'ರಾಹು'ಲ್ ಕಾಂಗ್ರೆಸ್ ನಲ್ಲಿ ಕ್ರಾಂತಿ ಮೊಳಗಿಸುವವರು ಯಾರೂ ಇಲ್ಲವೆ?
2017ರ ಡಿಸೆಂಬರ್ 4ರಂದು ದೇಶದ ಅತ್ಯಂತ ಪುರಾತನ ರಾಜಕೀಯ ಪಕ್ಷವಾದ ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅವರು ಅವಿರೋಧವಾಗಿ ಆಯ್ಕೆಯಾದ ನಂತರ ಸಾಕಷ್ಟು ಬದಲಾಗಿದ್ದಾರೆ, ಪ್ರಬುದ್ಧರಾಗಿದ್ದಾರೆ, ಮಾತಿನಲ್ಲಿ ಮೊನಚು ಕಂಡುಕೊಂಡಿದ್ದಾರೆ. ಆದರೆ, ಚುನಾವಣೆಯ ವಿಷಯಕ್ಕೆ ಬಂದರೆ ಸೊನ್ನೆ ಸುತ್ತುತ್ತಿದ್ದಾರೆ.
ಚಮ್ಮ ಚಾರಿಷ್ಮಾವನ್ನು ಬಳಸಿ, ವ್ಯಕ್ತಿತ್ವದ ಶಕ್ತಿಯಿಂದ ಒಂದೇ ಒಂದು ಚುನಾವಣೆಯನ್ನು ಅಧಿಕಾರಯುತವಾಗಿ ಜಯಿಸಲು ಸಾಧ್ಯವಾಗಿಲ್ಲ. ಪಂಜಾಬ್ ನಲ್ಲಿ, ಮಧ್ಯ ಪ್ರದೇಶದಲ್ಲಿ, ರಾಜಸ್ಥಾನದಲ್ಲಿ, ಛತ್ತೀಸ್ ಗಢದಲ್ಲಿ ಗೆದ್ದು ಕಾಂಗ್ರೆಸ್ ಅಧಿಕಾರ ಸ್ಥಾಪಿಸಿದೆಯಾದರೂ ಅದು ರಾಹುಲ್ ಅವರ ವರ್ಚಸ್ಸಿನಿಂದಲ್ಲ.
ಅವರ ವ್ಯಕ್ತಿತ್ವ ಅಷ್ಟೊಂದು ಹೊಳಪನ್ನು ಪಡೆದುಕೊಂಡಿದ್ದರೆ, ಗುಜರಾತ್, ರಾಜಸ್ಥಾನ, ಮಧ್ಯ ಪ್ರದೇಶ, ಛತ್ತೀಸ್ ಗಢ ರಾಜ್ಯಗಳಲ್ಲಿ, ಲೋಕಸಭಾ ಚುನಾವಣೆಯಲ್ಲಿ ಒಂದಿಷ್ಟು ಸೀಟನ್ನಾದರೂ ಗೆಲ್ಲಬಹುದಿತ್ತು. ಆದರೆ, ಈ ರಾಜ್ಯಗಳಲ್ಲಿ ದಕ್ಕಿದ್ದೇನು? ಎಣಿಸಿದರೆ ಕೈಯಲ್ಲಿನ ಬೆರಳುಗಳನ್ನು ಕೂಡ ಗಳಿಸಿದ ಸೀಟುಗಳು ದಾಟುವುದಿಲ್ಲ.
ಇದಕ್ಕಿಂತ ನಾಚಿಕೆಗೇಡಿನ ಸಂಗತಿಯೇನಿದೆ? ತಮ್ಮ ಸಾಮರ್ಥ್ಯದ ಇತಿಮಿತಿಯನ್ನು ಅರಿಯುವಲ್ಲಿ ಅವರು ಹಲವು ಬಾರಿ ವಿಫಲರಾಗಿದ್ದಾರೆ. ಆದರೆ, ಈಬಾರಿ ಲೋಕಸಭಾ ಚುನಾವಣೆಯಲ್ಲಿ ಅವಮಾನಕರ ಸೋಲು ಅನುಭವಿಸಿದ ಮೇಲೆ ಅಧ್ಯಕ್ಷ ಪದವಿಯಿಂದ ಇಳಿಯುವ ಇರಾದೆ ವ್ಯಕ್ತಪಡಿಸಿದರಾದರೂ, ಫಲಿತಾಂಶವೇನೆಂದು ಅವರಿಗೂ ಗೊತ್ತಿತ್ತು.
ಕಾಂಗ್ರೆಸ್ಸಿನಲ್ಲಿ ಗಾಂಧಿ ಕುಟುಂಬಕ್ಕೆ ಸೆಡ್ಡು ಹೊಡೆಯುವಂಥ, ನಾನು ಜವಾಬ್ದಾರಿ ಹೊರಲು ಸಿದ್ಧನಿದ್ದೇನೆ ಎಂದು ಧೈರ್ಯವಾಗಿ ಹೇಳುವಂಥ ನಾಯಕ ಯಾರೂ ಇಲ್ಲವೆ? ಅಂಥದೊಂದು ಕ್ರಾಂತಿ ಸಂಭವಿಸುವುದಾದರೂ ಯಾವಾಗ?

'ಕೆಳಗಿಳಿ' ಎಂದು ಹೇಳುವ ಕುವ್ವತ್ತು
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸೋನಿಯಾ ಗಾಂಧಿ, ಮನಮೋಹನ ಸಿಂಗ್, ಮಲ್ಲಿಕಾರ್ಜುನ ಖರ್ಗೆ, ರಣದೀಪ್ ಸಿಂಗ್ ಸುರ್ಜೇವಾಲಾ, ಸಿದ್ದರಾಮಯ್ಯ, ಜ್ಯೋತಿರಾಧಿತ್ಯ ಸಿಂಧಿಯಾ, ಶೀಲಾ ದೀಕ್ಷಿತ್, ಪ್ರಿಯಾಂಕಾ ವಾದ್ರಾ, ಕೆಸಿ ವೇಣುಗೋಪಾಲ್ ಮುಂದಾದವರು ಭಾಗಿಯಾಗುತ್ತಾರಾದರೂ, ಪದವಿಯಿಂದ 'ಕೆಳಗಿಳಿ' ಎಂದು ಹೇಳುವ ಕುವ್ವತ್ತು ಒಬ್ಬರಿಗೂ ಇಲ್ಲ. ಎಲ್ಲರೂ ಬಾಯಿಗೆ ಬೀಗ ಜಡಿದವರ ಹಾಗೆ ಕುಳಿತಿರುತ್ತಾರೆ. ಸೋಲಿನ ಪರಾಮರ್ಶೆಯಾದ ನಂತರ, 'ಅಯ್ಯೋ ನೀವು ಹೋಗಬೇಡಿ, ನಿಮ್ಮನ್ನು ಬಿಟ್ಟು ನಮಗೆ ಇನ್ನಾರಿದ್ದಾರೆ, ನಮಗೆ ನೀವು ಬೇಕೇಬೇಕು' ಎಂದು ಸ್ಟೀರಿಯೋ ಟೇಪ್ ನುಡಿದ ಹಾಗೆ ನುಡಿಯುತ್ತಾರೆ. ಶತಮಾನಗಳ ಇತಿಹಾಸವಿರುವದ ಕಾಂಗ್ರೆಸ್ ಪಕ್ಷ ಇಷ್ಟೊಂದೇಕೆ ದುರ್ಬಲವಾಯಿತು.

ಸುವರ್ಣ ಅವಕಾಶ ಕೂಡಿಬಂದಿತ್ತು
ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ನಂತರ ಕಾಂಗ್ರೆಸ್ಸಿನಲ್ಲಿ ಬದಲಾವಣೆ ತರಲು, ಹೊಸ ಉತ್ಸಾಹವನ್ನು ಚಿಮ್ಮಿಸಲು ಸುವರ್ಣ ಅವಕಾಶ ಒದಗಿಬಂದಿತ್ತು. ಇಲ್ಲಿ ಏಳ್ಗೆಯಾಗಬೇಕಾಗಿರುವುದು ಕಾಂಗ್ರೆಸ್ ಪಕ್ಷವೇ ಹೊರತು ಗಾಂಧಿ ಕುಟುಂಬದ್ದಲ್ಲ. ಆದರೆ, ಈ ಪಕ್ಷದಲ್ಲಿ ಎಲ್ಲರೂ ಗಾಂಧಿ ಕುಟುಂಬದ ಅಡಿಯಾಳುಗಳಂತೆ ಆಡುತ್ತಾರೆಯೇ ಹೊರತು, ಧೈರ್ಯವಾಗಿ ಬದಲಾವಣೆ ಬೇಕೇಬೇಕು ಎಂದು ಹೇಳುವವರು ಒಬ್ಬರೂ ಸಿಗುವುದಿಲ್ಲ. ಬದಲಾವಣೆ ಬಯಸುವವರು ಅನಾಮಧೇಯರಾಗಿ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾರೆಯೇ ಹೊರತು ಬಹಿರಂಗವಾಗಿ ಯಾರೂ ಬಾಯಿ ಬಿಡುವುದಿಲ್ಲ. ಬಾಯಿ ಬಿಟ್ಟವರ ಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಇಂದಿರಾ ಮುಂದೆ ಕೈಕಟ್ಟಿ ನಿಲ್ಲುತ್ತಿದ್ದ ನಾಯಕರು
ಇಂದಿರಾ ಗಾಂಧಿ ಅಧ್ಯಕ್ಷೆಯಾಗಿದ್ದ ಸಮಯದಲ್ಲಿ ಅವರ ಮುಂದೆ ಮಾತಾಡುವುದಿರಲಿ, ಕುರ್ಚಿಯ ಮೇಲೆ ಕುಳಿತುಕೊಳ್ಳಲೂ ಗಡಗಡ ನಡುಗುತ್ತಿದ್ದರು. ಕೈಕಟ್ಟಿ ಅವರ ಸುತ್ತಲೂ ನಿಂತು ಉಕ್ಕಿನ ಮಹಿಳೆಯ ಮಾತನ್ನು ಆಲಿಸುತ್ತಿದ್ದರು. ಇದು ಯಾವ ಮಟ್ಟಕ್ಕೆ ಹೋಗಿತ್ತೆಂದರೆ, ಇಂದಿರಾ ಸಂಪುಟದಲ್ಲಿ ಇವರು ಗಂಡಸು ಅವರೊಬ್ಬರೇ ಎಂದು ಅಪಹಾಸ್ಯ ಮಾಡುವಂತಾಗಿತ್ತು. 1844ರಲ್ಲಿ ವೋಮೇಶ್ ಚಂದ್ರ ಬ್ಯಾನರ್ಜಿಯಿಂದ ಆರಂಭವಾಗಿ ಹಲವರು ಆ ಸ್ಥಾನ ಅಲಂಕರಿಸಿದ್ದಾರೆ. 70ರ ದಶಕದಲ್ಲಿ ಇಂದಿರಾ ಗಾಂಧಿ ಹಿಡಿತಕ್ಕೆ ಸಿಕ್ಕ ನಂತರ ಗಾದಿಯ ಖದರ್ ಬದಲಾಗಿದೆ. ಶಂಕರ್ ದಯಾಳ್ ಶರ್ಮಾ, ವಿಪಿ ನರಸಿಂಹ ರಾವ್, ಸೀತಾರಾಂ ಕೇಸರಿಯಂಥ ನಿಷ್ಠಾವಂತರು ಆ ಹುದ್ದೆ ಅಲಂಕರಿಸಿದರೂ ಇವರೆಲ್ಲ 'ಜಿ ಹುಜೂರ್' ಸಂಸ್ಕೃತಿಯವರೇ.

ವೀರೇಂದ್ರ ಪಾಟೀಲರಿಗೆ ಆದ ಗತಿ?
ಕರ್ನಾಟಕದ ಧೀಮಂತ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿರುವ ವೀರೇಂದ್ರ ಪಾಟೀಲರು, ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ದನಿಯೆತ್ತಿದ್ದಕ್ಕೆ ರಾತ್ರೋರಾತ್ರಿ ಅವರನ್ನು ಕಿತ್ತು ಬಿಸಾಡಲಾಯಿತು. ಕಾಂಗ್ರೆಸ್ ಹೈಕಮಾಂಡ್ ಕೃಪಾಕಟಾಕ್ಷವಿಲ್ಲದೆ ಕೂದಲು ಕೂಡ ಅದುರುವುದಿಲ್ಲ, ಯಾರೂ ಮುಖ್ಯಮಂತ್ರಿಯಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂಬುದು ಈ ಘಟನೆಯಿಂದ ಸಾಬೀತಾಗಿತ್ತು. ಇದ್ದುದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿಯೇ ತಮ್ಮ ಮಾತನ್ನು ಕೇಳುವಂತೆ ಮಾಡಿದರಾದರೂ, ಆಗ ಪರಿಸ್ಥಿತಿಯೇ ಹಾಗಿತ್ತು ಮತ್ತು ರಾಹುಲ್ ಗಾಂಧಿ ಅಷ್ಟು ದುರ್ಬಲರಾಗಿದ್ದರು. ಒಬ್ಬರನ್ನು ಬಲವಂತವಾಗಿ ಕೆಳಗಿಳಿಸುವುದು ಬೇರೆ, ಅವರಾಗಿಯೇ ಕೆಳಗಿಳಿಯಲು ಬಂದಾಗ ಅವರನ್ನು ಬದಿಗೆ ಸರಿಸುವುದು ಬೇರೆ. ಈ ಎರಡನ್ನೂ ಮಾಡದಷ್ಟು ಇತರ ನಾಯಕರು ಕುರುಡು ಪ್ರೀತಿಯ ಗಾಂಧಾರಿಗಳಾಗಿದ್ದಾರೆ.

ಯುವ ನಾಯಕರಿಗೂ ಆ ಧೈರ್ಯವಿಲ್ಲ
ರಾಹುಲ್ ಗಾಂಧಿ ಅವರು ತಮ್ಮೆಲ್ಲ ಯೋಜನೆಗಳಿಗೆ, ಸಿದ್ಧತೆಗಳಿಗೆ, ಭಾಷಣಗಳಿಗೆ ಜೋತಿರಾಧಿತ್ಯ ಸಿಂಧಿಯಾ, ಕಮಲ್ ನಾಥ್, ರಣದೀಪ್ ಸಿಂಗ್ ಸುರ್ಜೇವಾಲಾ, ಸಚಿನ್ ಪೈಟಲ್ ಅಂಥವರನ್ನೇ ನಂಬಿದ್ದಾರೆ. ಮಧ್ಯ ಪ್ರದೇಶದ ವಿಧಾನಸಭೆ ಸಮಯದಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾರನ್ನು ಸಂಪರ್ಕಿಸದೆ, ಸಲಹೆ ಪಡೆಯದೆ ರಾಹುಲ್ ಗಾಂಧಿ ಅವರು ಪ್ರಮುಖ ಹೇಳಿಕೆಗಳನ್ನು ನೀಡಲು ಕೂಡ ಹಿಂಜರಿಯುತ್ತಿದ್ದರು. ಇಂಥವರನ್ನು ಬದಿಗೆ ಸರಿಸುವುದು ಯುವಪೀಳಿಗೆಯ ಮುಖಂಡರಿಗೆ ಕಷ್ಟವೇನೂ ಆಗಿರಲಿಲ್ಲ. ಕೆಳಗಿಳಿಯಲು ರಾಹುಲ್ ಕೂಡ ಸಿದ್ಧರಿದ್ದರು. ಆದರೆ, ಉಳಿದ ನಾಯಕರು ಎಂಥ ಹೀನಾಯ ಸ್ಥಿತಿಯಲ್ಲಿದ್ದಾರೆಂದರೆ, ಒಬ್ಬೇ ಒಬ್ಬ ಕೂಡ ಅನುಮತಿಯಿಲ್ಲದೆ ಕುರ್ಚಿಯಿಂದ ಏಳುವುದಿಲ್ಲ. ಇದಕ್ಕೆ ಮಲ್ಲಿಕಾರ್ಜುನ ಖರ್ಗೆ ಕೂಡ ಹೊರತಲ್ಲ.

ಕಾಂಗ್ರೆಸ್ಸಿನಲ್ಲಿ ಕ್ರಾಂತಿ ಸಂಭವಿಸಬೇಕಾಗಿದೆ
ಆದರೆ, ಕಾಂಗ್ರೆಸ್ಸಿನಲ್ಲಿ ಕ್ರಾಂತಿ ಸಂಭವಿಸಬೇಕಾಗಿದೆ. ಸುಪ್ತಸ್ಥಿತಿಯಲ್ಲಿರುವ ಶಕ್ತಿಯೊಂದು ಆವಿರ್ಭವಿಸಿ ಜ್ವಾಲಾಮುಖಿಯಂತೆ ಆಸ್ಫೋಟಿಸಬೇಕಿದೆ. ಕರ್ನಾಟಕದ ಓರ್ವ ಖ್ಯಾತ ಜ್ಯೋತಿಷಿಯ ಪ್ರಕಾರ, ಸದ್ಯದಲ್ಲಿಯೇ ಅಂಥ ಕ್ರಾಂತಿಯೊಂದು ಘಟಿಸಲಿದೆ. ಅದಕ್ಕೆ ಕಾಲಕೂಡಿ ಬರಬೇಕಷ್ಟೆ. ಆಡಳಿತ ಪಕ್ಷವೊಂದು ಬಲಿಷ್ಠವಾಗಿದ್ದರೆ ಮಾತ್ರ ಸಾಲದು, ಅದನ್ನು ಪ್ರತಿರೋಧಿಸುವಂಥ, ಪ್ರಶ್ನಿಸುವಂಥ, ಎದುರಿಸಿ ನಿಲ್ಲುವಂಥ, ಸೆಡ್ಡು ಹೊಡೆಯುವಂಥ ವಿರೋಧಿಗಳ ಗುಂಪು ಕೂಡ ಇರಬೇಕು. ಇದು ಕಾಂಗ್ರೆಸ್ಸಿನಲ್ಲಿ ಸಾಧ್ಯವೆ? ಗಾಂಧಿ ಕುಟುಂಬವನ್ನೇ ಬದಿಗೆ ಸರಿಸಿ, ಕಾಂಗ್ರೆಸ್ ಅಧ್ಯಕ್ಷಗಿರಿಯ ಚುಕ್ಕಾಣಿ ಹಿಡಿಯುವಂಥ ಗಂಡು ಅಥವಾ ಹೆಣ್ಣು ಉದ್ಭವವಾಗುವುದೆ?












Click it and Unblock the Notifications