ಸುಮಲತಾ ಸೇರಿ, 2019ರ ಪಕ್ಷೇತರ ಸಂಸದರು ಯಾರು ಯಾರು?
2019ರ ಲೋಕಸಭೆ ಚುನಾವಣೆಯಲ್ಲಿ ಸರಿ ಸುಮಾರು 36 ಪಕ್ಷಗಳಿಂದ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. 36 ರಾಜ್ಯ/ಕೇಂದ್ರಾಡಳಿತ ಪಕ್ಷಗಳು ಸೇರಿ 542 ಕ್ಷೇತ್ರಗಳಿಗೆ ಏಪ್ರಿಲ್ 11ರಿಂದ ಮೇ 19ರ ತನಕ 10 ಲಕ್ಷ ಮತಗಟ್ಟೆಗಳನ್ನು ಬಳಸಿಕೊಂಡು ಮತದಾನ ಪ್ರಕ್ರಿಯೆ ನಡೆಸಲಾಯಿತು. ಈ ಬಾರಿ ನಾಲ್ವರು ಸ್ವತಂತ್ರ ಅಭ್ಯರ್ಥಿಗಳು 17ನೇ ಲೋಕಸಭೆಗೆ ಆಯ್ಕೆಯಾಗಿದ್ದಾರೆ.
ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಚುನಾವಣಾ ಹಬ್ಬದಲ್ಲಿ 90 ಕೋಟಿಗೂ ಅಧಿಕ ಮಂದಿ ಮತದಾನ ಹಕ್ಕು ಚಲಾಯಿಸಿದರು. ಮೇ 23ರಂದು 543 ಲೋಕಸಭಾ ಕ್ಷೇತ್ರಗಳ ಬದಲಿಗೆ 542 ಕ್ಷೇತ್ರಗಳ ಫಲಿತಾಂಶ ಪ್ರಕಟವಾಯಿತು. ತಮಿಳುನಾಡಿನ ವೆಲ್ಲೂರು ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ಅಧಿಕವಾಗಿದ್ದರಿಂದ ಚುನಾವಣೆ ರದ್ದು ಪಡಿಸಲಾಗಿದೆ.
ಮೇ 23ರಂದು ಪ್ರಕಟವಾದ ಫಲಿತಾಂಶದಂತೆ ಬಿಜೆಪಿ 303, ಕಾಂಗ್ರೆಸ್ 52, ಡಿಎಂಕೆ 23, ತೃಣಮೂಲ ಕಾಂಗ್ರೆಸ್ 22, ವೈಎಸ್ಸಾರ್ ಕಾಂಗ್ರೆಸ್ 22, ಶಿವಸೇನಾ 18, ಜೆಡಿ ಯು 16,ಬಿಜೆಡಿ 12, ಬಿಎಸ್ಪಿ 10 ಸ್ಥಾನ ಗಳಿಸಿ ಎರಡಂಕಿ ದಾಟಿದ ಪಕ್ಷಗಳೆನಿಸಿವೆ.
1952ರ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ 36 ಮಂದಿ ಪಕ್ಷೇತರರು ಜಯದಾಖಲಿಸಿದ್ದರು. ಇದು ಗರಿಷ್ಠ ಸಾಧನೆಯಾದರೆ, 1991ರಲ್ಲಿ ಒಬ್ಬ ಅಭ್ಯರ್ಥಿ ಮಾತ್ರ ಗೆದ್ದಿದ್ದರು. ಈ ಬಾರಿ ಕರ್ನಾಟಕದ ಮಂಡ್ಯ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದ ಸುಮಲತಾ ಸೇರಿದಂತೆ ನಾಲ್ವರು ಪಕ್ಷೇತರ ಅಭ್ಯರ್ಥಿಗಳು ಸಂಸತ್ ಪ್ರವೇಶಿಸಲಿದ್ದಾರೆ.

ಸುಮಲತಾ ಅಂಬರೀಷ್, ಕರ್ನಾಟಕ
ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರು ಕರ್ನಾಟಕದ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ 1.26 ಲಕ್ಷ ಮತಗಳ ಅಂತರದಿಂದ ಜಯ ದಾಖಲಿಸಿದ್ದಾರೆ. ಕರ್ನಾಟಕದಿಂದ ಮೊಟ್ಟ ಮೊದಲ ಬಾರಿಗೆ ಸ್ವತಂತ್ರವಾಗಿ ಸ್ಪರ್ಧಿಸಿ ಸಂಸತ್ತಿಗೆ ಆಯ್ಕೆಯಾದ ಮಹಿಳಾ ಅಭ್ಯರ್ಥಿ ಎನಿಸಿಕೊಂಡಿದ್ದಾರೆ.
ಕರ್ನಾಟಕದ 28 ಸ್ಥಾನಗಳ ಪೈಕಿ ಬಿಜೆಪಿ 25, ಕಾಂಗ್ರೆಸ್ 1, ಜೆಡಿಎಸ್ 1 ಹಾಗೂ ಪಕ್ಷೇತರ 1.
ಸುಮಲತಾ ಅಂಬರೀಷ್ 7,03,660 ಮತ (51.02%), ನಿಖಿಲ್ ಕುಮಾರಸ್ವಾಮಿ 5,77,784 ಮತ(41.89%)

ನವನೀತ್ ರವಿ ರಾಣಾ, ಮಹಾರಾಷ್ಟ್ರ
ಎನ್ ಸಿಪಿ -ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮಹಾರಾಷ್ಟ್ರದ ಅಮರಾವತಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ನವನೀತ್ ರವಿ ರಾಣಾ ಅವರು ಶಿವಸೇನಾದ ಪ್ರಬಲ ಅಭ್ಯರ್ಥಿ ಆನಂದ್ ರಾವ್ ವಿಠೋಬಾ ಅದ್ಸುಲ್ ಅವರನ್ನು ಸೋಲಿಸಿದರು. ಎರಡು ಬಾರಿ ಸಂಸದ, ಆನಂದ್ ರಾವ್ ಅವರ ವಿರುದ್ಧ 36,951 ಮತಗಳ ಅಂತರದಿಂದ ಮಾಜಿ ನಟಿ ನವನೀತ್ ಅವರು ಜಯಭೇರಿ ಬಾರಿಸಿದ್ದಾರೆ.
ಆನಂದ್ ರಾವ್ 4,73,996(42.61%) ಮತಗಳು, ನವನೀತ್ ರಾಣಾ 5,10,947(45.93%)
ಮಹಾರಾಷ್ಟ್ರದಲ್ಲಿ 48 ಸ್ಥಾನಗಳ ಪೈಕಿ ಬಿಜೆಪಿ 23, ಶಿವಸೇನಾ 18, ಎನ್ ಸಿಪಿ 4, ಎಐಎಂಐಎಂ 1, ಕಾಂಗ್ರೆಸ್ 1 ಹಾಗೂ ಪಕ್ಷೇತರ 1.

ಮೋಹನ್ ಭಾಯಿ ದೇಲ್ಕರ್, ದಾದರ್ ನಗರ್ ಹವೇಲಿ
ಸ್ವತಂತ್ರ ಅಭ್ಯರ್ಥಿಯಾಗಿ, ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಯಾಗಿ ಕೂಡಾ ದಾದರ್ ನಗರ್ ಹವೇಲಿ ಕ್ಷೇತ್ರದಿಂದ ಗೆಲುವು ಸಾಧಿಸಿರುವ ಮೋಹನ್ ಭಾಯಿ ದೇಲ್ಕರ್ ಅವರು ಈ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ 9,001 ಮತಗಳ ಅಂತರದಿಂದ ಜಯ ದಾಖಲಿಸಿದ್ದಾರೆ. 2014ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು.
ದೇಲ್ಕರ್ ಮೋಹನ್ ಭಾಯಿ ಸಾಂಜಿಭಾಯಿ 90,421 ಮತ(45.44%) ಗೆಲುವು, ಪಟೇಲ್ ನಾತುಭಾಯಿ ಗೋಮನ್ ಭಾಯಿ (ಬಿಜೆಪಿ)81,420(40.92) ಮತ ಸೋಲು. ಕಾಂಗ್ರೆಸ್, ಬಿಎಸ್ಪಿ, ಶಿವಸೇನಾ ಸೇರಿದಂತೆ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳು ಕೂಡಾ ಕಣದಲ್ಲಿದ್ದರು.

ನಭ ಕುಮಾರ್ ಸರಾನಿಯಾ, ಅಸ್ಸಾಂ
ಅಸ್ಸೋಂನ ಕೊಕ್ರಾಜಾರ್ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಭ ಕುಮಾರ್ ಸರಾನಿಯಾ(ಹೀರಾ ಸರನಿಯಾ) 37, 786 ಮತಗಳ ಅಂತರದಿಂದ ಜಯ ದಾಖಲಿಸಿದ್ದಾರೆ.
ಎಸ್ಟಿ ಮೀಸಲು ಕ್ಷೇತ್ರವಾದ ಕೊಕ್ರಾಜಾರ್ ನಲ್ಲಿ ಎನ್ಡಿಎ ಬೆಂಬಲಿತ ಬೋಡೋಲ್ಯಾಂಡ್ ಪೀಪಲ್ ಫ್ರಂಟ್ ನ ಅಭ್ಯರ್ಥಿಯನ್ನು ನಭಕುಮಾರ್ ಸೋಲಿಸಿದರು. ಉಲ್ಫಾ ಉಗ್ರ ಸಂಘಟನೆಯ ಮಾಜಿ ಕಮ್ಯಾಂಡರ್ ಹೀರಾ ಅವರು 2014ರಲ್ಲೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.ಅಸ್ಸಾಂ ಫಲಿತಾಂಶ 14 ಸ್ಥಾನ: ಬಿಜೆಪಿ 9, ಎಐಯುಡಿಎಫ್ 1, ಕಾಂಗ್ರೆಸ್ 3 ಹಾಗೂ ಪಕ್ಷೇತರ 1
ನಭಕುಮಾರ್ 4,84,560 ಮತ(32.75%), ಬಿಡಿಎಫ್ ನ ಪ್ರಮೀಳಾ ರಾಣಿ ಬ್ರಹ್ಮ 446774(30.2%)












Click it and Unblock the Notifications