ಸಂಯುಕ್ತ ರಂಗದ ಸೃಷ್ಟಿ ಹಿಂದೆ ಕೆಸಿಆರ್ ಪ್ರಧಾನಿ ಪಟ್ಟದ ಕನಸು...
ನವದೆಹಲಿ, ಮೇ 07: ಕಳೆದ ಡಿಸೆಂಬರ್-ಜನವರಿ ತಿಂಗಳಿನಲ್ಲಿ ಕೆಲದಿನ ಸುದ್ದಿಯಾಗಿ, ನಂತರ ಮರೆತೇ ಹೋಗಿದ್ದ ಸಂಯುಕ್ತ ರಂಗದ ಪರಿಕಲ್ಪನೆ ಇದೀಗ ಮತ್ತೆ ಚಿಗುರೊಡೆಯುತ್ತಿದೆ.
ಚುನಾವಣೆಯ ಫಲಿತಾಂಶದ ಹೊತ್ತಲ್ಲಿ ಇದೊಂದು ಪೂರ್ಣ ಚಿತ್ರಣ ಪಡೆದರೆ ಅಚ್ಚರಿಯಿಲ್ಲ. ಆದರೆ ಪರೋಕ್ಷವಾಗಿ ಎನ್ ಡಿಎ ಗೆ ಬೆಂಬಲ ನೀಡಬಹುದು ಎಂದುಕೊಂಡಿದ್ದ ಕೆಸಿಆರ್ ಇದೀಗ ಸಂಯುಕ್ತ ರಂಗಕ್ಕೆ ಕೈಹಾಕಿದ್ದು ಏಕೆ? ಇದರಿಂದ ಬಿಜೆಪಿ ಭಾರೀ ಸವಾಲು ಎದುರಿಸಬೇಕಾದೀತಾ?
ಕೇರಳ ಸಿಎಂ ಭೇಟಿಯಾದ ಕೆ.ಚಂದ್ರಶೇಖರ ರಾವ್!
ಸಂಯುಕ್ತ ರಂಗದ ಸೃಷ್ಟಿಯ ಹಿಂದೆ ಕೆ.ಚಂದ್ರಶೇಖರ್ ರಾವ್ ಅವರ ಪ್ರಧಾನಿಪಟ್ಟದ ಕನಸೂ ಸೇರಿದೆಯಾ ಎಂಬಿತ್ಯಾದಿ ಪ್ರಶ್ನೆಗಳು ಈಗ ಎದ್ದಿವೆ. ಅಷ್ಟಕ್ಕೂ ಇಷ್ಟು ದಿನ ಸುಮ್ಮನಿದ್ದು ಇದೀಗ ಕೆಸಿಆರ್ ಸಂಯುಕ್ತ ರಂಗದ ಸೃಷ್ಟಿಗೆ ಓಡಾಡುತ್ತಿರುವುದೇಕೆ?
ದಕ್ಷಿಣ ಭಾರತಕ್ಕೆ ಪ್ರಧಾನಿ ಪಟ್ಟ
ದಕ್ಷಿಣ ಭಾರತಕ್ಕೆ ಕೇಂದ್ರ ಸರ್ಕಾರದಲ್ಲಿ ಪ್ರಾತಿನಿಧ್ಯ ದೊರಕುತ್ತಿಲ್ಲ ಎಂಬುದು ಎಂದಿನ ದೂರು. ಆದ್ದರಿಂದ ದಕ್ಷಿಣ ಭಾರತೀಯ ಅಭ್ಯರ್ಥಿಯೊಬ್ಬರು ಪ್ರಧಾನಿ ಪಟ್ಟಕ್ಕೆ ಏರುವುದಾದರೆ ಅದಕ್ಕೆ ದಕ್ಷಿಣ ಭಾರತದ ಪ್ರಾದೇಶಿಕ ಪಕ್ಷಗಳ ಬೆಂಬಲ ಸಿಗಬಹುದು ಎಂಬುದು ಕೆಸಿಆರ್ ಲೆಕ್ಕಾಚಾರ. ಆದ್ದರಿಂದಲೇ ಅವರು ಈಗಾಗಲೇ ಪ್ರಾದೇಶಿಕ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿದ್ದಾರೆ.
ಎಚ್ಡಿಕೆ, ಪಿಣರಾಯಿ ಜೊತೆ ಮಾತುಕತೆ
ಈಗಾಗಲೇ ಕೆಸಿಆರ್ ಅವರು ಕರ್ನಾಟಕ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಎಚ್ ಡಿ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಜೊತೆಗೆ ಕೇರಳ ಮುಖ್ಯಮಂತ್ರಿ ಸಿಪಿಐಎಂ ನಾಯಕ ಪಿಣರಾಯಿ ವಿಜಯ್ ಅವರನ್ನೂ ಭೇಟಿಯಾಗಿದ್ದಾರೆ. ಸದ್ಯದಲ್ಲೇ ತಮಿಳುನಾಡಿನ ಡಿಎಂಕೆ ಮುಖಂಡ ಎಂಕೆ ಸ್ಟಾಲಿನ್ ಅವರನ್ನೂ ಕೆಸಿಆರ್ ಭೇಟಿಯಾಗಲಿದ್ದಾರೆ.
ಈ ಬಾರಿ ಅಚ್ಚರಿಯ ಫಲಿತಾಂಶ: ಕೆ. ಚಂದ್ರಶೇಖರ ರಾವ್ ಭವಿಷ್ಯ
ಟಿಡಿಪಿ ಸೋಲಿನ ಸೂಚನೆ?
ಆಂಧ್ರಪ್ರದೇಶದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳೆರಡು ನಡೆದ ನಂತರ ಮುಖ್ಯಮಂತ್ರಿ, ಟಿಡಿಪಿ ಮುಖಂಡ ಎನ್ ಚಂದ್ರಬಾಬು ನಾಯ್ಡು ತಾವು ಗೆದ್ದೇ ಗೆಲ್ಲುತ್ತೇನೆಂಬ ವಿಶ್ವಾಸದಲ್ಲಿ ಒಂದೂ ಹೇಳೆಕ ನೀಡಿಲ್ಲ. ಬದಲಾಗಿ ಇವಿಎಂ, ವಿವಿಪ್ಯಾಟ್ ದೋಷದ ಬಗ್ಗೆ ನಿರಂತರವಾಗಿ ದೂರು ನೀಡುತ್ತಿದ್ದಾರೆ. ಸಮೀಕ್ಷೆಗಳೂ ನಾಯ್ಡು ಅವರು ಸೋಲುವ ಸೂಚನೆಯನ್ನು ನೀಡಿರುವುದರಿಂದ ಮಹಾಘಟಬಂಧನದ ಮುಂದಾಳತ್ವ ವಹಿಸಿದ್ದ ನಾಯ್ಡು ತಣ್ಣಗಾಗಿದ್ದಾರೆ. ನಾಯ್ಡು ತಣ್ಣಗಾಗಿರುವುದು ಕೆಸಿಆರ್ ಅವರ ಸಂಯುಕ್ತ ರಂಗದ ಆಸೆಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.
ಗೆಲ್ಲಿಸಿದ ತೆಲಂಗಾಣ ಜನರಿಗೆ ಭಾರಿ ಉಡುಗೊರೆ ನೀಡಿದ ಸಿಎಂ ಕೆಸಿಆರ್
1996 ರ ಸನ್ನಿವೇಶ ಮರುಸೃಷ್ಟಿ?
1996 ರಲ್ಲಿ ಕಾಂಗ್ರೆಸ್-ಬಿಜೆಪಿಯನ್ನು ಹೊರಗಿಟ್ಟು ತೃತೀಯ ರಂಗ ಸೃಷ್ಟಿಯಾಗಿ ಎಚ್ ಡಿ ದೇವೇಗೌಡರು ಅನಿರೀಕ್ಷಿತವಾಗಿ ಪ್ರಧಾನಿಯಾದ ಹಾಗೆಯೇ ಈ ಬಾರಿಯೂ ಆದರೆ, ತಾವೂ ಪ್ರಧಾನಿಯಾಗುವ ಪ್ರಬಲ ಆಕಾಂಕ್ಷಿ ಎಂಬ ಸೂಚನೆಯನ್ನು ಕೆಸಿಆರ್ ಈ ಮೂಲಕ ತಿಳಿಸಿದ್ದಾರೆ. ಇದರಿಂದ ಟಿಆರ್ ಎಸ್ ಬೆಂಬಲ ಪಕ್ಕಾ ಎಂದುಕೊಂದಿದ್ದ ಬಿಜೆಪಿಗೂ ಕೊಂಚ ಆಘಾತವಾಗಿದೆ. ಎಲ್ಲಕ್ಕೂ ಮೇ 23 ರಂದು ಉತ್ತರ ದೊರಕಲಿದೆ.