ಬಿಜೆಪಿಯ ಎ ಪ್ಲಾನ್, ಬಿ ಪ್ಲಾನ್ ಕುರಿತು ಇಂಟರೆಸ್ಟಿಂಗ್ ಚರ್ಚೆ

Recommended Video

      ಕರ್ನಾಟಕ ವಿಧಾನಸಭಾ ಚುನಾವಣೆ 2018 : ಬಿಜೆಪಿಯ ಪ್ಲಾನ್ ಎ ಮತ್ತು ಬಿ ಬಗ್ಗೆ ಬಾರಿ ಚರ್ಚೆ

      ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಕರ್ನಾಟಕದ ಬಿಜೆಪಿ ನಾಯಕರಿಗೆ ಹೊಸತಾಗಿ ಎ ಮತ್ತು ಬಿ ಪ್ಲಾನ್ ಕುರಿತು ಸಂದೇಶ ರವಾನಿಸಿದ್ದಾರೆ.

      ಅವರು ಇಂತಹ ಸಂದೇಶ ರವಾನಿಸಲು ಎರಡು ದಿನಗಳ ಹಿಂದೆ ಅವರ ಕೈ ತಲುಪಿದ ಆಂತರಿಕ ಸರ್ವೇ ಕಾರಣ. ಆ ಸರ್ವೇಯ ಪ್ರಕಾರ ಗೆಲ್ಲುವ ಕ್ಷೇತ್ರಗಳಿಗೆ 'ಎ ಪ್ಲಸ್' ಅಂತ ಹೆಸರಿಸಲಾಗಿದೆ. ಎರಡನೇ ಸ್ಥಾನ ತಲುಪುವ ಸ್ಥಿತಿ ಇರುವ ಕ್ಷೇತ್ರಗಳಿಗೆ 'ಬಿ ಪ್ಲಸ್' ಅಂತ, ಮೂರನೇ ಸ್ಥಾನ ತಲುಪುವ ಕ್ಷೇತ್ರಗಳಿಗೆ 'ಸಿ ಪ್ಲಸ್' ಅಂತ ಹೆಸರಿಡಲಾಗಿದೆ.

      ಅಮಿತ್ ಷಾ ಅವರು ಹಲವು ಕಾಲದಿಂದ ಕರ್ನಾಟಕದಲ್ಲಿ ಬಿಜೆಪಿ ಪರಿಸ್ಥಿತಿಯ ಬಗ್ಗೆ ಆಂತರಿಕ ಸರ್ವೇ ಕಾರ್ಯ ಮಾಡಿಸುತ್ತಲೇ ಬಂದಿದ್ದಾರೆ. ಇದರಡಿ, ಒಂದೂವರೆ ಸಾವಿರ ಮಂದಿ ರಾಜ್ಯಾದ್ಯಂತ ಸಂಚರಿಸುತ್ತಾ ಪಕ್ಷ ನೀಡಿದ ಸೂಚನೆಗಳಿಗೆ ಅನುಸಾರವಾಗಿ ಜನಾಭಿಪ್ರಾಯವನ್ನು ಸಂಗ್ರಹಿಸಿ ವರದಿ ನೀಡುತ್ತಾರೆ.
      ಶುರುವಿನಲ್ಲಿ ಈ ಪಡೆ ಎರಡು ತಿಂಗಳಿಗೆ ಒಮ್ಮೆ ವರದಿ ನೀಡುತ್ತಿತ್ತು. ಆದರೆ ಈಗ ಪ್ರತಿ ತಿಂಗಳು ವರದಿ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಅದು ವಾರಕ್ಕೊಮ್ಮೆ ರವಾನೆಯಾಗುತ್ತದೆ.

      ಅಂದ ಹಾಗೆ, ಯಡಿಯೂರಪ್ಪ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕಾಲದಲ್ಲಿ ಸ್ವಯಂಬಲದ ಮೇಲೆ ಗೆದ್ದು ಅಧಿಕಾರಕ್ಕೆ ಬರುವ ವಾತಾವರಣವಿದೆ ಎಂದು ಆಂತರಿಕ ಸರ್ವೇ ನಡೆಸಿದ ಅಮಿತ್ ಷಾ ಅವರ ಅಂತರಂಗಿಕ ಟೀಮು ಹೇಳಿತ್ತು. ಆದರೆ ನಂತರದ ದಿನಗಳಲ್ಲಿ ಗೆಲ್ಲಬಲ್ಲ ಕ್ಷೇತ್ರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಾ ಹೋಗಿತ್ತು.

      ಯಾವಾಗ ಕರ್ನಾಟಕದ ರಾಜಕೀಯ ಮಾರುಕಟ್ಟೆಯಲ್ಲಿ ಜೆಡಿಎಸ್ ಪಕ್ಷದ ಷೇರ್ ವ್ಯಾಲ್ಯೂ ಹೆಚ್ಚಾಯಿತೋ? ಇದಾದ ನಂತರ ಅಮಿತ್ ಷಾ ಅವರಿಗೆ ತಲುಪಿರುವ ಆಂತರಿಕ ವರದಿ ಒಂದು ಅಂಶವನ್ನು ಪ್ರಮುಖವಾಗಿ ಪ್ರಸ್ತಾಪಿಸಿದೆ.

      ಅದರ ಪ್ರಕಾರ, ಚುನಾವಣೆ ನಡೆದರೆ ರಾಜ್ಯದ ನೂರಾ ಹದಿನಾರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಅಂದರೆ ಅದರ ಲೆಕ್ಕಾಚಾರದ ಪ್ರಕಾರ ಈ ಪ್ರಮಾಣದ ಕ್ಷೇತ್ರಗಳು 'ಎ ಪ್ಲಸ್' ಗುಂಪಿನಲ್ಲಿವೆ.

      ಸಮೀಕ್ಷಾ ವರದಿಯಿಂದ ತೃಪ್ತರಾಗದ ಅಮಿತ್

      ಸಮೀಕ್ಷಾ ವರದಿಯಿಂದ ತೃಪ್ತರಾಗದ ಅಮಿತ್

      ಈ ವರದಿಯಿಂದ ಅಮಿತ್ ಷಾ ತೃಪ್ತರಾಗಿಲ್ಲ.
      ಹಾಗಂತಲೇ ಸರ್ವೇ ವರದಿಯ ಕುರಿತು ರಾಜ್ಯದ ಪ್ರಮುಖ ನಾಯಕರ ಜತೆ ಚರ್ಚಿಸಿರುವ ಅವರು, ನಾವು ನೂರಾ ಅರವತ್ತು ಕ್ಷೇತ್ರಗಳಲ್ಲಿ 'ಎ ಪ್ಲಸ್' ಗುರಿ ತಲುಪಿದಾಗ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತದೆ. ನೂರಾ ಹದಿನಾರು ಕ್ಷೇತ್ರಗಳಲ್ಲಿ 'ಎ ಪ್ಲಸ್' ಬಂದಿದೆ ಎಂಬುದರ ಅರ್ಥ, ನಾವು ಎಂಭತ್ತು ಸೀಟುಗಳ ಆಸುಪಾಸಿನಲ್ಲಿದ್ದೇವೆ ಅಂತ ಎಚ್ಚರಿಕೆಯ ಮಾತುಗಳನ್ನು ಹೇಳಿದ್ದಾರೆ.
      ಇದರರ್ಥ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಅಗತ್ಯವಾದ ಕಾರ್ಯತಂತ್ರವನ್ನು ರೂಪಿಸಲಾಗಿರುವುದೇನೋ ಸರಿ, ಆದರೆ ಅದಕ್ಕೆ ಪೂರಕವಾಗಿ ಹೆಜ್ಜೆ ಇಡಲು ಸಾಧ್ಯವಾಗುತ್ತಿಲ್ಲ ಅನ್ನುವುದೇ ಹೊರತು ಬೇರೇನಲ್ಲ.

      ಆಂತರಿಕ ಸಂಘರ್ಷಗಳನ್ನು ನಿವಾರಿಸಿಕೊಳ್ಳಿ

      ಆಂತರಿಕ ಸಂಘರ್ಷಗಳನ್ನು ನಿವಾರಿಸಿಕೊಳ್ಳಿ

      ಹೀಗಾಗಿ ಬಾಕಿ ಉಳಿದಿರುವ ಎರಡು ಪ್ಲಸ್ ತಿಂಗಳುಗಳಲ್ಲಿ ರಾಜ್ಯ ಘಟಕದಲ್ಲಿರುವ ಆಂತರಿಕ ಸಂಘರ್ಷವನ್ನು ನಿವಾರಿಸಿಕೊಳ್ಳಿ. ಆಗ ಮಾತ್ರ ನೀವು ನೂರಾ ಅರವತ್ತು ಕ್ಷೇತ್ರಗಳು 'ಎ ಪ್ಲಸ್' ವ್ಯಾಪ್ತಿಯ ಅಡಿಯಲ್ಲಿ ಬರುವಂತೆ ಮಾಡಲು ಶಕ್ತರಾಗುತ್ತೀರಿ ಅಂತ ಅವರು ಹೇಳಿದ್ದಾರೆ.
      ಅವರು ಹೇಳಿದ ಪ್ರಕಾರ ರಾಜ್ಯ ಬಿಜೆಪಿ ಇದನ್ನು ಸಾಧಿಸಿದರೆ ಎ ಪ್ಲಾನ್ ಜಾರಿಯಾಗುತ್ತದೆ. ಒಂದು ವೇಳೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ 'ಎ ಪ್ಲಸ್' ಕ್ಷೇತ್ರಗಳ ಸಂಖ್ಯೆ ನೂರಾ ಅರವತ್ತಾಗದೆ ಹೋದರೆ ಸ್ವಯಂಬಲದ ಮೇಲೆ ಗೆಲ್ಲುವುದು ಕಷ್ಟ.

      ಪ್ಲಾನ್ ಎ ವಿಫಲವಾದರೆ, ಏನದು ಪ್ಲಾನ್ ಬಿ?

      ಪ್ಲಾನ್ ಎ ವಿಫಲವಾದರೆ, ಏನದು ಪ್ಲಾನ್ ಬಿ?

      ಆಗ ಅನಿವಾರ್ಯವಾಗಿ ಬಿ ಪ್ಲಾನ್ ನ ಮೊರೆ ಹೋಗಬೇಕಾಗುತ್ತದೆ. ಅಂದರೆ ಜೆಡಿಎಸ್ ಜತೆಗೆ ಹೊಂದಾಣಿಕೆ ಮಾಡಿಕೊಂಡು ಮೈತ್ರಿ ಸರ್ಕಾರ ರಚನೆಗೆ ಸಿದ್ಧವಾಗಬೇಕಾಗುತ್ತದೆ.
      ಸದ್ಯದ ಸ್ಥಿತಿಯಲ್ಲಿ ಜೆಡಿಎಸ್ ನಾಯಕರು ನಾವು ಎರಡೂ ರಾಷ್ಟ್ರೀಯ ಪಕ್ಷಗಳಿಂದ ದೂರ ಇದ್ದೇವೆ ಎನ್ನುತ್ತಿದ್ದಾರೆ. ಆದರೆ ಮಾನಸಿಕವಾಗಿ ಅವರು ಕಾಂಗ್ರೆಸ್ ಗಿಂತ ಬಿಜೆಪಿಗೆ ಹತ್ತಿರವಾಗಿದ್ದಾರೆ. ಇದಕ್ಕೆ ಕಾರಣ, ಮೈತ್ರಿ ಧರ್ಮವನ್ನು ಕಾಂಗ್ರೆಸ್ ಪಕ್ಷ ಯಾವತ್ತೂ ಪಾಲಿಸುವುದಿಲ್ಲ ಎಂಬುದು ಅದರ ಆರೋಪ.
      ಮಾತೆತ್ತಿದರೆ ಬಿಜೆಪಿಯ ವಿರುದ್ಧ ಕಿಡಿ ಕಾರುವ, ರಾಜಧರ್ಮದ ಬಗ್ಗೆ ಮಾತನಾಡುವ ಕಾಂಗ್ರೆಸ್ ತಾನು ಮಾತ್ರ ಏಕಕಾಲಕ್ಕೆ ರಾಜಧರ್ಮವನ್ನು ಪಾಲಿಸುವುದಿಲ್ಲ, ಮೈತ್ರಿ ಧರ್ಮವನ್ನೂ ಪಾಲಿಸುವುದಿಲ್ಲ ಎಂಬುದು ಅದರ ಆಕ್ರೋಶ.

      ಕಾಂಗ್ರೆಸ್ ಮೈತ್ರಿ ಧರ್ಮ ಪಾಲಿಸಿದ್ದರೆ...

      ಕಾಂಗ್ರೆಸ್ ಮೈತ್ರಿ ಧರ್ಮ ಪಾಲಿಸಿದ್ದರೆ...

      ಕಾಂಗ್ರೆಸ್ ಪಕ್ಷದವರು ಪ್ರಾದೇಶಿಕ ಶಕ್ತಿಗಳ ಜತೆ ಮೈತ್ರಿ ಧರ್ಮ ಪಾಲಿಸಿದ್ದರೆ ಇವತ್ತು ಕೇಂದ್ರದಲ್ಲಿ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರವೇ ಇರುತ್ತಿರಲಿಲ್ಲ. ಆದರೆ ಯಾರೊಂದಿಗೆ ಮೈತ್ರಿ ಸಾಧಿಸಲಾಯಿತೋ? ಆ ಪಕ್ಷಗಳನ್ನೇ ನುಂಗುವ ಕೆಲಸ ಕಾಂಗ್ರೆಸ್ ಪಕ್ಷದಿಂದಾಯಿತು.
      ಸಹಜವಾಗಿ ಮೈತ್ರಿ ಪಕ್ಷಗಳ ಹಿತ ಕಾಪಾಡುವುದು, ಅವುಗಳ ಶಕ್ತಿ ಹೆಚ್ಚಿಸಲು ಬೆಂಬಲ ನೀಡುವುದು ಒಂದು ರಾಷ್ಟ್ರೀಯ ಪಕ್ಷದ ಕರ್ತವ್ಯ. ಆದರೆ ಆ ವಿಷಯದಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಹೀಗಾಗಿ ಅವರ ಜತೆ ಹೋಗುವುದರಲ್ಲಿ ಲಾಭವಲ್ಲ, ಅರ್ಥವೂ ಇಲ್ಲ ಎಂಬ ಮಾತು ಜೆಡಿಎಸ್ ಪಾಳೆಯದಲ್ಲಿ ಕೇಳಿ ಬರುತ್ತಲೇ ಇದೆ.

      ಜೆಡಿಎಸ್ ಬಲ ದೊಡ್ಡಮಟ್ಟದಲ್ಲಿ ವೃದ್ಧಿ

      ಜೆಡಿಎಸ್ ಬಲ ದೊಡ್ಡಮಟ್ಟದಲ್ಲಿ ವೃದ್ಧಿ

      ಇಂಟರೆಸ್ಟಿಂಗ್ ಸಂಗತಿ ಎಂದರೆ, ಕಳೆದ ಕೆಲವೇ ದಿನಗಳಲ್ಲಿ ಜೆಡಿಎಸ್ ಬಲ, ವರ್ಚಸ್ಸು ದೊಡ್ಡಮಟ್ಟದಲ್ಲಿ ವೃದ್ಧಿಯಾಗಿದೆ. ಅದು ಬಹುಜನ ಸಮಾಜ ಪಕ್ಷದ ಜತೆ ಸಾಧಿಸಿದ ಮೈತ್ರಿ ಇರಬಹುದು, ಎನ್.ಸಿ.ಪಿ ಜತೆ ಸಾಧಿಸಿದ ಮೈತ್ರಿ ಇರಬಹುದು. ಈ ಮೈತ್ರಿಯಿಂದ ಹೆಚ್ಚಿನ ಲಾಭವಾಗುವುದು ಜೆಡಿಎಸ್ ಗೇ ಅನ್ನುವುದನ್ನು ಮರೆಯಬಾರದು.
      ಇವತ್ತು ಬಹುಜನ ಸಮಾಜ ಪಕ್ಷಕ್ಕೆ ರಾಜ್ಯದ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪ್ರಭಾವವಿದೆ. ಅದೇ ರೀತಿ ಎನ್.ಸಿ.ಪಿ ಕೂಡಾ ಒಂದು ಮಟ್ಟದಲ್ಲಿ ಪ್ರಭಾವವನ್ನು ಹೊಂದಿದೆ. ಆದರೆ ಇನ್ನೂರಾ ಇಪ್ಪತ್ನಾಲ್ಕು ಕ್ಷೇತ್ರಗಳ ಪೈಕಿ ಮೈತ್ರಿಯ ಕಾರಣಕ್ಕಾಗಿ ಈ ಪಕ್ಷಗಳಿಗೆ ಜೆಡಿಎಸ್ ಬಿಟ್ಟು ಕೊಡುವುದು ಇಪ್ಪತ್ತಾರರಷ್ಟು ಸೀಟು.
      ಉಳಿದಂತೆ ನೂರಾ ತೊಂಭತ್ತೆಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸುತ್ತದೆ.

      ಒಕ್ಕಲಿಗ, ದಲಿತ ಮತ್ತು ಮರಾಠಾ ಮತ

      ಒಕ್ಕಲಿಗ, ದಲಿತ ಮತ್ತು ಮರಾಠಾ ಮತ

      ಮೈತ್ರಿಯ ಪ್ರಕಾರ, ಬಹುಜನ ಸಮಾಜ ಪಕ್ಷ ಹಾಗೂ ಎನ್.ಸಿ.ಪಿ ಯ ವೋಟುಗಳು ಜೆಡಿಎಸ್ ಅಭ್ಯರ್ಥಿಗಳಿಗೆ ಸಿಗುತ್ತದೆ. ಜೆಡಿಎಸ್ ನ ಮಿತ್ರ ಪಕ್ಷಗಳಿಗೆ ಉಳಿದೆರಡು ಪಕ್ಷಗಳ ವೋಟು ಸಿಗುತ್ತದೆ.
      ಒಟ್ಟಾರೆಯಾಗಿ ಗಮನಿಸಿ ನೋಡಿದರೆ ಈ ಮೈತ್ರಿಯಿಂದ ಜೆಡಿಎಸ್ ಗೆ ಆಗುವ ಲಾಭ ಹೆಚ್ಚು. ಒಕ್ಕಲಿಗ ಮತ ಬ್ಯಾಂಕ್ ನೊಂದಿಗೆ, ದಲಿತ ಮತಬ್ಯಾಂಕ್, ಗಡಿ ಭಾಗದಲ್ಲಿರುವ ಮತ್ತು ಒಳನಾಡಿನಲ್ಲಿ ಅಲ್ಪ ಪ್ರಮಾಣದಲ್ಲಾದರೂ ಇರುವ ಮರಾಠಾ ಮತಗಳು ಜೆಡಿಎಸ್ ಗೆ ದಕ್ಕಿದರೆ ಅದು ಅರವತ್ತರಷ್ಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಎಂಬುದು ಲೇಟೆಸ್ಟು ಲೆಕ್ಕಾಚಾರ.

      ಇಲ್ಲದಿದ್ದರೆ ಬಿಎಸ್ವೈಗೆ ಸೈಡ್ ವಿಂಗ್ ಗೇ ಗತಿ

      ಇಲ್ಲದಿದ್ದರೆ ಬಿಎಸ್ವೈಗೆ ಸೈಡ್ ವಿಂಗ್ ಗೇ ಗತಿ

      ಒಂದು ವೇಳೆ ಬಿಜೆಪಿ ಎಂಭತ್ತು ಸೀಟುಗಳಿಗೆ ಸೀಮಿತವಾದರೆ ಅನಿವಾರ್ಯವಾಗಿ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಹಾಗೆ ಹೊಂದಾಣಿಕೆ ಮಾಡಿಕೊಳ್ಳುವ ಸ್ಥಿತಿ ಬಂದರೆ ಸದ್ಯದ ರಾಜಕೀಯ ಚಿತ್ರ ಬದಲಾಗುತ್ತದೆ.
      ಸದ್ಯದ ಚಿತ್ರವೆಂದರೆ, ಬಿಜೆಪಿ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬಂದರೆ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ. ಒಂದು ವೇಳೆ ಸ್ವಯಂಬಲದ ಮೇಲೆ ಗೆಲ್ಲದೆ ಮೈತ್ರಿಕೂಟ ಸರ್ಕಾರ ರಚನೆ ಅನಿವಾರ್ಯವಾದರೆ ಯಡಿಯೂರಪ್ಪ ಸೈಡ್ ವಿಂಗ್ ಗೆ ಹೋಗುವುದು ಅನಿವಾರ್ಯವಾಗುತ್ತದೆ.

      ಕೇಂದ್ರದ ಸಚಿವರೊಬ್ಬರು ಮುಖ್ಯಮಂತ್ರಿಯಾಗಬಹುದು

      ಕೇಂದ್ರದ ಸಚಿವರೊಬ್ಬರು ಮುಖ್ಯಮಂತ್ರಿಯಾಗಬಹುದು

      ಆಗ ಮುಖ್ಯಮಂತ್ರಿ ಪಟ್ಟ ತಾನಿರಿಸಿಕೊಳ್ಳಲು ಬಿಜೆಪಿ ಸಫಲವಾದರೆ ಗೋವಾದ ಪರಿಸ್ಥಿತಿ ಉದ್ಭವವಾಗಬಹುದು. ಗೋವಾ ವಿಧಾನಸಭಾ ಚುನಾವಣೆ ಮುಗಿದ ನಂತರ ಕೇಂದ್ರದಲ್ಲಿ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಅವರು ಮುಖ್ಯಮಂತ್ರಿ ಕ್ಯಾಂಡಿಡೇಟ್ ಆದರು. ಅದೇ ರೀತಿ ಕರ್ನಾಟಕಕ್ಕೂ ಕೇಂದ್ರ ಸಚಿವ ಸಂಪುಟದಲ್ಲಿರುವ ಯಾರಾದರೊಬ್ಬರು ಮುಖ್ಯಮಂತ್ರಿಯಾಗಬಹುದು.
      ಜೆಡಿಎಸ್ ಗೇ ಮುಖ್ಯಮಂತ್ರಿ ಪಟ್ಟವನ್ನು ಬಿಟ್ಟು ಕೊಡುವ ಪ್ರಶ್ನೆ ಬಂದರೆ ಬೇರೆ ವಿಷಯ.

      ದಿನದಿಂದ ಬದಲಾಗುತ್ತಿದೆ ರಾಜಕೀಯ ಚಿತ್ರಣ

      ದಿನದಿಂದ ಬದಲಾಗುತ್ತಿದೆ ರಾಜಕೀಯ ಚಿತ್ರಣ

      ಕಳೆದ ಬಾರಿ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಸರ್ಕಾರ ರಚನೆಯಾದಾಗ ಮುಖ್ಯಮಂತ್ರಿ ಪಟ್ಟವನ್ನು ಜೆಡಿಎಸ್ ಗೆ ಬಿಟ್ಟು ಕೊಡಲಾಗಿತ್ತು. ಹೀಗಾಗಿ ಮುಂದಿನ ಸಲ ಜೆಡಿಎಸ್ ಜತೆ ಕೈಗೂಡಿಸಿ ಸರ್ಕಾರ ರಚಿಸುವ ಸ್ಥಿತಿ ಬಂದರೆ ಕಮಲ ಪಾಳೆಯವೇ ಸಿಎಂ ಹುದ್ದೆಯನ್ನು ಅಪೇಕ್ಷಿಸಿ, ಜೆಡಿಎಸ್ ಪಕ್ಷವನ್ನು ಒಪ್ಪಿಸಬಹುದು. ಆದರೆ ಹೊಂದಾಣಿಕೆ ಮಾಡಿಕೊಳ್ಳುವ ಸ್ಥಿತಿ ಬಂದಾಗ ಯಡಿಯೂರಪ್ಪ ಅವರನ್ನು ಸಿಎಂ ಕ್ಯಾಂಡಿಡೇಟ್ ಅಂತ ಅದು ಒಪ್ಪಿಕೊಳ್ಳುವುದಿಲ್ಲ.
      ಹೀಗಾಗಬಾರದು ಎಂದರೆ ಎ ಪ್ಲಾನ್ ಸಕ್ಸಸ್ ಆಗುವಂತೆ ಮಾಡಿ. ಇಲ್ಲವೇ ಬಿ ಪ್ಲಾನ್ ಗೆ ಸಿದ್ಧರಾಗಿ ಎಂಬುದು ಅಮಿತ್ ಷಾ ಅವರ ಸೂಚನೆ. ಸಹಜವಾಗಿಯೇ ಈ ಸೂಚನೆ ರಾಜ್ಯ ಬಿಜೆಪಿಯ ಒಳವಲಯಗಳಲ್ಲಿ ಇಂಟರೆಸ್ಟಿಂಗ್ ಚರ್ಚೆಗೆ ಕಾರಣವಾಗಿದೆ. ರಾಜ್ಯ ರಾಜಕಾರಣದ ಚಿತ್ರ ದಿನದಿಂದ ದಿನಕ್ಕೆ ಹೇಗೆ ಬದಲಾಗುತ್ತದೆ? ಎಂಬುದರ ಸಂಕೇತವೂ ಆಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+