ ಸಂಜೆ 6.30 ರಿಂದ ನವೆಂಬರ್ 7ರ ತನಕ ಎಲೆಕ್ಟ್ರಾನಿಕ್ ಮಾಧ್ಯಮಗಳು ಎಕ್ಸಿಟ್ ಪೋಲ್ ಪ್ರಸಾರ ಮಾಡುವಂತಿಲ್ಲ ಎಂದು ನಿರ್ಬಂಧ ವಿಧಿಸಲಾಗಿದೆ. ಇದೇ ನಿಯಮ ಪ್ರಿಂಟ್ ಹಾಗೂ ವೆಬ್ ಮೀಡಿಯಾಗಳಿಗೂ ಅನ್ವಯವಾಗಲಿದ್ದು, ಯಾವ ರೀತಿ ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಸಾರ ಮಾಡುವಂತಿಲ್ಲ. ಇದು ಬಿಹಾರದ ವಿಧಾನಸಭೆ ಚುನಾವಣೆ, ಲೋಕಸಭೆ ಉಪ ಚುನಾವಣೆ ಎರಡಕ್ಕೂ ಅನ್ವಯವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ನಿತೀಶ್ ಸಿಎಂ ಸ್ಥಾನಕ್ಕೆ ಮೊದಲ ಆಯ್ಕೆ
ಆಡಳಿತ ವಿರೋಧಿ ಅಲೆ ಇದೆ ಎಂದು ವಿಪಕ್ಷಗಳು ಪ್ರಚಾರ ಆರಂಭಿಸಿದ್ದರೂ ಮತದಾರರ ಪಾಲಿಗೆ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ಮೊದಲ ಆಯ್ಕೆಯಾಗಿದ್ದಾರೆ. ಸುಮಾರು ಶೇ 30ರಷ್ಟು ಮಂದಿ ಲೋಕನೀತಿ-ಸಿಎಸ್ಡಿಎಸ್ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ನಿತೀಶ್ ಪರ ಮತ ಹಾಕಿದ್ದಾರೆ. ಆರ್ ಜೆಡಿಯ ತೇಜಸ್ವಿ ಯಾದವ್ ಶೇ 27ರಷ್ಟು ಮತ ಗಳಿಸಿ ಉತ್ತಮ ಸ್ಪರ್ಧೆ ನೀಡಿದ್ದಾರೆ. ಎಲ್ ಜೆಪಿಯ ಚಿರಾಗ್ ಪಾಸ್ವಾನ್ ಅವರು ಕೇವಲ ಶೇ 5 ಮತ ಪಡೆದಿದ್ದರೆ, ಬಿಜೆಪಿ ಮುಖಂಡ ಸುಶೀಲ್ ಮೋದಿ ಶೇ 4ರಷ್ಟು ಮತ ಗಳಿಸಿದ್ದಾರೆ.

ಸಿ ವೋಟರ್ ಸಮೀಕ್ಷೆ ಫಲಿತಾಂಶ
ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾಗಬೇಕು ಎಂದು ಶೇ 32ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದರೆ, ಪ್ರಸ್ತುತ ಉಪ ಮುಖ್ಯಮಂತ್ರಿಯಾಗಿರುವ ಸುಶೀಲ್ ಮೋದಿ ಪರ ಶೇ 12.5ರಷ್ಟು ಮತಗಳು ಬಂದಿವೆ. ಬಳಿಕ ಚಿರಾಗ್ ಪಾಸ್ವಾನ್, ಉಪೇಂದ್ರ ಕುಶ್ವಾಹ, ಗಿರಿರಾಜ್ ಸಿಂಗ್ ಅವರ ಹೆಸರುಗಳಿವೆ. ತಾರೀಖ್ ಅನ್ವರ್ ಸಿಎಂ ಆಗಲು ಸೂಕ್ತ ಎಂದು ಶೇ 1.5ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಜೈಲಿನಲ್ಲಿದ್ದರೂ ಲಾಲು ಪ್ರಸಾದ್ ಅವರ ಪರ ಶೇ 8.7 ಮತಗಳು ಬಿದ್ದಿವೆ. ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಜನರಲ್ಲಿ ಶೇ 17.6 ಮಂದಿ ತೇಜಸ್ವಿ ಯಾದವ್ ಪರ ಒಲವು ಪ್ರದರ್ಶಿಸಿದ್ದಾರೆ.

ಚುನಾವಣೆ ಮುಖ್ಯ ವಿಷಯ
ಚುನಾವಣೆ ಮುಖ್ಯ ವಿಷಯ ಯಾವುದು ಎಂದು ಕೇಳಿದ ಪ್ರಶ್ನೆಗೆ ಸಿಕ್ಕ ಉತ್ತರ ಹೀಗಿದೆ: ಅಭಿವೃದ್ಧಿ 29%, ನಿರುದ್ಯೋಗ 20%, ಹಣದುಬ್ಬರ 11%, ಬಡತನ 6%, ಶಿಕ್ಷಣ 7%,. 2015ರಲ್ಲಿ ನಿತೀಶ್ ಸರ್ಕಾರದ ಬಗ್ಗೆ ಶೇ 80ರಷ್ಟು ಜನ ಸಮಾಧಾನ ವ್ಯಕ್ತಪಡಿಸಿದ್ದಾರೆ. ನಿತೀಶ್ ಕುಮಾರ್ ಅವರು 2020ರಲ್ಲಿ ಶೇ 52 ರಷ್ಟು ಮಂದಿ ಮಾತ್ರ ಸರ್ಕಾರದ ಬಗ್ಗೆ ನಂಬಿಕೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications