Get Updates
Get notified of breaking news, exclusive insights, and must-see stories!

ಅತ್ಯಾಚಾರದ ವಿರುದ್ಧ 'ಜನದನಿ': ಜಯಲಕ್ಷ್ಮೀ ಪಾಟೀಲರೊಂದಿಗೆ ಸಂದರ್ಶನ

ಸಮಾಜ ಸೇವೆ ಮಾಡುತ್ತಿರುವ ಒಂದು ಎನ್ ಜಿಒ, ಒಬ್ಬ ಕಲಾವಿದ, ಅತ್ಯಾಚಾರದ ವಿರುದ್ಧ ಜಾಗೃತಿ ಮೂಡಿಸುವ ತಂಡ... ಇವನ್ನೆಲ್ಲ ಒಂದು ಮೆಚ್ಚುಗೆಯ ನೋಟದಿಂದ ನೋಡುವ, ಬೆಂಬಲಿಸುವ, ಬೆಂಬಲಿಸಲಾಗದಿದ್ದರೂ ಕಡೇ ಪಕ್ಷ ಸುಮ್ಮನಾದರೂ ಇದ್ದುಬಿಡುವ ಒಳ್ಳೆಯ ಮನಸ್ಸು ಇಂದಿನ ಸಮಾಜದಲ್ಲಿ ಎಷ್ಟು ಜನರಲ್ಲಿದೆ? ಒಂದು ಒಳ್ಳೆಯ ಕೆಲಸವನ್ನೂ ಅನುಮಾನದ ಕನ್ನಡಕ ತೊಟ್ಟು ನೋಡುವ ಪ್ರಪಂಚದಲ್ಲಿ ಉತ್ತಮ ಕೆಲಸವೊಂದನ್ನು ಮೆಚ್ಚಿಕೊಳ್ಳುವಷ್ಟು ಉದಾರತೆ ನಿಜಕ್ಕೂಇದೆಯಾ?

ಇಂಥದೇ ಅನುಮಾನದ ನೋಟ, ಕುಹಕ, ವ್ಯಂಗ್ಯ, ಅಸಡ್ಡೆ, ಗೇಲಿಮಾತು ಇತ್ಯಾದಿಗಳೆಲ್ಲದರ ನಡುವಲ್ಲೇ ಹುಟ್ಟಿಕೊಂಡಿದ್ದು ಜನದನಿ ಎಂಬ ಸರ್ಕಾರೇತರ ಸಂಸ್ಥೆ. ರಂಗಭೂಮಿ ಕಲಾವಿದೆ, ನಟಿ, ಲೇಖಕಿ ಜಯಲಕ್ಷ್ಮಿ ಪಾಟೀಲ್ ಅವರ ನೇತೃತ್ವದಲ್ಲಿ ಸಮಾನ ಮನಸ್ಕರ ತಂಡವೊಂದು ಅತ್ಯಂತ ನೀಚ ಕೃತ್ಯ ಅತ್ಯಾಚಾರದ ವಿರುದ್ಧ ದನಿಯಾಗುವ, ಆ ಮೂಲಕ ಕೊಂಚವಾದರೂ ಅರಿವು ಮೂಡಿಸುವ, ಸಮಾಜವನ್ನು ಬದಲಿಸುವ ಪ್ರಯತ್ನಕ್ಕೆ ಕೈಹಾಕಿದೆ.

ಮೈಕಾಣುವಂಥ ಬಟ್ಟೆ ತೊಟ್ಟಿದ್ದು ಆಕೆಯ ತಪ್ಪಲ್ಲವೇ? ಅಷ್ಟೆಲ್ಲ ಚೆಲ್ಲು ಚೆಲ್ಲಾಗಿ ಆಡಿದ್ರೆ ಅತ್ಯಾಚಾರ ಮಾಡದೆ ಇನ್ನೇನ್ ಮಾಡ್ತಾರೆ? ಇಷ್ಟೊತ್ತಲ್ಲಿ ಒಬ್ಬಳೇ ಓಡಾಡೋ ದರ್ದು ಏನಿತ್ತೋ..? ಎಂಬಿತ್ಯಾದಿ ಅಸಹ್ಯಕರ ಪ್ರಶ್ನೆಗಳ ಮೂಲಕ ಪ್ರತಿ ಬಾರಿ ಹೆಣ್ಣನ್ನೇ ದೂರುವ ಕೀಳುಮನಸ್ಥಿತಿಯಿಂದ ಹಲವರು ಹೊರಬರುವ ಅಗತ್ಯವಿದೆ. ಬದಲಾಗಬೇಕಿರುವುದು ಹೆಣ್ಣು ತೊಡುವ ಬಟ್ಟೆಯಲ್ಲ, ಬದಲಾಗಿ ಗಂಡಿನ ಮನಸ್ಥಿತಿ, ಸಮಾಜದ ಮನಸ್ಥಿತಿ ಎಂಬುದನ್ನು ಅರ್ಥಮಾಡಿಸುವ ಪುಟ್ಟ ಪ್ರಯತ್ನವಾಗಿ ಜನದನಿ ಹುಟ್ಟುಪಡೆದಿದೆ.

ಅತ್ಯಾಚಾರದಂಥ ಹೇಯ ಕೃತ್ಯಗಳು ನಡೆದ ಮೇಲಿನ ಕತೆಗಿಂತ, ಅದು ನಡೆಯದಂತೆ ಎಚ್ಚರಿಕೆ ವಹಿಸುವ ಕುರಿತು ಜಾಗೃತಿ ಮೂಡಿಸುವಂಥ ಅನನ್ಯ ಕೆಲಸ ಮಾಡುತ್ತಿರುವ ಜನದನಿಯ ಕುರಿತು ಜಯಲಕ್ಷ್ಮಿ ಪಾಟೀಲ್ 'ಒನ್ ಇಂಡಿಯಾ'ಕ್ಕೆ ನೀಡಿದ ಸಂದರ್ಶನ ಇಲ್ಲಿದೆ. ನಟನೆ, ರಂಗಭೂಮಿ, ಸಾಹಿತ್ಯ ಎಲ್ಲದರೊಟ್ಟಿಗೆ ಸಮಾಜ ಸೇವೆಗೆ ಆದ್ಯತೆ ನೀಡುತ್ತಿರುವ ಜಯಲಕ್ಷ್ಮಿ ಪಾಟೀಲರು ನಮ್ಮ ಈ ವಾರದ ಮಹಿಳಾ ಸಾಧಕಿ.

ಅತ್ಯಾಚಾರ ತಡೆಯೇ ಜನದನಿಯ ಆದ್ಯ ಉದ್ದೇಶ

ಅತ್ಯಾಚಾರ ತಡೆಯೇ ಜನದನಿಯ ಆದ್ಯ ಉದ್ದೇಶ

"ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದ ವಿರುದ್ಧ ಹೋರಾಡುತ್ತಿರುವ ಸಂಸ್ಥೆ ಜನದನಿ. ಅತ್ಯಾಚಾರವಾದ ಮೇಲೆ ಅಲ್ಲಿಗೆ ಹೋಗಿ ಸಂತೈಸುವ ಕೆಲಸ ಮಾಡುವುದಕ್ಕಿಂತ ಅತ್ಯಾಚಾರವನ್ನು ತಡೆಗಟ್ಟುವತ್ತ ನಮ್ಮ ಪ್ರಯತ್ನ. ಈ ಉದ್ದೇಶವನ್ನಿಟ್ಟುಕೊಂಡೇ ಹುಟ್ಟಿದ್ದು ಜನದನಿ. ದೆಹಲಿಯ ನಿರ್ಭಯಾ ಘಟನೆ ಅದ್ಯಾಕೋ ಮನಸ್ಸನ್ನ ಇನ್ನಿಲ್ಲದಷ್ಟು ಘಾಸಿಗೊಳಿಸಿತ್ತು. ಆ ಮುಗ್ಧ ಹುಡುಗಿ ಅನುಭವಿಸಿದ ವಿಕೃತ ಹಿಂಸೆ ನೆನೆಸಿಕೊಂದರ ಹಲ್ಲು ಕಡಿದು ಸುಮ್ಮನೆ ಕೂರುವುದು ಖಂಡಿತ ಸರಿಯಲ್ಲ ಅನ್ನಿಸಿತ್ತು. ಎಷ್ಟು ದಿನ ಅಂತ ಹೀಗೇ ಅತ್ಯಾಚಾರಿಗಳಿಗೆ ಬೈದುಕೊಂಡು ನಾವೂ ಎಲ್ಲರ ಹಾಗೇ ಸುಮ್ಮನೆ ಕುಳಿತುಕೊಳ್ಳೋದು ಅನ್ಸಿತ್ತು. ಅಂತಃಪುರ ಎಂಬ ಫೇಸ್ ಬುಕ್ ಗೆಳೆಯರ ಬಳಗ ಈ ಕುರಿತು ಚರ್ಚೆ ನಡೆಸಿ ಜನದನಿ ಎಂಬ ಎನ್ ಜಿಒ ಸ್ಥಾಪನೆಯ ನಿರ್ಧಾರಕ್ಕೆ ಬಂದೆವು. ಅಂತಃಪುರದ ಸ್ನೇಹಿತೆಯರೊಡನೆ ಚರ್ಚೆ ಹಾಗೂ ಫೇಸ್‌ಬುಕ್‌ ಸ್ನೇಹಿತರ ಬೆಂಬಲ, ಕೈಜೋಡಿಸುವಿಕೆಯಿಂದಾಗಿ2014ರಲ್ಲಿ ಜನದನಿ ಹುಟ್ಟಿಕೊಂಡಿತು.

ಶಾಲೆಗಳಲ್ಲಿ ಅರಿವು ಮೂಡಿಸುವ ಕಾರ್ಯ

ಶಾಲೆಗಳಲ್ಲಿ ಅರಿವು ಮೂಡಿಸುವ ಕಾರ್ಯ

"ಬೇರೆ ಬೇರೆ ಶಾಲೆಗಳಿಗೆ ಹೋಗಿ ಏಳನೇ ತರಗತಿಯ ನಂತರದ ಮಕ್ಕಳಲ್ಲಿ ಲೈಂಗಿಕ ದೌರ್ಜನ್ಯ, ಅತ್ಯಾಚಾರದ ಬಗ್ಗೆ ಅರಿವು ಮೂಡಿಸುವ ಜನದನಿ, ಕೇವಲ ಹೆಣ್ಣು ಮಕ್ಕಳಿಗಷ್ಟೇ ಅಲ್ಲದೆ, ಗಂಡುಮಕ್ಕಳನ್ನೂ ಈ ಕಾರ್ಯಾಗಾರದಲ್ಲಿ ಸೇರಿಸಿಕೊಳ್ಳುತ್ತದೆ. ಏಕೆಂದರೆ ಇಂದಿನ ಕಾಲದಲ್ಲಿ ಅತ್ಯಾಚಾರ ಎಂಬುದು ಕೇವಲ ಮಹಿಳೆಯರ ಮೇಲೆ ಆಗುತ್ತಿಲ್ಲ. ಪುರುಷರ ಮೇಲೂ ಆಗುತ್ತಿದೆ, ಮಕ್ಕಳ ಮೇಲಾಗುತ್ತಿದೆ. ತೀರಾ ಆತಂಕ ಪಡಬೇಕಾದ ಪರಿಸ್ಥಿತಿಯಲ್ಲಿ ಇಂದು ನಾವಿದ್ದೇವೆ.ಕೇವಲ ಶಾಲೆಗಳಿಗೆ ಮಾತ್ರವಲ್ಲ, ಯಾವುದೇ ಕಾಲೇಜುಗಳು, ಸಂಘ ಸಂಸ್ಥೆಗಳು, ಅಪಾರ್ಟ್ಮೆಂಟಿನ ಜನ, ಕಾಲನಿಯ ಜನ, ಅನಾಥಾಶ್ರಮಗಳು ಅಥವಾ ಯಾರೇ ಕರೆದರೂ ಯಾವುದೇ ಊರಿಗೆ ಕರೆದರೂ ಜನದನಿ ಅಲ್ಲಿ ಬಂದು ಜಾಗೃತಿ ಕಾರ್ಯಕ್ರಮ ನೀಡಲು ಸಿದ್ಧವಾಗಿದೆ.

ಯಾವುದೇ ಶಾಲೆಯಿಂದ ಜನದನಿಗೆ ಆಹ್ವಾನ ನೀಡಬಹುದು

ಯಾವುದೇ ಶಾಲೆಯಿಂದ ಜನದನಿಗೆ ಆಹ್ವಾನ ನೀಡಬಹುದು

"ಯಾವುದೇ ಶಾಲೆಯಲ್ಲಿ ಮಕ್ಕಳಿಗೆ ಅತ್ಯಾಚಾರ ತಡೆ ಮತ್ತು ಲೈಂಗಿಕ ದೌರ್ಜನ್ಯದ ಕುರಿತು ಅರಿವು ಮೂಡಿಸುವ ಕಾರ್ಯಾಗಾರದ ಅಗತ್ಯವಿದ್ದಲ್ಲಿ ಜನದನಿಯನ್ನು ಸಂಪರ್ಕಿಸಬಹುದು. ನಮ್ಮ ತಂಡ ಇಂಥ ಆಹ್ವಾನವನ್ನು ಅತ್ಯಂತ ಸೌಜನ್ಯಪೂರ್ವಕವಾಗಿ ಸ್ವೀಕರಿಸಿ, ಆಯಾ ಶಾಲೆಗೆ ಆಗಮಿಸಿ ಕಾರ್ಯಾಗಾರ ನಡೆಸುತ್ತದೆ. ಇತ್ತೀಚೆಗೆ ಲೈಂಗಿಕ ದೌರ್ಜನ್ಯದಂಥ ಘಟನೆಗಳು ಹೆಜ್ಜಾಗಿ ಶಾಲೆಗಳಲ್ಲಿಯೇ ನಡೆಯುತ್ತಿರುವುದರಿಂದ ಶಿಕ್ಷಕರು ಮಕ್ಕಳಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಹೊಣೆಯನ್ನು ಹೊತ್ತುಕೊಳ್ಳಬೇಕಿದೆ."

ಸರ್ಕಾರ ಮತ್ತು ಜನರ ಬೆಂಬಲ ನಮಗೆ ಅತ್ಯಗತ್ಯ

ಸರ್ಕಾರ ಮತ್ತು ಜನರ ಬೆಂಬಲ ನಮಗೆ ಅತ್ಯಗತ್ಯ

"ಜನದನಿ ಕಾರ್ಯಗಳನ್ನು ವಿಸ್ತಾರಗೊಳಿಸುವ ಸಲುವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೂ ಅರ್ಜಿ ಕಳಿಸಿದ್ದೇವೆ. ಆದರೆ ಎರಡೂ ಸರ್ಕಾರಗಳಿಂದಲೂ ಯಾವುದೇ ಪ್ರತಿಕ್ರಿಯೆ ಇದುವರೆಗೂ ಬಂದಿಲ್ಲ. ನಮಗೆ ಸರ್ಕಾರ ಮತ್ತು, ಜನರಿಂದ ಹೆಚ್ಚಿನ ಬೆಂಬಲದ ಅಗತ್ಯವಿದೆ. ಎಷ್ಟೋ ಜನ ನಮ್ಮ ಕಾರ್ಯವನ್ನು ಶ್ಲಾಘಿಸಿದ್ದಾರೆ. ಪ್ರತಿಹಂತದಲ್ಲೂ ನಮ್ಮನ್ನು ಬೆನ್ತಟ್ಟಿ ಇಂಥ ಕಾರ್ಯವನ್ನು ಮತ್ತಷ್ಟು ಉತ್ಸುಕತೆಯಿಂದ ಮಾಡಲು ಪ್ರೇರೇಪಿಸಿದ ಎಲ್ಲರಿಗೂ ನಾನು ಮನಃಪೂರ್ವಕವಾಗಿ ಕೃತಜ್ಞತೆ ಅರ್ಪಿಸುತ್ತೇನೆ. "

ಸಂತ್ರಸ್ಥೆಯನ್ನು ಸಮಾಜ ಹೇಗೆ ನೋಡಬೇಕು?

ಸಂತ್ರಸ್ಥೆಯನ್ನು ಸಮಾಜ ಹೇಗೆ ನೋಡಬೇಕು?

"ಯಾಕೆ ಹೀಗೆ ಹಾದಿ ತಪ್ತಾ ಇದೀವಿ? ಇದನ್ನು ಸರಿಪಡಿಸೋದು ಹೇಗೆ? ಸರಿಪಡಿಸೋಕೆ ಯಾರಿಂದ ಸಾಧ್ಯವಿದೆ ಎಂಬುವುದರ ಬಗ್ಗೆ ಚರ್ಚಿಸಿ, ಅದನ್ನು ಸರಿಪಡಿಸುವ ಯತ್ನವನ್ನೂ ಜನದನಿ ಮಾಡುತ್ತಿದೆ. ಅಷ್ಟೇ ಅಲ್ಲ, ದುರದೃಷ್ಟವಶಾತ್ ಅತ್ಯಾಚಾರವಾಗಿದ್ದರೆ ಅಂಥ ಸಂತ್ರಸ್ಥೆಯನ್ನು ಸಮಾಜ ಮತ್ತು ಸುತ್ತಲಿನ ಜನ ಹೇಗೆ ನೋಡಬೇಕು ಎಂಬ ಬಗ್ಗೆಯೂ ಜನದನಿ ಪ್ರಜ್ಞೆ ಮೂಡಿಸುವ ಕೆಲಸ ಮಾಡುತ್ತಿದೆ. ಈಗಾಗಲೇ ಜನದನಿಯಿಂದ ಹಲವು ಶಾರ್ಟ್ ಫಿಲ್ಮ್ ಗಳನ್ನು ಮಾಡಿ ಆ ಮೂಲಕ ಅತ್ಯಾಚಾರದ ಕುರಿತು ಜನ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ."

ಶಾರ್ಟ್ ಫಿಲ್ಮ್ ಮೂಲಕ ಪ್ರಜ್ಞೆ ಮೂಡಿಸುವ ಕೆಲಸ

ಶಾರ್ಟ್ ಫಿಲ್ಮ್ ಮೂಲಕ ಪ್ರಜ್ಞೆ ಮೂಡಿಸುವ ಕೆಲಸ

ಫೀಡಿಂಗ್ ಪಾಯ್ಸನ್, ನಾವು, ನ್ಯಾಯದಂಥ ಜನದನಿಯ ಶಾರ್ಟ್ ಮೂವಿಗಳು ಯೂಟ್ಯೂಬ್ ನಲ್ಲಿ ಲಭ್ಯವಿವೆ. ಜನದನಿಯಲ್ಲಿ ಈಗಾಗಲೇ 60 ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಅದರಲ್ಲಿ 25 ರಷ್ಟು ಸದಸ್ಯರು ಜನದನಿಯ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ. ಜನದನಿಯ ಶಾರ್ಟ್ ಫಿಲ್ಮ್ ಗಳಲ್ಲಿ ನಮ್ಮ ಸದಸ್ಯರೇ ನಟಿಸುತ್ತಿದ್ದಾರೆ, ಸ್ಕ್ರಿಪ್ಟ್ ಬರೆಯುತ್ತಾರೆ, ಅವರೇ ಚರ್ಚಿಸಿ ವಿಷಯ ಆಯ್ಕೆ ಮಾಡುತ್ತಾರೆ. ತಮ್ಮದೇ ಮನೆಯ ಕೆಲಸ ಎಂಬಷ್ಟು ಶ್ರದ್ಧೆಯಿಂದ ಜನದನಿಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ"

ವೈಯಕ್ತಿಕ ಲಾಭವಿಲ್ಲ

ವೈಯಕ್ತಿಕ ಲಾಭವಿಲ್ಲ

"ಹಲವರು ನಮ್ಮ ಈ ಕೆಲಸವನ್ನು ಇಂದಿಗೂ ಅನುಮಾನದಲ್ಲೇ ನೋಡುತ್ತಾರೆ. ಈ ಕೆಲಸದಿಂದ ನಮಗ್ಯಾರಿಗೂ ವೈಯಕ್ತಿಕ ಲಾಭವಿಲ್ಲ. ಸಮಾಜದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳನ್ನು ತಡೆಯುವುದು ಹೇಗೆ, ಅವುಗಳಲ್ಲಿ ನಮ್ಮ ಪಾತ್ರವೇನು ಎಂಬ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನಷ್ಟೇ ನಾವು ಮಾಡುತ್ತಿದ್ದೇವೆ. ನಮಗೆ ಎಡ-ಬಲ ಎಂಬ ಯಾವ ಸಿದ್ಧಾಂತವೂ ಬೇಕಿಲ್ಲ. ನಮ್ಮ ಸದಸ್ಯರಲ್ಲಿ ಕೆಲವರು ಎಡಪಂಥೀಯರೋ, ಅಥವಾ ಬಲಪಂಥೀಯರೋ ಇದ್ದಿರಬಹುದು. ಹಾಗಂತ ಜನದನಿಯ ಉದ್ದೇಶವನ್ನೂ ಅವೇ ಸಿದ್ಧಾಂತಗಳ ತಕ್ಕಡಿಯಲ್ಲಿಟ್ಟು ತೀರ್ಮಾನಿಸುವುದು ಸರಿಯಲ್ಲ."

ಜನದನಿಯೊಂದಿಗೆ ನೀವೂ ಕೈಜೋಡಿಸಿ

ಜನದನಿಯೊಂದಿಗೆ ನೀವೂ ಕೈಜೋಡಿಸಿ

ನಮಗೆ ಸಮಾಜದ ಪ್ರತಿಯೊಬ್ಬರ ಸಹಕಾರ ಬೇಕು. ನಮ್ಮ ಉದ್ದೇಶದಲ್ಲಿ ಖಂಡಿತ ಸ್ವಾರ್ಥವಿಲ್ಲ್. ನಮಗೆ ಪ್ರೋತ್ಸಾಹ ನೀಡುವುದಕ್ಕೆ ಸಾಧ್ಯವಾಗದಿದ್ದರೆ ಸುಮ್ಮನಿದ್ದುಬಿಡಿ, ನಮ್ಮನ್ನು ಅಧೀರರನ್ನಾಗಿಸುವ ಕೆಲಸವನ್ನು ದಯವಿಟ್ಟು ಮಾಡಬೇಡಿ ಎಂದಷ್ಟೇ ನಾನು ಜನರಲ್ಲಿ ಮನವಿಮಾಡಿಕೊಳ್ಳುತ್ತೇನೆ. ಜನದನಿಯ ಕಾರ್ಯದಲ್ಲಿ ಕೈಜೋಡಿಸುವ ಇಚ್ಛೆ ಇರುವವರು ಹೆಚ್ಚಿನ ಮಾಹಿತಿಗೆ http://www.janadani.org/ ಈ ವೆಬ್ ಸೈಟ ಅನ್ನು ನೋಡಬಹುದು. ಅತ್ಯಾಚಾರದಂಥ ಹೀನಕೃತ್ಯವನ್ನ ತಡೆಗಟ್ಟಲು ಮನಸ್ಸು ಮಾಡುವ ಪ್ರತಿಯೊಬ್ಬರನ್ನೂ ಜನದನಿ ಸ್ವಾಗತಿಸುತ್ತದೆ.

ವೈಯಕ್ತಿಕ ಜೀವನ

ವೈಯಕ್ತಿಕ ಜೀವನ

2004 ರಲ್ಲಿ ಬೆಂಗಳೂರಿಗೆ ಬಂದ ಜಯಲಕ್ಷ್ಮಿ ಪಾಟೀಲ್ ಮೂಲತಃ ವಿಜಯಪುರದವರು. ಪತಿ ಇಬ್ಬರು ಮಕ್ಕಳ ಸುಖೀ ಕುಟುಂಬ. ಜಯಲಕ್ಷ್ಮೀ ಪಾಟೀಲರ ಸೇವಾಕಾರ್ಯಕ್ಕೆ ಕುಟುಂಬದ ಎಲ್ಲರ ತುಂಬು ಪ್ರೋತ್ಸಾಹವಿದೆ. ಜನದನಿಯೊಂದಿಗೆ ಅವರೆಲ್ಲರೂ ಕೈಜೋಡಿಸಿದ್ದಾರೆ ಕೂಡ.

ಬಹುಮುಖೀ ವ್ಯಕ್ತಿತ್ವ

ಬಹುಮುಖೀ ವ್ಯಕ್ತಿತ್ವ

ಸಾಹಿತ್ಯದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಜಯಲಕ್ಷ್ಮಿಯವರಿಗೆ ರಂಗಭೂಮಿಯ ಬಗೆಗೂ ತುಂಬು ಅಕ್ಕರೆ. ಇದೀಗ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಜನದನಿಯೊಂದಿಗೆ ಗುರುತಿಸಿಕೊಂಡಿರುವ ಜತೆಗೆ, ಇಂದಿನ ಯುವಕರಲ್ಲಿ ಪುಸ್ತಕ ಪ್ರೀತಿ ಹೆಚ್ಚಿಸುವ ಮತ್ತು ಕನ್ನಡದ ಮೇರುಹೊತ್ತಿಗೆಗಳ ಕುರಿತು ಗೌರವ, ಜ್ಞಾನ ಮೂಡಿಸುವ ಉದ್ದೇಶದಿಂದ 'ಈ ಹೊತ್ತಿಗೆ' ಎಂಬ ವಿಭಿನ್ನ ಪರಿಕಲ್ಪನೆಯನ್ನು ಆರಭಿಸಿದ್ದಾರೆ. 'ಈ ಹೊತ್ತಿಗೆ' ಒಂದು ಫೇಸ್ ಬುಕ್ ಪೇಜ್. ಪುಸ್ತಕ ಪ್ರೇಮಿಗಳಿಗಾಗಿ ಇರುವ ಈ ಹೊತ್ತಿಗೆಯ ಮೂಲಕ ಹಲವು ಪುಸ್ತಕಗಳ ಕುರಿತು ಚರ್ಚೆ, ಹೊಸ ಹೊಸ ಪುಸ್ತಕಗಳ ಬಿಡುಗಡೆ, ಕಥಾ ಕಮ್ಮಟ ಜೊತೆಗೆ ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ವಿಮರ್ಷಾ ಕಮ್ಮಟ ಮಾಡಿದ ಹೆಗ್ಗಳಿಗೆ ಇವರದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+