ಬೆಂಗಳೂರನ್ನು ಪ್ರೀತಿಸುವಂತೆ ಮಾಡುವ 'ಕರ್ನಾಟಕ ಬಂದ್'!

Recommended Video

      ಮಹದಾಯಿಗಾಗಿ ಕರ್ನಾಟಕ ಬಂದ್ | ಬೆಂಗಳೂರಿನಲ್ಲಿ ರಸ್ತೆಗಳೆಲ್ಲ ಖಾಲಿ ಖಾಲಿ | Oneindia Kannada

      "ಸದಾ ಗಿಜುಗುಡುವ ಮಹಾನಗರದ ಬಿಡುವಿಲ್ಲದ ತಾಪತ್ರಯದ ನಡುವಲ್ಲಿ ಇಂಥದೊಂದು ಬೆಳಗು ನನಗೂ ಬೇಕಿತ್ತು! ಬೆಳಗಾದರೆ ಸಾಕು ಇದ್ದಬದ್ದ ವಾಹನಗಳನ್ನೆಲ್ಲ ತನ್ನ ಮೇಲೆ ಮಲಗಿಸಿಕೊಳ್ಳುವ ರಸ್ತೆ ಧ್ಯಾನಾವಸ್ಥೆಯಲ್ಲಿ ಕೂತುಬಿಟ್ಟಿದೆಯಾ? ಚಳಿ ಇರಲಿ, ಮಳೆ ಇರಲಿ ತುತ್ತಿನ ಚೀಲ ತುಂಬಿಕೊಳ್ಳಲೇಬೇಕಲ್ಲ ಎಂದು ಒಲ್ಲದ ಮನಸ್ಸಿನಿಂದ ಬೆಳಿಗ್ಗೆ ಹೊದಿಕೆ ಎತ್ತಿಡುವ ಜರೂರು ಇವತ್ತಿಲ್ಲ! ಹೌದು ಈ ಬಂದ್ ಎಂಬ ಬಂದು ಕಲ್ಪಿಸಿದ ಸೌಭಾಗ್ಯ ಒಂಥರಾ ಚೆಂದ!"

      ಹೀಗೆ ಬೆಂಗಳೂರಿನಲ್ಲಿರುವ ಅದೆಷ್ಟು ಜನ ಮನಸ್ಸಿನಲ್ಲೇ ಹಲುಬಿಕೊಂಡಿದ್ದಾರೋ ದೇವರೇ ಬಲ್ಲ! ನಿಜ ಹೇಳಬೇಕಂದ್ರೆ ನನ್ನ ಬೆಂಗಳೂರು ಇಷ್ಟೆಲ್ಲ ಸುಂದರವಾಗಿದೆಯಾ ಅನ್ನಿಸೋದು ಈ ಬಂದ್ ದಿನವೇ! ಬೆಳಗ್ಗೆ ಎದ್ದು ಬಸ್ ಹಿಡಿಯುವಾಗ, ಮೆಟ್ರೋದಲ್ಲಿ ಉಸಿರಾಡುವುದಕ್ಕಾದರೂ ಜಾಗ ಹುಡುಕಿಕೊಂಡು ನಿಲ್ಲುವಾಗ, ಸಿಗ್ನಲ್ ಬಿಡುವ ಮೊದಲೇ ಹಾರ್ನ್ ನೂರು ಬಾರಿ ಕೀರಲು ಸದ್ದು ಮಾಡುವಾಗ, ತಿಂಡಿಯನ್ನು ಗಬಗಬನೆ ಮುಕ್ಕಿ ಆಫೀಸಿನ ತಲೆಬಿಸಿಯಲ್ಲಿ ಓಡುವಾಗ, ಇಷ್ಟೆಲ್ಲ ಕಷ್ಟಪಟ್ಟು ಕಚೇರಿಗೆ ಬಂದ ಮೇಲೂ ಯಾವುದೋ ಎಡವಟ್ಟು ಮಾಡಿಕೊಂಡು ಬಾಸ್ ಹತ್ತಿರ ಬೈಸಿಕೊಳ್ಳುವಾಗ... ಉಫ್ ಬೇಕಾ ಈ ಬದುಕು ಎಂದು ಬೆಂಗಳೂರಿನ ಈ ನಿರ್ದಯ ಬದುಕನ್ನು ಬೈದುಕೊಂಡಿದ್ದೆಷ್ಟುಸಲವೋ!

      ಆದರೆ ಈ ಬಂದ್ ಅಂತ ಒಂದು ಬಂತು ನೋಡಿ..! ಬೆಳಗ್ಗೆ ಎದ್ದು ವಾಕಿಂಗ್ ಹೋದರೆ ರಸ್ತೆಯೆಲ್ಲ ಖಾಲಿ. ರಸ್ತೆಯ ಇಕ್ಕೆಲಗಳಲ್ಲಿ ಇಷ್ಟೆಲ್ಲ ಮರವಿದೆಯಾ..? ಅದೂ ಹಸಿರು ಹಸಿರಾಗಿ! ಎಂದು ಗೊತ್ತಾಗಿದ್ದೇ ಆಗ! ಬೆಂಗಳೂರಲ್ಲೂ ಮಂಜಿನ ಮುಂಜಾನೆ ಕಾಣುತ್ತಾ..? ಬೆಂಗಳೂರಲ್ಲೂ ಸನ್ ರೈಸ್ ಆಗುತ್ತಾ..?

      ಬೆಂಗಳೂರಿನ ರಸ್ತೆಗೂ ಸೈಲೆಂಟ್ ಆಗಿರೋಕೆ ಬರುತ್ತಾ? ಬೆಂಗಳೂರಿನ ವಾಹನಗಳಿಗೂ ಹೊಗೆಯುಗುಳದೆ ನಿರ್ಲಿಪ್ತವಾಗಿ ಉಳಿದುಬಿಡೋಕೆ ಬರುತ್ತಾ? ಬೆಂಗಳೂರಿನ ಸಿಗ್ನಲ್ ಗಳಿಗೂ ಹಾರ್ನಿನ ಕೀರಲು ಸದ್ದಿನಿಂದ ಮುಕ್ತಿ ಸಿಗುತ್ತಾ..? ಅಯ್ಯೋ ನನ್ನ ಉದ್ಯಾನ ನಗರಿ ಇಷ್ಟೆಲ್ಲ ಸುಂದರಿನಾ..?! ನಿಜ, ಬೆಂಗಳೂರನ್ನು ಸ್ತಬ್ಧವಾಗಿಸುವ ಈ ಬಂದ್ ಗಳು ಐಟಿ ಸಿಟಿಯ ಮೋಹಕತೆಯನ್ನು ಅರ್ಥಮಾಡಿಸುತ್ತವೆ, ಬೆಂಗಳೂರು ಎಷ್ಟು ಸುಂದರ ನಗರ ಎಂಬುದು ತಿಳಿಯುವುದು ಆಗಲೇ!

      ಚಿತ್ರಗಳು : ಮಹದಾಯಿಗಾಗಿ ಕರ್ನಾಟಕ ಬಂದ್

      ಆದರೆ ಈ ಬಂದ್ ನ ಹಿಂದಿರುವ ನೂರಾರು ಜನರ ಕಣ್ಣೀರು, ಇದರಿಂದಾಗುವ ನಷ್ಟಗಳನ್ನು ನೆನೆದರೆ ಇವೆಲ್ಲ ನಿಜಕ್ಕೂ ಬೇಕಿತ್ತಾ ಎಂಬ ಪ್ರಶ್ನೆ ಏಳುತ್ತೆ.

      ಬಂದ್ ಅಂದ್ರೆ ರಜಾ ಅಷ್ಟೇನಾ?

      ಬಂದ್ ಅಂದ್ರೆ ರಜಾ ಅಷ್ಟೇನಾ?

      ಕನ್ನಡ ನುಡಿ, ನೆಲ, ನೀರಿಗಾಗಿ ಹೋರಾಟ ನಡೆಯುತ್ತಿರುವುದು ಇದೇ ಮೊದಲಲ್ಲ. ವರ್ಷಕ್ಕೆ ಕನಿಷ್ಠವೆಂದರೂ ಮೂರ್ನಾಲ್ಕು ಬಂದ್ ಕರ್ನಾಟಕದ ಮಟ್ಟಿಗೆ ಮಾಮೂಲು. ಈ ಬಂದ್ ಹಿಂದೆ ಎಷ್ಟು ಜನರ ನೋವಿದೆಯೋ, ಸರ್ಕಾರದ ವಿರುದ್ಧದ ಮುನಿಸಿದೆಯೋ, ಎಲ್ಲವೂ ಪರಿಹಾರವಾದೀತು ಎಂಬ ಭರವಸೆ ಇದೆಯೋ! ಹಲವು ಜಿಲ್ಲೆಯ ಜನರಿಗೆ ಕುಡಿಯುವ ನೀರೂ ಒಂದು ಸಮಸ್ಯೆಯೆಂದರೆ ಬೆಂಗಳೂರಿನಂಥ ಸಿಲಿಕಾನ್ ಸಿಟಿಯಲ್ಲಿರುವವರಿಗೆ ಸಮಸ್ಯೆಯ ತೀವ್ರತೆ ಅರಿವಾಗುವುದು ಕಷ್ಟ. ಅದಕ್ಕೆಂದೇ ನಾವು ಬಂದ್ ನ ಬೆಳಗನ್ನು 'ಸದ್ಯ ರಜಾ' ಎನ್ನುತ್ತಲೇ ಸಂಭ್ರಮಿಸುತ್ತೇವೆ!

      ಬಂದ್ ನಿಂದ ಎಲ್ಲವೂ ಪರಿಹಾರವಾದೀತಾ..?

      ಬಂದ್ ನಿಂದ ಎಲ್ಲವೂ ಪರಿಹಾರವಾದೀತಾ..?

      ಬಂದ್ ನಲ್ಲಿ ರಾಜಕೀಯ ಹಸ್ತಕ್ಷೇಪವಾದರೆ ಆ ಬಂದ್ ನ ಉದ್ದೇಶ ಮಕಾಡೆ ಮಲಗಿದಂತೇ. ಅದಕ್ಕೆಂದೇ ಬಂದ್ ಕುರಿತು ಯಾರಿಗೂ ಭರವಸೆ ಉಳಿದಿಲ್ಲ. ಸಂಘಟನೆಗಳಲ್ಲೇ ನಾಲ್ಕಾರು ಬಣಗಳು ಹುಟ್ಟಿಕೊಂಡು ನಿಜಕ್ಕೂ ಕನ್ನಡಿಗರ ಉದ್ಧಾರಕ್ಕಾಗಿ, ಕನ್ನಡಿಗರ ಸಂಕಷ್ಟ ಅರ್ಥಮಾಡಿಕೊಳ್ಳುವುದಕ್ಕಾಗಿ ಹೋರಾಡುವವರು ಯಾರು ಎಂಬುದೇ ಅರ್ಥವಾಗದೆ ಜನಸಾಮಾನ್ಯರ ಮನಸ್ಸು ಗೊಂದಲದ ಗೂಡಾಗಿದೆ.

      ನಷ್ಟ ಕಟ್ಟಿಕೊಡುವವರ್ಯಾರು..?

      ನಷ್ಟ ಕಟ್ಟಿಕೊಡುವವರ್ಯಾರು..?

      ಒಬ್ಬ ಆಟೋ ಚಾಲಕ, ಒಬ್ಬ ಕ್ಯಾಬ್ ಚಾಲಕನಿಗೆ ಬಂದ್ ಯಾಕೆ ನಡೆಯುತ್ತೆ ಎಂಬುದೇ ಅರಿವಿಲ್ಲದಿರಬಹುದು. ಆ ದಿನದ ಹೊಟ್ಟೆಪಾಡಿಗೆ ಆ ದಿನದ ದುಡಿಮೆಯನ್ನೇ ನಂಬಿರುವವರಿಗೆ ಬಂದ್ ದಿನ ತಣ್ಣೀರು ಬಟ್ಟೆಯೇ ಗತಿಯಾ? ಈ ಬಂದ್ ನಿಂದ ನಾಶವಾಗುವ ಸಾರ್ವಜನಿಕ ಆಸ್ತಿಪಾಸ್ತಿಯ ನಷ್ಟ ಭರಿಸುವವರ್ಯಾರು? ಒಂದು ರಾಜ್ಯದ ಒಂದು ದಿನದ ಉತ್ಪಾದನೆ, ಆದಾಯ ಎಲ್ಲವೂ ನಿಂತರೆ ಆಗುವ ನೂರಾರು ಕೋಟಿ ನಷ್ಟಕ್ಕೆ ನಿಜವಾಗಿಯೂ ಹೊಣೆ ಯಾರು?

      ನಮ್ಮದೂ ಬೆಂಬಲವಿದೆ... ಆದರೆ...

      ನಮ್ಮದೂ ಬೆಂಬಲವಿದೆ... ಆದರೆ...

      ಕನ್ನಡ ನುಡಿ, ನಾಡು, ನೀರಿಗಾಗಿ ನಡೆವ ಹೋರಾಟಕ್ಕೆ ಇಡೀ ಕರ್ನಾಟಕದ್ದೂ ಬೆಂಬಲವಿದೆ. ಪ್ರತಿ ಕನ್ನಡಿಗನೂ ಅದಕ್ಕೆ ಸ್ವ ಇಚ್ಛೆಯಿಂದ ಬೆಂಬಲ ನೀಡುತ್ತಾನೆ. ಆದರೆ ಆ ಬಂದ್ ರಾಜಕೀಯ ದುರುದ್ದೇಶದಿಂದ ಮುಕ್ತವಾಗಿರಬೇಕಷ್ಟೆ. ಸೋಗಿನ ಹೋರಾಟಗಾರರಿಲ್ಲದ, ಕನ್ನಡದ ನೆಲದ ಮೇಲಿನ ನೈಜ ಕಾಳಜಿಯಿಂದ ನಡೆವ ಬಂದ್ ಗೆ ನಮ್ಮೆಲ್ಲರ ಬೆಂಬಲವೂ ಇದ್ದೇ ಇದೆ. ಈ ಬಂದ್ ಸಾತ್ವಿಕ ಆಕ್ರೋಶ ಸ್ಫುರಿಸಬೇಕೇ ಹೊರತು, ಹಿಂಸೆ, ದ್ವೇಷ, ಪ್ರತಿಕಾರ ಸಾಧನೆಗೆ ವೇದಿಕೆಯಾಗಬಾರದು ಎಂಬುದು ನಮ್ಮ ಕಳಕಳಿ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+