ರಾಜು ಶ್ರೀವಾಸ್ತವ ದುರಂತ; ವ್ಯಾಯಾಮದಿಂದ ಹಾರ್ಟ್ ಅಟ್ಯಾಕ್ ಆಗುತ್ತಾ? ವಾಸ್ತವ ಏನು?
ಇತ್ತೀಚೆಗೆ ಪುನೀತ್ ರಾಜಕುಮಾರ್ ಸಾವನ್ನಪ್ಪಿದಾಗ ಒಂದು ಸುದ್ದಿ ಹರಿದಾಡಿತ್ತು. ಪುನೀತ್ ಸಾಯುವ ಮುನ್ನ ಜಿಮ್ನಲ್ಲಿ ಕಸರತ್ತು ನಡೆಸಿದ್ದರು. ಸಾಯುವ ಮುನ್ನ ಬಹಳ ದಿನಗಳಿಂದಲೂ ಪುನೀತ್ ಬಹಳ ಶ್ರಮ ಪಟ್ಟು ಜಿಮ್ನಲ್ಲಿ ಬೆವರು ಹರಿಸುತ್ತಿದ್ದರು. ಅದೇ ಅವರ ಸಾವಿಗೆ ಕಾರಣವಾಯಿತು ಎಂಬಂತಹ ವದಂತಿ ಹಬ್ಬಿತ್ತು.
ಹೀಗೆ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವಾಗಲೇ ಕೆಲವರು ಸಾವನ್ನಪ್ಪಿದ ವಿಡಿಯೋಗಳು ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಲೇ ಇರುತ್ತವೆ. ಕ್ರೀಡಾಪಟುಗಳು ಆಟವಾಡುತ್ತೇ ಸಾವನ್ನಪ್ಪಿದ ಉದಾಹರಣೆಗಳ ಬಹಳ ಇವೆ. ಇವೆಲ್ಲಾ ಕಂಡು ಜನರು ಭಯಭೀತಗೊಳ್ಳುವ ಸಂದರ್ಭವೇ ಹೆಚ್ಚು.
ನಿನ್ನೆ ಗುರುವಾರ ಹಿಂದಿಯ ಹಾಸ್ಯ ನಟ ರಾಜು ಶ್ರೀವಾಸ್ತವ ಜಿಮ್ನಲ್ಲಿ ವರ್ಕೌಟ್ ಮಾಡುವಾಗ ಹೃದಯಾಘಾತಗೊಂಡಿದ್ದಾರೆ. ವ್ಯಾಯಾಮ ಮಾಡುವುದೇ ತಪ್ಪಾ ಎಂದು ಹಲವರಿಗೆ ಅನಿಸಿರಲಿಕ್ಕೂ ಸಾಕು.
ನಮ್ಮ ಆರೋಗ್ಯ ಪಾಲನೆ ಉದ್ದೇಶದಿಂದ ವ್ಯಾಯಾಮ ಮಾಡುತ್ತೀವೆಂಬುದು ಹೌದು. ಆದರೂ ಕೂಡ ಇಂಥ ದುರಂತಗಳು ಸಂಭವಿಸಿದಾಗ ಅಚ್ಚರಿ ಹುಟ್ಟಿಸುತ್ತದೆ. ವ್ಯಾಯಾಮದಿಂದ ನಿಜಕ್ಕೂ ಹೃದಯಾಘಾತ ಸಂಭವಿಸುತ್ತದಾ? ವಾಸ್ತವ ಏನು? ಎಷ್ಟು ಪ್ರಮಾಣದಲ್ಲಿ ಮತ್ತು ತೀವ್ರತೆಯಲ್ಲಿ ನಮ್ಮ ವ್ಯಾಯಾಮ ಇರಬೇಕು? ಈ ಬಗ್ಗೆ ವೈದ್ಯರೊಬ್ಬರು ಕೆಲ ಮಾಹಿತಿ ಮತ್ತು ಸಲಹೆಗಳನ್ನು ನೀಡಿದ್ದಾರೆ.

ಹೃದಯಾಘಾತ ಹೇಗೆ ಸಂಭವಿಸುತ್ತದೆ?
ನಮ್ಮ ಹೃದಯದ ಸ್ನಾಯುಗಳಿಗೆ ರಕ್ತ ಪೂರೈಕೆ ಮಾಡುವ ರಕ್ತನಾಳಕ್ಕೆ (Coronary Artery) ತಡೆ ಬಂದಾಗ ಹಾರ್ಟ್ ಅಟ್ಯಾಕ್ ಆಗುತ್ತದೆ. ಕೊರೋನರಿ ರಕ್ತನಾಳದಲ್ಲಿ ಶೇ. 70ಕ್ಕೂ ಹೆಚ್ಚು ತಡೆ ಉಂಟಾಗುತ್ತಿದ್ದರೆ ಆಗ ನೀವು ವ್ಯಾಯಾಮ ಮತ್ತಿತರ ಚಟುವಟಿಕೆ ನಡೆಸಿದರೆ ಎದೆ ನೋವಿನ ಲಕ್ಷಣ ಕಾಣಿಸುತ್ತದೆ. ಯಾಕೆಂದರೆ ನಾವು ದೈಹಿಕ ಶ್ರಮ ಹಾಕುತ್ತಿದ್ದರೆ ಅಥವಾ ಹೃದಯಕ್ಕೆ ಒತ್ತಡ ತರುವ ಕೆಲಸ ಮಾಡುತ್ತಿದ್ದರೆ ಆಗ ಆಮ್ಲಜನಕದ ಅಗತ್ಯತೆ ಹೆಚ್ಚುತ್ತದೆ. ಈ ವೇಳೆ ಆಮ್ಲಜನಕದ ಬೇಡಿಕೆಗೆ ತಕ್ಕಷ್ಟು ರಕ್ತದ ಪೂರೈಕೆ ಆಗದಿದ್ದರೆ ಈ ರೀತಿ ಎದೆ ನೋವು ಕಾಣಿಸುತ್ತದೆ ಎಂದು ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ವೈದ್ಯ ಪ್ರೊ. ಕೆ ಶ್ರೀನಾಥ್ ರೆಡ್ಡಿ ಹೇಳುತ್ತಾರೆ.
ಅದು ಎದೆ ನೋವು ಕಾಣಿಸಿಕೊಳ್ಳುವುದಕ್ಕೆ ಕಾರಣ. ಕೊರೋನರಿ ಆರ್ಟರಿಯ ಮೇಲೆ ಲೋಳೆ ರೀತಿಯ ತೆಳುವಾದ ಪದರ ನಿರ್ಮಾಣವಾಗುತ್ತದೆ. ಅದು ಒಡೆದುಹೋಗಿ ರಕ್ತ ಹೆಪ್ಪುಗಟ್ಟಲು ಕಾರಣವಾಗುತ್ತದೆ. ಇದರಿಂದ ಹೃದಯಾಘಾತ (ಅಕ್ಯೂಟ್ ಮಯೋಕಾರ್ಡಿಯಲ್ ಇನ್ಫಾರ್ಕ್ಶನ್) ಆಗಬಹುದು.
ಹೃದಯಾಘಾತದ ಹಂತಕ್ಕೆ ಹೋಗುವವರೆಗೂ ನಿಮಗೆ ಯಾವುದೇ ಮುನ್ಸೂಚನೆ ಸಿಗುವುದಿಲ್ಲ. ಶೇ. 30ರಷ್ಟು ಲೋಳೆ ಒಡೆದುಹೋದರೂ ಸಾಕು ಬಹಳಷ್ಟು ರಕ್ತ ಹೆಪ್ಪುಗಟ್ಟುವಿಕೆಗೆ ಎಡೆ ಮಾಡಿಕೊಡುತ್ತದೆ.

ಈ ಲೋಳೆ ಹೇಗೆ ನಿರ್ಮಾಣವಾಗುತ್ತದೆ?
ರಕ್ತನಾಳ ಊತಗೊಳ್ಳುವುದರಿಂದ ಕೊರೋನರಿ ಆರ್ಟರಿ ಅಥವಾ ಹೃದಯದ ಸ್ನಾಯುವಿನಲ್ಲಿರುವ ರಕ್ತನಾಳಕ್ಕೆ ಗಾಯವಾಗುತ್ತದೆ. ಇದರಿಂದಾಗಿ ಲೋಳೆಯಂಥ ವಸ್ತು (Plaque Formation) ಈ ರಕ್ತನಾಳದಲ್ಲಿ ಸಂಗ್ರಹವಾಗುತ್ತಾ ಹೋಗುತ್ತದೆ. ಅಧಿಕ ಬಿಪಿ, ಧೂಮಪಾನ, ಮಧುಮೇಹ, ತಪ್ಪು ಆಹಾರಕ್ರಮ, ಒತ್ತಡ, ನಿದ್ರಾಹೀನತೆ ಇತ್ಯಾದಿಯು ರಕ್ತನಾಳ ಊದಿಕೊಳ್ಳುವುದಕ್ಕೆ ಕಾರಣವಾಗಿರುವ ವಿಲನ್ಗಳು.
ರಕ್ತನಾಳದಲ್ಲಿ ಗಾಯವಾದ ಸ್ಥಳದಲ್ಲಿ ರಕ್ತದಲ್ಲಿನ ಕೊಬ್ಬು (Fat in Blood) ಸೇರಿಕೊಂಡು ಲೋಳೆಯಂಥ ಪದರ ನಿರ್ಮಾಣವಾಗುತ್ತದೆ. ಇದು ಹೆಚ್ಚುತ್ತಾ ಹೋದಂತೆ ಯಾವಾಗ ಬೇಕಾದರೂ ಪದರ ಒಡೆದು ಹೋಗಬಹುದು. ವಿಪರೀತ ವ್ಯಾಯಾಮ ಮಾಡುವುದೂ ಕೂಡ ಈ ಘಟನೆಗೆ ಎಡೆ ಮಾಡಿಕೊಡುತ್ತದೆ. ವ್ಯಾಯಾಮದಿಂದ ನೇರವಾಗಿ ಹೃದಯಾಘಾತ ಆಗದಿದ್ದರೂ ಈ ರೀತಿ ಪರೋಕ್ಷವಾಗಿ ಹಾರ್ಟ್ ಅಟ್ಯಾಕ್ಗೆ ಕಾರಣವಾಗಬಹುದು.

ಬೆಳಗ್ಗೆ ಹೊತ್ತು ಹುಷಾರ್
ಈ ರೀತಿ ರಕ್ತನಾಳಕ್ಕೆ ತಡೆ ಉಂಟಾಗುವ ಘಟನೆ ಸಾಮಾನ್ಯವಾಗಿ ಬೆಳಗಿನ ಹೊತ್ತು ನಡೆಯುತ್ತದೆ. ಆಗ ರಕ್ತದ ಒತ್ತಡ ಹೆಚ್ಚಾಗಿರುತ್ತದೆ. ರಕ್ತ ಹೆಪ್ಪುಗಟ್ಟುವಿಕೆಯ ಸಾಧ್ಯತೆಯೂ ಹೆಚ್ಚಿರುತ್ತದೆ. ರಕ್ತನಾಳದ ಗಾಯ ಇತ್ಯಾದಿ ಇರುವ ವ್ಯಕ್ತಿ ಸರಿಯಾಗಿ ನಿದ್ರೆ ಮಾಡದೇ ಮತ್ತು ಸರಿಯಾಗಿ ನೀರು ಕುಡಿಯದೇ ಕಠಿಣ ವ್ಯಾಯಾಮಕ್ಕೆ ಮುಂದಾದರೆ ತೊಂದರೆ ಆಗುತ್ತದೆ. ರಕ್ತನಾಳದಲ್ಲಿ ನಿರ್ಮಾಣವಾದ ಲೋಳೆ ಪದರ ಬೇಗನೇ ಒಡೆದು ರಕ್ತ ಹೆಪ್ಪುಗಟ್ಟುವಿಕೆಗೆ ಎಡೆಮಾಡಿಕೊಡುವ ಸಾಧ್ಯತೆ ದಟ್ಟವಾಗಿರುತ್ತದೆ ಎನ್ನುತ್ತಾರೆ ವೈದ್ಯರು.
ಹಾಗಾದರೆ, ವ್ಯಾಯಾಮ ಮಾಡುವುದೇ ಬೇಡವಾ ಎನಿಸಬಹುದು. ವ್ಯಾಯಾಮ ನಮ್ಮ ದೇಹಕ್ಕೆ ಅಗತ್ಯ. ಆದರೆ, ಹೃದಯದ ರಕ್ತನಾಳದಲ್ಲಿರುವ ಲೋಳೆ ಪದರ ನಿರ್ಮಾಣವಾಗಲು ಕಾರಣವಾದ ಅಂಶಗಳನ್ನು ಗುರುತಿಸಿ ಪರಿಹಾರ ಕಂಡುಕೊಳ್ಳುವುದು ಅಗತ್ಯ. ಬೇರೆ ಜನಾಂಗಗಳಿಗೆ ಹೋಲಿಸಿದರೆ ಭಾರತೀಯರಲ್ಲಿ ಹೃದಯಾಘಾತದ ಅಪಾಯ ಹೆಚ್ಚು ಎನ್ನಲಾಗುತ್ತದೆ. ಹೀಗಾಗಿ, ಭಾರತೀಯರು ಎಚ್ಚರದಿಂದ ಇರುವುದು ಅಗತ್ಯ.

ಹೃದಯಾಘಾತಗಳಲ್ಲಿ ವ್ಯತ್ಯಾಸ ಇದೆ
ಒಬ್ಬ ವ್ಯಕ್ತಿ ಕಠಿಣ ದೈಹಿಕ ಕಸರತ್ತು ಮಾಡುವಾಗ ಹೃದಯಾಘಾತವಾಯಿತು ಎಂದರೆ ಸಾಮಾನ್ಯವಾಗಿ ಅವರ ಹೃದಯದ ರಕ್ತನಾಳ ತಡೆ ಇತ್ಯಾದಿ ಸಮಸ್ಯೆ ಇರುತ್ತದೆ. ಆ ಸ್ಥಿತಿಯಲ್ಲಿ ಆ ವ್ಯಕ್ತಿ ಬದುಕಿದರೆ ಬೇಗ ಚೇತರಿಕೆ ಕಾಣಬಲ್ಲ. ಆದರೆ, ವಿಶ್ರಾಂತಿಯಲ್ಲಿದ್ದ ಒಬ್ಬ ವ್ಯಕ್ತಿಗೆ ಹೃದಯಾಘಾತವಾಗಿದೆ ಎಂದರೆ ಆ ವ್ಯಕ್ತಿಯ ಹೃದಯವೇ ಸಾಮಾನ್ಯವಾಗಿ ದುರ್ಬಲವಾಗಿರುತ್ತದೆ ಎಂದು ಫೋರ್ಟಿಸ್ ಆಸ್ಪತ್ರೆಯ ವೈದ್ಯರಾದ ಡಾ. ಸುಮನ್ ಭಂಡಾರಿ ಹೇಳುತ್ತಾರೆ.
"ನೀವು ಟ್ರೆಡ್ಮಿಲ್ನಲ್ಲಿ ವೇಗವಾಗಿ ಹೆಜ್ಜೆ ಹಾಕುತ್ತಿದ್ದರೆ ಹೃದಯ ಬಡಿತ ಮತ್ತು ರಕ್ತದೊತ್ತಡ ದ್ವಿಗುಣಗೊಳ್ಳುತ್ತದೆ. ಹೃದಯಕ್ಕೆ ಆಗ ಆಮ್ಲಜನಕದ ಬೇಡಿಕೆ ಹೆಚ್ಚುತ್ತದೆ. ದೀರ್ಘ ಅವಧಿಯವರೆಗೆ ಇದು ಸಾಗಿದರೆ ಹೃದಯಕ್ಕೆ ರಕ್ತ ಪರಿಚಲನೆಗೆ ಧಕ್ಕೆಯಾಗಿ ಹೃದಯಕ್ಕೆ ತಡೆಯಾಗುತ್ತದೆ. ನಂತರ ಹಾರ್ಟ್ ಅಟ್ಯಾಕ್ಗೆ ಎಡೆಯಾಗಬಹುದು. ಹೀಗಾಗಿ, ನೀವು ವರ್ಕೌಟ್ ಮಾಡುವಾಗ ಎದೆ ನೋವು ಕಾಣಿಸಿಕೊಂಡರೆ ಉಪೇಕ್ಷಿಸಲು ಹೋಗದಿರಿ. ಕೂಡಲೇ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು" ಎಂದು ಡಾ. ಭಂಡಾರಿ ತಿಳಿಸುತ್ತಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications