ಲಾಕ್ ಡೌನ್ ಭಾರತದಲ್ಲಿ ದುಗ್ಗಾಣಿ ಇಲ್ಲದೇ ದಕ್ಕಿದ್ದು ದುಃಖ ಮಾತ್ರ!
ಮುಂಬೈ, ಮೇ.11: ನೊವೆಲ್ ಕೊರೊನಾ ವೈರಸ್ ಸೋಂಕು ಹರಡುವಿಕೆ ಭೀತಿಯಲ್ಲಿ ಭಾರತಕ್ಕೆ ಭಾರತವೇ ಲಾಕ್ ಆಗಿದೆ. ಗೂಡು ತೊರೆದು ದುಡಿಯಲು ತೆರಳಿದ ವಲಸೆ ಕಾರ್ಮಿಕರು ಸಾವಿನ ಭೀತಿಯಲ್ಲಿ ಸ್ವಂತ ಊರುಗಳತ್ತ ವಲಸೆ ಹೋಗುತ್ತಿದ್ದಾರೆ. ಮಹಾರಾಷ್ಟ್ರದ ಮುಂಬೈ ಹಾಗೂ ನಾಸಿಕ್ ರಾಷ್ಟ್ರೀಯ ಹೆದ್ದಾರಿಯ ಚಿತ್ರಣ ಕಾರ್ಮಿಕರ ಬದುಕಿನ ಕೈಗನ್ನಡಿಯಾಗಿದೆ.
ಭಾರತದ ವಾಣಿಜ್ಯ ನಗರಿ ಮುಂಬೈಗೆ ಕೋಟ್ಯಂತರ ಕಾರ್ಮಿಕರು ದುಡಿಯಲು ವಲಸೆ ಬಂದಿದ್ದರು. ಕೋಟ್ಯಂತರ ಕಾರ್ಮಿಕರಿಗೆ ಬದುಕು ಕಟ್ಟಿಕೊಟ್ಟ ಮುಂಬೈ ಚಿತ್ರಣ ಬದಲಾಗಿದೆ. ಕೊರೊನಾ ವೈರಸ್ ಎಂಬ ಕೆಂಡದಲ್ಲಿ ಮಹಾರಾಷ್ಟ್ರ ಬೆಂದು ಹೋಗುತ್ತಿದೆ. ಭೀತಿಯಲ್ಲೇ ಬದುಕು ಸಾಗಿಸುವ ಬದಲು ಸ್ವಂತ ಊರಿನತ್ತ ಕಾರ್ಮಿಕರ ದಂಡೇ ಹರಿದು ಹೋಗುತ್ತಿದೆ.
ಕ್ವಾರಂಟೈನ್ ವಿರೋಧಿಸುವ ಜನರ ವಿರುದ್ಧ ಕಾನೂನು ಕ್ರಮ
ಮಹಾರಾಷ್ಟ್ರದಲ್ಲಿ ಸೋಮವಾರದ ಅಂಕಿ-ಅಂಶಗಳ ಪ್ರಕಾರ ಕೊರೊನಾ ವೈರಸ್ ಸೋಂಕಿಗೆ 832 ಮಂದಿ ಪ್ರಾಣ ಬಿಟ್ಟಿದ್ದಾರೆ. 22,171ಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ 4,199 ಸೋಂಕಿತರು ಗುಣಮುಖರಾಗಿದ್ದಾರೆ.
ಮುಂಬೈ-ನಾಸಿಕ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ
ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು ಭಯದಲ್ಲಿ ವಲಸೆ ಕಾರ್ಮಿಕರು ತಮ್ಮೂರುಗಳಿಗೆ ವಾಪಸ್ ಹೋಗುತ್ತಿದ್ದಾರೆ. ಸೈಕಲ್, ಬೈಕ್, ಆಟೋರಿಕ್ಷಾ, ಟೆಂಪೋ, ಟ್ರ್ಯಾಕ್ಟರ್, ಟ್ರಕ್ ಹಾಗೂ ಮುಚ್ಚಿದ ಟೆಂಪೋಗಳಲ್ಲಿ ನೂರಾರು ಕಾರ್ಮಿಕರನ್ನು ಹೊತ್ತ ವಾಹನಗಳು ಮುಂಬೈ-ನಾಸಿಕ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದು, ಹೈವೆಗೆ ಹೈವೇಯೇ ತುಂಬಿ ಹೋಗಿದೆ. ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ವಾಹನ ದಟ್ಟಣೆ ಉಂಟಾಗಿದೆ.
"ಕೂಡಿಟ್ಟ ಹಣವೂ ಇಲ್ಲ, ವ್ಯಾಪಾರ ಮಾಡುವ ಸ್ಥಿತಿಯೂ ಇಲ್ಲ"
ಮುಂಬೈನಲ್ಲಿ ಆಹಾರ ವಿತರಕರಾಗಿ ಕೆಲಸ ಮಾಡುತ್ತಿದ್ದ ಶತ್ರುಘ್ನ ಚೌವ್ಹಾಣ್ ತಮ್ಮ ನೋವು ತೋಡಿಕೊಂಡಿದ್ದಾರೆ. ಇಬ್ಬರು ಮಕ್ಕಳು ಸೇರಿದಂತೆ ಇಡೀ ಕುಟುಂಬದ ಜೊತೆ ಎರಡು ಬೈಕ್ ಗಳಲ್ಲಿ ರಸ್ತೆ ಮೂಲಕ ಶತ್ರುಘ್ನ ಚೌವ್ಹಾಣ್ ಉತ್ತರ ಪ್ರದೇಶದ ಗೋಂದಾಗೆ ತೆರಳುತ್ತಿದ್ದಾರೆ. ಮುಂಬೈನಲ್ಲಿ ಇದೀಗ ವ್ಯಾಪಾರ ಮಾಡುವ ಪರಿಸ್ಥಿತಿ ಉಳಿದಿಲ್ಲ. ದುಡಿದು ಕೂಡಿಸಿಟ್ಟ ಹಣವೆಲ್ಲ ಖಾಲಿಯಾಗಿದೆ. ರೈಲಿನ ನೋಂದಣಿಗೆ ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಬೈಕ್ ನಲ್ಲಿಯೇ ಕುಟುಂಬ ಸಮೇತರಾಗಿ ತೆರಳುತ್ತಿದ್ದೀವಿ. ಈ ಸುದೀರ್ಘ ಪ್ರಯಾಣದಲ್ಲಿ ನಮ್ಮಲ್ಲಿ ಯಾರೊಬ್ಬರಿಗೂ ಕೊರೊನಾ ವೈರಸ್ ಅಂಟಿಕೊಳ್ಳದಿರಲಿ. ಈಗಿನ ಪರಿಸ್ಥಿತಿಯಲ್ಲಿ ದೇವರು ಒಬ್ಬನೇ ನಮ್ಮನ್ನು ಕಾಪಾಡಬೇಕು ಎಂದು ಚೌವ್ಹಾಣ್ ಅಳಲು ತೋಡಿಕೊಂಡಿದ್ದಾರೆ.
ದಾರಿಯುದ್ದಕ್ಕೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಗ್ಗೆ ಮಾತು!
ತಮ್ಮೂರಿಗೆ ಹೊರಟ ವಲಸೆ ಕಾರ್ಮಿಕರು ದಾರಿಯುದ್ದಕ್ಕೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರವು ವಿದೇಶದಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆ ತರುವುದಕ್ಕೆ ಹೇಗೆಲ್ಲ ವಿಶೇಷ ವಿಮಾನ ಮತ್ತು ಹಡಗಿನ ವ್ಯವಸ್ಥೆ ಮಾಡುತ್ತಿದೆ. ಆದರೆ ದೇಶದಲ್ಲೇ ಇರುವ ನಮ್ಮನ್ನು ಯಾಕೆ ನಿರ್ಲಕ್ಷ್ಯಿಸುತ್ತಿದೆ ಎಂದು ಕಾರ್ಮಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಫೋಷಕರ ಅಣತೆಯಂತೆ ತಮ್ಮೂರಿಗೆ ಕಾರ್ಮಿಕರು
ಉತ್ತರ ಪ್ರದೇಶ ಗೋಂದಾ ಮೂಲದ ಕಾರ್ಮಿಕ ರಮೇಶ್ ಕುಮಾರ್, ಮಹಾರಾಷ್ಟ್ರದ ಮನೋರ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಕೊರೊನಾ ವೈರಸ್ ಭೀತಿ ನಡುವೆಯೂ ಕೆಲಸ ಮಾಡುವುದಕ್ಕೆ ನಾನು ಸಿದ್ಧನಿದ್ದೇನೆ. ಆದರೆ ನಮ್ಮ ತಂದೆ-ತಾಯಿ ತುಂಬಾ ಭಯಭೀತರಾಗಿದ್ದಾರೆ. ಕಾರ್ಖಾನೆಯಲ್ಲಿ ನಾನಾ ಕಡೆಗಳಿಂದ ಕಾರ್ಮಿಕರು ಬರುತ್ತಾರೆ. ಆ ಪೈಕಿ ಒಬ್ಬರಿಗೆ ಸೋಂಕು ಅಂಟಿಕೊಂಡಿದ್ದರೂ, ಅಪಾಯ ತಪ್ಪಿದ್ದಲ್ಲ. ಹೀಗಾಗಿ ಸುಮ್ಮನೆ ಊರಿಗೆ ವಾಪಸ್ ಬರುವಂತೆ ಒತ್ತಾಯಿಸಿದ್ದಕ್ಕಾಗಿ ನಮ್ಮೂರಿನವರೇ ಆಗಿರುವ ನಾಲ್ವರ ಜೊತೆಗೆ ಸೇರಿಕೊಂಡು ಗ್ರಾಮಕ್ಕೆ ತೆರಳುತ್ತಿದ್ದೇನೆ ಎಂದು ಕಾರ್ಮಿಕ ರಮೇಶ್ ಕುಮಾರ್ ತಿಳಿಸಿದ್ದಾರೆ.
4 ಸಾವಿರ ಕೊಟ್ಟರೂ ಊರು ತಲುಪುವ ಖಾತ್ರಿಯಿಲ್ಲ
ವಲಸೆ ಕಾರ್ಮಿಕರನ್ನು ಕರೆದುಕೊಂಡು ಹೋಗಲು ಟ್ರಕ್ ಚಾಲಕರು ತಲಾ 2 ರಿಂದ 4 ಸಾವಿರ ರೂಪಾಯಿ ಚಾರ್ಜ್ ಮಾಡುತ್ತಿದ್ದಾರೆ. ಹೀಗೆ ಹಣ ನೀಡಿದರೂ ವಲಸೆ ಕಾರ್ಮಿಕರು ತಮ್ಮೂರಿಗೆ ತಲುಪುವುದು ಖಾತ್ರಿಯಿಲ್ಲ. ಏಕೆಂದರೆ ಮಧ್ಯದಲ್ಲಿ ಪೊಲೀಸರು ಟ್ರಕ್ ಹಿಡಿದರೆ ಕೊಟ್ಟ ಹಣವೂ ಸಿಗುವುದಿಲ್ಲ, ಊರಿಗೂ ತಲುಪೋದಕ್ಕೆ ಆಗಲ್ಲ ಎನ್ನುವುದು ವಲಸೆ ಕಾರ್ಮಿಕರ ಆತಂಕವಾಗಿದೆ.
ಪುಣೆಯಿಂದ 220 ಕಿಲೋ ಮೀಟರ್ ನಡೆದ ವಲಸೆ ಕಾರ್ಮಿಕ
ಬಿಸಿಲಿನ ಬೇಗೆ ನೀಗಿಸಿಕೊಳ್ಳುವುದಕ್ಕಾಗಿ ಹಗಲಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುವ ಕಾರ್ಮಿಕರು ಬೆಳಗಿನ ಜಾವ ಮತ್ತು ಸಂಜೆ ವೇಳೆಯಲ್ಲಿ ನಡೆದುಕೊಂಡು ಸಾಗುತ್ತಿದ್ದಾರೆ. ಪವನ್ ಸಾಹಿನಿ ಎಂಬ ಕಾರ್ಮಿಕ ತಮ್ಮ ಸ್ನೇಹಿತರ ಜೊತೆ ಸೇರಿಕೊಂಡು ಪುಣೆಯಿಂದ 220 ಕಿಲೋ ಮೀಟರ್ ನಡೆದುಕೊಂಡೇ ಹೋಗುತ್ತಿದ್ದಾರೆ. ಉತ್ತರ ಪ್ರದೇಶದ ಗೋರಖ್ ಪುರ್ ಗೆ ತೆರಳಲು ಯಾವುದಾದರೂ ವಾಹನಗಳು ಸಿಗುತ್ತವೆಯೇ ಎಂಬ ನಿರೀಕ್ಷೆಯಲ್ಲಿ ನಡೆಯುತ್ತಿದ್ದಾರೆ. ವಲಸೆ ಕಾರ್ಮಿಕನ ಪಾದಗಳೆಲ್ಲ ಬಿರುಕು ಬಿಟ್ಟು, ರಕ್ತ ಸೋರುತ್ತಿದೆ. ಗಾಯಕ್ಕೆ ಚಿಕಿತ್ಸೆ ಪಡೆಯುವುದಕ್ಕೂ ಸಹ ನನ್ನ ಬಳಿ ಹಣವಿಲ್ಲ. ನೋವಿನ ನಡುವೆ ನಾನು ಮುಂದಿನ ದಾರಿ ಹೇಗೆ ಕ್ರಮಿಸುತ್ತೇನೆ ಎನ್ನುವುದು ನನಗೇ ಗೊತ್ತಿಲ್ಲ ಎಂದು ಕಣ್ಣೀರು ಹಾಕುತ್ತಾರೆ ಕಾರ್ಮಿಕ ಪವನ್ ಸಾಹಿನಿ.
ಮಡದಿ ಮಕ್ಕಳೊಂದಿಗೆ ಆಟೋದಲ್ಲಿ ಪ್ರಯಾಣ
ಮಹಾರಾಷ್ಟ್ರ ಮುಂಬೈನ ನೈಗಾಂನ್ ಪ್ರದೇಶದಲ್ಲಿ ಆಟೋ ಚಾಲಕನಾಗಿದ್ದ ದಿನೇಶ್ ಚಂದ್ರ ಯಾದವ್ ಮಡದಿ ಮಕ್ಕಳ ಜೊತೆಗೆ ಸೇರಿಕೊಂಡು ತಮ್ಮೂರಿಗೆ ವಾಪಸ್ ತೆರಳುತ್ತಿದ್ದಾರೆ. ಉತ್ತರ ಪ್ರದೇಶದ ಜೌನ್ಪುರ್ ಗೆ ಆಟೋದಲ್ಲಿಯೇ ತೆರಳುತ್ತಿದ್ದಾರೆ. ಭಾರತ ಲಾಕ್ ಡೌನ್ ಹಿನ್ನೆಲೆ ಆಟೋರಿಕ್ಷಾ ಚಾಲನೆಯಿಂದ ದುಡಿಯಲು ಆಗುತ್ತಿಲ್ಲ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆ ತಮ್ಮೂರಿಗೆ ತೆರಳುತ್ತಿದ್ದೇನೆ. ನನ್ನ ಜೊತೆಗೆ 10 ಕುಟುಂಬಗಳು ಕಾರುಗಳಲ್ಲಿ ಊರಿಗೆ ತೆರಳುತ್ತಿದ್ದಾರೆ ಎಂದು ದಿನೇಶ್ ಚಂದ್ರ ಯಾದವ್ ತಿಳಿಸಿದರು.
ಸೆಕೆಂಡ್ ಹ್ಯಾಂಡ್ ಸೈಕಲ್ ಖರೀದಿಸಿ ಊರಿಗೆ ಪಯಣ
ಕೊರೊನಾ ವೈರಸ್ ಭೀತಿ ನಡುವೆ ಊರಿಗೆ ತೆರಳಲು ವಲಸೆ ಕಾರ್ಮಿಕರು ಸೆಕೆಂಡ್ ಹ್ಯಾಂಡ್ ಸೈಕಲ್ ಗಳ ಮೊರೆ ಹೋಗುತ್ತಿದ್ದಾರೆ. 2 ರಿಂದ 4 ಸಾವಿರ ರೂಪಾಯಿ ಕೊಟ್ಟು ಸೆಕೆಂಡ್ ಹ್ಯಾಂಡ್ ಸೈಕಲ್ ಖರೀದಿಸಿ ಅದೇ ಸೈಕಲ್ ಗಳಲ್ಲಿ ತಮ್ಮೂರಿಗೆ ತೆರಳಲು ವಲಸೆ ಕಾರ್ಮಿಕರು ಮುಂದಾಗಿದ್ದಾರೆ. ಪಲ್ಗಹಾರ್ ಜಿಲ್ಲೆಯ ನಲಸೋಪಾರ್ ಪ್ರದೇಶದಿಂದ ತೌಫಿಕ್ ಅಲಿ ತಮ್ಮ ಸ್ನೇಹಿತರ ಜೊತೆಗೆ ಸೇರಿಕೊಂಡು ಉತ್ತರ ಪ್ರದೇಶದ ಮಿರಜ್ ಪುರ್ ಗೆ ಸೈಕಲ್ ನಲ್ಲಿ ತೆರಳಿದ್ದಾರೆ.