ಇನ್ನು ಕರ್ನಾಟಕದತ್ತ ಮೋದಿ- ಅಮಿತ್ ಶಾ ಜೋಡಿ, ಎಷ್ಟೆಲ್ಲ ಸವಾಲಿದೆ ನೋಡಿ
Recommended Video
ಹಲಿಯ ಕೋಟೆಯ ಮೇಲೆ ನಿಂತು ದೇಶದ ಒಂದೊಂದೇ ರಾಜ್ಯದಲ್ಲಿ ಬಿಜೆಪಿ ಬಾವುಟ ನೆಟ್ಟು ಬರುತ್ತಿರುವ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಜೋಡಿಗೆ ಮುಂದಿನ ಹಾಗೂ ತಕ್ಷಣದ ಗುರಿ ಕರ್ನಾಟಕ ಆಗಲಿದೆ. ತವರಿನಲ್ಲಿ ಪ್ರಯಾಸದ ಗೆಲುವು ಪಡೆದ ದಣಿವು ತೀರಿದ ಬಳಿಕ ದಕ್ಷಿಣದತ್ತ ಮುಖ ಮಾಡಲಿದೆ ಮೋದಿ ಅಶ್ವಮೇಧದ ಕುದುರೆ.
ಕಾಂಗ್ರೆಸ್ ಎಂಬ ಹಳೇ ಕೋಟೆಯ ಒಂದೊಂದೇ ಗೋಡೆ ಕೆಡವಿ ನಾಮಾವಶೇಷ ಮಾಡುವ ಶಪಥ ಮಾಡಿರುವ ಈ ಜೋಡಿ, ಕರ್ನಾಟಕದ ವಿಚಾರದಲ್ಲಿ ರಣತಂತ್ರ ಬದಲಿಸಿಕೊಳ್ಳ ಬೇಕಾಗುತ್ತದಾ? ಗುಜರಾತ್ ನಲ್ಲಿ ಕಾಂಗ್ರೆಸ್ ಬಡಿದಾಡಿ ಪಡೆದ ಈ ಮಟ್ಟದ ಯಶಸ್ಸು ಕರ್ನಾಟಕದ ಕೈ ಕಾರ್ಯಕರ್ತರಲ್ಲಿ ಸ್ಥೈರ್ಯ ತುಂಬಲಿದೆಯಾ? ಎಂಬ ಪ್ರಶ್ನೆ ಕೂಡ ಇದೆ.
ಗುಜರಾತ್ ಚುನಾವಣೆ ಫಲಿತಾಂಶ: ಪಾಠ ಒಂದು, ಎರಡು, ಮೂರು, ನಾಲ್ಕು...
ಅಂದಹಾಗೆ, ಒಂಟೆಯನ್ನು ಟೆಂಟ್ ನಲ್ಲಿ ಬಿಟ್ಟುಕೊಂಡ ಹಾಗೆ ಎಂಬ ಮಾತೊಂದಿದೆ. ಮೊದಲಿಗೆ ತಲೆ, ಆ ನಂತರ ಡುಬ್ಬ, ಆ ಮೇಲೆ ಇಡೀ ದೇಹವನ್ನು ಟೆಂಟ್ ನೊಳಗೆ ತಂದು, ಅದಕ್ಕೂ ಮುನ್ನ ಒಳಗಿದ್ದವರನ್ನು ಹೊರ ದಬ್ಬುವುದಕ್ಕೆ ಈ ಹೋಲಿಕೆ ಮಾಡಲಾಗುತ್ತದೆ. ಉತ್ತರ ಭಾರತದಲ್ಲಿ ಬಿಜೆಪಿ ಟೆಂಟ್ ನೊಳಗೆ ಬಿಟ್ಟುಕೊಂಡ ಒಂಟೆಯೇ.
ಅಹಂಕಾರ ಆತ್ಮವಿಶ್ವಾಸಗಳ ಅದ್ಭುತ ಸ್ಟ್ರಾಟಜಿಸ್ಟ್ ಅಮಿತ್ ಶಾ
ಆದ್ದರಿಂದಲೇ ಉತ್ತರದ ಬಹುತೇಕ ರಾಜ್ಯಗಳಲ್ಲಿ ಕೇಸರಿ ಕೇಸರಿ ರಾರಾಜಿಸುತ್ತಿದೆ. ಅಲ್ಲೆಲ್ಲ ಬಿಜೆಪಿ ಎಂಬ ಒಂಟೆ ಈಗಾಗಲೇ ಟೆಂಟ್ ಒಳಗಿದೆ. ಆದರೆ ದಕ್ಷಿಣ ಭಾರತದಲ್ಲಿ ಸ್ಥಿತಿ ಸ್ವಲ್ಪ ಭಿನ್ನ. ಆ ಹಿನ್ನೆಲೆಯಲ್ಲಿ 'ಡಿಸೆಂಬರ್ 18'ರ ಫಲಿತಾಂಶ ಕರ್ನಾಟಕದ ಪಾಲಿಗೆ ಏನನ್ನು ಧ್ವನಿಸುತ್ತದೆ ಎಂಬುದರ ವಿಶ್ಲೇಷಣೆ ಇಲ್ಲಿದೆ.
'ಮಿಷನ್ 150' ಮೂಲ ಮಂತ್ರ
'ಮಿಷನ್ 150' ಎಂಬುದು ಕರ್ನಾಟಕದಲ್ಲೂ ಬಿಜೆಪಿಯ ಮೂಲ ಮಂತ್ರ. ಕಾಂಗ್ರೆಸ್ ನ ವಿರುದ್ಧ ಬಡಿದಾಡುವುದಕ್ಕೆ ಹಿಂದುತ್ವದ ವಿಚಾರವನ್ನೇ ಮುಂದು ಮಾಡಿಕೊಂಡಿರುವ ಕೇಸರಿ ಪಕ್ಷಕ್ಕೆ ರಾಜ್ಯ ಸರಕಾರದ ವಿರುದ್ಧ ಮಾಡುವ ಭ್ರಷ್ಟಾಚಾರ ಆರೋಪವನ್ನು ಸಾಬೀತು ಮಾಡುವುದಕ್ಕೆ, ದೊಡ್ಡ ಮಟ್ಟದಲ್ಲಿ ಸದ್ದು ಆಗುವಂತೆ ನೋಡಿಕೊಳ್ಳಲು ಆಗುತ್ತಿಲ್ಲ.
ಬತ್ತಳಿಕೆ ಅಸ್ತ್ರವನ್ನೆಲ್ಲ ತೂರಿ ಬಿಡುತ್ತಿರುವ ಯಡಿಯೂರಪ್ಪ
ಕರ್ನಾಟಕ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪನವರು ಇಡೀ ರಾಜ್ಯ ಸುತ್ತಾಡುತ್ತಾ ಬತ್ತಳಿಕೆಯ ಅಸ್ತ್ರವನ್ನೆಲ್ಲ ಕಾಂಗ್ರೆಸ್- ಸಿದ್ದರಾಮಯ್ಯ ಕಡೆಗೆ ತೂರಿ ಬಿಡುತ್ತಿದ್ದರೂ ಅವೆಲ್ಲವನ್ನೂ ಸಿದ್ದು ಆರಾಮಾಗಿ ಹೊಡೆದು ಹಾಕುತ್ತಿದ್ದಾರೆ. ಅಥವಾ ಆರಾಮಾಗಿ ಎದುರಿಸುವಂತೆ ಕಾಣಿಸುತ್ತಿದ್ದಾರೆ.
ಕಾಂಗ್ರೆಸ್ ಗೆ ಕಾಸಿಲ್ಲದಂತೆ ಮಾಡುವ ತಂತ್ರ
ಕಾಂಗ್ರೆಸ್ ಸರಕಾರದ ಪ್ರಭಾವಿ ಸಚಿವರು, ಹಣದ ತಿಜೋರಿಗಳ ಮೇಲೆ ಐಟಿ ಅಧಿಕಾರಿಗಳನ್ನು ಛೂ ಬಿಟ್ಟು, ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಕಾಸಿಗೆ ಕಣ್ ಕಣ್ ಬಾಯಿ ಬಿಡುವಂತೆ ಮಾಡುವುದು ಬಿಜೆಪಿಯ ಲೆಕ್ಕಾಚಾರ ಎಂಬ ಮಾತೊಂದು ಹರಿದಾಡುತ್ತಿದೆ. ಅದಕ್ಕೆ ಅವಕಾಶವೇ ನೀಡದಂತಿರಲು ಸಿದ್ದರಾಮಯ್ಯ ತಂತ್ರ ಹೆಣೆಯುತ್ತಿದ್ದಾರೆ ಎಂದು ಮೂಲಗಳು ಹೇಳುತ್ತವೆ.
ಉಸ್ತಾದ್- ಪೈಲ್ವಾನ್ ಗಳು
ಆದರೆ, ಕರ್ನಾಟಕದ ವಿಚಾರಕ್ಕೆ ಬಂದರೆ ರಾಜಕೀಯ ತಂತ್ರಗಾರಿಕೆ ಮಾಡುವುದು ಸಲೀಸಲ್ಲ. ದೇವೇಗೌಡರು, ಸಿದ್ದರಾಮಯ್ಯ ಒಂದೇ ಗರಡಿಯಲ್ಲಿನ ಉಸ್ತಾದ್- ಪೈಲ್ವಾನ್ ಗಳು. ಬಿಜೆಪಿಯವರಿಗೆ ಅಂಥ ರಾಜಕೀಯ ತೀರಾ ಹೊಸದು. ತುಂಬ ಆಕ್ರಮಣಕಾರಿಯಾಗಿ ಅದನ್ನು ಮಾಡಲು ಹೊರಟರೆ ಸಾಂಪ್ರದಾಯಿಕ ಬಿಜೆಪಿ ಬೆಂಬಲಿಗರು ಮುನಿಸಿಕೊಳ್ಳುತ್ತಾರೆ.
ಕೇದ್ರದ ನಿಲುವೇನು ಎಂಬ ಸ್ಪಷ್ಟನೆ ನೀಡಬೇಕು
ಲಿಂಗಾಯತ ಪ್ರತ್ಯೇಕ ಧರ್ಮ, ಮಹಾದಾಯಿ ಹೋರಾಟ, ಹಿಂದಿ ಹೇರಿಕೆ, ಕಾವೇರಿ ಸಮಸ್ಯೆ...ಇವೆಲ್ಲವುಗಳ ಬಗ್ಗೆ ಕೂಡ ಕೇಂದ್ರದ ನಿಲುವೇನು ಎಂಬುದನ್ನು ಮೋದಿ- ಅಮಿತ್ ಶಾ ಜೋಡಿ ಸ್ಪಷ್ಟಪಡಿಸಬೇಕಾಗುತ್ತದೆ. ಏಕ್ದಂ ಕರ್ನಾಟಕದ ಪರವಾಗಿ ನಿಲುವು ತೆಗೆದುಕೊಂಡರೆ ತಮಿಳು ನಾಡು, ಗೋವಾದ ಜನರ ಸಿಟ್ಟಿಗೆ ಕಾರಣವಾಗುತ್ತದೆ. ನಿಲುವು ಹೇಳದಿದ್ದರೆ ಕರ್ನಾಟಕದಲ್ಲಿ ಕಷ್ಟ ಎದುರಾಗುತ್ತದೆ.
ಈ ಜೋಡಿಯ ಅಸ್ತ್ರ ಯಾವುದು?
ಈ ಮೂರೂವರೆ ವರ್ಷದಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ಸಿಕ್ಕಿದ್ದೇನು? ರೈತರ ಸಾಲ ಮನ್ನಾ ಯಾಕೆ ಮಾಡಲಿಲ್ಲ? ಬಿಜೆಪಿಯ ಆಂತರಿಕ ಅಸಮಾಧಾನ, ಬಿಜೆಪಿ ಗೆದ್ದರೆ ಯಡಿಯೂರಪ್ಪನವರನ್ನು ನಿಜಕ್ಕೂ ಮುಖ್ಯಮಂತ್ರಿ ಗಾದಿ ಮೇಲೆ ಕೂರಿಸುತ್ತಾ? ಕಾಂಗ್ರೆಸ್ ವಿರುದ್ಧ ಮೋದಿ- ಅಮಿತ್ ಶಾ ಜೋಡಿ ಎತ್ತಬಹುದಾದ ಅಸ್ತ್ರ ಯಾವುದು? ಸದ್ಯಕ್ಕೆ ಉತ್ತರವಿಲ್ಲದ ಪ್ರಶ್ನೆಗಳು.