ಉಪರಾಷ್ಟ್ರಪತಿ ಚುನಾವಣೆ: ಜಗದೀಪ್ ಧನಕರ್‌ಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದು ಯಾಕೆ?

ನವದೆಹಲಿ, ಜುಲೈ 17: ಮುಂದಿನ ತಿಂಗಳು ನಡೆಯಲಿರುವ ಉಪರಾಷ್ಟ್ರಪತಿ ಸ್ಥಾನದ ಚುನಾವಣೆಗೆ ಬಿಜೆಪಿಯಿಂದ ನಿನ್ನೆ ಮತ್ತೊಮ್ಮೆ ಅಚ್ಚರಿಯ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್ ಉಪರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

ಮೂರು ದಶಕಗಳಿಗೂ ಹೆಚ್ಚು ಕಾಲದಿಂದಲೂ ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುತ್ತಾ ಬಂದಿರುವ 71 ವರ್ಷದ ಜಗದೀಪ್ ಧನಕರ್ ವಕೀಲಿಕೆ ಮತ್ತು ರಾಜಕೀಯ ಎರಡರಲ್ಲೂ ಅನುಭವ ಇರುವವರು. ಬಹಳ ಚಾಕಚಕ್ಯತೆಯಿಂದ ಪರಿಸ್ಥಿತಿ ನಿಭಾಯಿಸಬಲ್ಲವರು. ತಮ್ಮ ಸಾಮರ್ಥ್ಯವನ್ನು ಅವರು ಅನೇಕ ಬಾರಿ ನಿರೂಪಿಸಿರುವುದುಂಟು.

ಪ್ರಧಾನಿ ನರೇಂದ್ರ ಮೋದಿ ಅವರೇ ಈ ಹಿಂದೆ ಕೆಲ ಬಾರಿ ಜಗದೀಪ್ ಧನಕರ್ ಅವರನ್ನು ಹೊಗಳಿದ್ದಿದೆ. ಕೃಷಿ ಕುಟುಂಬದಲ್ಲಿ ಜಯಿಸಿದ ಅವರು ಜನತಾ ಪರಿವಾರದಿಂದ ಬೆಳೆದು ಬಂದವರು.

ಶಿಕ್ಷಣದ ಬಳಿಕ ವಕೀಲಿಕೆಯ ವೃತ್ತಿ ಮಾಡಿದ ಧನಕರ್, ಎಂಬತ್ತು ಮತ್ತು ತೊಂಬತ್ತರ ದಶಕಗಳಲ್ಲಿ ದೇವಿಲಾಲ್ ಗರಡಿಯಲ್ಲಿ ರಾಜಕೀಯ ವಿದ್ಯೆ ಕಲಿತವರು. ಚಂದ್ರಶೇಖರ್ ನೇತೃತ್ವದ ಸರಕಾರದಲ್ಲಿ ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ೨೦೦೮ರಲ್ಲಿ ಅವರು ಬಿಜೆಪಿ ಸೇರ್ಪಡೆಯಾದರು.

ಅಷ್ಟಕ್ಕೂ ಜಗದೀಪ್ ಧನಕರ್ ಅವರನ್ನು ಬಿಜೆಪಿ ಯಾಕೆ ಉಪರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ನಿಲ್ಲಿಸುತ್ತಿದೆ ಎಂಬುದು ಕುತೂಹಲದ ಪ್ರಶ್ನೆ. ಅದಕ್ಕೆ ಸ್ಪಷ್ಟ ಉತ್ತರವಿಲ್ಲ, ಆದರೆ, ಕೆಲ ಸುಳಿವುಗಳಿವೆ.

ಬಂಗಾಳದ ರಾಜ್ಯಪಾಲರಾಗಿ ಶಹಬ್ಬಾಸ್‌ಗಿರಿ

ಬಂಗಾಳದ ರಾಜ್ಯಪಾಲರಾಗಿ ಶಹಬ್ಬಾಸ್‌ಗಿರಿ

ಜಗದೀಪ್ ಧನಕರ್ ಪಶ್ಚಿಮ ಬಂಗಾಳದಲ್ಲಿ ರಾಜ್ಯಪಾಲರಾಗಿ ಹೊಣೆಗಾರಿಕೆ ನಿಭಾಯಿಸಿದ ರೀತಿ ಬಿಜೆಪಿ ವರಿಷ್ಠರ ಗಮನ ಸೆಳೆದಿದೆ. ಅವರನ್ನು ಬಿಜೆಪಿ ಉಪರಾಷ್ಟ್ರಪತಿಯಾಗಿ ಆಯ್ಕೆ ಮಾಡಲು ಹಿಂದಿರುವ ಒಂದೆರಡು ಪ್ರಬಲ ಕಾರಣಗಳಲ್ಲಿ ಇದೂ ಒಂದೆನ್ನಲಾಗಿದೆ.

ಬಂಗಾಳದಲ್ಲಿ ಸಿಎಂ ಮಮತಾ ಬ್ಯಾನರ್ಜಿಯನ್ನು ಎದುರುಗೊಳ್ಳುವ ತಾಕತ್ತು ಇರುವ ನಾಯಕರು ಕಡಿಮೆ. ರಾಜ್ಯಪಾಲರಾಗಿ ಧನಕರ್ ಅವರು ರಾಜ್ಯ ಸರಕಾರದ ಹಲವು ನೀತಿಗಳನ್ನು ಬಹಿರಂಗವಾಗಿ ಟೀಕಿಸುತ್ತಾರೆ. ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಭರ್ಜರಿ ಗೆಲುವು ಪಡೆದ ಬಳಿಕ ರಾಜ್ಯದ ಹಲವೆಡೆ ಹಿಂಸಾಚಾರಗಳು ಭುಗಿಲೆದ್ದಿದ್ದವು. ಟಿಎಂಸಿ ಕಾರ್ಯಕರ್ತರು ಬಿಜೆಪಿಗರ ಮೇಲೆ ಹಲ್ಲೆ ಎಸಗಿದರೆನ್ನಲಾದ ಹಲವು ಘಟನೆಗಳು ನಡೆದಿದ್ದವು. ರಾಜ್ಯಪಾಲರಾಗಿ ಧನಕರ್ ಅವರೇ ಖುದ್ದಾಗಿ ಹಿಂಸಾಚಾರಪೀಡಿತ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ಇದು 'ದೀದಿ' ಮಮತಾ ಬ್ಯಾನರ್ಜಿಯನ್ನು ಕೆರಳಿಸಿತ್ತು.

ಬಂಗಾಳ ಸರಕಾರ ರಾಜ್ಯದ ಕಾನೂನು ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ರಾಜ್ಯಪಾಲ ಧನಕರ್ ಹಲವು ಬಾರಿ ಬೇಸರಿಸಿದ್ದಾರೆ. ಸರಕಾರದ ಬಗ್ಗೆ ಮತ್ತು ಬೇರೆ ಬೇರೆ ವಿಚಾರಗಳ ಬಗ್ಗೆ ಧನಕರ್ ನೀಡುವ ಹೇಳಿಕೆಗಳು ಮಮತಾ ಬ್ಯಾನರ್ಜಿ ಮತ್ತವರ ಟಿಎಂಸಿ ಪಕ್ಷಕ್ಕೆ ಇರಿಸುಮುರುಸು ಮಾಡಿದ್ದಿದೆ.

ದೆಹಲಿಯಲ್ಲಿ ಹಿಂದೆ ಸಿಎಂ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ಮಧ್ಯೆ ಇದ್ದ ರೀತಿಯಲ್ಲಿ, ಬಂಗಾಳದಲ್ಲಿ ರಾಜ್ಯಪಾಲ ಮತ್ತು ಮುಖ್ಯಮಂತ್ರಿ ಮಧ್ಯೆ ನಿತ್ಯವೂ ಏನಾದರೊಂದು ಜಟಾಪಟಿ ಇದ್ದೇ ಇರುತ್ತದೆ. 'ದೀದಿ' ಕೋಟೆಯಲ್ಲಿ ಅವರನ್ನು 'ಉರಿಸು'ತ್ತಿದ್ದ ಧನಕರ್‌ಗೆ ಈಗ ಆ ಕಾರ್ಯಕ್ಕಾಗಿ ಉಪರಾಷ್ಟ್ರಪತಿ ಸ್ಥಾನದ ಅವಕಾಶ ಸಿಕ್ಕಿದ್ದರೂ ಇರಬಹುದು.

ಮೇಲ್ಮನೆ ನಿಭಾಯಿಸುವ ಹೊಣೆಗಾರಿಕೆ

ಮೇಲ್ಮನೆ ನಿಭಾಯಿಸುವ ಹೊಣೆಗಾರಿಕೆ

ಉಪರಾಷ್ಟ್ರಪತಿ ಸ್ಥಾನ ಎಂಬುದು ಅಲಂಕೃತ ಹುದ್ದೆಯಲ್ಲ. ಸಂಸತ್ತಿನ ಮೇಲ್ಮನೆ ಎಂದು ಕರೆಯಲಾಗುವ ಹಾಗೂ ಚಿಂತಕರ ಚಾವಡಿಯೇ ಎನಿಸಿರುವ ರಾಜ್ಯಸಭೆಯ ಅಧ್ಯಕ್ಷ ಸ್ಥಾನವೂ ಅದು. ಬಹಳ ಕಠಿಣ ಚರ್ಚೆಗಳು ನಡೆಯುವ ರಾಜ್ಯಸಭೆಯ ಕಲಾಪವನ್ನು ಉಪರಾಷ್ಟ್ರಪತಿಗಳೇ ನಿರ್ವಹಿಸುತ್ತಾರೆ.

ಲೋಕಸಭೆಗೆ ಹೋಲಿಸಿದರೆ ರಾಜ್ಯಸಭೆಯಲ್ಲಿ ಬಿಜೆಪಿಯ ಸಂಖ್ಯೆ ಕಡಿಮೆ. ಇಲ್ಲಿ ವಿಪಕ್ಷಗಳ ಸದಸ್ಯರ ಆರ್ಭಟವೇ ಹೆಚ್ಚಿರುತ್ತದೆ. ಇಲ್ಲಿ ವಿಪಕ್ಷಗಳ ಕೈ ಮೇಲಾಗದಂತೆ ಕಲಾಪವನ್ನು ನಿಭಾಯಿಸುವಂಥವರು ಬಿಜೆಪಿಗೆ ಬೇಕು. ಅದಕ್ಕೆ ಸೂಕ್ತವಾಗಿರುವವರು ಜಗದೀಪ್ ಧನಕರ್.

ಜಗದೀಪ್ ಧನಕರ್ ರಾಜಕೀಯಕ್ಕೆ ಬರುವ ಮುನ್ನ ಹಲವು ವರ್ಷಗಳ ಕಾಲ ವಕೀಲಿಕೆ ವೃತ್ತಿ ಮಾಡಿದ್ದಾರೆ. ಅಲ್ಲದೇ ೧೯೯೦ರಲ್ಲಿ ಚಂದ್ರಶೇಖರ್ ಸರಕಾರದಲ್ಲಿ ಅವರು ಸಂಸದೀಯ ವ್ಯವಹಾರಗಳ ಸಚಿವರೂ ಅಗಿದ್ದಾರೆ. ಹೀಗಾಗಿ, ಅವರಿಗೆ ಸಂಸದೀಯ ಕಲಾಪಗಳ ಒಳಹೊರಗು ಚೆನ್ನಾಗಿ ಬಲ್ಲವರಾಗಿದ್ದಾರೆ. ವಕೀಲರಾಗಿ ವಾಕ್‌ಚಾತುರ್ಯ ಕೂಡ ಹೊಂದಿದ್ದಾರೆ. ಹೀಗಾಗಿ, ಉಪರಾಷ್ಟ್ರಪತಿ ಸ್ಥಾನಕ್ಕೆ ವೆಂಕಯ್ಯ ನಾಯ್ಡು ಸ್ಥಾನ ತುಂಬಲು ಜಗದೀಶ್ ಧನಕರ್ ಸಮರ್ಥರಿದ್ದಾರೆ ಎಂಬುದು ಬಿಜೆಪಿಯ ಅನಿಸಿಕೆಯಾಗಿದ್ದರಬಹುದು.

ರೈತ ಪುತ್ರ ಎಂದು ಮೋದಿಯಿಂದ ಹೊಗಳಿಕೆ

ರೈತ ಪುತ್ರ ಎಂದು ಮೋದಿಯಿಂದ ಹೊಗಳಿಕೆ

ಜಗದೀಪ್ ಧನಕರ್ ಬಗ್ಗೆ ನರೇಂದ್ರ ಮೋದಿ ಹಿಂದೆ ಹಲವು ಬಾರಿ ಹೊಗಳಿದ್ದಿದೆ. ಕೃಷಿಕರ ಕುಟುಂಬದಿಂದ ಬಂದಿರುವ ಧನಕರ್ ಅವರನ್ನು ಪ್ರಧಾನಿ ಮೋದಿ 'ಕಿಸಾನ್ ಪುತ್ರ್' (ರೈತ ಪುತ್ರ) ಎಂದು ಹೊಗಳಿದ್ದಾರೆ. ಹಾಗೆಯೇ, ಪಶ್ಚಿಮ ಬಂಗಾಳದಲ್ಲಿ ದೀದಿ ಆಡಳಿತವನ್ನು ದಿಟ್ಟವಾಗಿ ರಾಜ್ಯಪಾಲರಾಗಿ ಟೀಕಿಸುವ ಛಾತಿ ಇರುವ ಧನಕರ್ ಅವರನ್ನು 'ಜನತಾ ರಾಜ್ಯಪಾಲ' ಎಂದು ಮೋದಿ ಪ್ರಶಂಸಿಸಿದ್ದಾರೆ.

ರಾಜ್ಯಪಾಲರಾಗಿ ಜಗದೀಪ್ ಧನಕರ್ ಅಸಾಮಾನ್ಯ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಎಂದು ಪ್ರಧಾನಿಗಳಿಂದ ಸರ್ಟಿಫಿಕೆಟ್ ಕೂಡ ಸಿಕ್ಕಿದೆ. ಒಂದು ಸಾಮಾನ್ಯ ಕುಟುಂಬದ ಹಿನ್ನೆಲೆ ಇರುವುದು ಒಂದೆಡೆಯಾದರೆ, ವಿವಿಧ ಶ್ರೇಣಿಗಳಲ್ಲಿ ವಿವಿಧ ರೀತಿಯ ಅನುಭವ ಹೊಂದಿರುವುದು ಇನ್ನೊಂದೆಡೆ ಇರುವ ಧನಕರ್‌ಗೆ ಉಪರಾಷ್ಟ್ರಪತಿ ಸ್ಥಾನದ ಬಾಗಿಲು ತೆರೆದಿರುವಂತಿದೆ.

ಜಗದೀಪ್ ಧನಕರ್ ಹಿನ್ನೆಲೆ

ಜಗದೀಪ್ ಧನಕರ್ ಹಿನ್ನೆಲೆ

ಈಗಾಗಲೇ ಹೇಳಿದಂತೆ ಜಗದೀಪ್ ಧನಕರ್ ಕೃಷಿ ಕುಟುಂಬದ ಹಿನ್ನೆಲೆಯಯವರು. ರಾಜಸ್ಥಾನದ ಝುಂಝುನು ಜಿಲ್ಲೆಯಲ್ಲಿ 1951 ಮೇ 18ರಂದು ಜನಿಸಿದವರು. ತಮ್ಮ ಗ್ರಾಮದಲ್ಲೇ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ ಮಾಡಿ ಬಳಿಕ ಚಿತ್ತೋರಗಡ್‌ನ ಸೈನಕ್ ಶಾಲೆಯಲ್ಲಿ ಮೆರಿಟ್ ಸ್ಕಾಲರ್ಶಿಪ್‌ನಲ್ಲಿ ಓದಿದರು. ರಾಜಸ್ಥಾನ್ ಯೂನಿವರ್ಸಿಟಿಯಲ್ಲಿ ವಿಜ್ಞಾನದಲ್ಲಿ ಪದವಿ ಗಳಿಸಿದರು. ಬಳಿಕ ಕಾನೂನಿನಲ್ಲೂ ಪದವಿ ಗಳಿಸಿದರು. ಅದಾದ ನಂತರ ವಕೀಲಿಕೆ ವೃತ್ತಿ ಆಯ್ದುಕೊಂಡರು.

ಎಂಬತ್ತರ ದಶಕದಲ್ಲಿ ವಿ.ಪಿ. ಸಿಂಗ್ ನೇತೃತ್ವದ ಜನತಾ ದಳದ ಸಮಾಜವಾದ ತತ್ವದಿಂದ ಆಕರ್ಷಿತರಾಗಿ ಜನತಾ ಪರಿವಾರದ ಮೂಲಕ ರಾಜಕೀಯಕ್ಕೆ ಬಂದರು. ನಂತರ ದೇವಿಲಾಲ್ ಅವರ ಲೋಕದಳದಲ್ಲಿ ಇದ್ದರು. ಚಂದ್ರಶೇಖರ್ ಸರಕಾರದಲ್ಲಿ ಕೇಂದ್ರ ಸಚಿವರಾದರು. ಆ ಸರಕಾರ ಬಿದ್ದ ಬಳಿಕ ರಾಜಸ್ಥಾನದ ರಾಜ್ಯ ರಾಜಕೀಯಕ್ಕೆ ಇಳಿದು 1993ರಲ್ಲಿ ಶಾಸಕರಾದರು. ಅದಾದ ಬಳಿಕ ಅವರು ಅನೇಕ ವರ್ಷಗಳ ಕಾಲ ರಾಜಕೀಯದಲ್ಲಿ ಹೆಚ್ಚು ಸಕ್ರಿಯವಾಗಲಿಲ್ಲ. 2008ರಲ್ಲಿ ಬಿಜೆಪಿ ಸೇರಿಕೊಂಡರು.

ಇಲ್ಲಿಗೆ ಬಂದ ಬಳಿಕ ಪಶ್ಚಿಮ ಬಂಗಾಳದ ರಾಜ್ಯಪಾಲರಾಗುವ ಅವಕಾಶ ಅವರಿಗೆ ಸಿಕ್ಕಿತು. ಈಗ ಉಪರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿ ಕೂಡ ಆಗಿದ್ದಾರೆ. ಆಗಸ್ಟ್ ೬ರಂದು ಇದರ ಚುನಾವಣೆ ನಡೆಯಲಿದೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+