ತಳ ವರ್ಗಕ್ಕೆ ಕಾಂಗ್ರೆಸ್, ಮಧ್ಯಮ ವರ್ಗದ ಮೇಲ್ಪಟ್ಟವರಿಗೆ ಬಿಜೆಪಿ: ಇದೇನು ವಾದ?
"ನೋಡಿ, ಇದೇ ಕಾಂಗ್ರೆಸ್ ಗೂ ಬಿಜೆಪಿಗೂ ಇರುವ ವ್ಯತ್ಯಾಸ. ಇದನ್ನು ಬಿಜೆಪಿ ಅರ್ಥ ಮಾಡಿಕೊಂಡ ದಿನ ಈ ದೇಶ ನಿಜವಾದ ಅರ್ಥದಲ್ಲಿ ಬದಲಾಗುತ್ತದೆ" ಎಂದರು ಆ ಹಿರಿಯರು. ಎಂಬತ್ತಕ್ಕೂ ಹೆಚ್ಚು ವರ್ಷದ ಆ ಹಿರಿಯರಿಗೆ ತಾವು ಏನು ಹೇಳುತ್ತಿದ್ದೇನೆ ಎಂಬುದು ಗೊತ್ತಿದೆಯಾ ಎಂದು ಕೆಣಕಿದಾಗ ಅವರು ವಿವರಣೆ ನೀಡಿದ್ದು ಹೀಗೆ.
ಯಾವುದೇ ರಾಜಕೀಯ ಪಕ್ಷಕ್ಕೆ ಅಧಿಕಾರ ಸಿಕ್ಕಾಗ ಮೊದಲ ಆದ್ಯತೆ ಬಡವರ ಉದ್ಧಾರ ಮಾಡುವುದೇ ಆಗಬೇಕು. ಒಂದು ಪಕ್ಷ ಉದ್ಧಾರ ಮಾಡುವುದು ಸಾಧ್ಯವಿಲ್ಲ ಅನ್ನೋದಾದರೆ ಕನಿಷ್ಠ ಪಕ್ಷ ಅವರು ಬದುಕಲು ಸಾಧ್ಯವಿರುವಂಥ ವಾತಾವರಣವಾದರೂ ಸೃಷ್ಟಿ ಆಗಬೇಕು. ಕಾಂಗ್ರೆಸ್ ಈಗ ಘೋಷಣೆ ಮಾಡಿರುವ ಕನಿಷ್ಠ ಆದಾಯ ಯೋಜನೆ ಅಂಥ ಅದ್ಭುತ ಯೋಜನೆಗಳಲ್ಲಿ ಒಂದು.
ಈಗ ರಾಜ್ಯದ ಉದಾಹರಣೆ ತೆಗೆದುಕೊಳ್ಳೋಣ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದಾಗ ಜಾರಿಗೆ ತಂದ ಯೋಜನೆಗಳು: ಅನ್ನ ಭಾಗ್ಯ, ಕ್ಷೀರ ಭಾಗ್ಯ, ಇಂದಿರಾ ಕ್ಯಾಂಟೀನ್... ಇವೆಲ್ಲ ನೇರವಾಗಿ ಬಡವರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಜಾರಿಗೆ ತಂದವು. ಇಂಥ ಬೇಕಾದಷ್ಟು ಯೋಜನೆಗಳು ಇವೆ.

ಉಚಿತ ಗ್ಯಾಸ್ ಸಿಲಿಂಡರ್, ಸ್ಟೌ ವಿತರಣೆ, ಉಚಿತ ಶಿಕ್ಷಣ, ಹೆಣ್ಣುಮಕ್ಕಳಿಗೆ ಸ್ನಾತಕೋತ್ತರದವರೆಗೆ ಉಚಿತ ಶಿಕ್ಷಣ, ನರೇಗಾ ಇವೆಲ್ಲವೂ ಬಡತನ ನಿರ್ಮೂಲನೆ ಯೋಜನೆಗಳು ಅಲ್ಲ ಅನ್ನೋದಿಕ್ಕೆ ಹೇಗೆ ಸಾಧ್ಯ?
ಆದರೆ, ಬಿಜೆಪಿಯ ಆಲೋಚನೆ ಶುರುವಾಗುವುದೇ ಮಧ್ಯಮ ವರ್ಗ ಹಾಗೂ ಆದರ ಮೇಲ್ಪಟ್ಟಂತೆ. ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ...ಹೀಗೆ ಪಟ್ಟಿ ಮಾಡುತ್ತಾ ಹೋದರೆ ಜನ್ ಧನ್ ಯೋಜನೆ ಒಂದನ್ನು ಬಿಟ್ಟು ಬಹುತೇಕ ಯೋಜನೆಗಳು ಮಧ್ಯಮ ವರ್ಗ ಮತ್ತು ಅದನ್ನು ಮೇಲ್ಪಟ್ಟವರಿಗೆ. ಹೀಗೆ ಅಂದರೆ ಕೆಲವರಿಗೆ ಸಿಟ್ಟು ಕೂಡ ಬರಬಹುದು.
ಈಗ ಆಹಾರ ಭದ್ರತಾ ಕಾಯ್ದೆ ಬಂದದ್ದು ಯಾವಾಗ ನೆನಪಿಸಿಕೊಳ್ಳಿ. ಹೇಗೆ ಆಹಾರ ಭದ್ರತಾ ಕಾಯ್ದೆಯನ್ನು ತರಲಾಯಿತೋ ಅಂಥದ್ದೇ ಮಹತ್ವದ ಮುದ್ರಾ ಸಾಲ ಯೋಜನೆಯನ್ನು ನರೇಂದ್ರ ಮೋದಿ ಸರಕಾರ ಜಾರಿಗೆ ತಂದಿದೆ. ಆದರೆ ಜಾಮೀನು ಇಲ್ಲದೆ ನೀಡುವ ಸಾಲ ಅದಾದ್ದರಿಂದ ಬ್ಯಾಂಕ್ ಗಳಲ್ಲಿ ಆ ಬಗ್ಗೆ ಹೇಳುತ್ತಲೇ ಇಲ್ಲ. ಇನ್ನು ಎನ್ ಪಿಎಗೆ ಅದರ ಪಾಲು ಹೆಚ್ಚಿದೆ.
ಈಚೆಗೆ ಕೇಂದ್ರ ಸರಕಾರ ಘೋಷಿಸಿದ ಆಯುಷ್ಮಾನ್ ಭಾರತ್ ಅಂಥ ಮಹತ್ವದ ಯೋಜನೆಗಳಲ್ಲಿ ಒಂದು. ಆದರೆ ದೇಶದ ಎಷ್ಟೋ ರಾಜ್ಯಗಳಲ್ಲಿ ಕೇಂದ್ರ ನೀಡುವ ವಾರ್ಷಿಕ ಮಿತಿಗಿಂತ ಹೆಚ್ಚಿನ ಮೊತ್ತದ ಅನುಕೂಲ ನೀಡಲಾಗಿದೆ.
ಇವೆಲ್ಲ ಇರಲಿ. ನಾವೀಗ ಮತ್ತೊಂದು ಲೋಕಸಭೆ ಚುನಾವಣೆಗೆ ಎದುರಿಗೆ ಇದ್ದೇವೆ. ಮತ ಯಾಚಿಸುತ್ತಾ ಬರುವ ಅಭ್ಯರ್ಥಿಗಳನ್ನು ಪ್ರಶ್ನೆ ಮಾಡಲೇ ಬೇಕಲ್ಲವೆ?
ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವ ಸಲುವಾಗಿ ಕಾಂಗ್ರೆಸ್ ಗೆ ಏಕೆ ಮತ ಹಾಕಬೇಕು? ನರೇಂದ್ರ ಮೋದಿ ಅವರನ್ನು ನೋಡಿ ನಮ್ಮ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಏಕೆ ಗೆಲ್ಲಿಸಬೇಕು? ಕುಮಾರಸ್ವಾಮಿ- ದೇವೇಗೌಡರನ್ನು ನೋಡಿಕೊಂಡು ಜೆಡಿಎಸ್ ಗೆ ಏಕೆ ಮತ ನೀಡಬೇಕು?
ನಮ್ಮ ಲೋಕಸಭಾ ಕ್ಷೇತ್ರದ ಸಮಸ್ಯೆ ಬಗ್ಗೆ ಅಭ್ಯರ್ಥಿಗೆ ಏನು ಗೊತ್ತಿದೆ? ಈಗಾಗಲೇ ಗೆದ್ದ ಸಂಸದರಾದರೆ, ಅವರು ನಮ್ಮ ಕ್ಷೇತ್ರಕ್ಕೆ ಮಾಡಿದ್ದೇನು ಎಂದು ನಮ್ಮ ಮುಂದೆ ಹೇಳಲೇಬೇಕು. ಕಳೆದ ಬಾರಿ ನೀಡಿದ್ದ ಭರವಸೆಗಳಲ್ಲಿ ಪೂರೈಸಿದ್ದೆಷ್ಟು ಎಂದು ಹೇಳಬೇಕಲ್ಲವೆ? ವಿವಿಧ ಪಕ್ಷಗಳು ಪರಸ್ಪರ ವೈಯಕ್ತಿಕ ಟೀಕೆ ಮಾಡಿಕೊಂಡರೆ ಮತದಾರರಾಗಿ ನಮಗೇನು?
ಚುನಾವಣೆಗೆ ನಿಂತವರ ಬಳಿ ಅವರ ಅರ್ಹತೆ ಕೇಳಿ. ನಮ್ಮ ಕ್ಷೇತ್ರಕ್ಕೆ ನೀವೇನು ಮಾಡಲಿದ್ದೀರಿ ಎಂಬುದನ್ನು ಕೇಳಿ. ಈಗಾಗಲೇ ಗೆದ್ದವರಾಗಿದ್ದರೆ ಏನೇನು ಮಾಡಿದ್ದೀರಿ ಎಂದು ಕೇಳಿ.











Click it and Unblock the Notifications