ಸಂಕಷ್ಟದಲ್ಲಿರುವ ಪ್ರವಾಸೀ ವಾಹನ ಮಾಲೀಕರ ಅಳಲನ್ನು ಆಲಿಸುವಿರಾ ಮುಖ್ಯಮಂತ್ರಿಗಳೇ
ಬೆಂಗಳೂರು, ಜ 19: ಕೊರೊನಾದ ಎಲ್ಲಾ ಪ್ರಾಕಾರದ ಅಲೆಗಳಲ್ಲಿ ತೀವ್ರ ಜರ್ಝರಿತಗೊಂಡ ಉದ್ಯಮಗಳಲ್ಲಿ ಮಂಚೂಣಿಯಲ್ಲಿ ಬರುವುದು ಪ್ರವಾಸೋದ್ಯಮ ಮತ್ತು ಇದಕ್ಕೆ ಜೊತೆಯಾಗಿರುವ ಟ್ರಾವೆಲ್ಸ್ ಉದ್ಯಮ. ಅದರಲ್ಲೂ ವೀಕೆಂಡ್ ಕರ್ಫ್ಯೂ ವಿಧಿಸಿದರೆಂದರೆ, ಬರೋ ಅಲ್ಪಸ್ವಲ್ಪ ವ್ಯಾಪಾರಕ್ಕೂ ಕಲ್ಲು ಬಿದ್ದಂತೆಯೇ.
ವರ್ಕ ಫ್ರಂ ಹೋಂ, ಅಂತರಾಷ್ಟ್ರೀಯ ವಿಮಾನಗಳ ನಿರ್ಬಂಧ, ವಾರಾಂತ್ಯ ಕರ್ಫ್ಯೂ, ವಿರಳವಾದ ಜನಸಂದಣಿ, ವಿಶೇಷ ಕಾರ್ಯಕ್ರಮಗಳಿಗೆ ನಿರ್ಬಂಧಗಳ ಹೇರಿಕೆಯಿಂದಾಗಿ ಟ್ರಾವೆಲ್ಸ್ ಉದ್ಯಮ ತೀವ್ರ ಸಂಕಷ್ಟದಲ್ಲಿದೆ. ಇದರ ಜೊತೆಗೆ, ವಾಹನಗಳಿಗೆ ತ್ರೈಮಾಸಿಕ ರಸ್ತೆ ತೆರಿಗೆ ಪಾವತಿಸುವ ಅನಿವಾರ್ಯತೆ.
ಮಾಧ್ಯಮದ ಮುಂದೆ ಕಾಣಿಸುವ ಧಾವಂತ? ಸಚಿವರಿಬ್ಬರ ಗೊಂದಲ, ತಪ್ಪು ಸಂದೇಶ ರವಾನೆ
"ವೈಜ್ಞಾನಿಕವಾಗಿ ಕೊರೊನಾ ಮೂರನೆಯ ಅಲೆ ಅಷ್ಟೊಂದು ಮಾರಣಾಂತಿಕವಿಲ್ಲದ ಕಾರಣ ವಾರಾಂತ್ಯದ ಕರ್ಫ್ಯೂ ಹಾಗೂ ಕೆಲವೊಂದು ಕಠಿಣ ನಿರ್ಬಂಧಗಳನ್ನೂ ತೆಗೆಯುವಂತೆ" ಮುಖ್ಯ ಮಂತ್ರಿಗಳಿಗೆ, ಕರ್ನಾಟಕ ರಾಜ್ಯ ಟ್ರಾವೆಲ್ಸ ಮಾಲೀಕರ ಸಂಘ ಕಳಕಳಿಯಿಂದ ಮನವಿ ಮಾಡಿದೆ.
"ಕೊರೊನಾದ ಮೊದಲನೆಯ ಮತ್ತು ಎರಡನೆಯ ಅಲೆಯ ತೀವ್ರತೆಯಿಂದ ಹಾಗೂ ಮೂರನೆಯ ಅಲೆಯ ಕಟ್ಟುನಿಟ್ಟಿನ ನಿರ್ಬಂಧಗಳಿಂದ ಸಾರಿಗೆ ಹಾಗೂ ಪ್ರವಾಸೋದ್ಯಮ ಕ್ಷೇತ್ರ ಶೇ. 80% ನಶಿಸಿ ಹೋಗಿದೆ. ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಸಡಿಲಗೊಳಿಸಿ ಪ್ರವಾಸಿ ಚಟುವಟಿಕೆಗಳು ನಡೆಯುವಂತೆ ಸರ್ಕಾರಗಳು ಸಹಕಾರ ಕೊಡಬೇಕಿದೆ"ಎಂದು ಕರ್ನಾಟಕ ರಾಜ್ಯ ಟ್ರಾವೆಲ್ಸ ಮಾಲೀಕರ ಸಂಘದ ಅಧ್ಯಕ್ಷ ಕೆ.ರಾಧಾಕೃಷ್ಣ ಹೊಳ್ಳ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಕೆಮ್ಮದ ಜನರಿಲ್ಲ, ಶೀತಜ್ವರವಿಲ್ಲದ ಮನೆಯಿಲ್ಲ: ಊರೆಲ್ಲಾ ಅನಾರೋಗ್ಯದ ವಾತಾವರಣ
ಕರ್ನಾಟಕ ರಾಜ್ಯ ಟ್ರಾವೆಲ್ಸ ಮಾಲೀಕರ ಸಂಘದ ಅಧ್ಯಕ್ಷ ಕೆ.ರಾಧಾಕೃಷ್ಣ ಹೊಳ್ಳ
ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರನ್ನು ಭೇಟಿಯಾಗಿಯೂ ಮನವಿ ಸಲ್ಲಿಸಿರುವ ಸಂಘ, ಮುಖ್ಯಮಂತ್ರಿಗಳ ಕಚೇರಿಗೆ ಮನವಿಯನ್ನೂ ಸಲ್ಲಿಸಿಯೂ ಬಂದಿದೆ. ಈ ಬಗ್ಗೆ ಒನ್ ಇಂಡಿಯಾ ಜೊತೆ ಮಾತನಾಡಿರುವ ರಾಧಾಕೃಷ್ಣ ಹೊಳ್ಳ, "ವಾಹನ ತೆರಿಗೆ ಕಾಯ್ದೆ 1988 ಕಲಂ 4(1) ರಂತೆ ಮಾಸಿಕವಾಗಿ / ಹದಿನೈದು ದಿನಗಳ ತೆರಿಗೆ ಸಂದಾಯ ಮಾಡುವಂತಹ ಅಥವಾ ವಾಹನಗಳು ಎಷ್ಟು ದಿವಸ ಬಾಡಿಗೆಗೆ ರಸ್ತೆಗೆ ಬರುತ್ತವೋ ಅಷ್ಟು ದಿನಗಳ ತೆರಿಗೆಯ ಪಾವತಿಸುವ ಸೌಲಭ್ಯ ಒದಗಿಸಿಬೇಕು. ಮೂರನೇ ಅಲೆಯ ಸಾಂಕ್ರಾಮಿಕ ರೋಗ ಪರಿಸ್ಥಿತಿಯಿಂದ ಉದ್ಯಮ ಚೇತರಿಸಿ ಕೊಳ್ಳಲು ರಾಜ್ಯ ಜೈವಿಕ ವಿಕೋಪ ನಿರ್ವಹಣ ಪರಿಸ್ಥಿತಿ ನಿಯಮದ ಭಾದ್ಯತವಾದ ಉದ್ಯಮಕ್ಕಾಗಿ ತೆರಿಗೆಯ ಪಾವತಿಯಲ್ಲಿ ಬದಲಾವಣೆ ಹಾಗೂ ವಿನಾಯಿತಿಯನ್ನು ಮಾಡಿಕೊಡುವಂತೆ" ಸರಕಾರಕ್ಕೆ ಹೊಳ್ಳ ಅವರು ಮನವಿ ಮಾಡಿದ್ದಾರೆ.
ಶ್ರೀದುರ್ಗಾಂಬ ಟ್ರಾವೆಲ್ಸ್ ಮಾಲೀಕರಾದ ಅನಿಲ್ ಛಾತ್ರ
"ನಮ್ಮ ಪಕ್ಕದ ರಾಜ್ಯಗಳಲ್ಲಿ ಟ್ರಾವೆಲ್ಸ್ ಉದ್ಯಮಕ್ಕೆ ಹಲವು ವಿನಾಯತಿಯನ್ನು ಅಲ್ಲಿನ ಸರಕಾರ ನೀಡಿದೆ. ನಮ್ಮ ರಾಜ್ಯದಲ್ಲಿ ಬೇರೆ ಉದ್ಯಮಗಳಿಗೆ ಸರಕಾರ ಸಹಾಯ ಹಸ್ತ ಚಾಚಿದ್ದರೂ ನಷ್ಟದಲ್ಲಿರುವ ಟ್ರಾವೆಲ್ಸ್ ಉದ್ಯಮವನ್ನು ಪರಿಗಣನೆಗೆ ತೆಗೆದುಕೊಳ್ಳದೇ ಇರುವುದು ಬೇಸರ ತಂದಿದೆ. ವೀಕೆಂಡ್ ಕರ್ಫ್ಯೂ ಇದೆಯೋ ಇಲ್ಲವೋ ಎಂದು ಶುಕ್ರವಾರ ನಿರ್ಧರಿಸಿದರೆ, ಪ್ರವಾಸಕ್ಕೆ ಹೋಗುವವರು ಹೇಗೆ ಪ್ಲ್ಯಾನ್ ಮಾಡಿಕೊಳ್ಳಲು ಸಾಧ್ಯ" ಎಂದು ಶ್ರೀದುರ್ಗಾಂಬ ಟ್ರಾವೆಲ್ಸ್ ಮಾಲೀಕರಾದ ಅನಿಲ್ ಛಾತ್ರ ಅವರು ನೋವು ವ್ಯಕ್ತ ಪಡಿಸಿದ್ದಾರೆ.
ಕರ್ನಾಟಕ ರಾಜ್ಯ ಮಜಲು ವಾಹನ ಬಸ್ಸು ಮಾಲಕರ ಸಂಘಗಳ ಒಕ್ಕೂಟದ ಖಜಾಂಚಿ ದಿಲ್ ರಾಜ್ ಆಳ್ವ
"ಟ್ರಾವೆಲ್ ಉದ್ಯಮ ಮುಂಗಡವಾಗಿ ತೆರಿಗೆಯನ್ನು ಪಾವತಿಸುತ್ತದೆ, ವೀಕೆಂಡ್ ಕರ್ಫ್ಯೂ ಎನ್ನುವ ವಿಷಯದ ಬಗ್ಗೆ ಚರ್ಚೆ ಆರಂಭವಾದಗಲೇ ಜನರು ಪ್ರವಾಸಕ್ಕೆ ಹೋಗುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ. ನಮ್ಮ ಉದ್ಯಮಕ್ಕೆ ಯಾವುದೇ ಬೆಂಬಲ ಸರಕಾರದಿಂದ ಸಿಕ್ಕಿಲ್ಲ. ಒಂದು ಕಡೆ ತ್ರೈಮಾಸಿಕ ಮುಂಗಡ ತೆರಿಗೆ ಪಾವತಿ ಮಾಡಿದ್ದರಿಂದ ನಷ್ಟವನ್ನು ಅನುಭವಿಸಿದ್ದೇವೆ, ಇನ್ನೊಂದು ಕಡೆ ವ್ಯಾಪಾರವಿಲ್ಲದೇ ನಷ್ಟವನ್ನು ಅನುಭವಿಸುತ್ತಿದೆ. ತೆರಿಗೆ ವಿಚಾರದಲ್ಲಿ ಸರಕಾರ ರಿಯಾಯತಿ ಕೊಡಬೇಕು"ಎಂದು ಕರ್ನಾಟಕ ರಾಜ್ಯ ಮಜಲು ವಾಹನ ಬಸ್ಸು ಮಾಲಕರ ಸಂಘಗಳ ಒಕ್ಕೂಟದ ಖಜಾಂಚಿ ದಿಲ್ ರಾಜ್ ಆಳ್ವ ಮನವಿ ಮಾಡಿದ್ದಾರೆ.
ಶ್ರೀ ಸತ್ಯಸಾಯಿ ಟೂರಿಸ್ಟ್ ಸಿಇಒ ಕೃಷ್ಣ ಚಿದಂಬರ
"ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಸರಕಾರ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ವಿಧಿಸಿದೆ. ಹಾಗಾಗಿ, ರಸ್ತೆ ತೆರಿಗೆಯಲ್ಲಿ ವಿನಾಯಿತಿ ಒದಗಿಸಿ, ಹಾಗೂ ದಂಡರಹಿತವಾಗಿ ವಾಹನ ಉಪಯೋಗಿಸಲು ಅವಕಾಶ ಮಾಡಿಕೊಡಬೇಕಾಗಿ" ಶ್ರೀ ಸತ್ಯಸಾಯಿ ಟೂರಿಸ್ಟ್ ಸಿಇಒ ಕೃಷ್ಣ ಚಿದಂಬರ ಸರಕಾರಕ್ಕೆ ಮನವಿ ಮಾಡಿದ್ದಾರೆ.