ಗ್ರಾ.ಪಂ ಸದಸ್ಯರ ಕೈಯಲ್ಲಿದೆ ಎಂಎಲ್ಸಿ ಅಭ್ಯರ್ಥಿಗಳ ಭವಿಷ್ಯ; ಸಲ್ಲಿಕೆಯಾದ ನಾಮಪತ್ರಗಳೆಷ್ಟು?
ಬೆಂಗಳೂರು, ನವೆಂಬರ್ 24: ಕರ್ನಾಟಕ ವಿಧಾನ ಪರಿಷತ್ ಚುನಾವಣೆ ರಂಗೇರಿದ್ದು, ನಾಮಪತ್ರ ಸಲ್ಲಿಕೆ ಬಳಿಕ ಪ್ರತಿಯೊಬ್ಬ ಅಭ್ಯರ್ಥಿಯೂ ಗ್ರಾಮೀಣ ಪ್ರದೇಶಗಳತ್ತ ಮುಖ ಮಾಡಿದ್ದು, ಗ್ರಾಮ ಪಂಚಾಯಿತಿ ಸದಸ್ಯರ ಮನವೊಲಿಕೆಗೆ ಮುಂದಾಗಿದ್ದಾರೆ. ಸದ್ಯದ ಮಟ್ಟಿಗೆ ಪರಿಷತ್ ಅಭ್ಯರ್ಥಿಗಳಿಗೆ ಗ್ರಾ.ಪಂ ಸದಸ್ಯರೇ ಪ್ರಭುವಾಗಿದ್ದು, ಅವರಿಗೆ ಕೈ ಮುಗಿಯುವುದು ಅನಿವಾರ್ಯವಾಗಿದೆ.
ಡಿಸೆಂಬರ್ 10 ರಂದು ನಡೆಯಲಿರುವ 25 ವಿಧಾನ ಪರಿಷತ್ ಸ್ಥಾನಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಮಂಗಳವಾರ 121 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಪ್ರಕಾರ ಪ್ರಕಾರ, ಒಟ್ಟು 215 ನಾಮಪತ್ರಗಳು ಸಲ್ಲಿಕೆಯಾಗಿದ್ದು, 119 ಪುರುಷ ಮತ್ತು ಇಬ್ಬರು ಮಹಿಳಾ ಅಭ್ಯರ್ಥಿಗಳಿದ್ದಾರೆ.
ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದಿದ್ದು, ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ಸೇರಿದಂತೆ ಸದ್ಯ ಇಪ್ಪತ್ತೈದು ಸ್ಥಾನಗಳಿಗೆ ಸುಮಾರು 215 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಿದವರ ಪೈಕಿ ಒಂದಷ್ಟು ಬಂಡಾಯ ಸ್ಪರ್ಧಿಗಳು ಇರುವುದು ಕಂಡು ಬಂದಿದ್ದು, ಅವರನ್ನು ಮನವೊಲಿಸುವ ಕಾರ್ಯವೂ ನಡೆಯುತ್ತಿದೆ. ನ.26 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಆ ನಂತರ ಎಷ್ಟು ಮಂದಿ ಕಣದಲ್ಲಿ ಉಳಿಯುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಕೋಟ್ಯಧಿಪತಿಗಳೇ ಇಲ್ಲಿ ಅಭ್ಯರ್ಥಿಗಳು
ವಿಧಾನ ಪರಿಷತ್ ಚುನಾವಣೆ ಎನ್ನುವುದು ನೋಟಿನ ಆಟವಾಗಿರುವುದರಿಂದ ಸಾಮಾನ್ಯವಾಗಿ ಕೋಟ್ಯಧಿಪತಿಗಳೇ ಇಲ್ಲಿ ಅಭ್ಯರ್ಥಿಯಾಗಲು ಸಾಧ್ಯ. ಹೀಗಾಗಿ ಪರಿಷತ್ ಚುನಾವಣೆ ವೇಳೆ ಎಲ್ಲ ಪಕ್ಷಗಳು ಕೂಡ ತಮ್ಮ ಪಕ್ಷದ ಮೌಲ್ಯ, ಮಾನದಂಡಗಳನ್ನೆಲ್ಲ ಹರಾಜು ಹಾಕಿ ಹಣವಂತ ಅಭ್ಯರ್ಥಿಗಳಿಗೆ ಮಣೆ ಹಾಕುವುದು ಹೊಸತೇನಲ್ಲ. ಈ ವಿಚಾರದಲ್ಲಿ ಎಲ್ಲ ಪಕ್ಷಗಳ ಧೋರಣೆಯೂ ಒಂದೇ ಆಗಿದೆ.
ಈಗಿನ ಪರಿಸ್ಥಿತಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಸದಸ್ಯರು ಮತದಾರರು ಆಗಿರುವುದರಿಂದ ಸ್ಪರ್ಧಿಸಿದ ಎಲ್ಲ ಅಭ್ಯರ್ಥಿಗಳು ಗ್ರಾಮ ಪಂಚಾಯಿತಿ ಸದಸ್ಯನನ್ನು ಭೇಟಿ ಮಾಡಿ ಆತನ ಮನವೊಲಿಸಲೇ ಬೇಕಾಗಿದೆ. ಆತ ನೀಡುವ ಪ್ರತಿ ಮತ ಕೂಡ ಒಬ್ಬ ವಿಧಾನ ಪರಿಷತ್ ಅಭ್ಯರ್ಥಿಯ ಹಣೆಬರಹ ಬರೆಯಲಿದೆ. ಹಾಗಾಗಿಯೇ ಗ್ರಾಮ ಪಂಚಾಯಿತಿ ಸದಸ್ಯರಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಜತೆಗೆ ಗ್ರಾ.ಪಂ ಸದಸ್ಯರ ಓಟಿನ ಬೆಲೆಯೂ ದುಬಾರಿಯಾಗಲು ಆರಂಭಿಸಿದೆ.

ಮತದಾರರ ಮುಂದೆ ಮೂರು ಆಯ್ಕೆಗಳು
ಇತರೆ ಚುನಾವಣೆಗಳಂತೆ ಇಲ್ಲಿ ಜನಸಾಮಾನ್ಯರು ಮತ ಹಾಕುವುದಿಲ್ಲ. ಹೀಗಾಗಿ ಇಲ್ಲಿ ಮಾಡುವ ಯಾವ ಲೆಕ್ಕಾಚಾರಗಳು ಉಪಯೋಗಕ್ಕೆ ಬರುವುದು ಕಷ್ಟವೇ. ಪಕ್ಷ, ವ್ಯಕ್ತಿ, ಆಮಿಷ ಈ ಮೂರು ಆಯ್ಕೆಗಳು ಗ್ರಾ.ಪಂ ಸದಸ್ಯರ ಮುಂದಿದ್ದು, ಕೆಲವರು ಪಕ್ಷ ನಿಷ್ಠೆ ಮೆರೆಯಬಹುದು, ಮತ್ತೆ ಕೆಲವರು ವ್ಯಕ್ತಿ ನಿಷ್ಠೆಯಿಂದ ಮತ ಚಲಾಯಿಸಬಹುದು. ಬಹುಶಃ ಮೊದಲಿನ ಇಬ್ಬರ ಮತವನ್ನು ಬದಲಾಯಿಸಿ ತಮ್ಮತ್ತ ಎಳೆದುಕೊಳ್ಳುವುದು ಅಭ್ಯರ್ಥಿಗಳಿಗೆ ಕಷ್ಟವಾಗಿದೆ. ಅವರದು ಏಕ ನಿಲುವು ಆಗಿರುವುದರಿಂದ ಅದರಿಂದ ಪಕ್ಷಕ್ಕೆ ಅನುಕೂಲವಾಗುವುದರೊಂದಿಗೆ ಅಭ್ಯರ್ಥಿ ಗೆಲುವು ಸಾಧಿಸಬಹುದು. ಆದರೆ ಕೊನೆಯ ಕೆಟಗರಿಯಲ್ಲಿರುವ ಮತದಾರರು ತುಂಬಾ ಅಪಾಯಕಾರಿಯಾಗಲಿದ್ದಾರೆ. ಒಂದು ವೇಳೆ ಅವರು ಪಕ್ಷ, ವ್ಯಕ್ತಿ ಯಾವುದನ್ನೂ ನೋಡದೆ ತಮ್ಮನ್ನು ಸಂತುಷ್ಟಗೊಳಿಸಿದಾತನಿಗೆ ನಿಷ್ಠೆ ಮೆರೆದರೆ ಅದು ಯಾರಿಗೆ ಮುಳುಗು ನೀರು ತರುತ್ತದೆ ಎಂಬುದೇ ಕುತೂಹಲಕ್ಕೆ ಕಾರಣವಾಗಿದೆ.

ಗ್ರಾ.ಪಂ ಸದಸ್ಯರು ವಿದ್ಯಾವಂತರಾಗಿದ್ದಾರೆ
ಈಗ ಮೊದಲಿನಂತಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರು ವಿದ್ಯಾವಂತರಾಗಿದ್ದಾರೆ. ದೈನಂದಿನ ರಾಜಕೀಯ ವಿದ್ಯಮಾನಗಳನ್ನು ಅವರು ಕೂಡ ನೋಡುತ್ತಿದ್ದಾರೆ. ಯಾರಿಂದ ಲಾಭ ಮತ್ತು ನಷ್ಟ ಎಂಬುದರ ಬಗ್ಗೆಯೂ ಅರಿವಿದೆ. ಒಂದು ವೇಳೆ ಪ್ರತಿಯೊಬ್ಬ ಸದಸ್ಯನೂ ಪಕ್ಷ ನಿಷ್ಠೆ ಮೆರೆದಿದ್ದೇ ಆದರೆ ಆಯಾಯ ಜಿಲ್ಲೆಯಲ್ಲಿ ಯಾವ ಪಕ್ಷದ ಪ್ರಾಬಲ್ಯವಿದೆಯೋ ಆ ಪಕ್ಷವೇ ಗೆಲ್ಲುತ್ತದೆ ಎಂಬುದನ್ನು ಘಂಟಾಘೋಷವಾಗಿ ಹೇಳಬಹುದಾಗಿದೆ. ಆದರೆ ಇಲ್ಲಿ ಅಷ್ಟು ಸುಲಭವಾಗಿ ಅಂತಹ ತೀರ್ಮಾನಕ್ಕೆ ಬರಲು ರಾಜಕೀಯ ಪಕ್ಷಗಳಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿಯೇ ನಾವೇ ಗೆಲ್ಲುತ್ತೇವೆ ಎಂದು ಹೇಳಲು ಯಾವುದೇ ರಾಜಕೀಯ ಪಕ್ಷಗಳ ನಾಯಕರಿಗೆ ಧೈರ್ಯವಿಲ್ಲದಂತಾಗಿದೆ.

ಗ್ರಾ.ಪಂ ಸದಸ್ಯರು ನೀಡುವ ಮತವೇ ನಿರ್ಣಾಯಕ
ಬಿಜೆಪಿಯ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಬೆಳಗಾವಿಯಿಂದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ವಿರುದ್ಧ ಸ್ಪರ್ಧಿಸಿದ್ದಾರೆ. ಮೇಲ್ಮನೆಯು 75 ಸದಸ್ಯರ ಬಲವನ್ನು ಹೊಂದಿದ್ದು, ಸದ್ಯ ಬಿಜೆಪಿ 32, ಕಾಂಗ್ರೆಸ್ 29 ಮತ್ತು ಜೆಡಿಎಸ್ 12 ಒಬ್ಬ ಪಕ್ಷೇತರ ಸದಸ್ಯರಿದ್ದಾರೆ. ಕಳೆದ ವರ್ಷ ಜೆಡಿಎಸ್ನ ಎಂಎಲ್ಸಿ ಧರ್ಮೇಗೌಡ ನಿಧನದ ನಂತರ ಆ ಸ್ಥಾನ ತೆರವಾಗಿತ್ತು.
ಬಿಜೆಪಿಗೆ ವಿಧಾನ ಪರಿಷತ್ನಲ್ಲಿ ಬಹುಮತವಿಲ್ಲದ ಕಾರಣದಿಂದ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ಬಹುಮತವನ್ನು ಸಾಧಿಸುವುದು ಪ್ರಮುಖ ಉದ್ದೇಶವಾಗಿದೆ. ಕಾಂಗ್ರೆಸ್ ಪರಿಷತ್ನ ಹಿಡಿತಕ್ಕಾಗಿ ಹಂಬಲಿಸುತ್ತಿದೆ. ಇತ್ತ ಜೆಡಿಎಸ್ ತನಗೆ ಅನುಕೂಲವಿರುವ ಕ್ಷೇತ್ರಗಳನ್ನು ನೋಡಿಕೊಂಡು ಏಳು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇಲ್ಲಿ ಮೂರು ಪಕ್ಷಗಳು ಏನೇ ಕಸರತ್ತು ಮಾಡಿದರೂ ಡಿ.10ರಂದು ಮತದಾನ ನಡೆಯುವ ದಿನ ಗ್ರಾ.ಪಂ ಸದಸ್ಯರು ಸೇರಿದಂತೆ ಜನಪ್ರತಿನಿಧಿಗಳು ನೀಡುವ ಮತವೇ ನಿರ್ಣಾಯಕವಾಗಿರುವುದರಿಂದ ನಮ್ಮೆಲ್ಲ ಲೆಕ್ಕಾಚಾರಗಳು ತಲೆಕೆಳಗಾದರೂ ಅಚ್ಚರಿಪಡಬೇಕಾಗಿಲ್ಲ.
Recommended Video
-
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications