ವರ್ಷಾಂತ್ಯಕ್ಕೆ ಕರ್ನಾಟಕದ 5 ವಿಶಿಷ್ಟ ಪ್ರವಾಸಿ ತಾಣಗಳು
ವರ್ಷಾಂತ್ಯಕ್ಕೆ ಬಂದು ನಿಂತಿದ್ದೇವೆ. ತೆಗೆದುಕೊಳ್ಳದೆ ಉಳಿದ ರಜಾ, ಹಬ್ಬ- ಹರಿದಿನ ಎಂದು ನೋಡದೆ ಬಂದು ಮಾಡಿದ ಕೆಲಸಕ್ಕೆ ಬಾಕಿ ಇರುವ ಕಾಂಪ್ ಆಫ್ ಗಳನ್ನೆಲ್ಲ ಒಗ್ಗೂಡಿಸಿ, ಸಾಲಾಗಿ ರಜಾ ಹಾಕಿ ತಲೆ ಮರೆಸಿಕೊಂಡು ಯಾವುದಾದರೂ ಪ್ರವಾಸಿ ತಾಣಕ್ಕೆ ಹೋಗಬೇಕು ಅನ್ನೋದು ನಿಮ್ಮ ಇರಾದೆಯಾ? ಅದಕ್ಕೆ ನಿಮ್ಮ ಬಾಸ್ ನ ತಗಾದೆ ಇಲ್ಲ ತಾನೆ?
ಕರ್ನಾಟಕದಲ್ಲಿರುವ ಅಂಥ ಪ್ರವಾಸಿ ತಾಣಗಳಿಗೆ ನೀವು ಹೋಗಿಬರಲಿ ಅನ್ನೋದೇ ನಮ್ಮ ಆಶಯ. ನಿಮಗೂ ಕರ್ನಾಟಕ ಎಲ್ಲ ಗೊತ್ತಿರುತ್ತದೆ ಬಿಡಿ. ಇಂಟರ್ ನೆಟ್ ನಲ್ಲಿ ಕಣ್ಣು ನೆಟ್ಟು ಕುಂತರೆ ಎಷ್ಟು ಜಾಗ ಸಿಗುತ್ತವೆ! ಆದರೆ ನಮ್ಮದೊಂದಿಷ್ಟು ಸಲಹೆ ಇವೆ. ಈ ಬಣ್ಣದ ಬಟ್ಟೆ ಹಾಕ್ಕಳಿ, ನೀರು ತೆಗೆದುಕೊಂಡು ಹೋಗಿ, ಝಂಡು ಬಾಮ್ ಇರಲಿ ಅಂಥವೆಲ್ಲ ಅಲ್ಲ.
ಐದು ಸ್ಥಳಗಳು ನಾವು ಸಲಹೆ ಮಾಡೋಣ ಅಂದುಕೊಂಡಿದ್ದೀವಿ. ನಿಮಗೂ ಆ ಸ್ಥಳಗಳ ಪೈಕಿ ಯಾವುದಾದರೂ ಇಷ್ಟವಾದರೆ ಪ್ರಯತ್ನಿಸಬಹುದು. ನಿಮ್ಮ ಸ್ನೇಹಿತರು, ಸಂಬಂಧಿಕರು ಕೇಳಿದರೆ ಹೇಳಬಹುದು. ಸ್ಥಳ ಹಾಗೂ ಬೆಂಗಳೂರಿನಿಂದ ಇಷ್ಟು ಕಿಲೋಮಿಟರ್ ಎಂಬ ಮಾಹಿತಿಯನ್ನಷ್ಟೇ ನೀಡುತ್ತೇವೆ. ಊಟ-ತಿಂಡಿ, ಉಳಿದುಕೊಳ್ಳೋದು ಇವೆಲ್ಲ ಮಾಹಿತಿ ನೀವೇ ನೋಡಿಕೊಳ್ಳಿ. ನಿಮ್ಮ ಸಲಹೆಗಳನ್ನು ಸಹ ಓದುಗರ ಜತೆಗೆ ಹಂಚಿಕೊಳ್ಳಿ,

ಮರವಂತೆ
ಕರ್ನಾಟಕದ ಸಮುದ್ರ ಕಿನಾರೆಗಳ ಪೈಕಿ ಒಂದು. ಉಡುಪಿಗೆ ಐವತ್ತೈದು ಕಿಲೋಮೀಟರ್ ದೂರದಲ್ಲಿದೆ. ರಸ್ತೆಯ ಒಂದು ಬದಿಗೆ ಸಮುದ್ರ, ಮತ್ತೊಂದು ಬದಿಗೆ ಸುಪರ್ಣಿಕಾ ನದಿ. ಇಡೀ ಭಾರತದಲ್ಲೇ ಇಂಥ ಅದ್ಭುತ ಅನುಭವ ಸಿಗುವಂಥದ್ದು ಇಲ್ಲಿ ಮಾತ್ರ. ಪ್ರವಾಸೋದ್ಯಮ ತೀರಾ ಬೆಳೆಯದ ಕಾರಣ ಊಟ- ವಸತಿಗೆ ಏನು ಮಾಡಬಹುದು ಎಂಬುದನ್ನು ಮುಂಚಿತವಾಗಿಯೇ ಯೋಚಿಸಿರಿ. ಇನ್ನು ಸುತ್ತಮುತ್ತಲ ಸ್ಥಳಗಳಿಗೂ ಭೇಟಿ ನೀಡಬಹುದು.

ಬಾದಾಮಿ
ಪೌರ್ಣಮಿಯ ಚಂದ್ರನ ತಂಪು ಬೆಳಕು ಬಾದಾಮಿಯ ಗುಹಾಂತರ ದೇವಾಲಯದ ಮೇಲೆ ಬೀಳುವಾಗ ನೋಡುವುದಕ್ಕೆ ಸಿಗುವ ದೃಶ್ಯವನ್ನು ಮರೆಯಲಾದೀತೆ! ಅಲ್ಲೇ ಪಕ್ಕದಲ್ಲಿನ ಅಗಸ್ತ್ಯ ಸರೋವರ...ವಾಹ್ ಇಲ್ಲಿನ ಸೊಗಸನ್ನು, ಚೆಲುವನ್ನು ಎಷ್ಟು ವರ್ಣಿಸಿದರೂ ಕಡಿಮೆಯೇ. ಬಾಗಲಕೋಟೆ ಜಿಲ್ಲೆಯಲ್ಲಿರುವ ಕರ್ನಾಟಕದ ಹೆಮ್ಮೆ ಬಾದಾಮಿಯು ಬೆಂಗಳೂರಿನಿಂದ ಐನೂರು ಕಿಲೋಮೀಟರ್ ದೂರದಲ್ಲಿದೆ. ಇಲ್ಲಿಗೆ ತೆರಳಿದ ನಂತರ ಅಕ್ಕಪಕ್ಕದ ಸ್ಥಳಗಳಿಗೂ ತೆರಳಬಹುದು.

ಕಬಿನಿ
ನೀರು, ಪ್ರಾಣಿಗಳು, ಕಾಡು ಇಷ್ಟಪಡುವವರ ಪಾಲಿಗೆ ಕಬಿನಿಯು ಹೇಳಿ ಮಾಡಿಸಿದ ಸ್ಥಳ. ಸಕಲ ಸೌಕರ್ಯ ಇರುವ ಇಲ್ಲಿ ವಸತಿಗೇನೂ ಕೊರತೆಯಿಲ್ಲ. ವರ್ಷಾಂತ್ಯಕ್ಕೆ ಒಂದಿಷ್ಟು ಜನಜಂಗುಳಿ ಹಾಗೂ ದುಬಾರಿ ಅನಿಸಬಹುದು. ಆದರೆ ಮನಸ್ಸಿಗೆ ವಿಶ್ರಾಂತಿ, ಪ್ರಫುಲ್ಲತೆ ದೊರೆಯುವುದರಲ್ಲಿ ಅನುಮಾನವಿಲ್ಲ.

ಚಿತ್ರದುರ್ಗ
ಚಂದವಳ್ಳಿ ತೋಟ, ಚಿತ್ರದುರ್ಗ ಬೆಟ್ಟದ ಏಕನಾಥೇಶ್ವರ ದೇವಸ್ಥಾನ, ತುಪ್ಪದ ಕೊಳ, ಜೋಗಿಮಟ್ಟಿ... ಪ್ರವಾಸೋದ್ಯಮ ವಿಚಾರಕ್ಕೆ ಬಂದರೆ ಚಿತ್ರದುರ್ಗದಲ್ಲಿನ ತಾಣಗಳ ಬಗ್ಗೆ ಎಷ್ಟು ವಿವರಿಸಿದರೂ ಇನ್ನೂ ಬಾಕಿ ಇದೆ ಎನಿಸುತ್ತದೆ. ಹಾಲು ರಾಮೇಶ್ವರ ಎಂಬ ಕುತೂಹಲದ ಸ್ಥಳ ಕೂಡ ಚಿತ್ರದುರ್ಗಕ್ಕೆ ಬಲು ಸಮೀಪ. ಬೆಂಗಳೂರಿನಿಂದ ಇನ್ನೂರು ಕಿಲೋಮೀಟರ್ ದೂರದಲ್ಲಿದೆ.

ಕುಪ್ಪಳಿ- ಆಗುಂಬೆ
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯ ಕುವೆಂಪು ಅವರ ಮನೆ, ಕವಿ ಶೈಲ, ಇನ್ನು ಆಗುಂಬೆಯ ಹತ್ತಿರದ ಕುಂದಾದ್ರಿ ಮತ್ತಿತರ ಸ್ಥಳಗಳನ್ನು ನೋಡಿಬರಬಹುದು. ಬೆಂಗಳೂರಿನಿಂದ ಕುಪ್ಪಳಿ ಮುನ್ನೂರೈವತ್ತು ಕಿ.ಮೀ, ತೀರ್ಥಹಳ್ಳಿಯಿಂದ ಹದಿನೇಳು ಕಿ.ಮೀ, ಇನ್ನು ಬೆಂಗಳೂರಿನಿಂದ ಆಗುಂಬೆ 357 ಕಿ.ಮೀ. ದೂರವಿದೆ.












Click it and Unblock the Notifications