ರಾಹುಲ್ ಗಾಂಧಿ ಹೀನಾಯ ಸೋಲಿಗೆ 10 ಪ್ರಮುಖ ಕಾರಣಗಳು

ಅನುಮಾನವೇ ಇಲ್ಲ, ಇಡೀ ದೇಶದ ಜನತೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. 2014ರ ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ನಂತರ ರಾಹುಲ್ ಅವರು ಯಾವ ಸ್ಥಾನದಲ್ಲಿ ನಿಂತಿದ್ದರೋ ಇಂದೂ ಕೂಡ ಅದೇ ಸ್ಥಾನದಲ್ಲಿ ನಿಂತಿದ್ದಾರೆ.

ಅವರ ನಾಯಕತ್ವದಲ್ಲಿ ಬದಲಾವಣೆ ಆಗಿರಬಹುದು, ಅವರ ಸುತ್ತಲಿನ ಯುವ ಪಡೆಯಲ್ಲಿ ಬದಲಾವಣೆ ಕಂಡಿರಬಹುದು, ಅವರ ವ್ಯಕ್ತಿತ್ವದಲ್ಲಿ ಜನರು ಅಲ್ಪ ಬದಲಾವಣೆ ಕಂಡಿರಬಹುದು, ಎದುರಾಳಿಯನ್ನು ಎದುರಿಸುವ ಅವರ ರೀತಿಯಲ್ಲಿ ಬದಲಾವಣೆ ಕಂಡಿರಬಹುದು. ಆದರೆ, ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಇಲ್ಲವೇ ಇಲ್ಲ.

ಉತ್ತರ ಪ್ರದೇಶದಲ್ಲಿ ಅವರ ತಂಗಿ, ಅವರಿಗಿಂತ ಜನಪ್ರಿಯತೆ ಹೆಚ್ಚಿರುವ ಪ್ರಿಯಾಂಕಾ ವಾದ್ರಾ ಅವರನ್ನು ಪಶ್ಚಿಮ ಭಾಗದ ಉಸ್ತುವಾರಿ ಮತ್ತು ಪ್ರಧಾನಿ ಕಾರ್ಯದರ್ಶಿಯಾಗಿ, ನೂರಾರು ರೋಡ್ ಶೋಗಳನ್ನು ನಡೆಸಿದರೂ ರಾಹುಲ್ ಗಾಂಧಿ ಅವರ ಹಣೆಬರಹದಲ್ಲಿ ಯಾವುದೇ ಬದಲಾವಣೆ ಆಗಿಯೇ ಇಲ್ಲ. ಎಲ್ಲವನ್ನೂ ಪ್ರೀತಿಯಿಂದಲೇ ಗೆಲ್ಲುತ್ತೇನೆ ಎಂದ ರಾಹುಲ್ ಗಾಂಧಿಗೆ ಜನರು ಪ್ರೀತಿಯನ್ನೇ ತೋರಲಿಲ್ಲ.

ವಿಶ್ವಗುರು ಎಂದು ಹೆಗ್ಗಳಿಕೆ ಪಡೆದಿದ್ದ ನರೇಂದ್ರ ಮೋದಿಯವರಿಗೆ ಟಕ್ಕರ್ ಕೊಡಬಲ್ಲ ನಾಯಕರಲ್ಲಿ ರಾಹುಲ್ ಗಾಂಧಿ ಮೊದಲಿಗರು ಎಂದು ಜನರು ಅಂದುಕೊಂಡಿದ್ದರು. ನರೇಂದ್ರ ಮೋದಿಯವರನ್ನು ಸೋಲಿಸಲು ಇಡೀ ಭಾರತದಲ್ಲಿ ರಾಹುಲ್ ಗಾಂಧಿ ಅವರಿಗೆ ಮಾತ್ರ ಸಾಧ್ಯ ಎಂದು ಅವರ ಬೆಂಬಲಿಗರು ಇಚ್ಛಿಸಿದ್ದರು. ಆದರೆ, ಆಗಿರುವುದಾದರೂ ಏನು?

ಮೋದಿ ಪ್ರಭಾವಳಿಯ ಮುಂದೆ ರಾಹುಲ್ ಮಂಕು

ಮೋದಿ ಪ್ರಭಾವಳಿಯ ಮುಂದೆ ರಾಹುಲ್ ಮಂಕು

ಮೊದಲನೆಯದಾಗಿ, ಜಗದ್ವಿಖ್ಯಾತ ನಾಯಕ ನರೇಂದ್ರ ಮೋದಿ ಅವರ ವ್ಯಕ್ತಿತ್ವಕ್ಕೆ, ಅವರಿಗಿರುವ ಪ್ರಭಾವಳಿಯ ಮುಂದೆ ರಾಹುಲ್ ಗಾಂಧಿ ಎಂದೂ ಸರಿಸಾಟಿಯಾಗಿರಲಿಲ್ಲ. ರಾಹುಲ್ ಗಾಂಧಿ ಅವರ ಹೆಸರಿಟ್ಟುಕೊಂಡು ಕಾಂಗ್ರೆಸ್ ಲೋಕಸಭೆ ಚುನಾವಣೆ ಎದುರಿಸಿದ್ದು ಮೂರ್ಖತನದ್ದಾಗಿತ್ತು. ಅಸಲಿಗೆ ರಾಹುಲ್ ಅವರಿಗೆ ತಮ್ಮ ಹೆಸರಿಂದಲೇ ದೇಶವನ್ನಾಳುವಷ್ಟು ವರ್ಚಸ್ಸಿಲ್ಲ. ಆದರೂ, ಗಾಂಧಿ ಕುಟುಂಬದ ಅತೀವ ಪ್ರೇಮ, ಪ್ರೀತಿಯಿಂದಾಗಿ ಕಾಂಗ್ರೆಸ್ ನಾಯಕರೆಲ್ಲರೂ ಕುರುಡರಂತೆ ವರ್ತಿಸಿದರು. ಸಾಲದೆಂಬಂತೆ, ರಾಹುಲ್ ಗಾಂಧಿ ಅವರಿಗೆ ಬೆಂಬಲವಾಗಿ ಅವರ ಸಹೋದರಿ ಪ್ರಿಯಾಂಕಾ ವಾದ್ರಾ ಅವರನ್ನು ಕರೆತಂದಿದ್ದು ಯಾವುದೇ ಸಹಾಯ ಮಾಡಲಿಲ್ಲ.

ಮುಳುವಾದ ಅತಿಯಾದ ಆತ್ಮವಿಶ್ವಾಸ

ಮುಳುವಾದ ಅತಿಯಾದ ಆತ್ಮವಿಶ್ವಾಸ

ಮೂರು ರಾಜ್ಯಗಳಲ್ಲಿ ಗೆಲುವು ಸಾಧಿಸಿದ ನಂತರ ಲೋಕಸಭೆಯಲ್ಲಿ ಬಿಜೆಪಿಯನ್ನು ಮತ್ತು ನರೇಂದ್ರ ಮೋದಿಯವರನ್ನು ಧೂಳಿಪಟ ಮಾಡಿಬಿಡುತ್ತೇನೆ ಎಂದು ರಾಹುಲ್ ಗಾಂಧಿ ಅಬ್ಬರಿಸಿ ಬೊಬ್ಬಿರಿದಿದ್ದೇ ದೊಡ್ಡ ತಪ್ಪು. ಅವರು ತಮ್ಮನ್ನು ತಾವು ಮಹಾ ನಾಯಕನಂತೆ ನೋಡಿಕೊಳ್ಳಲು ಆರಂಭಿಸಿದರು. ಬಿಜೆಪಿಯನ್ನು ಈ ಬಾರಿ ಸವರಿ ಹಾಕುತ್ತೇನೆ ಎಂದು ಮಾಧ್ಯಮಗಳ ಮುಂದೆ ಅಬ್ಬರಿಸಲು ಪ್ರಾರಂಭಿಸಿದರು. ಅತಿಯಾದ ಆತ್ಮವಿಶ್ವಾಸವೇ ರಾಹುಲ್ ಅವರಿಗೆ ಮುಳುವಾಗಿದೆ. ಕನಿಷ್ಠಪಕ್ಷ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಆಡಳಿತ ವಿರೋಧಿ ಅಲೆಯಿತ್ತು. ಆದರೆ, ಲೋಕಸಭೆ ಚುನಾವಣೆಯಲ್ಲಿ ಯಾವುದೇ ಆಡಳಿತ ವಿರೋಧಿ ಅಲೆಯಿರಲಿಲ್ಲ. ನರೇಂದ್ರ ಮೋದಿಯವರ ಮೇಲೆ ಪ್ರತಿ ಬಾರಿಯೂ ವೈಯಕ್ತಿಕ ದಾಳಿ ಮಾಡುತ್ತಲೇ ಹೋದರೇ ಹೊರತು, ತಾವು ದೇಶಕ್ಕಾಗಿ ಏನು ಮಾಡುವುದಾಗಿ ರಾಹುಲ್ ಅಷ್ಟೊಂದು ಜನರಿಗೆ ಮನವರಿಕೆ ಮಾಡಿಕೊಡಲೇ ಇಲ್ಲ.

ಪ್ರಧಾನಿಯಾಗಲು ರಾಹುಲ್ ಲಾಯಕ್ ಇಲ್ಲ

ಪ್ರಧಾನಿಯಾಗಲು ರಾಹುಲ್ ಲಾಯಕ್ ಇಲ್ಲ

ಆರಂಭದಲ್ಲಿ ರಾಹುಲ್ ಗಾಂಧಿಯವರೇ ವಿರೋಧ ಪಕ್ಷಗಳ ಪರ ಪ್ರಧಾನಿ ಅಭ್ಯರ್ಥಿ ಎಂದಾಗಲೇ ದೀದಿ ಮಮತಾ ಬ್ಯಾನರ್ಜಿ ಮತ್ತು ಕೆ ಚಂದ್ರಶೇಖರ ರಾವ್ ಅವರು ಅಡ್ಡಗಾಲು ಹಾಕಿದ್ದರು. ಅಲ್ಲಿಂದಲೇ ರಾಹುಲ್ ಅವರ ಅವನತಿಯ ಮಾರ್ಗ ಗೋಚರಿಸಲು ಆರಂಭಿಸಿತ್ತು. ಆದರೆ, ವಸ್ತುಸ್ಥಿತಿಯ ಅರಿವಾಗಲು ಅವರಿಗೆ ಹೆಚ್ಚು ಸಮಯ ಹಿಡಿಯಲಿಲ್ಲ. ಕ್ರಮೇಣವಾಗಿ ಮಹಿಳೆಯರೊಬ್ಬರು ಪ್ರಧಾನಿ ಅಭ್ಯರ್ಥಿಯಾದರೆ ಅಥವಾ ಪ್ರಾದೇಶಿಕ ಪಕ್ಷದ ನಾಯಕರೊಬ್ಬರು ಪ್ರಧಾನಿ ಅಭ್ಯರ್ಥಿಯಾದರೆ ತೊಂದರೆಯಿಲ್ಲ ಎಂದು ಹೇಳಿಕೆ ನೀಡಲು ಶುರು ಮಾಡಿದರು. ಇದರಿಂದ ಜನರಿಗೆ ಮನವರಿಕೆಯಾಗಿದ್ದೇನೆಂದರೆ, ರಾಹುಲ್ ಗಾಂಧಿ ಅವರೇ ಪ್ರಧಾನಿಯಾಗಲು ಲಾಯಕ್ಕಿಲ್ಲ ಎಂದು. ಜೊತೆಗೆ, ಮಾಯಾವತಿ, ಚಂದ್ರಬಾಬು ನಾಯ್ಡು ಅಂಥವರು ತಾವೂ ಸ್ಪರ್ಧೆಯಲ್ಲಿದ್ದೇವೆ ಎಂದು ತೋರಿಸಿಕೊಳ್ಳಲು ಆರಂಭಿಸಿದರು.

ಬ್ಯಾಕ್ ಫೈರ್ ಆದ ಚೌಕಿದಾರ್ ಚೋರ್ ಹೈ

ಬ್ಯಾಕ್ ಫೈರ್ ಆದ ಚೌಕಿದಾರ್ ಚೋರ್ ಹೈ

ರಫೇಲ್ ಡೀಲ್ ಹಗರಣವನ್ನು ಹಿಡಿದುಕೊಂಡು, ಸಂಸತ್ತಿನಲ್ಲಿ ನಡೆದ ಕಡೆಯ ಅಧಿವೇಶನದಿಂದ ಹಿಡಿದು ಚುನಾವಣಾ ಪ್ರಚಾರದ ಕಡೆಯ ದಿನದ ವರೆಗೆ, ರಾಹುಲ್ ಗಾಂಧಿ ಅವರು ನರೇಂದ್ರ ಮೋದಿಯವರ ಮೇಲೆ ಯಾವ ಪರಿ ಆಕ್ರಮ ಮಾಡಲು ಆರಂಭ ಮಾಡಿದರೆಂದರೆ, ಜನರಿಗೆ ಮೋದಿಗಿಂತ ರಾಹುಲ್ ಮೇಲೆಯೇ ನಂಬಿಕೆ ಕಡಿಮೆಯಾಗಲು ಶುರುವಾಯಿತು. ಪ್ರತಿ ಪ್ರಚಾರ ಸಭೆಯಲ್ಲಿ 'ಚೌಕಿದಾರ್ ಚೋರ್ ಹೈ' ಎಂದು ಆರಂಭಿಸದೆ ಅವರು ಭಾಷಣ ಮಾಡುತ್ತಿರಲಿಲ್ಲ. ಇಂಥದೇ ಪ್ರಮಾದ ರಫೇಲ್ ಡೀಲ್ ಕುರಿತ ಸುಪ್ರೀಂ ಕೋರ್ಟ್ ಆದೇಶ ನೀಡಿದ ಸಂದರ್ಭದಲ್ಲಿಯೂ ಆಯಿತು. ಕಡೆಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಅವರು ಕ್ಷಮೆ ಕೋರಬೇಕಾಯಿತು. ನರೇಂದ್ರ ಮೋದಿಯವರು ರಫೇಲ್ ಡೀಲ್ ನಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರಂಭವಾಗಿದ್ದ ವಾದ ಕಡೆಗೆ ರಾಹುಲ್ ಗಾಂಧಿಯವರೇ ಸುಳ್ಳು ಹೇಳುತ್ತಿದ್ದಾರೆ ಎಂಬಲ್ಲಿಗೆ ಬಂದು ನಿಂತಿದೆ.

ತಡವಾದ ನ್ಯಾಯ್ ಯೋಜನೆ

ತಡವಾದ ನ್ಯಾಯ್ ಯೋಜನೆ

ವಿರೋಧಿಯನ್ನು ಟಾರ್ಗೆಟ್ ಮಾಡುವ ಮುನ್ನ ನಿಮ್ಮ ಸಾಮರ್ಥ್ಯ ಎಷ್ಟಿದೆಯೆಂದು ನೋಡಿಕೊಳ್ಳಬೇಕಲ್ಲವೆ? ಇದರ ಅಳತೆಗೋಲು ರಾಹುಲ್ ಬಳಿ ಇದ್ದಂತಿಲ್ಲ. ತಮ್ಮ ಸುತ್ತಲಿನ ಬಹುಪರಾಕ್ ಹೇಳುವ ವಂದಿಮಾಧಿಗರು ಹೇಳಿದಂತೆಯೇ ಗಿಣಿಪಾಠ ಹೇಳಲು ರಾಹುಲ್ ಗಾಂಧಿ ಆರಂಭಿಸಿದರು. ಸರಕಾರ ರೈತರಿಗಾಗಿ ಮತ್ತು ಬಡವರಿಗಾಗಿ ಬಜೆಟ್ಟಿನಲ್ಲಿ ಆರಂಭಿಸಿದ್ದ ಹಲವಾರು ಯೋಜನೆಗಳಿಗೆ ಪ್ರತಿಯಾಗಿ, ಕಾಂಗ್ರೆಸ್ ನ 'ನ್ಯಾಯ್' ಯೋಜನೆ ಮತ್ತು ಅದು ಹೇಗೆ ಸಾಧ್ಯವಾಗುತ್ತದೆ ಎಂದು ವಿವರಿಸಲು ಮತ್ತು ಸಮರ್ಥಿಸಿಕೊಳ್ಳಲು ರಾಹುಲ್ ಸಂಪೂರ್ಣ ವಿಫಲರಾದರು. ಜನರಿಗೆ ಇದು ಯಾವ ಯೋಜನೆ, ಇದರಿಂದ ನಮಗೆ ಸಿಗುವ ಲಾಭವಾದರೂ ಎಂದು ಚಿಂತಿಸಿ, ತಲೆಗೆ ಹೋಗದೆ, ಕಡೆಗೆ ಬಿಜೆಪಿಗೆ ಮತ ಒತ್ತಿ ಬಂದಿದ್ದಾರೆ. ಅಲ್ಲದೆ, ನ್ಯಾಯ್ ಯೋಜನೆ ಘೋಷಣೆ ಕೂಡ ತುಂಬಾ ತಡವಾಗಿತ್ತು.

ಪ್ರತಿ ಭಾಷಣದಲ್ಲೂ ಅದೇ ಮಾತು

ಪ್ರತಿ ಭಾಷಣದಲ್ಲೂ ಅದೇ ಮಾತು

ನರೇಂದ್ರ ಮೋದಿಯವರು ಭ್ರಷ್ಟಾಚಾರವನ್ನು ನಿಗ್ರಹಿಸಲು ಮತ್ತು ವಿದೇಶದಿಂದ ಕಪ್ಪು ಹಣವನ್ನು ವಾಪಸ್ ತರಲು ಘೋಷಿಸಿದ್ದ ಅಪನಗದೀಕರಣ ಮತ್ತು ತೆರಿಗೆಯನ್ನು ತಹಬದಿಗೆ ತರಲು ಮತ್ತು ವಹಿವಾಟುಗಳಲ್ಲಿ ಪಾರದರ್ಶಕತೆ ತರಲು ಆರಂಭಿಸಿದ್ದ ಜಿಎಸ್ಟಿ ಯೋಜನೆಯ ವಿರುದ್ಧ ರಾಹುಲ್ ಗಾಂಧಿ 'ಗಬ್ಬರ್ ಸಿಂಗ್ ಟ್ಯಾಕ್ಸ್' ಎಂದು ಹರಿಹಾಯ್ದಿದ್ದು, ನಾವು ಎಲ್ಲ ತೆರಿಗೆಯನ್ನು ಒಟ್ಟುಗೂಡಿಸಿ ಒಂದೇ ತೆರಿಗೆಯನ್ನು ತರುತ್ತೇವೆ ಎಂದು ಹೇಳಿದ್ದು ಜನರಿಗೆ ಮನವರಿಕೆಯೇ ಆಗಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ರಾಹುಲ್ ಗಾಂಧಿ ಅವರ ಪ್ರತಿ ಭಾಷಣದಲ್ಲೂ ಇದೇ ಮಾತುಗಳಿರುತ್ತಿದ್ದುದನ್ನು ನೋಡಿ, ಕೇಳಲು ಬಂದ ಜನರಿಗೆ ತಮಾಷೆ ಸಿಗುತ್ತಿತ್ತೇ ವಿನಃ ಅವರಿಗೆ, ರಾಹುಲ್ ಅವರಲ್ಲಿ ಯಾವುದೇ ವಿಶ್ವ ನಾಯಕ ಕಂಡುಬರಲಿಲ್ಲ ಎನ್ನುವುದೂ ಅಷ್ಟೇ ಸತ್ಯ.

ಅನಗತ್ಯವಾಗಿ ದೇಶಭ್ರಷ್ಟರ ಬೆನ್ನತ್ತಿದ ರಾಹುಲ್

ಅನಗತ್ಯವಾಗಿ ದೇಶಭ್ರಷ್ಟರ ಬೆನ್ನತ್ತಿದ ರಾಹುಲ್

ಎಲ್ಲಕ್ಕಿಂತ ಪ್ರಮುಖವಾಗಿದ್ದೇನೆಂದರೆ, ದೇಶಭ್ರಷ್ಟರಾಗಿರುವ ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಮುಂತಾದವರು ದೇಶಬಿಡಲು ಭಾರತೀಯ ಜನತಾ ಪಕ್ಷ ಮತ್ತು ನರೇಂದ್ರ ಮೋದಿಯೇ ಕಾರಣ ಎಂದು ಹೇಳಿದ್ದು ಕಾಂಗ್ರೆಸ್ ಪಕ್ಷಕ್ಕೇ ಮುಳುವಾಗಿದೆ. ಏಕೆಂದರೆ, ಇವರೆಲ್ಲನೇಕರು ದೇಶಭ್ರಷ್ಟರಾಗಿದ್ದು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ. ತಾವು ಅಧಿಕಾರದಲ್ಲಿದ್ದಾಗ ಏನೂ ಮಾಡದವರು, ಅಧಿಕಾರ ಕಳೆದುಕೊಂಡಾಗ ಇತರರನ್ನು ಹಳಿದರೆ ಅಥವಾ ಆರೋಪ ಹೊರಿಸುತ್ತಿದ್ದರೆ ಜನ ನಂಬುತ್ತಾರೆಯೆ? ನಿಮಗಿಂತ ನರೇಂದ್ರ ಮೋದಿಯೇ ಮೇಲು ಎಂದು ಕಮಲದ ಗುರುತಿಗೆ ಜನರು ಠಸ್ಸೆ ಒತ್ತಿದ್ದಾರೆ. ಸಾಲದೆಂಬಂತೆ, ನೀರವ್ ಮೋದಿ, ಲಲಿತ್ ಮೋದಿ ಜೊತೆಗೆ ನರೇಂದ್ರ ಮೋದಿಯವರನ್ನು ಹೋಲಿಸಿದ್ದು ಜನರನ್ನು ಇನ್ನಷ್ಟು ಕೆರಳುವಂತೆ ಮಾಡಿತು.

ರಾಹುಲ್ ಮರೆತರೂ ಜನ ಮರೆತಿಲ್ಲ

ರಾಹುಲ್ ಮರೆತರೂ ಜನ ಮರೆತಿಲ್ಲ

ನಾವು ಬಡತನ ನಿವಾರಿಸುತ್ತೇವೆ, ನರೇಂದ್ರ ಮೋದಿ ಸರಕಾರ ನಿಮ್ಮಿಂದ (ರೈತರಿಂದ, ಸಣ್ಣ ಉದ್ದಿಮೆದಾರರಿಂದ, ಬಡವರಿಂದ) ಕಿತ್ತುಕೊಂಡಿದ್ದನ್ನು ಅಧಿಕಾರಕ್ಕೆ ಬಂದರೆ ನಾವು ತಿರುಗಿಸುತ್ತೇವೆ ಎಂದು ರಾಹುಲ್ ಗಾಂಧಿ ಭಾಷಣ ಬಿಗಿಯುತ್ತಲೇ ಹೋದರು. ಆದರೆ, ಇವೆಲ್ಲ ಘೋಷಣೆಗಳು 70ರ ದಶಕದಲ್ಲಿಯೇ ಸತ್ತು ಹೋಗಿದ್ದವು. ಆದರೆ, ನರೇಂದ್ರ ಮೋದಿ ಸರಕಾರ ಬಡವರಿಗಾಗಿ ಮತ್ತು ರೈತರಿಗಾಗಿ, ಬಡವರಿಗಾಗಿ ಜನ್ ಧನ್ ಯೋಜನೆ, ಜೀವನ್ ಜ್ಯೋತಿ ವಿಮೆ ಯೋಜನೆ, ಅಟಲ್ ಪಿಂಚಣಿ ಯೋಜನೆ, ಮುದ್ರಾ ಯೋಜನೆ ಮುಂತಾದವುಗಳನ್ನು ಅವರು ಮರೆತೇಬಿಟ್ಟಿದ್ದರು, ಆದರೆ ಜನರು ಮರೆತಿರಲಿಲ್ಲ. ಜನರು ರಾಹುಲ್ ಗಾಂಧಿ ಹೇಳಿದ್ದನ್ನು ಕಿವಿಯ ಮೇಲೆ ಹಾಕಿಕೊಳ್ಳುವಷ್ಟು, ನಂಬುವಷ್ಟು ದಡ್ಡರೂ ಅಲ್ಲ.

ರಾಹುಲ್ ಬಾಲಕ್ಕೆ ಬೆಂಕಿ ಹಚ್ಚಿದ ಏರ್ ಸ್ಟ್ರೈಕ್

ರಾಹುಲ್ ಬಾಲಕ್ಕೆ ಬೆಂಕಿ ಹಚ್ಚಿದ ಏರ್ ಸ್ಟ್ರೈಕ್

ಪುಲ್ವಾಮಾ ಆತ್ಮಾಹುತಿ ದಾಳಿಯ ನಂತರ ಬಾಲಕೋಟ್ ಏರ್ ಸ್ಟ್ರೈಕ್ ನಡೆದ ಮೇಲೆ ನರೇಂದ್ರ ಮೋದಿಯವರ ಜನಪ್ರಿಯತೆ ಮೇಲೇರುತ್ತಾರ ಸಾಗಿತು. ಇದನ್ನು ರಾಹುಲ್ ಗಾಂಧಿ ಸರಿಯಾಗಿ ಗ್ರಹಿಸಲೇ ಇಲ್ಲ. ಇದಕ್ಕಾಗಿ ಮೋದಿಯವರನ್ನು ರಾಹುಲ್ ಗಾಂಧಿ ಶ್ಲಾಘಿಸಿದ್ದರೆ ದೇಶದ ಜನರ ಮೆಚ್ಚುಗೆ ಗಳಿಸುತ್ತಿದ್ದರು. ಆದರೆ, ಬದಲಾಗಿ ಅವರ ಪಕ್ಷದವರೇ ನರೇಂದ್ರ ಮೋದಿ ಸರಕಾರದ ಮೇಲೆ ಅತಿಯಾದ ಆಕ್ರಮಣ ಮಾಡಲು ಆರಂಭಿಸಿದರು. ಬಾಲಕೋಟ್ ದಾಳಿಯೇ ಸುಳ್ಳು ಎಂದು ಕಥೆ ಕಟ್ಟಲು ಆರಂಭಿಸಿದರು. ಇದು ದೇಶಭಕ್ತರಿಗೆ ಎಂಥ ಹೊಡೆತ ನೀಡಿತೆಂದರೆ, ಅವರು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಮೇಲೆಯೇ ಅಸಹ್ಯ ಪಟ್ಟುಕೊಳ್ಳಲು ಆರಂಭಿಸಿದರು.

ಸರಿಯಾಗಿ ಕೈಕೊಟ್ಟ ಸೋಷಿಯಲ್ ಮೀಡಿಯಾ

ಸರಿಯಾಗಿ ಕೈಕೊಟ್ಟ ಸೋಷಿಯಲ್ ಮೀಡಿಯಾ

ರಾಹುಲ್ ಗಾಂಧಿಯವರು ಅತಿಯಾಗಿ ನಂಬಿಕೊಂಡಿದ್ದಂಥ ಸೋಷಿಯಲ್ ಮೀಡಿಯಾ ಅವರ ವ್ಯಕ್ತಿತ್ವವನ್ನು ಮೇಲೆತ್ತಲು ಸಹಾಯ ಮಾಡುವ ಬದಲು, ಅವರನ್ನು ಕೆಳಮಟ್ಟದಲ್ಲಿ ನೋಡುವಂತೆ ಮಾಡಿದ್ದು ಕೂಡ ಒಂದು ಪ್ರಮುಖ ಕಾರಣ. ಅದರಲ್ಲಿಯೂ ರಮ್ಯಾ ಅಕಾ ದಿವ್ಯಾ ಸ್ಪಂದನಾ ಅವರ ಅಸಂಬದ್ಧ, ಅಪ್ರಬುದ್ಧ, ತರ್ಕಬದ್ದವಿಲ್ಲದ ಟ್ವೀಟ್ ಗಳು, ನರೇಂದ್ರ ಮೋದಿ ಅವರ ಮೇಲೆ ಮಾಡುತ್ತಿದ್ದ ಆಕ್ರಮಗಳು, ರಣದೀಪ್ ಸುರ್ಜೇವಾಲಾ ಅವರ ದ್ವೇಷದ ಮಾತುಗಳು ರಾಹುಲ್ ಗಾಂಧಿ ಅವರ ವಿರುದ್ಧವೇ ಜನರು ರೊಚ್ಚಿಗೇಳುವಂತೆ ಮಾಡಿದವು. 2014ರ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಸೋಷಿಯಲ್ ಮೀಡಿಯಾದ ಸಹಾಯದಿಂದಲೇ ಗೆದ್ದಿದ್ದರು, ಈಬಾಗಿ ರಾಹುಲ್ ಗಾಂಧಿ ಅವರು ತಮ್ಮ ಸೋಷಿಯಲ್ ಸ್ಟ್ರಾಟಜಿಯಿಂದಲೇ ಸೋತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+