ಮೇಕೆದಾಟು ಕಾಂಗ್ರೆಸ್ ಪಾದಯತ್ರೆ: ಮೊದಲ ಮತ್ತು 2ನೇ ಫಲಾನುಭವಿಗಳು
ಕೆಪಿಸಿಸಿ ಪ್ರಾಯೋಜಿತ ಮೇಕೆದಾಟು ಪಾದಯಾತ್ರೆಯ ಎರಡನೇ ಚರಣ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ರಾಮನಗರದಿಂದ ಆರಂಭವಾದ ಪಾದಯಾತ್ರೆಗೆ ಇದುವರೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಜೊತೆಗೆ, ಟ್ರಾಫಿಕ್ ಜಾಮ್ನಿಂದ ಪರದಾಡಿದವರ ಹಿಡಿಶಾಪವೂ ದೊರೆತಿದೆ.
ಮುಂದಿನ ಐವತ್ತು ವರ್ಷಕ್ಕೆ ಕುಡಿಯುವ ನೀರಿನ ಸಮಸ್ಯೆ ಬರಬಾರದು ಎಂದಿದ್ದರೆ ಈಗಿನ ನಮ್ಮ ಪಾದಯಾತ್ರೆಗೆ ಬೆಂಬಲ ಕೊಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. ಆದರೆ, ಕಾವೇರಿ ನೀರಿನ ಸಮಸ್ಯೆ ಇಲ್ಲದ ಪ್ರದೇಶಗಳಲ್ಲೂ ಪಾದಯಾತ್ರೆಗೆ ರೂಟ್ ಮ್ಯಾಪ್ ಹಾಕಿರುವ ಹಿಂದಿನ ಉದ್ದೇಶವೇನು ಎನ್ನುವುದು ಪ್ರಶ್ನೆಯಾಗಿದೆ.
ಮೇಕೆದಾಟು ಪಾದಯಾತ್ರೆ ಮೊದಲ ಚರಣದಲ್ಲೂ ಡಿಕೆಶಿ ಸಹೋದರರದ್ದೇ ಎಲ್ಲಾ ಕಾರುಬಾರು. ಆದರೆ, ಮೊದಲನೇ ಹಂತದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೋರಿದ್ದ ಉತ್ಸಾಹ ಎರಡನೇ ಹಂತದಲ್ಲಿ ಅಷ್ಟಾಗಿ ಕಾಣಸಿಗುತ್ತಿಲ್ಲ. ಯಾತ್ರೆಯಲ್ಲಿ ಭಾಗವಹಿಸಿದ್ದರೂ, ಅಲ್ಲಲ್ಲಿ ಬಂದು ಸೇರಿಕೊಳ್ಳುತ್ತಿದ್ದಾರೆ.
ವಯಸ್ಸಿನ ಸಮಸ್ಯೆಯೋ ಅಥವಾ ಡಿ.ಕೆ.ಶಿವಕುಮಾರ್ ಮತ್ತವರ ಸಹೋದರ ಡಿ.ಕೆ.ಸುರೇಶ್ ಪಾದಯಾತ್ರೆಯ ಮೂಲಕ ಕಾಂಗ್ರೆಸ್ ವಲಯದಲ್ಲಿ ಗಳಿಸುತ್ತಿರುವ ಜನಪ್ರಿಯತೆಯಿಂದ ಸಿದ್ದರಾಮಯ್ಯ ಹಿಮ್ಮುಖರಾಗುತ್ತಿದ್ದಾರಾ ಎನ್ನುವ ಚರ್ಚೆ ಕಾಂಗ್ರೆಸ್ ವಲಯದಲ್ಲಿ ಆರಂಭವಾಗಿದೆ.

ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಿರುವ ಯುವ ಕಾರ್ಯಕರ್ತರಿಗೂ ಡಿಕೆಶಿ ಫೋಸ್
ರಾಮನಗರ, ಬಿಡದಿ, ಕೆಂಗೇರಿ, ನಾಯಿಂಡಹಳ್ಳಿ, ಕತ್ರಿಗುಪ್ಪೆ, ಜಯನಗರದ ಮೂಲಕ ಸಾಗಿ ಬಂದ ಪಾದಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಜೊತೆಜೊತೆಗೆ ಡಿ.ಕೆ.ಶಿವಕುಮಾರ್ ನಡೆದುಕೊಂಡು ಬರುತ್ತಿದ್ದಾರೆ. ಅಲ್ಲಲ್ಲಿ, ವೀರಗಾಸೆ, ಡೊಳ್ಳು ಕುಣಿತಕ್ಕೆ ಹೆಜ್ಜೆಯನ್ನೂ ಹಾಕುತ್ತಿದ್ದಾರೆ. ಕಾರ್ಯಕರ್ತರು ತಮ್ಮ ಮನೆಯಲ್ಲಿ ತಯಾರಿಸಿದ ತಿಂಡಿಯನ್ನು ತಂದು ಡಿಕೆಶಿಗೆ ಕೊಡುತ್ತಿದ್ದಾರೆ. ತಮ್ಮ ಮಕ್ಕಳ ಫೋಟೋವನ್ನು ಡಿಕೆಶಿ ಜೊತೆಗೆ ತೆಗೆಸಿಕೊಳ್ಳುತ್ತಿದ್ದಾರೆ. ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಿರುವ ಯುವ ಕಾರ್ಯಕರ್ತರಿಗೂ ಡಿಕೆಶಿ ಫೋಸ್ ಕೊಡುತ್ತಿದ್ದಾರೆ.

ಊಟ ತಿಂಡಿಗೆ ಎಲ್ಲೂ ತೊಂದರೆ ಬರದಂತೆ ಪಾದಯಾತ್ರೆಯನ್ನು ಇದುವರೆಗೆ ಆಯೋಜಿಸಲಾಗಿದೆ
ಕೆಪಿಸಿಸಿಯ ಬಹುತೇಕ ನಾಯಕರು ಡಿಕೆಶಿ ಜೊತೆ ಹೆಜ್ಜೆ ಹಾಕುತ್ತಿದ್ದಾರೆ. ಊಟ ತಿಂಡಿಗೆ ಎಲ್ಲೂ ತೊಂದರೆ ಬರದಂತೆ ಪಾದಯಾತ್ರೆಯನ್ನು ಇದುವರೆಗೆ ಆಯೋಜಿಸಲಾಗಿದೆ. ಒಂದೊಂದು ಕ್ಷೇತ್ರದ ಜವಾಬ್ದಾರಿಯನ್ನು ಒಬ್ಬಬ್ಬರಿಗೆ ವಹಿಸಿರುವುದರಿಂದ ಪಾದಯಾತ್ರೆ ಎಲ್ಲಾ ಹಂತದಲ್ಲೂ ಯಶಸ್ವಿಯಾಗುವತ್ತ ಸಾಗುತ್ತಿದೆ. ಪಕ್ಷದ ಬಹುದೊಡ್ಡ ಕಾರ್ಯಕ್ರಮವನ್ನು ಉತ್ತಮವಾಗಿ ಆಯೋಜಿಸುತ್ತಾ ತಮ್ಮ ಸಂಘಟನಾ ಶಕ್ತಿಯನ್ನು ಡಿಕೆಶಿ ಪ್ರದರ್ಶಿಸುತ್ತಿದ್ದಾರೆ.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬಹಳಷ್ಟು ಬಾರಿ ಸ್ಪಷ್ಟನೆ
ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ವಿಚಾರ ಕೆಪಿಸಿಸಿಯಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಬಹಳಷ್ಟು ಬಾರಿ ಸ್ಪಷ್ಟನೆಯನ್ನು ನೀಡಿದ್ದರು. ಪ್ರಮುಖ ನಾಯಕರ ಎಚ್ಚರಿಕೆಯ ಹೊರತಾಗಿಯೂ ಕೆಲವು ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯ ಮತ್ತು ಡಿಕೆಶಿ ಹೆಸರನ್ನು ಸಿಎಂ ಹೆಸರಿಗೆ ಎಳೆದು ತಂದಿದ್ದರು. ಇಂತಹ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಮೇಕೆದಾಟು ಪಾದಯಾತ್ರೆಯನ್ನು ಕೈಗೆತ್ತಿಕೊಂಡಿದ್ದರು. ಇದು ಸಂಪೂರ್ಣವಾಗಿ ಡಿಕೆಶಿ ಶೋ ಎಂದು ಬಿಂಬಿಸಲಾಗಿತ್ತು. ಉಕ್ರೇನ್ ನಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿಯ ಸಾವಿನ ಘಟನೆಯ ನಂತರ ಈ ಪಾದಯಾತ್ರೆಗೆ ಅಷ್ಟೇನೂ ಪ್ರಚಾರ ಸಿಗುತ್ತಿಲ್ಲ. ಆದರೂ ಯಾತ್ರೆ ಫುಲ್ ಪವರಿನಿಂದ ಸಾಗುತ್ತಿದೆ.

ಮೇಕೆದಾಟು ಕಾಂಗ್ರೆಸ್ ಪಾದಯತ್ರೆ: ಮೊದಲ ಮತ್ತು ಎರಡನೇ ಫಲಾನುಭವಿಗಳು
ಮೇಕೆದಾಟು ಯಾತ್ರೆ ಇದುವರೆಗೆ ಸಾಗಿ ಬಂದದ್ದನ್ನು ಅವಲೋಕಿಸಿದಾಗ ಇದರ ಸಂಪೂರ್ಣ ಯಶಸ್ಸಿನ ಲಾಭ ಡಿಕೆಶಿ ಬ್ರದರ್ಸಿಗೆ ಎನ್ನುವುದು ನಿರ್ವಿವಾದ. ಈ ಯಾತ್ರೆ ನೀರಿನ ವಿಚಾರಕ್ಕೆ ಎನ್ನುವುದನ್ನು ಸಾರ್ವಜನಿಕರಿಗೆ ಮನದಟ್ಟು ಮಾಡಲು ಒಂದು ಹಂತಕ್ಕೆ ಕಾಂಗ್ರೆಸ್ ಯಶಸ್ವಿಯಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಹಾಗಾಗಿ, ಈ ಮೇಕೆದಾಟು ಪಾದಯಾತ್ರೆಯ ಲಾಭ ಮೊದಲಿಗೆ ಡಿ.ಕೆ.ಶಿವಕುಮಾರ್ ಅವರಿಗೆ ನಂತರ ಕಾಂಗ್ರೆಸ್ಸಿಗೆ ಎಂದು ವಿಶ್ಲೇಷಿಸಲಾಗುತ್ತಿದೆ.












Click it and Unblock the Notifications