20 ಸೀಟು ಗೆದ್ದರೆ ಗದ್ದುಗೆಯ ಮೇಲೆ ಯಡಿಯೂರಪ್ಪ : ಶಾ ಅಭಯಹಸ್ತ
Recommended Video

"ಕರ್ನಾಟಕದಲ್ಲಿ ಸರ್ಕಾರ ರಚಿಸಲು ಯಾರ ಬಳಿಯೂ ಭಿಕ್ಷೆ ಬೇಡುವ ಅಗತ್ಯವಿಲ್ಲ. ಬದಲಿಗೆ ಲೋಕಸಭಾ ಚುನಾವಣೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲಿಸಿ, ಮರು ವಾರವೇ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ನೋಡಲು ನಾನು ಬೆಂಗಳೂರಿನಲ್ಲಿರುತ್ತೇನೆ" ಎಂದು ಬಿಜೆಪಿಯ ರಾಷ್ಟ್ರೀಯ ನಾಯಕ ಅಮಿತ್ ಶಾ ಗುಡುಗಿರುವ ಬೆಳವಣಿಗೆ ಇಂಟರೆಸ್ಟಿಂಗ್ ಆಗಿದೆ.
ಅಂದ ಹಾಗೆ ಫೆಬ್ರವರಿ ಇಪ್ಪತ್ತೊಂದರ ಗುರುವಾರ ನಡೆದ ರಾಜ್ಯ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಅಮಿತ್ ಶಾ ಆಡಿದ ಮಾತು ಏಕಕಾಲಕ್ಕೆ ಹಲವು ಸಂದೇಶಗಳನ್ನು ರವಾನಿಸಿದೆ, ರಾಜಕೀಯ ವಲಯದಲ್ಲಿಯೂ, ಅದರಲ್ಲಿಯೂ ಬಿಜೆಪಿ ಪಾಳಯದಲ್ಲಿ ಭಾರೀ ಸಂಚಲನವನ್ನು ಎಬ್ಬಿಸಿದೆ.
ಮೊದಲನೆಯದಾಗಿ, ಯಡಿಯೂರಪ್ಪ ಅವರ ಆಪರೇಷನ್ ಕಮಲ ಕಾರ್ಯಾಚರಣೆಗೆ ಬ್ರೇಕ್ ಬೀಳಲಿ ಎಂಬ ಸ್ಪಷ್ಟ ಸಂದೇಶ ನೀಡಿದಂತಾಗಿದೆ, ಎರಡನೆಯದಾಗಿ, ಯಾವ ಕಾರಣಕ್ಕೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸುವುದಿಲ್ಲ ಎಂಬ ಸಂದೇಶವನ್ನು ಲಿಂಗಾಯತ ಮತದಾರರಿಗೆ ರವಾನಿಸಿದಂತಾಗಿದೆ.
ಹೀಗೆ ಏಕಕಾಲಕ್ಕೆ ಎರಡು ಸಂದೇಶಗಳನ್ನು ರವಾನಿಸುವುದು ಬಿಜೆಪಿ ಹೈಕಮಾಂಡ್ ಗೆ ಅನಿವಾರ್ಯವಾಗಿತ್ತು ಎಂಬುದು ಅಸಹಜವೇನಲ್ಲ. ಯಾಕೆಂದರೆ, ಶತಾಯ ಗತಾಯ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೂ ಮುನ್ನವೇ ಸರ್ಕಾರ ಬರುವಂತೆ ಮಾಡಬೇಕು ಎಂದು ಪಟ್ಟು ಹಿಡಿದ ಯಡಿಯೂರಪ್ಪ ಅರ್ಧದಲ್ಲೇ ಹೊಡೆತ ತಿಂದರು.

ಅಲ್ಲೋಲಕಲ್ಲೋಲ ಎಬ್ಬಿಸಿದ ಆಡಿಯೋ ಟೇಪ್
ಗುರುಮಿಟ್ಕಲ್ ಶಾಸಕರನ್ನು ಪಕ್ಷಕ್ಕೆ ಸೆಳೆಯಲು ಅವರು ಶಾಸಕರ ಪುತ್ರನ ಜತೆ ನಡೆಸಿದರೆನ್ನಲಾದ ಆಡಿಯೋ ಅನ್ನು ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಿದ ನಂತರ ಬರೀ ಯಡಿಯೂರಪ್ಪ ಮಾತ್ರವಲ್ಲ, ಬಿಜೆಪಿ ಹೈಕಮಾಂಡ್ ಕೂಡಾ ಮುಜುಗರಕ್ಕೆ ಸಿಲುಕುವಂತಾಗಿತ್ತು.
ಪಕ್ಷ ತೊರೆದು ಬಂದರೆ ನಿಮಗೆ ಪಕ್ಷಾಂತರ ನಿಷೇಧ ಕಾಯ್ದೆಯ ಬಿಸಿ ತಟ್ಟುವುದಿಲ್ಲ. ಯಾಕೆಂದರೆ ವಿಧಾನಸಭೆಯ ಅಧ್ಯಕ್ಷರಿಗೆ ಐವತ್ತು ಕೋಟಿ ರೂಪಾಯಿ ಕೊಟ್ಟು ಡೀಲ್ ಮಾಡಿದ್ದೇವೆ ಎಂಬುದರಿಂದ ಹಿಡಿದು, ಕೆಲ ಸಾಂವಿಧಾನಿಕ ಸಂಸ್ಥೆಗಳ ಮುಖ್ಯಸ್ಥರ ತನಕ ಎಲ್ಲರನ್ನೂ ಮ್ಯಾನೇಜ್ ಮಾಡಿದ್ದೇವೆ ಎಂಬ ಮಾತು ಈ ವಿವಾದಗ್ರಸ್ಥ ಆಡಿಯೋದಲ್ಲಿತ್ತು.
ಇದು ಬಜೆಟ್ ಅಧಿವೇಶನದಲ್ಲಿ ಕುಮಾರಸ್ವಾಮಿ ಬಜೆಟ್ ಮಂಡಿಸುತ್ತಾರೋ ಇಲ್ಲವೋ ಎಂಬಷ್ಟರ ಮಟ್ಟಿಗೆ ಭಾರೀ ಅಲ್ಲೋಲಕಲ್ಲೋಲ ಎಬ್ಬಿಸಿತು. ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ತಮ್ಮ ಹೆಸರು ಪ್ರಸ್ತಾಪವಾಗಿದ್ದಕ್ಕೆ ಕಣ್ಣೀರುಗರೆದರು. ಕಡೆಗೆ ಬಿಜೆಪಿ ಹೈಕಮಾಂಡೇ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಬೇಕಾಯಿತು.

ಕನಲಿ ಕೆಂಡವಾಗಿದ್ದ ಅಮಿತ್ ಶಾ
ಸಹಜವಾಗಿಯೇ ಅಲ್ಲಿ ಪ್ರಧಾನಿಯವರ ಮತ್ತು ತಮ್ಮ ಬಗ್ಗೆ ಪ್ರಸ್ತಾಪವಾಗಿರುವ ಕುರಿತು ಅಮಿತ್ ಶಾ ಕನಲಿ ಕೆಂಡವಾಗಿದ್ದರು. ಹೀಗಾಗಿಯೇ ಆಡಿಯೋ ಹಗರಣವನ್ನು ಎಸ್.ಐ.ಟಿ ತನಿಖೆಗೆ ವಹಿಸಲು ವಿಧಾನಸಭೆಯಲ್ಲಿ ತೀರ್ಮಾನ ತೆಗೆದುಕೊಂಡ ಮೇಲೆ ರಾಜ್ಯದ ಬಿಜೆಪಿ ನಾಯಕರನ್ನು ಸಂಪರ್ಕಿಸಿದ ಅಮಿತ್ ಶಾ, ಈ ವಿವಾದ ಇಲ್ಲಿಗೇ ನಿಲ್ಲುವಂತೆ ನೋಡಿಕೊಳ್ಳಿ ಎಚ್ಚರಿಕೆ ನೀಡಿದ್ದರು.
ಅಂದರೆ? ಆಪರೇಷನ್ ಕಮಲ ಕಾರ್ಯಾಚರಣೆಯನ್ನು ನಿಲ್ಲಿಸುತ್ತೇವೆ ಎಂದು ಸಿಎಂ ಕುಮಾರಸ್ವಾಮಿ ಅವರಿಗೆ ಸಿಗ್ನಲ್ ಕೊಡಿ. ಎಸ್.ಐ.ಟಿ ತನಿಖೆ ಬಿಗಿಯಾಗದಂತೆ ನೋಡಿಕೊಳ್ಳಿ ಎಂದು ಅಮಿತ್ ಶಾ ಸಲಹೆ ನೀಡಿದರೆಂಬ ಅಂಶ ರಾಜ್ಯ ಬಿಜೆಪಿಯ ಕಂಪೌಂಡಿನಿಂದಲೇ ಹೊರಬಿತ್ತು. ಯಾಕೆಂದರೆ ವಿವಾದ ತಾರಕಕ್ಕೇರಿದರೆ ಪ್ರಧಾನಿ ಮೋದಿ ಹಾಗೂ ತಮ್ಮ ಹೆಸರು ರಾಷ್ಟ್ರ ಮಟ್ಟದಲ್ಲಿ ವಿವಾದಕ್ಕೆ ಗುರಿಯಾಗುತ್ತದೆ ಎಂಬ ಎಚ್ಚರಿಕೆ ಅಮಿತ್ ಶಾ ಅವರಿಗಿತ್ತು.

ಕೋರ್ ಕಮಿಟಿ ಸಭೆಯಲ್ಲಿ ಎಲ್ಲರೂ ಗಪ್ ಚಿಪ್
ಹಾಗಂತಲೇ ಪಕ್ಷದ ಕೋರ್ ಕಮಿಟಿ ಸಭೆಯನ್ನು ಕರೆಯಿರಿ, ನಾನೂ ಬರುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷದ ಕ್ಯಾಂಡಿಡೇಟುಗಳು ಯಾರು? ಅನ್ನುವುದನ್ನು ತೀರ್ಮಾನಿಸಲು ನಾನು ಬರುತ್ತೇನೆ ಎಂಬಂತೆ ಬಿಂಬಿಸಿ, ಉಳಿದಂತೆ ಹೇಳಬೇಕಾದ್ದನ್ನು ನಾನು ಅಲ್ಲೇ ಬಂದು ಹೇಳುತ್ತೇನೆ ಎಂದು ಅಮಿತ್ ಶಾ ರಾಜ್ಯ ಬಿಜೆಪಿ ನಾಯಕರಿಗೆ ವಿವರಿಸಿದ್ದರು.
ಅವರ ಮಾತಿನ ಆಧಾರದ ಮೇಲೆಯೇ ಫೆಬ್ರವರಿ ಇಪ್ಪತ್ತೊಂದರ ಗುರುವಾರ ರಾಜ್ಯ ಬಿಜೆಪಿಯ ಕೋರ್ ಕಮಿಟಿ ಸಭೆಯ ಹಿಡನ್ ಅಜೆಂಡಾ ಏನು? ಅನ್ನುವುದು ನಿರ್ಧಾರವಾಗಿತ್ತು. ಅದರನುಸಾರ ಕರ್ನಾಟಕಕ್ಕೆ ಬಂದ ಅಮಿತ್ ಶಾ ನೆಪ ಮಾತ್ರಕ್ಕೆ ಹಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರಾದರೂ ಆಂತರ್ಯದಲ್ಲಿ ಕೋರ್ ಕಮಿಟಿ ಸಭೆಗಾಗಿಯೇ ಕಾದಿದ್ದರು. ಅಂದುಕೊಂಡಂತೆ ಕೋರ್ ಕಮಿಟಿ ಸಭೆ ಸೇರಿದಾಗ ರಾಜ್ಯದ ಬಿಜೆಪಿ ನಾಯಕರು ಹೆಚ್ಚು ಮಾತನಾಡುವ ಪ್ರಮೇಯವೇ ಬರಲಿಲ್ಲ. ಯಾಕೆಂದರೆ...

ಆಪರೇಷನ್ ನಿಂದ ಇಮೇಜಿಗೆ ಮಸಿ
ಸಭೆ ಶುರುವಾದ ಕೂಡಲೇ ಅಮಿತ್ ಶಾ ಅವರೇ, ಕರ್ನಾಟಕದಲ್ಲಿ ನಡೆದ ಆಪರೇಷನ್ ಕಮಲ ಕಾರ್ಯಾಚರಣೆಯಿಂದ ರಾಷ್ಟ್ರಮಟ್ಟದಲ್ಲಿ ಪಕ್ಷದ ಇಮೇಜ್ ಗೆ ಹೊಡೆತ ಬಿದ್ದಿದೆ ಎಂಬುದು ನಿರ್ವಿವಾದ. ಹಾಗಂತ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದರೂ ಅಧಿಕಾರ ಹಿಡಿಯಲು ಸಾಧ್ಯವಾಗದೇ ಇರುವುದು ದುರಂತ.
ಯಾಕೆಂದರೆ ನಾವು ನೂರಾ ನಾಲ್ಕು ಸೀಟುಗಳನ್ನು ಗೆದ್ದಿದ್ದೇವೆ. ಆದರೆ ಮೂವತ್ತೆಂಟು ಸೀಟುಗಳನ್ನು ಪಡೆದ ಜೆಡಿಎಸ್ ವತಿಯಿಂದ ಸಿಎಂ ಹೊರಹೊಮ್ಮಿದ್ದಾರೆ. ಒಂದು ರೀತಿಯಲ್ಲಿ ಇದು ವಿಪರೀತದಂತೆ ಬಾಸವಾದರೂ, ಸಾಂವಿಧಾನಿಕವಾಗಿ ನಾವು ಒಪ್ಪಿಕೊಳ್ಳಲೇಬೇಕಾದ ಸತ್ಯ.
ಯಾಕೆಂದರೆ ಸರ್ಕಾರ ರಚಿಸಲು ಅಗತ್ಯವಾದ ಬಹುಮತವನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ತೋರಿಸಿವೆ. ಹೀಗಾಗಿ ಬಹಿರಂಗವಾಗಿ ನಾವು ಸರ್ಕಾರದ ಬಗ್ಗೆ ಏನೇ ಟೀಕೆ ಮಾಡಿದರೂ, ಅದರ ಹುಟ್ಟಿನ ಬಗ್ಗೆ ಸಂಶಯದ ಮಾತನಾಡಲು ಸಾಧ್ಯವಿಲ್ಲ.

ಹೈಕಮಾಂಡ್ ಗೆ ಯಡಿಯೂರಪ್ಪ ಧಮ್ಕಿ
ಹಾಗಂತ ಆಪರೇಷನ್ ಕಮಲ ಕಾರ್ಯಾಚರಣೆ ಮಾಡಿ ಸರ್ಕಾರವನ್ನು ಅಸ್ತಿತ್ವಕ್ಕೆ ತರುತ್ತೇವೆ ಎಂದು ಯಡಿಯೂರಪ್ಪನವರು ಮೊದಲು ಹೇಳಿದಾಗ, ಹೈಕಮಾಂಡ್ ಸಂದೇಹ ವ್ಯಕ್ತಪಡಿಸಿತ್ತು. ಸರ್ಕಾರ ರಚಿಸಲು ಆರೇಳು ಮಂದಿ ಶಾಸಕರ ಬೆಂಬಲದ ಅಗತ್ಯವಿದೆ ಎಂದರೆ ಬೇರೆ ಮಾತು.
ಆದರೆ ಇಲ್ಲಿ ಬಹುದೊಡ್ಡ ಸಂಖ್ಯೆಯ ಶಾಸಕರು ಬೇಕು. ಅವರು ಸದಸ್ಯ ಸ್ಥಾನಕ್ಕೆ ಯಾವುದೇ ಆಪತ್ತಿಲ್ಲದೆ ರಾಜೀನಾಮೆ ಕೊಡುವಂತಾಗುವುದರಿಂದ ಹಿಡಿದು, ನಮ್ಮ ಪಕ್ಷದ ಶಾಸಕರು ಸೇಫ್ ಆಗಿರುವಂತೆ ನೋಡಿಕೊಳ್ಳುವುದರ ತನಕ ಹಲವು ಅಂಶಗಳು ನಮ್ಮ ತಲೆನೋವಿಗೆ ಕಾರಣವಾಗಿದ್ದವು.
ಆದರೆ ಲೋಕಸಭಾ ಚುನಾವಣೆಯ ಒಳಗೆ ತಮ್ಮನ್ನು ಸಿಎಂ ಮಾಡದಿದ್ದರೆ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸೀಟುಗಳನ್ನು ಗೆಲ್ಲುವುದು ಕಷ್ಟ ಎಂದು ಯಡಿಯೂರಪ್ಪ ಅವರು ಹೇಳಿದ್ದರಿಂದ ಬೇರೆ ದಾರಿ ಕಾಣದೆ ಹೈಕಮಾಂಡ್ ಒಪ್ಪಿಗೆ ನೀಡಬೇಕಾಯಿತು.

ಇತ್ತಕಡೆ ಆಪರೇಷನ್ ಕಮಲವೂ ಟುಸ್
ಆದರೆ ನಂತರ ನಡೆದ ಆಪರೇಷನ್ ಕಮಲ ಕಾರ್ಯಾಚರಣೆ ಸಕ್ಸಸ್ ಆಗಿದ್ದರೆ ಬೇರೆ ಮಾತು. ಆದರೆ ಅದು ಯಶಸ್ವಿಯೂ ಆಗಲಿಲ್ಲ. ಜತೆಗೆ ಯಡಿಯೂರಪ್ಪ ಅವರೇ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬೇರೆ ಬಹಿರಂಗವಾಯಿತು.
ಈ ಬೆಳವಣಿಗೆಯಿಂದ ರಾಜ್ಯ ಬಿಜೆಪಿ ಮಾತ್ರವಲ್ಲ, ಕೇಂದ್ರ ಬಿಜೆಪಿಯೂ ತೀವ್ರ ಮುಜುಗರಕ್ಕೆ ಸಿಲುಕುವಂತಾಗಿದೆ. ಹೀಗಾಗಿ ಇವತ್ತು ಸ್ಪಷ್ಟವಾಗಿ ಹೇಳುತ್ತೇನೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇಪ್ಪತ್ತು ಸೀಟುಗಳನ್ನು ಗೆಲ್ಲಿಸಿ, ಮರು ವಾರವೇ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ನೋಡಲು ನಾನಿಲ್ಲೇ ಇರುತ್ತೇನೆ ಎಂದು ಅಮಿತ್ ಶಾ ಹೇಳಿದಾಗ ಕೋರ್ ಕಮಿಟಿಯಲ್ಲಿದ್ದ ಯಾರೊಬ್ಬರು ಚಕಾರವೆತ್ತಲಿಲ್ಲ.

ಉತ್ತರದಲ್ಲಿ ಬಿಜೆಪಿ ಪವರ್ರು ಕಮ್ಮಿಯಾಗಿದೆ
ಹಾಗೆಯೇ ಮುಂದುವರಿದು ಮಾತನಾಡಿದ ಅಮಿತ್ ಶಾ, ಇವತ್ತು ಭಾರತದ ಉತ್ತರ ರಾಜ್ಯಗಳಲ್ಲಿ ಬಿಜೆಪಿಯ ಪವರ್ರು ಕಡಿಮೆಯಾಗಿದೆ. ಹೀಗಾಗಿ ಕಳೆದ ಬಾರಿಗಿಂತ ಆ ಭಾಗದಲ್ಲಿ ನಾವು ಕಡಿಮೆ ಸೀಟುಗಳನ್ನು ಗೆಲ್ಲುತ್ತೇವೆ.
ಯಾಕೆಂದರೆ ರಾಜಸ್ತಾನ, ಛತ್ತೀಸ್ ಘಡ, ಮಧ್ಯಪ್ರದೇಶ ರಾಜ್ಯಗಳಲ್ಲಿ ಇತ್ತೀಚೆಗಷ್ಟೇ ವಿಧಾನಸಭೆ ಚುನಾವಣೆ ನಡೆದು ಅಲ್ಲೆಲ್ಲ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಹೀಗಾಗಿ ಇಷ್ಟು ಬೇಗ ಅಲ್ಲೆಲ್ಲ, ಆಡಳಿತ ವಿರೋಧಿ ಅಲೆ ಏಳುವುದಿಲ್ಲ.

ತಮಿಳುನಾಡಿನಲ್ಲಿ ಎಐಎಡಿಎಂಕೆ ಜೊತೆ ಮೈತ್ರಿ
ಅದೇ ರೀತಿ ಬಿಜೆಪಿಯೇ ಅಧಿಕಾರದಲ್ಲಿರುವ ಹಲವಾರು ರಾಜ್ಯಗಳ ಪೈಕಿ ಹಲವೆಡೆ ಆಡಳಿತ ವಿರೋಧಿ ಅಲೆ ಮೇಲೆದ್ದರೆ ಅಚ್ಚರಿಪಡುವಂತಿಲ್ಲ. ಯಾಕೆಂದರೆ, ಅಲ್ಲೆಲ್ಲ ಪಕ್ಷ ಅಧಿಕಾರದ ಗದ್ದುಗೆಯ ಮೇಲೆ ಕುಳಿತು ಹಲ ಕಾಲವೇ ಕಳೆದಿದೆ.
ಹೀಗಾಗಿ ನಾವು ಉತ್ತರ ಭಾಗದಲ್ಲಾಗುವ ಕೊರತೆಯನ್ನು ದಕ್ಷಿಣ ಭಾರತದ ರಾಜ್ಯಗಳ ಮೂಲಕ ನೀಗಿಸಿಕೊಳ್ಳುವ ಭರವಸೆಯಲ್ಲಿದ್ದೇವೆ. ತಮಿಳ್ನಾಡಿನಲ್ಲಿ ಎಐಎಡಿಎಂಕೆ ಜತೆ ಕೈಗೂಡಿಸಿರುವುದು ಕೂಡಾ ನಮಗೊಂಡ ಪಾಸಿಟಿವ್ ಬೆಳವಣಿಗೆ. (ತಮಿಳುನಾಡು ಮತ್ತು ಪಾಂಡಿಚೇರಿ ಸೇರಿ 40 ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಸ್ಪರ್ಧಿಸಲಿದೆ.)

ದಿಲ್ಲಿಯಲ್ಲಿ ಮೋದಿ, ಕರ್ನಾಟಕದಲ್ಲಿ ಬಿಎಸ್ವೈ
ಅದೇ ಕಾಲಕ್ಕೆ ಕರ್ನಾಟಕ ಕೂಡಾ ನಮಗೆ ಬಂಪರ್ ಷೇರು ಕೊಡಬೇಕು. ಒಂದು ವೇಳೆ ಇಲ್ಲಿ ಇಪ್ಪತ್ತಕ್ಕೂ ಹೆಚ್ಚು ಸೀಟುಗಳನ್ನು ನಾವು ಗೆದ್ದರೆ ದಿಲ್ಲಿ ಗದ್ದುಗೆಯ ಮೇಲೆ ನರೇಂದ್ರ ಮೋದಿ ಕೂರುತ್ತಾರೆ. ಕರ್ನಾಟಕದ ಗದ್ದುಗೆಯ ಮೇಲೆ ಯಡಿಯೂರಪ್ಪ ಕೂರುತ್ತಾರೆ ಎಂದು ಅಮಿತ್ ಶಾ ಹೇಳಿದ ಮೇಲೆ ದೂಸರಾ ಮಾತನಾಡಲು ರಾಜ್ಯ ಬಿಜೆಪಿ ನಾಯಕರಿಗೆ ಸಾಧ್ಯವೂ ಇರಲಿಲ್ಲ.
ಹೀಗೆ ಒಂದೇ ಏಟಿಗೆ ಎರಡು ಹಕ್ಕಿ ಹೊಡೆದ ಅಮಿತ್ ಶಾ, ತಮ್ಮ ಕೆಲಸ ಮುಗಿಸಿ ದಿಲ್ಲಿಗೆ ವಾಪಸ್ಸಾಗಿದ್ದಾರೆ. ಅದರ ಬೆನ್ನಲ್ಲೇ ಯಡಿಯೂರಪ್ಪ ತಮಗಿರುವ ಆತಂಕವನ್ನು ಮರೆತು ಲೋಕಸಭಾ ಚುನಾವಣೆಯಲ್ಲಿ ಹೋರಾಡಲು ಶಕ್ತಿ ಬರಲಿ ಎಂದು ಬಸ್ಕಿ ಹೊಡೆಯಲು ಶುರು ಮಾಡಿದ್ದಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications