'ಮೇಕೆದಾಟು' ರಾಜಕಾರಣ ಪ್ರತಿಯೊಬ್ಬ ಕನ್ನಡಿಗನಿಗೂ ಸತ್ಯ ಗೊತ್ತಿರಲಿ
ಬೆಂಗಳೂರು, ಜ. 06: ವಿಧಾನಸಭೆ ಚುನಾವಣೆ ಹೊಸ್ತಿನಲ್ಲಿ "ಮೇಕೆದಾಟು" ಹೆಸರಿನಲ್ಲಿ ಮೂರು ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ರಾಜಕೀಯ ಚದುರಂಗ ಆಟ ಆರಂಭಿಸಿವೆ. ಕಾವೇರಿ ನದಿ ಮೇಲಿನ ಕನ್ನಡಿಗರ ಪ್ರೀತಿಯನ್ನು ಮತಗಳನ್ನಾಗಿ ಪರಿವರ್ತಿಸಲು ಮೂರ ರಾಜಕೀಯ ಪಕ್ಷಗಳ ಅಖಾಡಕ್ಕೆ ಇಳಿದು ಪೈಪೋಟಿ ಮಾಡುತ್ತಿವೆ. ಅಂತರ ರಾಜ್ಯ ವಿವಾದ ಹೊಂದಿರುವ ಕಾವೇರಿ ನದಿ ನೀರು ಬಳಕೆ "ಮೇಕೆದಾಟು' ಯೋಜನೆಯನ್ನು ಸಾಂವಿಧಾನಿಕ ರಚಿತ ಸಂಸ್ಥೆಗಳ ನಿಯಮಗಳ ಚೌಕಟ್ಟಿನಲ್ಲಿ ಕಾರ್ಯಗತಗೊಳಿಸುವುದನ್ನು ಬಿಟ್ಟು ರಾಜಕೀಯ ಯಾತ್ರೆ, ಜಾತ್ರೆಗಳಿಂದ ಅನುಷ್ಠಾನ ಅಸಾಧ್ಯ. ಈ ಮೇಕೆದಾಟು ಯೋಜನೆ ಅಸಲಿ ಸಂಗತಿಯನ್ನು ಪ್ರತಿಯೊಬ್ಬ ಕನ್ನಡಿಗ ತಿಳಿದುಕೊಳ್ಳಬೇಕಾದ ವಾಸ್ತವ ಸಂಗತಿಗಳನ್ನು ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ 'ಒನ್ಇಂಡಿಯಾ ಕನ್ನಡ'ಕ್ಕೆ ವಿವರಿಸಿದ್ದಾರೆ.
Recommended Video
ಮೇಕೆದಾಟು ಯೋಜನೆ:
ಕಾವೇರಿ ನದಿಯಿಂದ ತಮಿಳುನಾಡಿಗೆ ಹರಿಯುತ್ತಿರುವ ಹೆಚ್ಚುವರಿ ನೀರನ್ನು ಸಂಗ್ರಹಿಸಿ ಹೈಡ್ರೋ ಪವರ್ ಪ್ರಾಜೆಕ್ಟ್ ಮೂಲಕ ವಿದ್ಯುತ್ ಉತ್ಪಾದನೆ. ಜತೆಗೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಗೆ ಶೇ. 100 ರಷ್ಟು ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಿದೆ ಎಂಬುದು ಖಾಸಗಿ ಸಂಸ್ಥೆ ಸಿದ್ಧ ಪಡಿಸಿದ ಸಮಗ್ರ ಯೋಜನಾ ವರದಿ. ಇದರಿಂದ ಹಾಸನ, ಕೊಡಗು, ಮೈಸೂರು, ಬೆಂಗಳೂರು, ಚಾಮರಾಜನಗರ, ಕೋಲಾರ ಸೇರಿ 2.5 ಕೋಟಿ ಜನರಿಗೆ ನೆರವಾಗಲಿದೆ ಎಂಬುದು ಡಿಪಿಆರ್ ಯೋಜನೆ ಸಂಕ್ಷಿಪ್ತ ವಿವರ. ಈ ಯೋಜನೆ ಖಾಸಗಿ ಸಂಸ್ಥೆಯ ವರದಿಯ ಬಗ್ಗೆ ಸಂಶಯ ವ್ಯಕ್ತವಾಗಿದೆ.
ಈ ಯೋಜನೆ ಜಾರಿಯಿಂದ ಖಂಡಿತವಾಗಿ ಬೆಂಗಳೂರು ಸೇರಿದಂತೆ ನೆರೆ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆಗೆ ಭಾಗಶಃ ಪರಿಹಾರ ಸಿಗಲಿದೆ. ಆದರೆ, ಈ ಯೋಜನೆ ರೂಪುರೇಷೆ ಕಾರ್ಯಗತದ ಹಾದಿ ನೋಡಿದರೆ ಮಾತ್ರ ರಾಜ್ಯದ ಮೂರು ರಾಜಕೀಯ ಪಕ್ಷಗಳು ಮೇಕೆದಾಟು ಯೋಜನೆ ವಿಚಾರದಲ್ಲಿ ಜನರಿಗೆ ಮಂಕು ಬೂದಿ ಎರಚುತ್ತಿವೆ ಬಿಟ್ಟರೆ, ಯೋಜನೆ ಜಾರಿ ಮಾಡಿ ಜನರ ದಾಹ ದಣಿಸುವ ಉದ್ದೇಶದ ಮೇಲೆ ಸಂಶಯ ಮೂಡಿದೆ. ಕಾವೇರಿ ನದಿ ಮೇಲಿನ ಕನ್ನಡಿಗರ ಪ್ರೀತಿಯನ್ನು ಮತಗಳನ್ನಾಗಿ ಪರಿವರ್ತಿಸುವ ದೊಡ್ಡ ಕುತಂತ್ರ ಅಡಗಿರುವುದು ಗೋಚರಿಸುತ್ತದೆ.
ವೈಜ್ಞಾನಿಕವಾಗಿ ಸಾಂವಿಧಾನದ ಚೌಕಟ್ಟಿನಲ್ಲಿ ಜಾರಿಯಾಗಬೇಕಿರುವ ಮೇಕೆದಾಟು ಯೋಜನೆ ವಿಚಾರದಲ್ಲಿ ಆಡಳಿತ - ಮತ್ತು ವಿರೋಧ ಪಕ್ಷಗಳು ಆಡುತ್ತಿರುವ ನಾಟಕ ನೋಡಿದರೆ, ಜನರಿಗೆ ಮಂಕು ಬೂದಿ ಎರಚುವ ಮತ್ತೊಂದು '2023 ರ ವಿಧಾನಸಭೆ ಚುನಾವಣೆ ಮತ ನಾಟಕ' ಎಂದೇ ಭಾವಿಸಬೇಕಾಗುತ್ತದೆ.
ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ
ಸಂವಿಧಾನಾತ್ಮಕ ಚೌಕಟ್ಟಿನಲ್ಲಿ ಮೇಕೆದಾಟು ಯೋಜನೆ ಜಾರಿ ಮಾಡಬೇಕೆ ವಿನಃ, ಕಾಂಗ್ರೆಸ್ ಪಾದಯಾತ್ರೆ, ಬಿಜೆಪಿಯವರ ಪ್ರತಿತಂತ್ರದಿಂದ ಜಾತ್ರೆಯಿಂದಾಗಲೀ, ಜೆಡಿಎಸ್ನವರ ಪಶ್ಚಾತ್ತಾಪದ ಮಾತುಗಳಿಂದ ಈ ಯೋಜನೆ ಮುಂದಿನ ನೂರು ವರ್ಷವಾದರೂ ಜಾರಿಯಾಗುವುದಿಲ್ಲ ಎಂಬುದು ಅಷ್ಟೇ ಸತ್ಯ ಎಂದು ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾವೇರಿ ನದಿ ನೀರಿನ ಬಳಕೆ ಕುರಿತು ಈಗಾಗಲೇ ಸುಪ್ರೀಂಕೋರ್ಟ್ ಅಂತಿಮ ತೀರ್ಪು ನೀಡಿದೆ. ಅದೇ ಕಾವೇರಿ ನದಿಯ ಭಾಗವಾಗಿಯೇ ಮೇಕೆದಾಟು ಯೋಜನೆ. ಕಾವೇರಿ ನೀರು ಬಳಕೆ ಸಂಬಂಧ ಅಣೆಕಟ್ಟು ಕಟ್ಟುವ ವಿಚಾರ ಬಂದರೆ, ಮೊದಲು ಕೇಂದ್ರ ಸರ್ಕಾರದ ಕೇಂದ್ರೀಯ ಜಲ ಆಯೋಗದಿಂದ ಸಮಗ್ರ ಯೋಜನಾ ವರದಿ ಸಿದ್ಧಪಡಿಸಬೇಕು. ಅದಕ್ಕೆ ಇರುವ ಮಾನ್ಯತೆ ಖಾಸಗಿ ಏಜೆನ್ಸಿಗಳು ಮಾಡುವ ವರದಿಗೆ ಇರುವುದಿಲ್ಲ.
ಈ ಯೋಜನೆ ಜಾರಿಯಿಂದ ತಮಿಳುನಾಡು- ಕರ್ನಾಟಕಕ್ಕೆ ಆಗುವ ಉಪಯೋಗಗಳ ಕುರಿತು ಮನವರಿಕೆ ಮಾಡಿಕೊಡಬೇಕು. ಮಿನಿಸ್ಟ್ರಿ ಆಫ್ ಎನ್ವಿರಾನ್ ಮೆಂಟ್ ಅಂಡ್ ಫಾರೆಸ್ಟ್ರಿ ಯಿಂದ ಕ್ಲಿಯರೆನ್ಸ್ ತೆಗೆದುಕೊಳ್ಳಬೇಕಿತ್ತು. ಇದರ ಜತೆಗೆ ಇತರೆ ಸಂವಿಧಾನಿಕ ರಚಿತ ಸಂಸ್ಥೆಗಳಿಂದ ಯೋಜನೆ ಜಾರಿಗೆ ಯಾವುದೇ ತೊಡಕು ಇಲ್ಲದೇ ಅನುಮತಿ ಪಡೆಯಬೇಕು. ಇದು ಮೇಕೆದಾಟು ಯೋಜನೆ ಜಾರಿಯ ವೈಜ್ಞಾನಿಕ ಹಾಗೂ ಕಾನೂನಾತ್ಮಕ ಹಾದಿ. ಆದರೆ ರಾಜ್ಯವನ್ನಾಳಿದ ಮೂರು ಸರ್ಕಾರಗಳು ಜನರಿಗೆ ಮೇಕೆದಾಟು ವಿಚಾರದಲ್ಲಿ ಕಾನೂನಾತ್ಮಕ ಹಾಗೂ ವೈಜ್ಞಾನಿಕ ಹಾದಿ ಬಿಟ್ಟು ಜನರ ದಿಕ್ಕು ತಪ್ಪಿಸುತ್ತಿರುವ ಮೂರು ಪಕ್ಷಗಳ ಅಸಲಿ ಬಣ್ಣ ಇಲ್ಲಿ ವಿವರಿಸಲಾಗಿದೆ.
ಮೇಕೆದಾಟು ಕೈ ಡಿಪಿಆರ್ ಲೋಪ:
ಕಾವೇರಿ ನದಿ ನೀರಿನ ಹಂಚಿಕೆ ಕುರಿತು ನೆರೆ ರಾಜ್ಯ ತಮಿಳುನಾಡು, ಕೇರಳಾ, ಗೋವಾ ದೊಂದಿಗೆ ವಿವಾದ ಹೊಂದಿತ್ತು. ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ನದಿ ನೀರು ಹಂಚಿಕೆಯಾಗಿದ್ದರೂ, ಕಾವೇರಿ ನದಿ ನೀರಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟುವ ಕುರಿತು ಸಮಗ್ರ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗದಿಂದಲೇ ರೂಪಿಸಬೇಕಿತ್ತು. 2013 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ನೀರಾವರಿ ಸಚಿವರಾಗಿದ್ದ ಎಂ.ಬಿ. ಪಾಟೀಲ್ ಅವರು ಒಂದು ಖಾಸಗಿ ಸಂಸ್ಥೆ ಮೂಲಕ 5912 ಕೋಟಿ ರೂ. ಮೊತ್ತದಲ್ಲಿ ಸಮಗ್ರ ಯೋಜನಾ ವರದಿ(ಡಿಪಿಆರ್) ತಯಾರಿಸಿರುವುದೇ ಮೊದಲ ಎಡವಟ್ಟು. ಮೇಕೆದಾಟು ಕಾವೇರಿ ನದಿ ನೀರು ಬಳಕೆ ಸಂಬಂಧಿಸಿದ ಯೋಜನೆ. ಇದನ್ನು ಖಾಸಗಿ ಅವರಿಂದ ಡಿಪಿಆರ್ ಮಾಡಿಸುವುದಕ್ಕಿಂತಲೂ ಕೇಂದ್ರೀಯ ಜಲ ಆಯೋಗದಿಂದ ಮಾಡಿಸಬೇಕು ಎಂಬ ಸಾಮಾನ್ಯ ಪ್ರಜ್ಞೆ ತೋರದೇ ಡಿಪಿಆರ್ ರೂಪಿಸಿದ್ದು ಕಾಂಗ್ರೆಸ್ ಮಾಡಿರುವ ಮಹಾ ಎಡವಟ್ಟು.
ಖಾಸಗಿ ಏಜನ್ಸಿ ಮೂಲಕ ಯೋಜನಾ ವರದಿ ತಯಾರಿಸಿ ಕೇಂದ್ರೀಯ ಜಲ ಆಯೋಗಕ್ಕೆ ಸಲ್ಲಿಸಿದ್ದಾರೆ. 2018 ರಲ್ಲಿ ಕೂಡ ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ವಿದ್ದಾಗ ನೀರಾವರಿ ಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್ ಅವರು 9000 ಕೋಟಿ ಮೊತ್ತದ ಪರಿಷ್ಕೃತ ಡಿಪಿಆರ್ ತಯಾರಿಸಿದ್ದಾರೆ. ವಿಪರ್ಯಾಸವೆಂದರೆ ಅದು ಕೂಡ ಖಾಸಗಿ ಏಜೆನ್ಸಿ ತಯಾರಿಸಿರುವ ವರದಿ. ಕಾವೇರಿ ನದಿ ನೀರಿನ ಹಂಚಿಕೆ ಕುರಿತು ನೆರೆ ರಾಜ್ಯದೊಂದಿಗೆ ವಿವಾದ ಹೊಂದಿರುವ ಕಾರಣ ಕೇಂದ್ರೀಯ ಜಲ ಆಯೋಗದಿಂದ ಡಿಪಿಆರ್ ರಚಿಸಬೇಕು ಎಂಬ ಸಾಮಾನ್ಯ ಪ್ರಜ್ಞೆ ಸಮ್ಮಿಶ್ರ ಸರ್ಕಾರಕ್ಕೆ ಇರಲಿಲ್ಲವೇ ?
ಮೊದಲ ಹೆಜ್ಜೆ:
ಕಾವೇರಿ ನದಿ ನೀರಿನ ಹಂಚಿಕೆ ಕುರಿತು ನೆರೆ ರಾಜ್ಯಗಳೊಂದಿಗೆ ವಿವಾದವಿದೆ. ಹೀಗಾಗಿ ಕಾನೂನು ಚೌಕಟ್ಟಿನಲ್ಲಿ ವೈಜ್ಞಾನಿಕವಾಗಿ ಮೇಕೆದಾಟು ಯೋಜನೆ ಜಾರಿಗೆ ರಾಜ್ಯದ ಎಲ್ಲಾ ಪಕ್ಷಗಳ ನಾಯಕರು ಮತ್ತು ಪಕ್ಷಾತೀವಾಗಿ ಸಂಸದರು ಒಗ್ಗಟ್ಟಾಗಿ ಪ್ರಧಾನಮಂತ್ರಿ ಹಾಗೂ ಕೇಂದ್ರ ಜಲ ಸಂಪನ್ಮೂಲ ಸಚಿವರ ಮೇಲೆ ಪ್ರಭಾವ ಬೀರಬೇಕಿತ್ತು. ಜನರ ಕಷ್ಟ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಬೇಕಿತ್ತು. ಮೇಕೆದಾಟುವಿನಿಂದ ತಮಿಳುನಾಡಿಗೂ ಅನುಕೂಲ ಎಂಬುದನ್ನು ಆ ರಾಜ್ಯಕ್ಕೂ ವೈಜ್ಞಾನಿಕವಾಗಿ ಅರ್ಥ ಪಡಿಸಿ ತಗಾದೆ ತೆಗೆಯದಂತೆ ಮಾಡಬೇಕಿತ್ತು.
ಎರಡನೇ ಹೆಜ್ಜೆ:
ಯಾವುದೇ ರವರ್ ವ್ಯಾಲಿ ಅಂಡ್ ಹೈಡ್ರೋ ಪ್ರಾಜೆಕ್ಟ್ ಕಾರ್ಯಗತಗೊಳಿಸಬೇಕಾದರೆ ಕೇಂದ್ರ ಪರಿಸರ ಮಂತ್ರಾಲಯದಲ್ಲಿರುವ ರಿವರ್ ವ್ಯಾಲಿ, ಡ್ಯಾಮ್, ಹೈಡ್ರೋ ಪ್ರಾಜಕ್ಟ್ ಅನುಮತಿಗೆ ಸಂಬಂಧಿಸಿದಂತೆ ಎಕ್ಸ್ ಪರ್ಟ್ ಅಪ್ರೈಸಲ್ ಕಮಿಟಿಯಿಂದ "ನಿರಪೇಕ್ಷಣೆ' ಪತ್ರ ಪಡೆಯಬೇಕು. ಪರಿಸರ ಮತ್ತು ಸಾಮಾಜಿಕ ಪರಿಣಾಮ ಕುರಿತು ಅಧ್ಯಯನ ನಡೆಸಬೇಕಿತ್ತು. ಅನುಮತಿ ಕೊಡಬೇಕಿರುವ ಎಕ್ಸಪರ್ಟ್ ಅಪ್ರೈಸಲ್ ಕಮಿಟಿಯಲ್ಲಿರುವರು ಅನರ್ಹರು ಎಂಬ ವಿಚಾರವಾಗಿ ಸಮಿತಿ ಸದ್ಯದ ಮಟ್ಟದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳದ ಪರಿಸ್ಥಿತಿಯಲ್ಲಿದೆ.
ಇದೇ ರೀತಿ ಸಾಂವಿಧಾನಿಕವಾಗಿ ರಚನೆಯಾಗಿರುವ ಸಂಸ್ಥೆಗಳಿಂದ ಕಾನೂನಾತ್ಮಕವಾಗಿ ಮಾನ್ಯತೆಗಳನ್ನು ಪಡೆದು ಯೋಜನೆಯನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರೂ ಸಾಮೂಹಿಕ ಒಗ್ಗಟ್ಟು ಪ್ರದರ್ಶಿಸಿ ಕಾನೂನಾತ್ಮಕ ಮತ್ತೂ ವೈಜ್ಞಾನಿಕ ಜಾರಿಯ ಹಾದಿ ತುಳಿಬೇಕಿತ್ತು. ಕಳೆದ ಒಂದು ದಶಕ ಮೇಕೆದಾಟು ವಿಚಾರದಲ್ಲಿ ನಡೆದಿರುವ ಬೆಳವಣಿಗೆ ನೋಡಿದರೆ ಈ ಕುರಿತು ಒಂದು ನಡೆಯಾದರೂ ಸರಿ ಇದೆಯೇ ?
ದಾಖಲೆ ಬಿಡುಗಡೆ ಮಾಡಲಿ:
ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ರೂಪಿಸಿದ ಮೇಕೆದಾಟು ಮೊದಲ ಡಿಪಿಆರ್ ಯೋಜನೆ ಸಂಬಂಧ ಸಂವಿಧಾನಾತ್ಮಕ ರಚಿತ ಯಾವ ಸಂಸ್ಥೆಗಳಿಂದ ಅನುಮತಿ ಪಡೆದಿದ್ದಾರೆ ಎಂಬ ದಾಖಲೆಗಳನ್ನು ಸಾರ್ವಜನಿಕರ ಮುಂದೆ ಬಿಡುಗಡೆ ಮಾಡುವರೇ ? 2018 ರಲ್ಲಿ ಖಾಸಗಿ ಏಜೆನ್ಸಿ ಮೂಲಕವೇ ಮೇಕೆದಾಟು ಸಮಗ್ರ ಯೋಜನಾ ವರದಿ ತಯಾರಿಸಿದ ಮಾಜಿ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು, ಕೇಂದ್ರದ ಯಾವ್ಯಾವ ಸಂವಿಧಾನಿಕ ಸಂಸ್ಥೆಗಳಿಗೆ ವರದಿ ಕಳಿಸಿದ್ದಾರೆ. ಅನುಮತಿ ಪಡೆದಿದ್ದಾರೆ. ಈ ಯೋಜನೆ ವೈಜ್ಞಾನಿಕ ಕಾರ್ಯಗತಗೊಳಿಸಲು ನಡೆಸಿದ ಪ್ರಯತ್ನದ ದಾಖಲೆಗಳನ್ನು ಜನರ ಮುಂದೆ ಇಡುವರೇ?
ಕಳೆದ ಮೂರೂವರೆ ವರ್ಷದಿಂದ ರಾಜ್ಯವನ್ನಾಳುತ್ತಿರುವ ಬಿಜೆಪಿ ಸರ್ಕಾರ ಮೇಕೆದಾಟು ಯೋಜನೆ ಜಾರಿ ವಿಚಾರದಲ್ಲಿ ಕಾನೂನಾತ್ಮಕವಾಗಿ ಯಾವ ಹೆಜ್ಜೆ ಇಟ್ಟಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ, ಯೋಜನೆ ಅನಷ್ಠಾನ ಸಂಬಂಧ ಯಾಕೆ ಸಂವಿಧಾನಾತ್ಮಕ ಸಂಸ್ಥೆಗಳ ಅನುಮತಿ ಪಡೆಯುವ ಪ್ರಯತ್ನ ಮಾಡಲಿಲ್ಲ. ನೀರಾವರಿ ವಿಚಾರದಲ್ಲಿ ರಾಜ್ಯ ಮುಖ್ಯ ಎಂದು ಎಲ್ಲಾ ಪಕ್ಷಗಳ ನೆರವಿನಿಂದ ಕೇಂದ್ರದ ಮೇಲೆ ಒತ್ತಡ ಹಾಕದೇ ಮೇಕೆದಾಟು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದೆ ?
ಮೇಕೆದಾಟು ಯೋಜನೆ ಕಾರ್ಯಗತಗೊಳಿಸುವ ಬಗ್ಗೆ ಕನಿಷ್ಠ ಪಕ್ಷ ತಜ್ಞ ಅಧಿಕಾರಿಗಳನ್ನು ಒಳಗೊಂಡ ಅಥವಾ ನೀರಾವರಿ ತಜ್ಞರನ್ನು ಒಂದು ಟಾಸ್ಕ್ ಫೋರ್ಸ್ ರಚನೆ ಮಾಡಿ, ಅದಕ್ಕಾದರೂ ಜವಾಬ್ದಾರಿ ವಹಿಸಿದ್ದಾರೆಯೇ? ಅದೂ ಇಲ್ಲ. ನೀರಾವರಿ ಹೋರಾಟದಲ್ಲಿ ದೈತ್ಯ ವಿರೋಧಿ ರಾಜ್ಯ ತಮಿಳುನಾಡು ಕಾನೂನು ಸಂಘರ್ಷ ಶುರು ಮಾಡಲು ಮೂರು ಪಕ್ಷಗಳು ಅನುವು ಮಾಡಿಕೊಡುತ್ತಿರುವುದು ಬಿಟ್ಟರೆ ನಿಜವಾಗಿಯೂ ಇವರಿಗೆ ಮೇಕೆದಾಟು ಯೋಜನೆ ಪರಿಣಾಮ ಕಾರಿ ಅನುಷ್ಠಾನ ಸಾಧ್ಯವಿಲ್ಲ ಕಾಳಜಿ ಇದ್ದಿದ್ದರೆ, ಅದರ ಕಾರ್ಯಗತಕ್ಕೆ ಕಾನೂನಾತ್ಮಕ ಜಾರಿ ಹಾದಿಯನ್ನೇ ತುಳಿಯುತ್ತಿದ್ದರು ಅಲ್ಲವೇ? ಈ ಪ್ರಶ್ನೆಗಳಿಗೆ ಮೂರು ರಾಜಕೀಯ ಪಕ್ಷಗಳ ನಾಯಕರು ಉತ್ತರ ಕೊಡುವರೇ?
ಆಂಜನೇಯರೆಡ್ಡಿ ಮನವಿ:
ಮೇಕೆದಾಟು ಯೋಜನೆಯ ಬಗ್ಗೆ ರಾಜ್ಯದ ಯಾವ ರಾಜಕೀಯ ನಾಯಕರಿಗೂ ವೈಜ್ಞಾನಿಕವಾಗಿ ಮತ್ತು ಕಾನೂನಾತ್ಮಕವಾಗಿ ಜಾರಿ ಮಾಡಲು ಬದ್ಧತೆ ತೋರುತ್ತಿಲ್ಲ. ಕಾವೇರಿ ನದಿ ನೀರಿನ ಜನರ ಪ್ರೀತಿಯನ್ನು ಮತ ಬ್ಯಾಂಕ್ನ್ನಾಗಿ ಪರಿವರ್ತಿಸಲು ನಾಟಕ ಆರಂಭಿಸಿದ್ದಾರೆ. ಮೇಕೆದಾಟು ಯೋಜನೆ ಕಾರ್ಯಗತಗೊಳಿಸಲು ಕಾನೂನಾತ್ಮಕವಾಗಿ ಎಲ್ಲಾ ಅನುಮತಿ ಸಿಕ್ಕ ನಂತರ ಆಡಳಿತ ರೂಢ ಸರ್ಕಾರ ಹಣ ಕೊಡಲಿಲ್ಲ ಎಂದರೆ ಪಾದಯಾತ್ರೆ ಮಾಡುವುದರಲ್ಲಿ ಅರ್ಥವಿದೆ. ಅದನ್ನು ಬಿಟ್ಟು ಪಾದಯಾತ್ರೆ ಮಾಡುವುದಲ್ಲಿ ಅರ್ಥವೇನಿದೆ? ಇನ್ನು ಜೆಡಿಎಸ್ - ಬಿಜೆಪಿ ಪಕ್ಷಗಳದ್ದು ಇದೇ ನೀತಿ. ಕಾಂಗ್ರೆಸ್ ಪಕ್ಷ ಮಾಡಲಿಲ್ಲ, ಆ ತಪ್ಪನ್ನು ನಾವು ಮಾಡುವುದು ಬೇಡ ಎಂದು ಬಿಜೆಪಿ ಸರ್ಕಾರ ಪ್ರಯತ್ನ ಮಾಡಿದೆಯಾ ಅದೂ ಇಲ್ಲ.
ನೀರಾವರಿ ಹೋರಾಟಗಾರರಿಗೆ ಬೇಸರ
ಮುಂದಿನ ವಿಧಾನಸಭೆ ಚುನಾವಣೆ ಮನಸಲ್ಲಿ ಇಟ್ಟುಕೊಂಡು ಮೇಕೆದಾಟ ಯೋಜನೆ ಹೆಸರಿನಲ್ಲಿ ಮೂರು ಪಕ್ಷಗಳು ರಾಜಕೀಯ ಆರಂಭಿಸಿರುವುದು ನೀರಾವರಿ ಹೋರಾಟಗಾರರಿಗೆ ಬೇಸರ ಮೂಡಿಸಿದೆ. ಇದರಿಂದ ಯೋಜನೆ ತಡೆಯಲು ತಮಿಳುನಾಡಿಗೆ ಅನುಕೂಲವಾಗಲಿದೆ ಬಿಟ್ಟರೆ, ಮೇಕೆದಾಟು ಯೋಜನೆ ಕಾರ್ಯಗತವಂತೂ ಸಾಧ್ಯವಾಗುವುದಿಲ್ಲ. ಈ ವಾಸ್ತವವನ್ನು ಜನರು ಅರಿತುಕೊಳ್ಳಬೇಕು. ರಾಜ್ಯದಲ್ಲಿ ಖಾಸಗಿ ಏಜೆನ್ಸಿಗಳ ಮೂಲಕ ಡಿಪಿಆರ್ ಮಾಡಿಸಿ, ಯೋಜನೆಗಳನ್ನು ಜಾರಿ ಮಾಡಿ ಎಡವಟ್ಟು ಆಗಿರುವುದಕ್ಕೆ ಎತ್ತಿನಹೊಳೆಗಿಂತಲೂ ಬೇರೆ ಉದಾಹರಣೆ ಬೇಕೆ? ನೀರಿನ ವಿಚಾರ ಇಟ್ಟುಕೊಂಡು ರಾಜಕಾರಣ ಮಾಡುವ ಬದಲು ಕಾನೂನಾತ್ಮಕವಾಗಿ ಯೋಜನೆ ಜಾರಿ ಕುರಿತು ಮೂರು ಪಕ್ಷಗಳು ಪಕ್ಷತೀತವಾಗಿ ಸಮಾಲೋಚಿಸಬೇಕು. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ನೀರಾವರಿ ಹೋರಾಟ ತಜ್ಞ ಆಂಜನೇಯರೆಡ್ಡಿ ಆಗ್ರಹಿಸಿದ್ದಾರೆ.