ಮೋದಿ ಪಿಎಂ ಆದ ಮೇಲೆ ಬಿಜೆಪಿ ನಿಜಕ್ಕೂ ಅಜೇಯವಾಗಿಯೇ ಉಳಿದಿದೆಯಾ?!
Recommended Video

ಮಧ್ಯಪ್ರದೇಶ, ರಾಜಸ್ತಾನ ಹಾಗೂ ಛತ್ತೀಸ್ ಗಢದಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿಯ ಬಗ್ಗೆ, ಓಹ್ ಅಷ್ಟೇ ಕಥೆ ಮುಗಿಯಿತು. ಮೋದಿ ಹವಾ ಇಲ್ಲಿಗೆ ಕೊನೆಯಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ. ಇಲ್ಲೊಂದು ವಿಚಾರವನ್ನು ಮರೆಯಲಾಗುತ್ತಿದೆ ಅಥವಾ ಬೇಕೆಂತಲೇ ಪ್ರಸ್ತಾವ ಮಾಡುತ್ತಿಲ್ಲವೋ ಗೊತ್ತಾಗುತ್ತಿಲ್ಲ.
ನರೇಂದ್ರ ಮೋದಿ ಪ್ರಧಾನಿ ಆದ ನಂತರ ದಾಖಲಾದ ಅಭೂತಪೂರ್ವ ಹಾಗೂ ಅತಿ ದೊಡ್ಡ ರಾಜ್ಯದ ಜಯ ಅಂದರೆ ಅದು ಉತ್ತರಪ್ರದೇಶ. ಆ ನಂತರ ಹಿಮಾಚಲಪ್ರದೇಶ, ಹರಿಯಾಣ, ಜಾರ್ಖಂಡ್ ಹಾಗೂ ಉತ್ತರಾ ಖಂಡ್ ನಲ್ಲಿ ಗೆದ್ದಿದೆ. ಉಳಿದಂತೆ ಗುಜರಾತ್ ನಲ್ಲಿ ಸರಳ ಬಹುಮತ ಪಡೆದಿದೆ. ಬಹುತೇಕ ಕಡೆ ಇತರ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಂಡು ಆಡಳಿತ ನಡೆಸಲಾಗುತ್ತಿದೆ.
ಉತ್ತರಪ್ರದೇಶ, ಗುಜರಾತ್ ಹಾಗೂ ಮಹಾರಾಷ್ಟ್ರ ಸದ್ಯಕ್ಕೆ ಬಿಜೆಪಿ ಆಡಳಿತದಲ್ಲಿರುವ ದೊಡ್ಡ ರಾಜ್ಯಗಳು. ಇನ್ನು ಬಿಹಾರದಲ್ಲಿ ಅಧಿಕಾರ ಚುಕ್ಕಾಣಿ ನಿತೀಶ್ ಕುಮಾರ್ ಕೈಲಿದೆ. ಈಗ ದೆಹಲಿಯ ಚುನಾವಣೆಯಲ್ಲಿ ಆಗಿದ್ದನ್ನು ನೆನಪಿಸಿಕೊಳ್ಳಿ. ಅಲ್ಲಿ ಆಮ್ ಆದ್ಮಿ ಪಕ್ಷ ಎರಡೂ ರಾಷ್ಟ್ರೀಯ ಪಕ್ಷಗಳನ್ನು (ಕಾಂಗ್ರೆಸ್, ಬಿಜೆಪಿ) ಗುಡಿಸಿ ಹಾಕಿತು.
ಇನ್ನು ಬಿಹಾರದಲ್ಲಿ ಮಹಾಮೈತ್ರಿ ಕೂಟ ರಚಿಸಿಕೊಂಡು ಜೆಡಿಯು, ಆರ್ ಜೆಡಿ, ಕಾಂಗ್ರೆಸ್ ಸೇರಿ ಅಧಿಕಾರಕ್ಕೆ ಏರಿತ್ತು. ಆದರೆ ಅಲ್ಲಿ ದೋಸ್ತಿ ಮುರಿದ ನಿತೀಶ್ ಮತ್ತೆ ಬಿಜೆಪಿ ಜತೆ ಸೇರಿ ಆಡಳಿತ ನಡೆಸುತ್ತಿದ್ದಾರೆ.

ಗೋವಾ, ಮಣಿಪುರ ಹಾಗೂ ಕಾಂಗ್ರೆಸ್ ನಲ್ಲಿ ಅತಿ ದೊಡ್ಡ ಪಕ್ಷ ಕಾಂಗ್ರೆಸ್
ಆದರೆ ಗೋವಾ, ಮಣಿಪುರ ಹಾಗೂ ಪಂಜಾಬ್ ನಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಕಾಂಗ್ರೆಸ್. ಅದರಲ್ಲಿ ಪಂಜಾಬ್ ನಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ಅದಕ್ಕೂ ಮುಂಚೆ ನಡೆದ ತಮಿಳುನಾಡು, ಪಶ್ಚಿಮ ಬಂಗಾಲ, ಕೇರಳ, ಪುದುಚೆರಿ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ಏನೂ ಆಶಾದಾಯಕವಾದ ಫಲಿತಾಂಶ ಬಂದಿರಲಿಲ್ಲ. ಆದರೆ ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಜಯ ದಾಖಲಿಸಿ ಅಧಿಕಾರಕ್ಕೆ ಬಂದಿತು. ಮಹಾರಾಷ್ಟ್ರದಲ್ಲಿ ಶಿವಸೇನೆಯ ಬೆಂಬಲದೊಂದಿಗೆ ಬಿಜೆಪಿ ಅಧಿಕಾರದಲ್ಲಿದೆ.

ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ ಜತೆಗೆ ಸ್ನೇಹವೇ ಮುರಿದು ಬಿತ್ತು
ಜಮ್ಮು-ಕಾಶ್ಮೀರದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರುವ ಪಿಡಿಪಿ ಜತೆ ಸೇರಿ ಅಧಿಕಾರ ನಡೆಸಿ, ಆ ನಂತರ ಬೆಂಬಲ ವಾಪಸ್ ಪಡೆದ ಬಿಜೆಪಿ ನಡೆ ಇನ್ನೂ ಹಸಿರಾಗಿಯೇ ಇದೆ. ಅಂದರೆ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಹಲವು ಚುನಾವಣೆಗಳನ್ನು ಗೆದ್ದಿರುವಂತೆ ಸೋತಿರುವ ಉದಾಹರಣೆಗಳು ಕೂಡ ಕಣ್ಣೆದುರಿಗೆ ಇದೆ.

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರಕಾರ
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆದ್ದರೂ ಅಧಿಕಾರದ ಗದ್ದುಗೆ ಏರಲು ಸಾಧ್ಯವಾಗಲಿಲ್ಲ. ಗೋವಾ, ಮಣಿಪುರದಲ್ಲಿ ಹೇಗೆ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅಧಿಕಾರಕ್ಕೆ ಬರಲು ಆಗಲಿಲ್ಲವೋ ಅದೇ ಪರಿಸ್ಥಿತಿ ಬಿಜೆಪಿಯದಾಯಿತು ಕರ್ನಾಟಕದಲ್ಲಿ. ಆದರೆ ಮೋದಿ ಪ್ರಧಾನಿ ಆದ ನಂತರ ರಾಜ್ಯಗಳಲ್ಲಿ ಇತರ ಪಕ್ಷಗಳ ಜತೆ ಚೌಕಾಸಿ ಮಾಡಿ, ಅಧಿಕಾರ ಹಿಡಿಯಲು ಸಾಧ್ಯವಾಗುತ್ತಿದೆ. ಅದನ್ನು ಹೊರತು ಪಡಿಸಿದರೆ ಸೋಲೇ ಕಂಡಿಲ್ಲ ಅನ್ನೋ ಮಾತು ಸುಳ್ಳು ಎಂಬುದನ್ನು ಅಂಕಿ-ಅಂಶಗಳು ಹೊರಗೆಡುವುತ್ತಿವೆ. ಈ ಬಾರಿಯ ಸೋಲಿನ ಪೈಕಿ ಛತ್ತೀಸ್ ಗಢ ಹಾಗೂ ತೆಲಂಗಾಣ ಬಿಜೆಪಿ ಪಾಲಿಗೆ ಆಘಾತಕಾರಿ. ಉಳಿದಂತೆ ತೀರಾ ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ಇಲ್ಲ. ಎರಡು-ಮೂರು ಬಾರಿ ಆಡಳಿತ ನಡೆಸಿದ ರಾಜ್ಯಗಳಲ್ಲಿ ಅಷ್ಟೊಂದು ಸಂಖ್ಯೆಯ ಸ್ಥಾನಗಳನ್ನು ಗೆದ್ದಿರುವುದೇ ಅಚ್ಚರಿ. ಇನ್ನು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ 'ತಿಣುಕಿದನು ಫಣಿರಾಯ' ಎಂಬಂತಾಗಿದೆ.

ಮೂವರು ಪ್ರಭಾವಿಗಳು ಬಿಡುವಾಗಿ ಸಿಕ್ಕಂತಾಯಿತು
ವಿಧಾನಸಭಾ ಚುನಾವಣೆ ಹಾಗೂ ಲೋಕಸಭೆ ಚುನಾವಣೆಗಳು ಬೇರೆ-ಬೇರೆ ವಿಷಯಗಳನ್ನು ಆಧರಿಸಿರುತ್ತವೆ. ಆದರೆ ಆಯಾ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪಕ್ಷ ಮಾಡಿದ ಜನಪರ ಕೆಲಸಗಳು ಕೈ ಹಿಡಿಯುವುದು ಸತ್ಯ. ಇದೀಗ ಇರುವ ಅಲ್ಪ ಸಮಯದಲ್ಲೇ ಅಂದರೆ ಲೋಕಸಭೆ ಚುನಾವಣೆಗೂ ಮುನ್ನ ಮಧ್ಯಪ್ರದೇಶ, ರಾಜಸ್ತಾನ ಹಾಗೂ ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಹೇಗೆ ಕೆಲಸ ಮಾಡುತ್ತದೆ ಎಂಬುದರ ಮೇಲೆ ಲೋಕಸಭೆ ಚುನಾವಣೆಯಲ್ಲಿ ಅರವತ್ತೂ ಚಿಲ್ಲರೆ ಸ್ಥಾನಗಳ ಮೇಲೆ ಪ್ರಭಾವ ಬೀರಲಿದೆ. ಇನ್ನು ಲೋಕಸಭೆ ಚುನಾವಣೆಗೆ ಇನ್ನಷ್ಟು ಚೆನ್ನಾಗಿ ಓಡಾಡಿ, ಕೆಲಸ ಮಾಡುವುದಕ್ಕೆ ಮೂವರು ಪ್ರಭಾವಿಗಳು (ರಮಣ್ ಸಿಂಗ್, ಶಿವರಾಜ್ ಸಿಂಗ್ ಚೌಹಾಣ್, ವಸುಂಧರಾ ರಾಜೆ) ಬಿಜೆಪಿಗೆ ಬಿಡುವಾಗಿ ಸಿಕ್ಕಂತಾಗಿದೆ. ಈ ಪಂಚ ರಾಜ್ಯ ಚುನಾವಣೆ ಫಲಿತಾಂಶವು ಬಿಜೆಪಿಯೊಳಗಿನ 'ಅಹಂಕಾರಿ'ಗಳಿಗೆ ಪಾಠವಾಗಲಿ. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಆದಂತೆ ಆಗದೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಾದರೂ ಸಂಸತ್ ಒಳಗೆ ಪ್ರಬಲವಾದ ವಿರೋಧ ಪಕ್ಷ ನೋಡುವಂತಾಗಲಿ.












Click it and Unblock the Notifications