Karnataka Assembly Election 2023: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ಟಿಕೆಟ್ ಆಕಾಂಕ್ಷಿಗಳು
1986ರಲ್ಲಿ ಬೆಂಗಳೂರು ಜಿಲ್ಲೆಯನ್ನು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಎಂದು ವಿಂಗಡಿಸಿ ಪುನರ್ ರಚಿಸಲಾಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯು 4 ತಾಲ್ಲೂಕು, 17 ಹೋಬಳಿಗಳು 1,122 ಹಳ್ಳಿಗಳು, 3 ನಗರಸಭೆ, 2 ಪುರಸಭೆ, 1 ಪಟ್ಟಣ ಪಂಚಾಯಿತಿ ಮತ್ತು 229 ಗ್ರಾಮ ಪಂಚಾಯಿತಿಗಳನ್ನು ಹೊಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ, ಹಾಗೂ ದೇವನಹಳ್ಳಿ ವಿಧಾನಸಭಾ ಕ್ಷೇತ್ರಗಳನ್ನ ಒಳಗೊಂಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯೂ ನಾಲ್ಕು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಬಲಾಬಲ ಹಾಗೂ ಯಾವು ಪಕ್ಷದಿಂದ ಯಾರು ಅಭ್ಯರ್ಥಿ ಎನ್ನುವ ಬಗ್ಗೆ ಒಂದು ನೋಟ.
ಹೊಸಕೋಟೆ ವಿಧಾನಸಭಾ ಕ್ಷೇತ್ರ : ಶರತ್ ಬಚ್ಚೇಗೌಡ (ಪಕ್ಷೇತರರಾಗಿ ಗೆದ್ದು, ಈಗ ಕಾಂಗ್ರೆಸ್ ನಾಯಕ)
ನೆಲಮಂಗಲ ವಿಧಾನಸಭಾ ಕ್ಷೇತ್ರ: ಡಾ.ಕೆ. ಶ್ರೀನಿವಾಸ್ ಮೂರ್ತಿ (ಜೆಡಿಎಸ್)
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ: ಟಿ ವೆಂಕಟರಮಣಯ್ಯ (ಕಾಂಗ್ರೆಸ್)
ದೇವನಹಳ್ಳಿ ವಿಧಾನಸಭಾ ಕ್ಷೇತ್ರ: ನಿಸರ್ಗ ನಾರಾಯಣಸ್ವಾಮಿ (ಜೆಡಿಎಸ್)

ಕಾಂಗ್ರೆಸ್ ನಿಂದ ಶರತ್ ಬಚ್ಚೇಗೌಡಗೆ?
ಹೊಸಕೋಟೆ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು: 2,13,411
ಪುರುಷ ಮತದಾರರು: 1,07,869
ಮಹಿಳಾ ಮತದಾರರು: 1,05,514
ಹೊಸಕೋಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು
2018ರಲ್ಲಿ ಮತ ಚಲಾಯಿಸಿದ ಹೊಸಕೋಟೆ ಮತದಾರ, 2019ರ ಮೇನಲ್ಲಿ ಮತ್ತೆ ಉಪ ಚುನಾವಣೆ ಮತ ಚಲಾಯಿಸಬೇಕಾಯಿತು. ಈಗ ಅಸೆಂಬ್ಲಿ ಚುನಾವಣೆಗೆ ಕ್ಷೇತ್ರ ಸಜ್ಜಾಗಿದೆ. ಕಳೆದ ಬಾರಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಈ ಬಾರಿಯೂ ಅದೇ ಫೈಟ್ ಮುಂದುವರೆಯುವ ಸಾಧ್ಯತೆಯೇ ದಟ್ಟವಾಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ರಾಜಕೀಯ ಪೈಪೋಟಿ ಹೊಂದಿರುವ ಕ್ಷೇತ್ರ ಇದಾಗಿದೆ.
2018ರ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಎಂಟಿಬಿ ನಾಗರಾಜ್, ಗೆಲುವು ಸಾಧಿಸಿದ್ದರು. ಆದರೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರಿಂದ ಮತ್ತೆ ಅಲ್ಲಿ ಉಪ ಚುನಾವಣೆ ನಡೆಯಿತು. ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡ ಅವರ ಮಗ ಶರತ್ ಬಚ್ಚೇಗೌಡ ಹೊಸಕೋಟೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿತರಾಗಿದ್ದರು. ಆದರೆ, ಬಿಜೆಪಿಯಿಂದ ಟಿಕೆಟ್ ಲಭ್ಯವಾಗದ ಕಾರಣ ಅವರು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
2004, 2013 ಮತ್ತು 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆಲುವು ಸಾಧಿಸಿದ್ದ ಎಂಟಿಬಿ ನಾಗರಾಜ್ ಅವರು 2019 ರಲ್ಲಿ ನಡೆದ ಉಪಚುನಾವಣೆಯಲ್ಲಿ ಸೋತರು, ಇನ್ನೂ ಉಪಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದಿದ್ದ ಶರತ್ ಬಚ್ಚೇಗೌಡ, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ 11,486 ಮತಗಳ ಅಂತರದಿಂದ ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದ್ದರು.
ಹಾಲಿ ಪಕ್ಷೇತರ ಶಾಸಕರಾಗಿರುವ ಶರತ್ ಬಚ್ಚೇಗೌಡ ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ನೀಡುವುದು ಬಹುತೇಕ ಫಿಕ್ಸ್ ಆಗಿದೆ. ಅತ್ತ ಬಿಜೆಪಿಯಿಂದ ಸಚಿವ ಎಂಟಿಬಿ ನಾಗರಾಜ್ ಸ್ಪರ್ಧಿಸಲಿದ್ದಾರೆ. ಒಂದು ವೇಳೆ ಅವರು ಸ್ಪರ್ಧಿಸದೇ ಇದ್ದರೆ, ಅವರ ಪುತ್ರ ಎಂಟಿಬಿ ದರ್ಶನ್ ಸ್ಪರ್ಧಿಸೋ ಸಾಧ್ಯತೆ ಇದೆ.

ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್
ನೆಲಮಂಗಲ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು: 2,10,773
ಪುರುಷ ಮತದಾರರು: 1,05,147
ಮಹಿಳಾ ಮತದಾರರು: 1,05,557
ನೆಲಮಂಗಲ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು
ಬೆಂಗಳೂರಿನ ಹೆಬ್ಬಾಗಿಲು ಅಂತಾನೇ ಕರೆಸಿಕೊಳ್ಳುವ ವಿಧಾನಸಭಾ ಕ್ಷೇತ್ರ, ನೆಲಮಂಗಲ. ಲೋಕಸಭೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಭಾಗವಾಗಿರುವ ನೆಲಮಂಗಲ, ವಿಧಾನಸಭೆಯಲ್ಲಿ ತನ್ನದೇ ಆದ ಕ್ಷೇತ್ರವನ್ನು ಹೊಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪೈಕಿ ನೆಲಮಂಗಲ ಕೂಡ ಒಂದಾಗಿದ್ದು, ಸದ್ಯ ಜೆಡಿಎಸ್ ಭದ್ರಕೋಟೆಯಾಗಿರುವ ನೆಲಮಂಗಲದಲ್ಲಿ ಡಾ. ಶ್ರೀನಿವಾಸಮೂರ್ತಿ ಶಾಸಕರಾಗಿದ್ದಾರೆ.
2 ಬಾರಿ ಶಾಸಕರಾಗಿರುವ ಡಾ. ಶ್ರೀನಿವಾಸಮೂರ್ತಿ ಈ ಬಾರಿಯೂ ಜೆಡಿಎಸ್ನಿಂದ ಟಿಕೆಟ್ ಬಯಸಿದ್ದಾರೆ. ಸದ್ಯಕ್ಕೆ ಜೆಡಿಎಸ್ ಟಿಕೆಟ್ಗೆ ಪೈಪೋಟಿ ಕಂಡು ಬರದೇ ಇರುವುದರಿಂದ ಹಾಲಿ ಶಾಸಕರಿಗೇ ಈ ಬಾರಿಯೂ ಟಿಕೆಟ್ ಪಕ್ಕಾ ಎನ್ನಲಾಗಿದೆ.
ಅತ್ತ ಬಿಜೆಪಿಯಿಂದ ಮಾಜಿ ಶಾಸಕ ಎಂ.ವಿ. ನಾಗರಾಜ್ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಇನ್ನು ಈ ಹಿಂದೆ ನೆಲಮಂಗಲದಿಂದ ಶಾಸಕರಾಗಿ, ಕಾಂಗ್ರೆಸ್ನಿಂದ ಧರಂ ಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದ ಅಂಜನ್ ಮೂರ್ತಿ ಅವರು ಈ ಬಾರಿ ಟಿಕೆಟ್ಗೆ ಪ್ರಯತ್ನಿಸುತ್ತಿದ್ದಾರೆ. ಮತ್ತೊಂದೆಡೆ ಉದ್ಯಮಿ ಶ್ರೀನಿವಾಸ್ ಎಂಬುವರೂ ಕೂಡ ಕಾಂಗ್ರೆಸ್ನಿಂದ ಸ್ಪರ್ಧೆಗೆ ಪ್ರಯತ್ನ ಮಾಡುತ್ತಿದ್ದಾರೆ.

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಟಿ ವೆಂಕಟರಮಣಯ್ಯ
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು: 2,03,231
ಪುರುಷ ಮತದಾರರು: 1,02,017
ಮಹಿಳಾ ಮತದಾರರು: 1,01,214
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲೂ ಚುನಾವಣೆ ಭರಾಟೆ ಜೋರಾಗಿದೆ. ಗ್ರಾಮೀಣ ಸೊಗಡನ್ನು ತನ್ನಲ್ಲಿ ಉಳಿಸಿಕೊಂಡಿರುವ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ಸದ್ಯ ಕಾಂಗ್ರೆಸ್ ಭದ್ರಕೋಟೆಯಾಗಿದೆ.
ವೆಂಕಟರಮಣಯ್ಯ 2013ರಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. 2018ರಲ್ಲೂ ಇಲ್ಲಿಂದಲೇ ಗೆದ್ದಿದ್ದು, ಇದೀಗ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನು ದೊಡ್ಡಬಳ್ಳಾಪುರದಲ್ಲಿ ಈ ಬಾರಿ ಮೂರೂ ಪಕ್ಷಗಳಿಂದಲೂ ಟಿಕೆಟ್ಗಾಗಿ ಸ್ಪರ್ಧೆ ಏರ್ಪಟ್ಟಿದೆ.
ಹಾಲಿ ಶಾಸಕ ವೆಂಕಟರಮಣಯ್ಯ, ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕಾಂಗ್ರೆಸ್ನಿಂದ ಟಿಕೆಟ್ ಬಯಸಿದ್ದಾರೆ. ಅತ್ತ ಬಿಜೆಪಿಯಿಂದ ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ ಅವರ ಪತ್ನಿ ವಾಣಿಶ್ರೀ ವಿಶ್ವನಾಥ್ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅವರೊಂದಿಗೆ ಟಿಕೆಟ್ಗಾಗಿ ಸಮಾಜ ಸೇವಕ ಧೀರಜ್ ಮುನಿರಾಜು ಟಿಕೆಟ್ ಬಯಸಿದ್ದಾರೆ. ಅತ್ತ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ. ಮುನೇಗೌಡ, ವಿಧಾನ ಪರಿಷತ್ ಸದಸ್ಯ ಎಚ್.ಎಂ. ರಮೇಶಗೌಡ, ಜೆಡಿಎಸ್ ಮುಖಂಡ ಹರೀಶ್ ಗೌಡ ಸೇರಿದಂತೆ ಪ್ರಮುಖರು ರೇಸ್ನಲ್ಲಿದ್ದಾರೆ.

ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಈ ಬಾರೀ ನಿಸರ್ಗ ನಾರಾಯಣಸ್ವಾಮಿ?
ದೇವನಹಳ್ಳಿ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು: 1,99,306
ಪುರುಷ ಮತದಾರರು: 1,00,522
ಮಹಿಳಾ ಮತದಾರರು: 98,765
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು
ದೇವನಹಳ್ಳಿ ಹಾಲಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಪ್ರಾರಂಭದಲ್ಲೇ ಬಂಡಾಯದ ಬಿಸಿ ಅನುಭವಿಸಿದ್ದವರು. 2018ರ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ ಸ್ಥಳೀಯರಲ್ಲ. ಕೇವಲ ನಾಲ್ಕು ವರ್ಷದ ಹಿಂದೆ ದೇವನಹಳ್ಳಿ ರಾಜಕೀಯದಲ್ಲಿ ಕಾಣಿಸಿಕೊಂಡವರು.
ದೇವಸ್ಥಾನಗಳ ಜೀರ್ಣೋದ್ಧಾರ, ಆರೋಗ್ಯ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಕ್ಷೇತ್ರದಲ್ಲಿ ಪರಿಚಿತರಾದವರು. ಇದನ್ನೇ ಬಂಡವಾಳ ಮಾಡಿಕೊಂಡು ನಿಸರ್ಗ ನಾರಾಯಣಸ್ವಾಮಿ ಜೆಡಿಎಸ್ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಲ್ಲದೇ, ಚುನಾವಣೆಯಲ್ಲೂ ಗೆಲುವು ಸಾಧಿಸಿದರು.
ಜೆಡಿಎಸ್ನಿಂದ ಹಾಲಿ ಶಾಸಕ ನಿಸರ್ಗ ನಾರಾಯಣ ಸ್ವಾಮಿ ಅವರೇ ಈ ಬಾರಿಯೂ ಟಿಕೆಟ್ ಬಯಸಿದ್ದಾರೆ. ಇವರ ಜೊತೆಗೆ ಟಿಕೆಟ್ಗಾಗಿ ಸ್ಪರ್ಧೆಗೆ ಜೆಡಿಎಸ್ ನಾಯಕ, ಸಮಾಜಸೇವಕ ಮಂಜುನಾಥ್ ಎಂಬುವರು ಸಜ್ಜಾಗಿದ್ದಾರೆ. ಅತ್ತ ಕಾಂಗ್ರೆಸ್ನಿಂದ ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ವೆಂಕಟಸ್ವಾಮಿ ಈ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಇವರೊಂದಿಗೆ ಕಾಂಗ್ರೆಸ್ ನಾಯಕ ಶಾಂತಕುಮಾರ್ ಎಂಬುವರು ರೇಸ್ನಲ್ಲಿದ್ದಾರೆ. ಅತ್ತ ಜೆಡಿಎಸ್ ತೊರೆದು ಬಿಜೆಪಿ ಸೇರಿರುವ ಪಿಳ್ಳಮುನಿಶಾಮಪ್ಪ ಈ ಬಾರಿ ಸ್ಪರ್ಧೆ ಬಯಸಿದ್ದಾರೆ, ಅವರಿಗೆ ಟಿಕೆಟ್ ಪಡೆಯುವಲ್ಲಿ ಪೈಪೋಟಿ ನೀಡಲು ನಾಗೇಶ್ ಕೂಡ ಮುಂದಾಗಿದ್ದಾರೆ.












Click it and Unblock the Notifications