ಪರಿಷತ್ ಚುನಾವಣೆ, ಎಚ್ಡಿಕೆ ಮತ್ತು ಗೌಡ್ರ ದ್ವಂದ್ವ ನಿಲುವು: ಎಲ್ಲಾ ಬರೀ ಮಾತಿಗಷ್ಟೇ..
ಬೆಂಗಳೂರು, ಡಿ 9: ಮತದಾರರಿಗೆ ಶುಕ್ರದೆಸೆ ತಂದು ಕೊಡುತ್ತಿದೆ ಎಂದೇ ಹೇಳಲಾಗುತ್ತಿರುವ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಡಿಸೆಂಬರ್ ಹತ್ತರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ ಹದಿನಾಲ್ಕಕ್ಕೆ ಫಲಿತಾಂಶ ಹೊರಬೀಳಲಿದೆ.
ಮತದಾರರಿಗೆ ಹಣ, ಮದ್ಯ, ಸೀರೆ, ಶರ್ಟು ಹಂಚಲಾಗುತ್ತಿದೆ, ಜೊತೆಗೆ, ದೇವರ ಫೋಟೋದ ಮೇಲೆ ಆಣೆ ಮಾಡಿಸಿಕೊಂಡು ದುಡ್ಡು ಕೊಡಲಾಗುತ್ತಿದೆ. ಈ ಸಂಬಂಧ, ಕೋಲಾರ-ಚಿಕ್ಕಬಳ್ಳಾಪುರ ಕ್ಷೇತ್ರದ, ವರ್ತೂರು ಪ್ರಕಾಶ್ ಮನೆಯಲ್ಲಿ ಎಂದು ಹೇಳಲಾಗುತ್ತಿರುವ ಆಣೆ ಮಾಡಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.
ಜೆಡಿಎಸ್ ಈ ಬಾರಿ ಆರು ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಲಿದೆ. ಹಾಗಾಗಿ, ಬೆಳಗಾವಿ ಒಂದು ಹೊರತು ಪಡಿಸಿ ಮಿಕ್ಕೆಲ್ಲಾ ಕಡೆ ಬಿಜೆಪಿ - ಕಾಂಗ್ರೆಸ್ ನಡುವೆ ಸ್ಪರ್ಧೆ ಇರಲಿದೆ. ಕಣಕ್ಕಿಳಿಯದ ಕ್ಷೇತ್ರದಲ್ಲಿ ಯಾರಿಗೆ ಬೆಂಬಲ ನೀಡಬೇಕು ಎನ್ನುವ ವಿಚಾರದಲ್ಲಿ ಜೆಡಿಎಸ್ಸಿನ ಟಾಪ್ ಟು ನಾಯಕರಿಗೆ ಸ್ಪಷ್ಟತೆ ಇದ್ದಂತಿಲ್ಲ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬಹಿರಂಗವಾಗಿಯೇ ಜೆಡಿಎಸ್ ಬೆಂಬಲ ಕೋರಿದ್ದರಿಂದ, ಈ ಬಗ್ಗೆ ಕಾರ್ಯಕರ್ತರಿಗೆ ಗೊಂದಲವಿತ್ತು. ಕೊನೆಗೂ, ಕುಮಾರಸ್ವಾಮಿಯವರು ಪಕ್ಷದ ನಿರ್ಧಾರವನ್ನು ತೆಗೆದುಕೊಂಡರು. ಇದು ಇನ್ನಷ್ಟು ಗೊಂದಲಕ್ಕೆ ಕಾರಣವಾಗಿದ್ದೇ ಹೆಚ್ಚು.

ಪ್ರಧಾನಿಗಳು ಗೌಡ್ರಿಗೆ ತೋರಿದ ಪ್ರೀತಿ, ಆದರದ ಸ್ವಾಗತ ನೋಡಿದಾಗ
ಯಡಿಯೂರಪ್ಪನವರು ಕುಮಾರಸ್ವಾಮಿಯವರ ಬೆಂಬಲ ಕೇಳಿದ್ದು ಒಂದು ಕಡೆಯಾದರೆ, ಮಾಜಿ ಪ್ರಧಾನಿ ದೇವೇಗೌಡ್ರು, ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದರು. ಪ್ರಧಾನಿಗಳು ಗೌಡ್ರಿಗೆ ತೋರಿದ ಪ್ರೀತಿ, ಆದರದ ಸ್ವಾಗತ ನೋಡಿದಾಗ, ಜೆಡಿಎಸ್ ಇನ್ನೇನು ಬಿಜೆಪಿ ಬುಟ್ಟಿಗೆ ಬಿತ್ತು ಎಂದೇ ವ್ಯಾಖ್ಯಾನಿಸಲಾಗಿತ್ತು. ಈ ಸಂಬಂಧ ಚರ್ಚೆಗಳೂ ಜೋರಾಗಿ ಸಾಗುತ್ತಿದ್ದವು. ಆದರೆ, ಬಿಜೆಪಿ ಸೇರಿದಂತೆ ಯಾವುದೇ ಪಕ್ಷಗಳಿಗೆ ಬೆಂಬಲ ನೀಡುವುದಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು.

ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ಇದ್ದಾರೆಯೇ ಎನ್ನುವ ಪ್ರಶ್ನೆ
ಇನ್ನೊಂದು ಕಡೆ ಜೆಡಿಎಸ್ ವರಿಷ್ಠ ದೇವೇಗೌಡ್ರು ದೇವನಹಳ್ಳಿಯಲ್ಲಿ ಹೇಳಿಕೆಯನ್ನು ನೀಡುತ್ತಾ, "ಬಿಜೆಪಿಯೊಂದಿಗೆ ಹೊಂದಾಣಿಕೆಯನ್ನು ಮಾಡಿಕೊಂಡಿಲ್ಲ, ಮಾಡಿಕೊಳ್ಳುವುದೂ ಇಲ್ಲ. ಯಾವುದೇ ಕಾರಣಕ್ಕೂ ನಮ್ಮ ಪಕ್ಷದ ಸದಸ್ಯರು ಬಿಜೆಪಿ ಅಭ್ಯರ್ಥಿಗಳಿಗೆ ವೋಟ್ ಹಾಕಬಾರದೆಂದು ಸೂಚನೆಯನ್ನು ನೀಡಿದ್ದೇನೆ"ಎಂದು ಗೌಡ್ರು ಹೇಳಿದ್ದಾರೆ. ಆದರೆ, ಗೌಡ್ರು ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಬಾರದು ಎಂದು ಹೇಳದೇ ಇರುವುದರಿಂದ, ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ಇದ್ದಾರೆಯೇ ಎನ್ನುವ ಪ್ರಶ್ನೆ ಕಾಡುವುದು ಸಹಜ.

ಗೌಡ್ರ ಮತ್ತು ಕುಮಾರಣ್ಣನ ನಡುವೆ ವ್ಯತ್ಯಾಸ ಇರುವುದು ಸ್ಪಷ್ಟ
ಪರಿಷತ್ ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡಬೇಕು ಎನ್ನುವ ವಿಚಾರದಲ್ಲಿ ಗೌಡ್ರ ಮತ್ತು ಕುಮಾರಣ್ಣನ ನಡುವೆ ವ್ಯತ್ಯಾಸ ಇರುವುದು ಸ್ಪಷ್ಟ. "2023ರ ವಿಧಾನಸಭೆ ಚುನಾವಣೆಯಲ್ಲಿ ನಿಗದಿತ ಗುರಿ ತಲುಪಲು ಅನುಕೂಲ ಆಗುವಂತೆ ಪಕ್ಷವು ಸ್ಪರ್ಧೆ ಮಾಡದಿರುವ 19 ಕ್ಷೇತ್ರಗಳಿಗೆ ಸ್ಥಳೀಯ ಮಟ್ಟದಲ್ಲಿಯೇ ನಿರ್ಧಾರ ಕೈಗೊಳ್ಳುವಂತೆ ಪಕ್ಷದ ಮತದಾರರಿಗೆ ನಿರ್ದೇಶನ ನೀಡಲಾಗಿದೆ. ಬೆಂಬಲದ ವಿಚಾರದಲ್ಲಿ ಹಲವು ಊಹಾಪೋಹಗಳು ಇದ್ದಿದ್ದರಿಂದ, ಅದೆಕ್ಕೆಲ್ಲ ತೆರೆ ಎಳೆಯುವ ನಿಟ್ಟಿನಲ್ಲಿ ಪಕ್ಷವು ತನ್ನ ಮತದಾರರಿಗೆ ಇಂದು ಸ್ಪಷ್ಟ ಸಂದೇಶ ನೀಡಿದೆ" ಕುಮಾರಸ್ವಾಮಿ ಹೇಳಿದ್ದಾರೆ. ಆದರೆ..

ಗೌಡ್ರ ಮತ್ತು ಕುಮಾರಸ್ವಾಮಿಯವರ ಹೇಳಿಕೆಗಳು, ಮೇಲ್ನೋಟಕ್ಕೆ ಬರೀ ಮಾತಿಗೆ ಸೀಮಿತ
ದೇವೇಗೌಡ್ರು ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಇಲ್ಲ ಎಂದರೆ, ಕುಮಾರಸ್ವಾಮಿಯವರು ಸ್ಥಳೀಯ ಮಟ್ಟದಲ್ಲಿಯೇ ನಿರ್ಧಾರ ಎಂದು ಹೇಳಿದ್ದಾರೆ. ಹಾಗಾಗಿ, ಹತ್ತೊಂಬತ್ತು ಕ್ಷೇತ್ರಗಳಲ್ಲಿ ಒಂದಷ್ಟು ಜೆಡಿಎಸ್ ಮತದಾರರು ಬಿಜೆಪಿಗೆ, ಇನ್ನಷ್ಟು ಜನ ಕಾಂಗ್ರೆಸ್ಸಿಗೆ ಮತ ಚಲಾಯಿಸುವುದು ಸ್ಪಷ್ಟ. ಹಾಗಾಗಿ, ಎರಡೂ ರಾಷ್ಟ್ರೀಯ ಪಕ್ಷಗಳನ್ನು ಸಮನಾಗಿ ದೂರದಲ್ಲಿ ಇಟ್ಟಿದ್ದೇವೆ ಎನ್ನುವ ಗೌಡ್ರ ಮತ್ತು ಕುಮಾರಸ್ವಾಮಿಯವರ ಹೇಳಿಕೆಗಳು, ಮೇಲ್ನೋಟಕ್ಕೆ ಬರೀ ಮಾತಿಗೆ ಸೀಮಿತವಾದಂತೆ ಕಾಣುತ್ತದೆ.












Click it and Unblock the Notifications