ಹಳೆ ಕಟ್ಟಡ ಕಾಂಗ್ರೆಸ್ ಗೆ ಹೊಸ ಎಂಜಿನಿಯರ್ ರಾಹುಲ್ ಗಾಂಧಿ
ಮನೆಯಲ್ಲಿನ ಹಿರಿಯರು ಇಡೀ ಜಗತ್ತು ಕೊಂಡಾಡುವ ಸಾಧನೆ ಮಾಡಿಬಿಟ್ಟರೆ ಮುಂದಿನ ತಲೆಮಾರುಗಳ ಮೇಲೆ ಅದ್ಯಾವ ಪರಿಯ ಒತ್ತಡ ಬೀಳುತ್ತದೆ ಎಂಬುದಕ್ಕೆ ಇದೀಗ ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ರಾಹುಲ್ ಗಾಂಧಿ ಕೇಸ್ ಸ್ಟಡಿ ಇದ್ದ ಹಾಗೆ. ಜವಾಹರ್ ಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ಜತೆಗೆ ರಾಹುಲ್ ರ ಹೋಲಿಕೆಯನ್ನು ಆರಂಭಿಸಲಾಗುತ್ತದೆ.
ಸ್ವಾತಂತ್ರ್ಯ ಹೋರಾಟದ ದೇದೀಪ್ಯಮಾನವಾದ ಜ್ವಾಲೆಯಲ್ಲಿ ಝಗಮಗಿಸಿದ ಜವಾಹರ್ ಲಾಲ್ ನೆಹರೂ. ಅಪ್ಪನ ಜತೆಜತೆಗೆ ಜಗತ್ತನ್ನು ಕಂಡ, ಭಾರತ ನಿರ್ಮಾಣಕ್ಕಾಗಿ ಇಟ್ಟ ಪ್ರತಿ ಇಟ್ಟಿಗೆಯನ್ನೂ ಹತ್ತಿರದಿಂದ ಬಲ್ಲ, ತನ್ನದೂ ಕೊಡುಗೆ ನೀಡಿದ ಇಂದಿರಾ ಪ್ರಿಯದರ್ಶಿನಿ, ಹೊಸ ಆಲೋಚನೆಯೊಂದಿಗೆ ಬಂದು- ಜನರ ಅನುಕಂಪ ಗಿಟ್ಟಿಸಿದ ರಾಜೀವ್ ಗಾಂಧಿ.
ಮುಂದೇನು ಎಂಬ ಆಲೋಚನೆಯಲ್ಲಿದ್ದ ಕಾಂಗ್ರೆಸ್ ಗೆ ಹೊಸ ಸ್ವರೂಪ ನೀಡಿದ ಸೋನಿಯಾ ಗಾಂಧಿ. ಇವರೆಲ್ಲರ ಕಾಲ ಘಟ್ಟದಲ್ಲಿನ ಕಾಂಗ್ರೆಸ್ ಬೇರೆ. ಸಾಮಾಜಿಕ ಸ್ಥಿತಿಗತಿಗಳು ಬೇರೆ. ತಂತ್ರಜ್ಞಾನ- ತಂತ್ರಗಾರಿಕೆ ಎಲ್ಲವೂ ಬದಲಾಗಿದೆ. ಕಾಂಗ್ರೆಸ್ ನಲ್ಲೀಗ ಹಳೆ ತಲೆಗಳ ಆದರ್ಶ- ಸಿದ್ಧಾಂತ ಮತ್ತು ಹೊಸ ತಲೆಮಾರಿನ ಎಲ್ಲವನ್ನೂ ಅಪ್ಪಿಕೊಳ್ಳುವ ತತ್ವ ತಾಕಲಾಟಕ್ಕೆ ಒಡ್ಡಿದೆ.
ರಾಹುಲ್ ಗಾಂಧಿ ಅವರ ದೇವಸ್ಥಾನ ಭೇಟಿ, ರುದ್ರಾಕ್ಷಿ ಮಾಲೆ ಧಾರಣೆ, ನಾನು ಶಿವ ಭಕ್ತ ಎಂಬ ಹೇಳಿಕೆಗೆ ಆ ಪರಿಯ ಮಹತ್ವ ಸಿಗುತ್ತಿರುವುದೇ ಆ ಕಾರಣಕ್ಕೆ. ಆರನೇ ವಯಸ್ಸಿನಲ್ಲಿ ನಂಬಿದ ತತ್ವ- ಸಿದ್ಧಾಂತ ಅರವತ್ತನೇ ವಯಸ್ಸಿನಲ್ಲೂ ನಂಬಿಕೊಂಡಿರಬೇಕಾ? ಬದಲಾವಣೆ ಜತೆಗೆ ಹೆಜ್ಜೆ ಹಾಕಬೇಕಾ? ಬಿಜೆಪಿಯಂಥ ಬಿಜೆಪಿಯೇ ಹಿಂದುತ್ವದ ಮೇಲೆ ರಾಜಕಾರಣ ಮಾಡುವುದನ್ನು ಗಣನೀಯವಾಗಿ ಕಡಿಮೆ ಮಾಡಿದೆ.
ಇಂಥ ಸನ್ನಿವೇಶದಲ್ಲಿ ರಾಹುಲ್ ಗಾಂಧಿ ನಮಗೆ ಹೇಗೆ ಕಾಣುತ್ತಾರೆ ಎಂದು ವಿವರಿಸುವ ಸಣ್ಣ ಶ್ರಮವಿದು. ಒಪ್ಪುವುದು ಬಿಡುವುದು ವೈಯಕ್ತಿಕ ವಿಚಾರ. ಆದರೆ ಕಂಡದ್ದು ಹೀಗೆ ಎಂಬ ಸಂಗತಿ ಮುಂದಿರಿಸುವ ಪ್ರಯತ್ನ ಮಾತ್ರ ಮಾಡಲಾಗಿದೆ.

ಯಾವುದೇ ಜವಾಬ್ದಾರಿ ನಿರ್ವಹಿಸಲಿಲ್ಲ
ಎರಡು ಅವಧಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ರಾಹುಲ್ ಗಾಂಧಿ ಸಚಿವರಾಗಿಯಾದರೂ ಕಾರ್ಯ ನಿರ್ವಹಿಸಬೇಕಿತ್ತು. ಅಜ್ಜಿ ಇಂದಿರಾ ಗಾಂಧಿ ಅವರ ಕೇಂದ್ರದಲ್ಲಿ ಸಚಿವೆಯಾಗಿ ಅನುಭವ ಪಡೆದ ರೀತಿಯಲ್ಲಿರುತ್ತಿತ್ತು ಎಂಬುದು ಹಲವರ ಅಭಿಪ್ರಾಯ. ಆದರೆ ರಾಹುಲ್ ಯಾವುದೇ ಸ್ಥಾನ ನಿರ್ವಹಿಸಲಿಲ್ಲ. ವಿರೋಧ ಪಕ್ಷದವರಿಗೆ ಅದು ಟೀಕೆಯ ಅಸ್ತ್ರವಾಯಿತು.

ನಿರೀಕ್ಷೆ ಮುಟ್ಟುತ್ತಿರಲಿಲ್ಲ
ಕಾಂಗ್ರೆಸ್ ನ ನಾಯಕರು ಯಾವ ಸಂದರ್ಭದಲ್ಲೆಲ್ಲ ರಾಹುಲ್ ರನ್ನು ಮುಂಚೂಣಿಯಲ್ಲಿ ಕಾಣಲು ಬಯಸುತ್ತಿದ್ದರೋ ಆಗೆಲ್ಲ ಅವರು ವಿದೇಶ ಪ್ರಯಾಣ ಮಾಡುತ್ತಿದ್ದರು ಅಥವಾ ಸುಮ್ಮನಾಗಿ ಬಿಡುತ್ತಿದ್ದರು. ಆದರೆ ಕಳೆದ ಒಂದು ವರ್ಷದ ಈಚೆಗೆ ಆ ಗುಣ ಬದಲಾವಣೆಯಾಗಿತ್ತು. ಮದ್ಯಪ್ರದೇಶದಲ್ಲಿ ರೈತರ ಹೋರಾಟ, ಸೈನಿಕರ ಏಕ ಶ್ರೇಣಿ- ಏಕ ಪಿಂಚಣಿ ಹೋರಾಟದಂಥ ಕಡೆ ಕಾಣಿಸಿಕೊಳ್ಳಲು ಅರಂಭಿಸಿದ್ದರು.

ಚಿಪ್ಪಿನಿಂದ ಹೊರಬಂದ ರಾಹುಲ್
ಗುಜರಾತ್ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ರಾಹುಲ್ ಗಾಂಧಿ ಚಿಪ್ಪಿನಿಂದ ಹೊರಬಂದಂತೆ ಕಂಡುಬಂದರು. ಅವರ ಭಾಷಣದಲ್ಲಿ ಅಲ್ಲಲ್ಲಿ ವಿವಾದ ಹಾಗೂ ಬಾಲಿಶ ಅಂಶಗಳು ಇಣುಕುತ್ತಿದ್ದವು ಎಂಬುದನ್ನು ಪಕ್ಕಕ್ಕಿಟ್ಟರೆ, ಕೇಂದ್ರ ಸರಕಾರದ ಆರ್ಥಿಕ ನೀತಿ ಬಗ್ಗೆ ಅವರು ತರಾಟೆಗೆ ತೆಗೆದುಕೊಳ್ಳುತ್ತಿದ್ದ ರೀತಿ, ಶಾಯರಿಗಳು, ಮೋದಿಯವರನ್ನು- ಬಿಜೆಪಿಯನ್ನು ತಿವಿಯುತ್ತಿದ್ದದ್ದು ಗಮನ ಸೆಳೆಯಲು ಆರಂಭಿಸಿದವು.

ಎಲ್ಲವೂ ಮನೆಯಂಗಳದಲ್ಲೇ
ರಾಹುಲ್ ಗಾಂಧಿ ಅವರಿಗೆ ಯಾವ ಯುದ್ಧವೂ ಮಾಡಬೇಕಿರಲಿಲ್ಲ (ಅಪ್ಪ-ಅಮ್ಮ, ಅಜ್ಜಿ, ಮುತ್ತಜ್ಜನ ರೀತಿ ಯಾವ ಸಂದಿಗ್ಧ ಸ್ಥಿತಿಯನ್ನೂ ಇಂದಿನವರೆಗೆ ಅವರು ಎದುರಿಸಿಲ್ಲ). ಸಿಂಹಾಸನದ ಮೇಲೆ ಕೂರುವುದಷ್ಟೇ ಬಾಕಿಯಿತ್ತು. ರಾಜಕಾರಣದ ಅಂಗನವಾಡಿಯಿಂದ ಪಿಎಚ್.ಡಿವರೆಗೆ ಮನೆಯಂಗಳದಲ್ಲೇ ಇದ್ದರೂ ತುಂಬ ಚಟುವಟಿಕೆಯಿಂದ ಅವುಗಳಲ್ಲಿ ಪಾಳ್ಗೊಳ್ಳುತ್ತಿದ್ದ ಶಿಸ್ತಿನ ಹುಡುಗನಂತೆ ರಾಹುಲ್ ಗಾಂಧಿ ಅನ್ನಿಸೋದಿಲ್ಲ.

ಭೀಕರ ಸಾವುಗಳನ್ನು ಕಂಡವರು
ಅಂಗರಕ್ಷಕರಿಂದಲೇ ಹತ್ಯೆಯಾದ ಅಜ್ಜಿ ಇಂದಿರಾಗಾಂಧಿ, ಜಗತ್ತಿನಲ್ಲೇ ಮೊದಲ ಬಾರಿಗೆ ಮಾನವ ಬಾಂಬ್ ಗೆ ಬಲಿಯಾದ ರಾಜೀವ್ ಗಾಂಧಿ...ಹೀಗೆ ಕುಟುಂಬದಲ್ಲಿ ಕಂಡ ಭೀಕರ ಸಾವುಗಳು ರಾಹುಲ್ ರನ್ನು ಅದ್ಯಾವ ಪರಿ ಜರ್ಝರಿತರನ್ನಾಗಿ ಮಾಡಿರಬಹುದು ಎಂಬುದನ್ನು ಊಹಿಸಲು ಕೂಡ ಅಸಾಧ್ಯ.

ಪಕ್ವವಾಗುತ್ತಿದ್ದಾರೆ ರಾಹುಲ್
ರಾಹುಲ್ ಗಾಂಧಿ ಹೇಳಿಕೆಗಳು ಆಭಾಸಕ್ಕೆ ಗುರಿಯಾಗಿವೆ, ಅಪಹಾಸ್ಯಕ್ಕೆ ಈಡಾಗಿವೆ, ಸ್ವತಃ ಅವರ ಬಗ್ಗೆಯೇ ಜೋಕುಗಳು ಹರಿದಾಡಿವೆ. ಆದರೆ ಅವೆಲ್ಲವನ್ನೂ ಮೀರಿಯೂ ನಾಯಕರಾಗಿ ಪಕ್ವವಾಗುವ ಕಡೆಗೆ ಸಾಗುತ್ತಿದ್ದಾರೆ ರಾಹುಲ್. ವಂಶಪಾರಂಪರ್ಯ ರಾಜಕಾರಣ, ಮನೆ ಮಂದಿಯೇ ಅಧಿಕಾರಕ್ಕೆ ಬರಬೇಕಾ? ಹೀಗೆ ಯಾವುದೇ ಆಕ್ಷೇಪ ಮುಂದು ಮಾಡಬಹುದು. ಆದರೆ ಕಾಂಗ್ರೆಸ್ ಪಕ್ಷದಿಂದ ರಾಹುಲ್ ರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಂಡಾಗಿದೆ. ಇನ್ನು ಮುಂದೆ ಏನು ಮಾಡುತ್ತಾರೆ ಎಂಬುದೇ ಪ್ರಶ್ನೆ.

ಎರಡು ವಿರುದ್ಧ ದಿಕ್ಕುಗಳು
ರಾಹುಲ್ ಗಾಂಧಿಗೆ ಭಾರತದ ರಾಜಕಾರಣ ಅರ್ಥವಾದಂತೆ ಕಾಣುವುದಿಲ್ಲ. ಹಾಗಂತ ಅವರೇ ಸುತ್ತ ನಿಲ್ಲಿಸಿಕೊಂಡ ಹೊಸ ತಲೆಮಾರಿನವರ ಕನಸುಗಳು ಬೇರೆ ಇವೆ. ಇನ್ನು ಹಿರಿ ತಲೆಗಳ ಲೆಕ್ಕಾಚಾರಗಳು ಬೇರೆ. ಎರಡು ವಿರುದ್ಧ ದಿಕ್ಕಿಗೆ ಸಾಗುವ ಆಲೋಚನೆಗಳ ಎಳೆದಾಟವೊಂದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಎರಡನ್ನೂ ಸಂಭಾಳಿಸಿಕೊಂಡು ಪಕ್ಷವನ್ನು ರಾಹುಲ್ ಹೇಗೆ ಮುನ್ನಡೆಸುತ್ತಾರೆ ಎಂಬ ಬಗ್ಗೆ ಕುತೂಹಲವಂತೂ ಇದ್ದೇ ಇದೆ.












Click it and Unblock the Notifications