ಕೊಡಗಿನವರು ಕಾಡನ್ನೇ ದೇವರೆಂದು ಪೂಜಿಸುವುದೇಕೆ? ಏನಿದರ ವಿಶೇಷತೆ?
ಮಡಿಕೇರಿ, ಏಪ್ರಿಲ್ 05: ಸದಾ ಪ್ರಕೃತಿಯೊಂದಿಗೆ ಒಡನಾಟ ಹೊಂದಿ ಕೃಷಿಯೊಂದಿಗೆ ಜೀವನವನ್ನು ಕಟ್ಟಿಕೊಂಡು ಬಂದಿರುವ ಕೊಡಗಿನವರು ಪ್ರಕೃತಿಯನ್ನೇ ದೇವರೆಂದು ಪೂಜಿಸಿಕೊಂಡು ಬಂದವರು. ಹೀಗಾಗಿಯೇ ಜಿಲ್ಲೆಯಾದ್ಯಂತ ಅಲ್ಲಲ್ಲಿ ದೇವರಕಾಡುಗಳು ನೋಡಲು ಸಿಗುತ್ತಿವೆ. ಈ ದೇವರ ಕಾಡುಗಳಲ್ಲಿ ಶಕ್ತಿ ಹೊಂದಿದ ವಿವಿಧ ದೇವರ ನೆಲೆಯಿದ್ದು ಅಲ್ಲಿ ಪೂಜೆ ಮಾಡುತ್ತಾ ಬರುತ್ತಿರುವುದು ಕಂಡು ಬರುತ್ತಿದೆ. ಅನಾದಿಕಾಲದಿಂದಲೂ ಕೊಡಗಿನ ಜನ ಪ್ರಕೃತಿಯ ಆರಾಧಕರಾಗಿ, ಅದರ ಒಡನಾಟದಲ್ಲಿ ಬೆಳೆದು ಬಂದಿದ್ದಾರೆ ಎಂಬುದಕ್ಕೆ ದೇವರಕಾಡುಗಳೇ ಸಾಕ್ಷಿಯಾಗಿವೆ.
ಕೃಷಿಯೇ ಜೀವನಾಧಾರವಾಗಿದ್ದ ಕಾಲದಲ್ಲಿ ಬೆಟ್ಟಗುಡ್ಡ, ನೀರಿನಾಶ್ರಯವಿರುವ ಸ್ಥಳದಲ್ಲಿ ನೆಲೆಯೂರುತ್ತಿದ್ದ ಜನ ತಮಗೆ ಸಾಮರ್ಥ್ಯವಿರುವಷ್ಟು ಪ್ರದೇಶದಲ್ಲಿ ಗದ್ದೆಯನ್ನು ನಿರ್ಮಿಸಿ ಭತ್ತ, ತರಕಾರಿ, ಗೆಡ್ಡೆಗೆಣಸು, ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದರು. ಕೃಷಿ ಚಟುವಟಿಕೆಗೆ ಪೂರಕವಾದ ಸಲಕರಣೆಗಳನ್ನು ಕಾಡುಗಳಲ್ಲಿ ಸಿಗುವ ಗಟ್ಟಿಮುಟ್ಟಾದ ಕಾಡು ಮರಗಳಿಂದ ತಯಾರು ಮಾಡುತ್ತಿದ್ದರು.

ತಾನು ಕೃಷಿ ಮಾಡುತ್ತಿದ್ದ ಪ್ರದೇಶಗಳಲ್ಲಿ ತನ್ನ ಕೃಷಿ ಕಾರ್ಯಕ್ಕೆ ಹೆಗಲಾಗಿ ದುಡಿಯುವ ಜಾನುವಾರುಗಳಿಗೆ ಕ್ರೂರ ಪ್ರಾಣಿಗಳಿಂದ ತೊಂದರೆಯಾಗದಿರಲಿ, ಕೃಷಿಯನ್ನು ವನ್ಯಪ್ರಾಣಿಗಳು ನಾಶಮಾಡದಿರಲಿ ಎಂದು ಹೆಮ್ಮರದ ಬುಡದಲ್ಲಿ ಕಲ್ಲನ್ನಿಟ್ಟು, ಅದನ್ನು ದೇವರ ರೂಪದಲ್ಲಿ ಪೂಜಿಸುತ್ತಿದ್ದರು. ಪ್ರತಿವರ್ಷ ಹಬ್ಬ ಮಾಡಿ ಸಂಭ್ರಮಿಸುತ್ತಿದ್ದನು.
ಮನೆಗಳಲ್ಲಿ ಸಾಕು ಪ್ರಾಣಿಗಳು ವೃದ್ಧಿಯಾಗದಿದ್ದಾಗ ಹರಕೆ ಹೊತ್ತು ಬಳಿಕ ವರ್ಷದ ಹಬ್ಬದ ಸಂದರ್ಭದಲ್ಲಿ ಒಪ್ಪಿಸಲಾಗುತ್ತಿತ್ತು. ಹೀಗೆ ಹುಟ್ಟಿಬಂದ ವನದೇವರು ಇವತ್ತಿಗೂ ಜಿಲ್ಲೆಯ ಹಲವೆಡೆ ವಿವಿಧ ಅವತಾರಗಳಲ್ಲಿ ಪೂಜಿಸಲ್ಪಡುತ್ತಿವೆ. ನಾಗರಿಕತೆ ಬೆಳೆದಂತೆಲ್ಲ ಗದ್ದೆಯೊಂದಿಗೆ ಕಾಫಿ, ಏಲಕ್ಕಿ ತೋಟಗಳು ಹೆಚ್ಚಾಗತೊಡಗಿದವು. ಈ ವೇಳೆ ಕಾಡುಗಳೆಲ್ಲವೂ ಮಾಯವಾಗತೊಡಗಿತ್ತು. ಈ ಸಂದರ್ಭ ಹಿರಿಯರು ಕಾಡನ್ನು ಉಳಿಸುವ ಸಲುವಾಗಿ ತಾವು ಪೂಜಿಸಿಕೊಂಡು ಬಂದಿದ್ದ ವನದೇವತೆಗಾಗಿ ಕಾಡನ್ನು ಆಯಾಯ ಊರಿನ ಸಾಮರ್ಥ್ಯಕ್ಕೆ ತಕ್ಕಂತೆ ಮೀಸಲಿಟ್ಟರು. ಅದು ಇವತ್ತಿಗೂ ದೇವರಕಾಡಾಗಿಯೇ ಉಳಿದು ಬಂದಿದೆ.
ಕಾಡುಗಳಲ್ಲಿ ನೆಲೆನಿಂತ ವನದೇವತೆಗಳು
ಈ ದೇವರ ಕಾಡುಗಳಲ್ಲಿ ಭದ್ರಕಾಳೇಶ್ವರಿ, ಭದ್ರಕಾಳಿ, ವನಭದ್ರಕಾಳಿ, ಬೇಟೆ ಅಯ್ಯಪ್ಪನಾಗಿ ದೇವರು ನೆಲೆ ನಿಂತಿದ್ದು, ಒಂದೊಂದು ಊರುಗಳಲ್ಲಿರುವ ದೇವರಕಾಡುಗಳಲ್ಲಿ ಒಂದೊಂದು ರೀತಿಯ ದೇವರನ್ನು ಪೂಜಿಸುವುದನ್ನು ಕೊಡಗಿನಾದ್ಯಂತ ಕಾಣಬಹುದು. ಕೆಲವು ಕಡೆ ದೇವರಕಾಡಿನ ಆಧಿದೈವದ ಪೂಜೆ ವರ್ಷಕ್ಕೊಮ್ಮೆ ನಡೆದರೆ ಮತ್ತೆ ಕೆಲವೆಡೆ ಎರಡು ವರ್ಷಕ್ಕೊಮ್ಮೆ ಹಬ್ಬವನ್ನು ಊರಿನವರು ನಡೆಸುತ್ತಾರೆ. ಬಹಳಷ್ಟು ದೇವರಕಾಡುಗಳು ಊರಿನ ಒಳಭಾಗದಲ್ಲಿವೆ. ಈ ದೇವರ ಕಾಡುಗಳಲ್ಲಿ ಕೆಲವು ದೇವರಿಗೆ ಮಾತ್ರ ಗುಡಿಗೋಪುರವಿದೆ. ಕೆಲವು ದೇವರಿಗೆ ಗುಡಿಕಟ್ಟುವುದು ನಿಷಿದ್ಧವಾಗಿದ್ದು, ಮರದ ಬುಡವೇ ಆ ದೇವರುಗಳ ನೆಲೆಯಾಗಿದೆ.

ಇವತ್ತು ಬಹಳಷ್ಟು ಗ್ರಾಮಗಳಲ್ಲಿರುವ ದೇವರಕಾಡುಗಳ ಉಸ್ತುವಾರಿಯನ್ನು ಅರಣ್ಯ ಇಲಾಖೆಯೇ ವಹಿಸಿಕೊಂಡಿದ್ದರೂ ವರ್ಷಕ್ಕೊಮ್ಮೆ ಪೂಜೆ ಪುರಸ್ಕಾರವನ್ನು ಗ್ರಾಮಸ್ಥರು ನಡೆಸಿಕೊಂಡು ಬರುತ್ತಿದ್ದಾರೆ. ತಮ್ಮ ಗ್ರಾಮಗಳಲ್ಲಿರುವ ದೇವರ ಕಾಡಿನಲ್ಲಿ ನೆಲೆನಿಂತ ದೇವರನ್ನು ಪೂಜಿಸುವ ಆರಾಧಿಸುವ ಕ್ರಮಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ವಿಭಿನ್ನವಾಗಿದ್ದರೂ ಮೂಲ ಉದ್ದೇಶ ಮಾತ್ರ ಒಂದೇ ಅದು ಅರಣ್ಯವನ್ನು ಕಾಪಾಡುವುದಾಗಿದೆ. ಇಲ್ಲಿನ ಯಾವುದೇ ರಸ್ತೆಯಲ್ಲಿ ಸಾಗಿದರೂ ಇಂತಹ ವನದೇವರ ದೇಗುಲಗಳು ಅಲ್ಲಲ್ಲಿ ನೋಡಲು ಸಿಗುತ್ತವೆ.
ಕೊಡಗಿನಲ್ಲಿ 1214 ದೇವರಕಾಡುಗಳಿವೆ
ಇಂತಹ ದೇವಾಲಯಗಳ ಪೈಕಿ ವೀರಾಜಪೇಟೆ ಮತ್ತು ಗೋಣಿಕೊಪ್ಪ ರಸ್ತೆ ನಡುವೆ ಸಿಗುವ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾತೂರು ಕೊಳತ್ತೋಡು ಬೈಗೋಡಿನ ವನಭದ್ರಕಾಳೇಶ್ವರಿ, ಮಡಿಕೇರಿ ಕುಶಾಲನಗರ ರಸ್ತೆಯ ಕೆದಕಲ್ ನ ಭದ್ರಕಾಳೇಶ್ವರಿ, ಮಡಿಕೇರಿ ಸುಳ್ಯ ಮಾರ್ಗದ ದೇವರಕೊಲ್ಲಿ ಬಳಿಯಿರುವ ಚಾಮುಂಡೇಶ್ವರಿ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹಿಂದಿನ ಕಾಲದ ದಿನಗಳ ಬಗ್ಗೆ ನೋಡುತ್ತಾ ಹೋದರೆ ಕೃಷಿಯೇ ಜೀವಾಳವಾಗಿದ್ದ ಕಾಲದಲ್ಲಿ ಜನಜಾನುವಾರು, ಸಾಕುಪ್ರಾಣಿಗಳಿಗೆ ತೊಂದರೆಯಾದರೆ, ವನ್ಯಪ್ರಾಣಿಗಳಿಂದ ಉಪಟಳವಾಗುತ್ತಿದ್ದಾಗ ದೇವರಕಾಡಿನಲ್ಲಿ ನೆಲೆನಿಂತ ದೇವರಲ್ಲಿ ಸಂಕಷ್ಟ ನಿವಾರಣೆಗೆ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದರು.

ಇದು ಫಲಿಸಿದಾಗ ಹರಕೆಯಾಗಿ ಮಣ್ಣಿನ ಅಥವಾ ಬೆಳ್ಳಿಯ ಮೂರ್ತಿಗಳನ್ನು ಸಲ್ಲಿಸುತ್ತಿದ್ದರು. ಹಿಂದಿನ ಕಾಲದಲ್ಲಿ ಹರಕೆಯಾಗಿ ಸಲ್ಲಿಸುತ್ತಿದ್ದ ಮಣ್ಣಿನ ಮೂರ್ತಿಗಳನ್ನು ಇಂದಿಗೂ ಕಾಣಬಹುದಾಗಿದೆ. ಇದೆಲ್ಲದರ ನಡುವೆಯೂ ತುಸು ನೆಮ್ಮದಿಪಡುವ ವಿಷಯ ಏನೆಂದರೆ, ಪೂರ್ವಜರು ಕಾಡನ್ನೇ ದೇವರೆಂದು ಪೂಜಿಸುವ ಮೂಲಕ ಕಾಡು ನಾಶ ತಪ್ಪಿಸುವ ಉದ್ದೇಶದಿಂದ ಸೃಷ್ಟಿ ಮಾಡಿದ ದೇವರಕಾಡುಗಳು ಇನ್ನೂ ನಮ್ಮೊಂದಿಗಿವೆ. ಜಿಲ್ಲೆಯ 4104 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ 1214 ದೇವರಕಾಡುಗಳಿವೆ ಇವುಗಳ ರಕ್ಷಣೆ ಮಾಡಿಕೊಂಡು ಮುನ್ನಡೆಯುತ್ತಿರುವುದು ಖುಷಿಕೊಡುವ ಸಂಗತಿಯಾಗಿದೆ.












Click it and Unblock the Notifications